ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿ ವ್ಯಾಪ್ತಿಯಲ್ಲಿನ ಜಿ. ಬೊಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹಳ್ಳಿಗಳನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸುವುದು ಅವೈಜ್ಞಾನಿಕವಾದ ವಿಚಾರವಾಗಿದೆ ಇದಕ್ಕಾಗಿ ಈ ಭಾಗದ ಜನತೆಯ ತೀವ್ರ ವಿರೋಧವಿದೆ ಎಂದು ಮುಖಂಡ ಬಿ.ಜಿ. ವೇಣುಗೋಪಾಲ ರೆಡ್ಡಿ ತಿಳಿಸಿದರು.
ಜಿ. ಬೊಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಬಹುತೇಕ ಹಳ್ಳಿಗಳು ಗೌರಿಬಿದನೂರು ನಗರಕ್ಕೆ ಕೇವಲ ನಾಲ್ಕೈದು ಕಿಮೀ ದೂರದಲ್ಲಿವೆ. ಅಲ್ಲದೆ ನೂತನವಾಗಿ ನಿರ್ಮಾಣ ಮಾಡುತ್ತಿರುವ ತಾಲೂಕು ಆಡಳಿತದ ಮಿನಿ ವಿಧಾನಸೌಧ ಕಟ್ಟಡವು ಈ ಗ್ರಾಮ ಪಂಚಾಯ್ತಿಗರ ಕೂಗಳತೆಯ ದೂರದಲ್ಲಿದೆ. ಈಗಿರುವಾಗ ಸುಮಾರು 18 ಕಿಮೀ ದೂರದಲ್ಲಿರುವ ಮಂಚೇನಹಳ್ಳಿ ಕೇಂದ್ರಕ್ಕೆ ಸೇರಿಸುವುದು ಅವೈಜ್ಞಾನಿಕ ಸಂಗತಿಯಾಗಿದೆ. ಇದಕ್ಕೆ ಈ ಭಾಗದ ಜನತೆಯ ತೀವ್ರ ವಿರೋಧವಿದೆ ಎಂದರು.
ನೂತನ ತಾಲೂಕು ರಚನೆಗೆ ಹಾಗೂ ಭೌಗೋಳಿಕ ಸನ್ನಿವೇಶಗಳಿಗೆ ಹೊಂದಾವಣಿಕೆಯಾಗುವಂತಹ ಯಾವುದೇ ಹಳ್ಳಿ ಅಥವಾ ಗ್ರಾಮ ಪಂಚಾಯ್ತಿಗಳನ್ನು ಸೇರಿಸಿಕೊಳ್ಳಿ. ಆದರೆ ಬೊಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯನ್ನು ಬಿಟ್ಟು ಕೊಡಲು ಈ ಭಾಗದ ಜನತೆ ಸಿದ್ಧರಿಲ್ಲ. ಇದಕ್ಕಾಗಿ ಹೋರಾಟ ಮಾಡಲು ಜನತೆ ಸಿದ್ಧರಿದ್ದಾರೆ. ಅನಾವಶ್ಯಕವಾಗಿ ರಾಜಕೀಯ ಲಾಭಕ್ಕಾಗಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದವರು ತಿಳಿಸಿದ್ದಾರೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post