ಹೌದು… ತಾಯಿ ಭಾರತಿಯನ್ನು ನೂರಾರು ವರ್ಷ ವಿದೇಶಿಯರು ಆಳಿದರು, ದಬ್ಬಾಳಿಕೆ ನಡೆಸಿದರು, ಈ ಮಣ್ಣನ್ನು ಇನ್ನಿಲ್ಲದಂತೆ ಕಾಡಿದರು. ಆದರೂ, ಇಂದಿಗೂ ಸಹ ನಮ್ಮ ರಾಷ್ಟ್ರ ತನ್ನ ಅಂತಃಶಕ್ತಿಯನ್ನು, ಆತ್ಮಸ್ಥೈರ್ಯವನ್ನು ಬಿಟ್ಟುಕೊಡದೇ ಇಂದಿಗೂ ಜಾಗತಿಕ ಮಟ್ಟದಲ್ಲಿ ವಿಜೃಂಭಿಸುತ್ತಿದೆ ಎಂದರೆ ಅದು ಈ ಮಣ್ಣಿಗಿರುವ ತಾಕತ್ತು.
ಇಂತಹ ನಮ್ಮ ದೇಶದಲ್ಲಾದ ಘಟನೆಗಳನ್ನು ಆಧರಿಸಿ, ಹೇಗೆ ಇವೆಲ್ಲಾ ದೇಶದ ಮೇಲೆ ಪರಿಣಾಮ ಬೀರಬಲ್ಲವು, ಇವುಗಳಿಂದ ಗಾಂಧಿ ಕಂಡ ಕನಸು ಹೇಗೆ ದೂರವಾಗುತ್ತಿದೆ ಎಂಬುದನ್ನು ಕೇವಲ ಮೂರು ನಿಮಿಷ 16 ಸೆಕೆಂಡ್ನಲ್ಲಿ ತೋರಿಸುವ ಪ್ರಯತ್ನದ ಫಲವೇ ವೈಷ್ಣವ ಜನತೋ ಎಂಬ ಕಿರುಚಿತ್ರ.
ದಿವಂಗತ ಮೇರು ನಟ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ ಅವರ ಕಥೆ, ಚಿತ್ರಕತೆ ಹಾಗೂ ನಿರ್ದೇಶನದಲ್ಲಿ ಈ ಕಿರುಚಿತ್ರ ಕೀರ್ತಿ ಇನೋವೇಶನ್ಸ್ ಅಡಿಯಲ್ಲಿ ಮೂಡಿಬಂದಿದೆ.
ಸ್ವತಂತ್ರಾ ನಂತರ ಭಾರತದಲ್ಲಿ ಗಾಂಧಿ ಕಂಡ ಕನಸು ಹೇಗೆ ಕಣ್ಮರೆಯಾಗುತ್ತಾ ಬಂದಿತು ಎಂಬುದನ್ನು ಯಾವುದೇ ನಟ, ನಟಿಯರಿಲ್ಲದೇ, ಯಾವುದೇ ಡೈಲಾಗ್ ಇಲ್ಲದೇ ಈ ಕುರಿಚಿತ್ರ ಅದ್ಬುತವಾಗಿ ಮೂಡಿಬಂದಿರುವುದು ಅನಿರುದ್ ಅವರ ಅಮೋಘ ಪ್ರತಿಭೆಗೆ ಸಾಕ್ಷಿಯಾಗಿದೆ.
ವೀಡಿಯೋ ನೋಡಿ:
ಈ ಕಿರುಚಿತ್ರದ ಕುರಿತಾಗಿ ಶಿವಮೊಗ್ಗದ ಯುವ ಬರಹಗಾರ ಸುಮುಖ ಬರೆದಿರುವ ಸಣ್ಣ ಲೇಖನ ಇಲ್ಲಿದೆ ಓದಿ:
ಜನವರಿ 30, 1948… ಗಾಂಧೀಜಿ ಗೋಡ್ಸೆ ಗುಂಡಿಗೆ ಬಲಿಯಾದ ದಿನ. ಬೇಕಾದರೆ ನೀವು ಅಂತರ್ಜಾಲದಲ್ಲಿ ಪರೀಕ್ಷಿಸಬಹುದು. ಅದಕ್ಕೂ ಮುನ್ನ ನೀವು ಭಾರತೀಯರೇ? ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ. ಉತ್ತರ ನಿಮಗೇ ಬಿಟ್ಟದ್ದು… ಗಾಂಧಿ ಸತ್ತಾಗಿನಿಂದ ಗಾಂಧಿಯನ್ನು ಮರೆಯುವವರೆಗೂ ಗಾಂಧಿ ತತ್ವಗಳನ್ನು, ಅಹಿಂಸಾವಾದವನ್ನು ಗಾಂಧಿವಾದಿಗಳು ಜಗಕ್ಕೆ ಪಸರಿಸುವ ಪ್ರಯತ್ನ ಮಾಡಿದರೂ ಅವರ ಮಾತುಗಳಿಗೆ ಇದ್ದ ಉತ್ಸಾಹ, ಕೇಳುಗರ ಕಿವಿಗಳಿಗಿಲ್ಲ. ಗಾಂಧೀಜಿ ಮರಣಾನಂತರ ಅವರ ಮೂರು ಕೋತಿಗಳೂ ಕ್ರಮೇಣ ಅಸ್ತಂಗತವಾಗುತ್ತಾ ಬಂದವು.
