ನವದೆಹಲಿ: ಅತ್ಯಂತ ಕ್ರೂರಾತಿಕ್ರೂರ ಘಟನೆಗೆ ದೇಶ ಸಾಕ್ಷಿಯಾಗಿದೆ. ಜಾರ್ಖಂಡ್ನ ಕುಂಠಿ ಜಿಲ್ಲೆಯಲ್ಲಿ ಐವರು ಎನ್ಜಿಒ ಕಾರ್ಯಕರ್ತರನ್ನು ಗನ್ ಪಾಯಿಂಟ್ನಲ್ಲಿ ಬೆದರಿಸಿ, ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ.
ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇಬ್ಬರು ಶಿಕ್ಷಕರು ಹಾಗೂ ಓರ್ವ ಅರ್ಚಕ ಸೇರಿ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
ವರದಿಗಳ ಪ್ರಕಾರ, ಜಾರ್ಖಂಡ್ನ ಕೋಚಂಗ್ ಗ್ರಾಮದಲ್ಲಿ ಮನುಷ್ಯರ ಸಾಗಾಣಿಕಾ ಜಾಲದ ಕುರಿತಾಗಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲು ತೆರಳಿದ್ದರು. ಆದರೆ, ಈ ನಾಟಕ ಮುಕ್ತಾಯವಾಗುವ ವೇಳೆ ಆಗಮಿಸಿದ ಅನಾಮಿಕ ವ್ಯಕ್ತಿಗಳ ಗುಂಪು ಐವರನ್ನು ಅಪಹರಿಸಿದ್ದಾರೆ. ಅಜ್ಞಾತ ಸ್ಥಳಕ್ಕೆ ಯುವತಿಯರನ್ನು ಕರೆದೊಯ್ದು ಎಲ್ಲರಿಗೂ ಗನ್ ಪಾಯಿಂಟ್ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ಸುಮಾರು 6ಕ್ಕೂ ಅಧಿಕ ಮಂದಿ ಇದ್ದರು ಎನ್ನಲಾಗಿದೆ.
ಇನ್ನು, ಇವರೊಂದಿಗೆ ತೆರಳಿದ್ದ ಪುರುಷ ಕಾರ್ಯಕರ್ತರನ್ನು ದುಷ್ಕರ್ಮಿಗಳು ಹಿಗ್ಗಾಮುಗ್ಗಾ ಥಳಿಸಿ, ತಮ್ಮ ಮೂತ್ರವನ್ನೇ ಕುಡಿಯುವಂತೆ ಬೆದರಿಸಿ, ಅವರನ್ನೆಲ್ಲಾ ಕಾರಿನ ಒಳಗೆ ಕೂಡಿಹಾಕಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ಕುರಿತಂತೆ ಎಫ್ಐಆರ್ ದಾಖಲಿಸಲಾಗಿದ್ದು, ಈ ವಿಚಾರ ಕುರಿತಂತೆ ಅಲ್ಲಿನ ಡಿಐಜಿ ಉನ್ನತ ಮಟ್ಟದ ಸಭೆ ನಡೆಸಿ, ಉಳಿದ ಆರೋಪಿಗಳ ಬಂಧನಕ್ಕೆ ತಂಡ ರಚಿಸಿದ್ದಾರೆ.
Discussion about this post