ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಳೆದ ಎರಡು ಮೂರು ತಿಂಗಳಿನಿಂದ ಪ್ರಪಂಚದಲ್ಲಿ ಯಾರಿಗೂ ನೆಮ್ಮದಿಯೇ ಇಲ್ಲ. ಕೊರೋನ ವೈರಸ್ ಎಂಬ ವೈರಾಣುವೊಂದು ಚೀನಾದ ಒಳಗೆ ಉದ್ಭವಿಸಿ ವಿಶ್ವದಾದ್ಯಂತ ಪರಿಸರಿಸಿ ಎಲ್ಲರ ಬಾಳಲ್ಲಿ ಚೆಲ್ಲಾಟವಾಡುತ್ತಿದೆ. ಅಮೆರಿಕಾ ದೇಶದ ಅಧ್ಯಕ್ಷರು ಹೇಳಿದಂತೆ ಈ ವೈರಾಣುವನ್ನು ಕೋವಿಡ್-19 ಅಥವಾ ಕೊರೋನಾ ವೈರಾಣು ಎನ್ನುವ ಬದಲು ಚೀನಾ ವೈರಸ್ ಎನ್ನುವುದೇ ಸೂಕ್ತ. ಜನ ಸಾಮಾನ್ಯರ ಆರೋಗ್ಯದೊಂದಿಗೆ ದೇಶಗಳ ಆರ್ಥಿಕ ವ್ಯವಸ್ಥೆಯ ಆರೋಗ್ಯವನ್ನು ಹಾಳು ಮಾಡಿದೆ ಈ ಅಯೋಗ್ಯ ವೈರಾಣು. ಇದರ ಪರಿಣಾಮಗಳಿಂದ ಚೇತರಿಸಿಕೊಳ್ಳುವುದೇ ಎಲ್ಲಾ ದೇಶಗಳಿಗೂ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿಯೂ ಸಬಲರಾಗಿದ್ದ ಅಮೆರಿಕಾದಂತಹ ಮುಂದುವರೆದ ದೇಶಗಳೂ ಸಹ ಈ ವೈರಾಣು ವಿರುದ್ಧ ಹೋರಾಡುವಲ್ಲಿ ಭಾಗಶಃ ವಿಫಲರಾಗಿವೆ. ಆದರೆ ಭಾರತ ಈ ಜೈವಿಕ ಭಯೋತ್ಪಾದನೆಯ ವಿರುದ್ಧ ಭಾಗಶಃ ಗೆದ್ದಾಗಿದೆ. ಸುಮ್ಮನೆ ಊಹಿಸಿಕೊಳ್ಳಿ ಕೇವಲ ಮುವತ್ತು ಕೋಟಿ ಇರುವ ಅಮೆರಿಕಾ ಮತ್ತು ಅದಕ್ಕಿಂತಲೂ ಕಡಿಮೆ ಸಂಖ್ಯೆ ಜನಸಂಖ್ಯೆ ಇರುವ ದೇಶಗಳು ಇಂದು ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಲಕ್ಷ ದಾಟಿದೆ. ಆದರೆ ನೂರಾ ಮೂವತ್ತು ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸರ್ಕಾರ ಈ ವಿಚಾರವನ್ನು ನಿರ್ಲಕ್ಷಿಸಿದ್ದರೆ ನಮ್ಮ ಬದುಕು ಇಂದು ಏನಾಗಿರುತ್ತಿತ್ತು? ನಮ್ಮಲ್ಲಿರುವ ಸಹಜ ವ್ಯವಸ್ಥೆ ಮತ್ತು ಕ್ರಮಗಳಲ್ಲೇ ನಾವು ಒಂದು ದೇಶವಾಗಿ ಇಂದು ಈ ಕೊರೊನಾ ಎಂಬ ಜೈವಿಕ ಭಯೋತ್ಪಾದನೆಯ ವಿರುದ್ಧ ಸಮರ ಸಾರಿ ಗೆದ್ದಿದ್ದೇವೆ ಅಂದರೆ ನಮ್ಮ ಸರ್ಕಾರದ ಸಾಮರ್ಥ್ಯವನ್ನು ಯೋಚಿಸಿ. ಜನ ದೇಶದ ಸ್ಥಬ್ಧತೆಗೆ ಕಟಿಬದ್ಧರಾಗಿ ಟೊಂಕ ಕಟ್ಟಿ ನಿಂತರು.