ಅಕ್ಟೋಬರ್ 2ರಂದು ದೇಶದೆಲ್ಲೆಡೆ ಕಚೇರಿಗಳಲ್ಲಿ ಪೊಲೀಸ್ ಠಾಣೆಗಳಲ್ಲಿ, ಸ್ವಯಂ ಸೇವಕ ಘಟಕಗಳಲ್ಲಿ, ಎನ್ಜಿಒಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಮುರಿದು ಹೋದ, ಧೂಳು ತಿಂದ, ಬಲೆ ಕಟ್ಟಿದ ಗಾಂಧೀಜಿ ಭಾವಚಿತ್ರಗಳು ಮಜ್ಜನ ಮಾಡಿ, ಹೂಗಳಿಂದ ಅಲಂಕೃತಗೊಂಡು ಬಿಳಿ ಉಡುಪು ಧರಿಸಿ ಬಂದು ಬರೆದುಕೊಟ್ಟ ಸಾಲುಗಳನ್ನು ಭಾಷಣ ರೂಪದಲ್ಲಿ ಓದುವ ರಾಜಕಾರಣಿಗಳು, ಸಮಾಜದ ಗಣ್ಯವ್ಯಕ್ತಿಗಳು, ಸಂಸ್ಥೆಗಳ ಮುಖ್ಯಸ್ಥರು ಇನ್ನೂ ಅನೇಕರೆದುರು ಭಾವಚಿತ್ರವಾಗಿಯೇ ತೋರ್ಪಡುತ್ತದೆಯೇ ಹೊರತು ಗಾಂಧೀಜಿಯವರ ತತ್ವಗಳನ್ನಾಗಲೀ, ನಿಲುವುಗಳನ್ನಾಗಲೀ, ವಿಚಾರಗಳನ್ನಾಗಲೀ ಪ್ರತಿಪಾದಿಸುವುದಿಲ್ಲ. ಅಂದಿನ ಭಾಷಣಕಾರರೆಲ್ಲರೂ ಕೊನೆಯಲ್ಲಿ ಹೇಳುವುದು ನಾವು ಇವತ್ತು ಗಾಂಧೀಜಿಯವರನ್ನು ನೆನಪು ಮಾಡಿಕೊಳ್ಳಬೇಕಾದರೆ ಎಂದು. ಆದರೆ, ವಿಷಾದದ ಸಂಗತಿ ಇದೆ.
ಗಾಂಧೀಜಿಯನ್ನು ನಾವು ನೆನಪು ಮಾಡಿಕೊಳ್ಳಬೇಕು ಎಂಬುದರ ಅರ್ಥ ಇಡೀ ಭಾರತವೇ ಗಾಂಧೀಜಿಯನ್ನು ಮರೆತಿದೆ. ಮತ್ತೆ ನಾವು ಗಾಂಧೀಜಿಯನ್ನು ಮುಂದಿನ ವರ್ಷದ ಅಕ್ಟೋಬರ್ 2ರಂದೇ ಸ್ಮರಿಸಿದ್ದೇವೆ ಎಂದು.
1947 ಆಗಸ್ಟ್ 15ರ ನಡುರಾತ್ರಿಯಿಂದಲೇ ದೇಶದ ಘನವ್ಯಕ್ತಿಗಳಿಂದ ಹಿಡಿದು ಅನಕ್ಷರಸ್ತನವರೆಗೂ ಸ್ವಾತಂತ್ರ್ಯದ ನೈಜ ಮಹತ್ವ ಅರಿಯದೇ ಸಂಭ್ರಮಿಸಿ ಕುಣಿದಿದ್ದಾಯಿತು. ಗಾಂಧಿ ತಂದುಕೊಟ್ಟ ಸ್ವಾತಂತ್ರ ಭಾರತೀಯರನ್ನು ಬಾಣಲೆಯಿಂದ ಬೆಂಕಿಗೆ ಎಸೆದ ಸ್ಥಿತಿಯಾಗಿತ್ತು. ಜನ ನಾಯಕರ ಹೆಸರಲ್ಲಿ ಅಧಿಕಾರದಾಹಿಗಳು ಸ್ವಾರ್ಥಕ್ಕಾಗಿ ತಮ್ಮ ಅಸ್ತಿತ್ವಕ್ಕಾಗಿ ಇತಿಹಾಸ ರಚನೆಗಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ರಾಜಕಾರಣಿಗಳು ಹುಟ್ಟಿಕೊಂಡರು.
