ಗೌರಿಬಿದನೂರು: ತಾಲೂಕಿನ ಕಲ್ಲಿನಾಯಕನಹಳ್ಳಿ, ಅಲಕಾಪುರ ಹಾಗೂ ಗಂಗಸಂದ್ರ ಗ್ರಾಮ ಪಂಚಾಯ್ತಿಗಳಿಗೆ ಮಂಗಳವಾರ ಕೇಂದ್ರ ತಂಡದ ವತಿಯಿಂದ ಮುಖ್ಯಸ್ಥರಾದ ರಮೇಶ್ ಬಾಬು ಭೇಟಿ ನೀಡಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಮಾಡಲಾಗಿರುವ ಕಾಮಗಾರಿಗಳು ಮತ್ತು ಕಡತಗಳ ನಿರ್ವಹಣೆ ಬಗ್ಗೆ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಕಲ್ಲಿನಾಯಕನಹಳ್ಳಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಕೇಂದ್ರದ ಅನುದಾನದಲ್ಲಿ ನಡೆದಿರುವ ಸುಮಾರು 15 ಕ್ಕೂ ಹೆಚ್ಚು ಚಟುವಟಿಕೆಗಳನ್ನು ವೀಕ್ಷಿಸಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.
ನಂತರ ಅಲಕಾಪುರ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ರಸ್ತೆ ಕಾಮಗಾರಿಗಳು, ನರೇಗಾ ಯೋಜನೆಗಳು, ಗ್ರಾಮ ಸಡಕ್ ಯೋಜನೆಗಳು, ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ನಡೆದಿರುವ ಕಾರ್ಯಗಳು ಹಾಗೂ ಇನ್ನಿತರ ಚಟುವಟಿಕೆಗಳನ್ನು ವೀಕ್ಷಿಸಿ ಇದಕ್ಕೆ ಸಂಬಂಧಪಟ್ಟ ಕಡತಗಳ ನಿರ್ವಹಣೆಯನ್ನು ಮಾಡಿದರು.
ಗಂಗಸಂದ್ರ ಗ್ರಾಮ ಪಂಚಾಯ್ತಿಯಲ್ಲಿನ ಸ್ತ್ರೀ ಶಕ್ತಿ ಸಂಘ ಸಂಸ್ಥೆಗಳು ಕಾರ್ಯಚಟುವಟಿಕೆಗಳು, ಅವುಗಳ ನಿರ್ವಹಣೆ ಮತ್ತು ಅವಶ್ಯಕವಿರುವ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಬಗ್ಗೆ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಕೇಂದ್ರ ತಂಡದ ಮುಖ್ಯಸ್ಥರಾದ ರಮೇಶ್ ಬಾಬು, ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ವಿವಿಧ ಯೋಜನೆಯಡಿಯಲ್ಲಿ ಅನುದಾನವನ್ನು ನೀಡುತ್ತಿದೆ. ಅದರ ಸಮರ್ಪಕ ಬಳಕೆ ಹಾಗೂ ಅದರಿಂದ ಸ್ಥಳೀಯ ಜನತೆಗೆ ಆಗುತ್ತಿರುವ ಪ್ರಯೋಜನದ ಬಗ್ಗೆ ತಿಳಿಯಬೇಕಾಗಿದೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ ಕಡತಗಳ ನಿರ್ವಹಣೆಯ ಪರಿಶೀಲನೆ ಪ್ರಮುಖವಾಗಿದೆ. ಈ ಯೋಜನೆಗಳಿಂದ ಗ್ರಾಮೀಣ ಭಾಗದ ಜನರ ಜೀವನ ಶೈಲಿಯಲ್ಲಿ ಆಗಿರುವ ಬೆಳವಣಿಗೆಯ ಫಲಿತಾಂಶದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿಪರವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರಾದ ಗಿರಿಜಾ ಶಂಕರ್, ಇಒ ಎನ್. ಮುನಿರಾಜು, ನರೇಗಾ ಸಹಾಯಕ ನಿರ್ದೇಶಕರಾದ ಪಿ. ಚಿನ್ನಪ್ಪ, ಮುಖಂಡರಾದ ಬಿ.ಪಿ. ಅಶ್ವತ್ಥ್ ನಾರಾಯಣಗೌಡ, ಪಿಡಿಒ ಅಧಿಕಾರಿಗಳಾದ ಚಂದ್ರಿಕಾ, ಶೈಲ, ರೂಪ ಉಪಸ್ಥಿತರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post