ಇನ್ನು ದೇಶಕ್ಕಾಗಿ ಫಲವತ್ತಾದ ಭೂಮಿಯನ್ನು ಬಂಜರಾಗಿ ಮಾರ್ಪಾಟು ಮಾಡಿ, ದೇಶವನ್ನೇ ಹರಾಜು ಹಾಕುವ ಉದ್ಯಮಿಗಳು, ಅಭಿವೃದ್ಧಿ ಹೆಸರಿನಲ್ಲಿ ತಲೆ ಎತ್ತ ತೊಡಗಿದವು. ಗಾಂಧೀಜಿಯವರ ಮೂರು ಕೋತಿಗಳು ಸಂಪೂರ್ಣವಾಗಿ ಕಾಲವಾದಾಗ ನಮ್ಮ ದೇಶ ಗಾಂಧೀಜಿ ಕಂಡ ರಾಮ ರಾಜ್ಯ, ಪುಣ್ಯಭೂಮಿ, ಕರ್ಮಭೂಮಿ ಎಂದು ಪುರಾಣಗಳಲ್ಲಿ ಕೊಂಡಾಡಿರುವ ಭಾರತದಲ್ಲಿ ಮೇವು ಹಗರಣ, 2ಜಿ ಹಗರಣ ಮುಂತಾದವುಗಳು, ಬ್ಲೂ ಸ್ಟಾರ್ ಆಪರೇಷನ್, ಇಂದಿರಾಗಾಂಧಿ ಹತ್ಯೆ, ರಾಜೀವ್ಗಾಂಧಿ ಹತ್ಯೆ, ಬಾಂಬ್ ಬ್ಲಾಸ್ಟ್ಗಳು, ದಂಗೆಗಳು, ಬಾಬರಿ ಮಸೀದಿ ಧ್ವಂಸ, ಗುಜರಾತ್ ಕೋಮುಗಲಭೆ ಎಲ್ಲವನ್ನೂ ಕೂಲಂಕಶವಾಗಿ ಪರಿಶೀಲನೆ ನಡೆಸಿದರೆ ಇಲ್ಲೆಲ್ಲಿಯೂ ಗಾಂಧೀಜಿ ಕನಸಿನ ರಾಮರಾಜ್ಯದ ಯಾವ ಕುರುಹುಗಳೂ ಕಾಣಿಸುವುದಿಲ್ಲ.
ರಾಜಕಾರಣಿಗಳಲ್ಲದೇ ದೇಶದ ನಾಗರಿಕನಾದ ಪ್ರತಿಯೊಬ್ಬನೂ ಸ್ವಾರ್ಥಕ್ಕಾಗಿ ಜೀವನ ನಡೆಸುತ್ತಿರುವುದು ನಹಿಸಬೇಕಾದ ಸತ್ಯ, ಕೊಲೆ, ಸುಲಿಗೆ, ಅಪರಾಧಗಳಿಗೆ, ಅತ್ಯಾಚಾರ ಪ್ರಕರಣಗಳಿಗೆ ಇನ್ನೂ ಕಠೋರ ಅಪರಾಧಗಳಿಗೆ ಶಿಕ್ಷೆ ವಿಧಿಸಲು ನ್ಯಾಯಾಂಗದಲ್ಲಿ ಒಂದು ಮಾರ್ಗವಿದ್ದರೆ, ತಪ್ಪಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಕಂಡುಕೊಂಡಿರುವ ಈ ದೇಶದ ನಾಗರಿಕ ಎಲ್ಲಾ ಸಮಸ್ಯೆಗಳಿಗೂ ಎಲ್ಲಾ ಹಗರಣಗಳಿಗೂ ವ್ಯವಸ್ಥೆಗಳಿಗೂ ಸರ್ಕಾರವನ್ನು ದೂಷಿಸುವ ಮುನ್ನ ಅಂತಹ ಸರ್ಕಾರ ರಚನೆಯಲ್ಲಿ ನಮ್ಮ ಮತದಾನವೇ ಮಹತ್ವವಾದದ್ದೆಂದು ಅರಿತುಕೊಳ್ಳಬೇಕಿದೆ.
ವ್ಯಕ್ತಿ ಇಲ್ಲವಾದರೂ ಆತನ ವಿಚಾರಗಳೂ ತತ್ವಗಳೂ ಪಾಲಿಸುವವರಿವ ತನಕ ಆತ ಜೀವಂತವಾಗಿಯೇ ಇರುತ್ತಾನೆ. ಗಾಂಧೀಯನ್ನು ಹತ್ಯೆ ಮಾಡಿದ್ದು ಗೋಡ್ಸೆಯೇ? ಈ ಪ್ರಶ್ನೆಗೆ ನೀವೇ ಉತ್ತರ ಕಂಡುಕೊಳ್ಳಿ..
Discussion about this post