ಮಾನ್ಯ ಪ್ರಧಾನಿಗಳ ಪ್ರತಿ ಮಾತನ್ನು ಶ್ರದ್ಧೆಯಿಂದ ಪಾಲಿಸಿದರು. ಕೊರೋನಾ ವಿರುದ್ಧ ಹೋರಾಡಿದರು. ದೇಶದ ಪ್ರತಿ ನಾಗರೀಕನು ಕೊರೋನಾ ಸೈನಿಕನಾದನು. ಅದನ್ನು ಮುಂದೆ ನಿಂತು ನೆಡೆಸಿದ್ದು ವೈದ್ಯರು, ಪೋಲಿಸರು, ಸರ್ಕಾರಿ ಅಧಿಕಾರಿಗಳು, ಪೌರಕಾರ್ಮಿಕರು ಮತ್ತು ಆರೋಗ್ಯ ಸಿಬ್ಬಂದಿ ಹಾಗೂ ನಮಗೆ ನಿರಂತರವಾಗಿ ವಿಷಯ ತಿಳಿಸಿದ ಮಾಧ್ಯಮಗಳು. ಅಲ್ಲೊಂದು ಇಲ್ಲೊಂದು ತಲಹರಟೆ ಪ್ರಕರಣ ಬಿಟ್ಟರೆ ಭಾರತದ ಸ್ಥಬ್ದತೆ ಯಶಸ್ವಿಯಾಗಿದೆ. ಆದರೆ ಈ ಲಾಕ್ ಡೌನ್ ಮಾತ್ರ ಸಾಕೆ? ಇದನ್ನು ತೆಗೆದ ತಕ್ಷಣ ಮುಗಿಯಿತು ಎಂದೇ? ಇಲ್ಲ ಇದು ಆರಂಭ ಅಷ್ಟೆ ಇದರ ಪರಿಣಾಮಗಳು ನಮ್ಮನ್ನು ಮುಂದಿನ ದಿನಗಳಲ್ಲಿ ಕಾಡುತ್ತದೆ.
ಚೀನಾ ನಮ್ಮನ್ನು ಏಕಾ ಏಕಿ ಒಂದೇ ದಿನ ಕಷ್ಟಕ್ಕೆ ಸಿಲುಕಿಸಿಲ್ಲ. ಇವತ್ತು ಈ ಚೀನಾ ವೈರಸ್ ನಮ್ಮ ಬದುಕು ಕಸಿದಿದೆ, ನಮ್ಮ ನೆಮ್ಮದಿ ಕಸಿದಿದೆ, ನಮ್ಮ ಸ್ವಾತಂತ್ರ್ಯವನ್ನು ಒಂದರ್ಥದಲ್ಲಿ ಕಸಿದಿದೆ. ದುಡಿದು ತಿನ್ನುತ್ತಿದ್ದ ಬಡವರ್ಗದ ಕೂಲಿ ಕಾರ್ಮಿಕರನ್ನು ಬೇಡಿ ತಿನ್ನುವಂತೆ ಮಾಡಿದೆ. ಹಸನಾಗಿದ್ದ ರೈತರ ಬೆಳೆಯನ್ನು ನಿರ್ನಾಮ ಮಾಡಿದೆ. ಆರ್ಥಿಕವಾಗಿ ಚೇತರಿಕೆಯಲ್ಲಿದ್ದ ದೇಶಗಳನ್ನು ಮಂಡಿಯೂರಿ ಕೂತು ಬೇಡುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರ ಉದ್ಯೋಗಕ್ಕೆ ಕೊಳ್ಳಿ ಏಟು ಕೊಡಲಿದೆ. ಹಲವು ಕುಟುಂಬಗಳ ನಿರ್ವಹಣೆ ಚಿಂತಾಜನಕವಾಗಲಿದೆ. ಇಷ್ಟೆಲ್ಲಾ ಅವ್ಯವಸ್ಥೆ ಮಾಡಿದ ಚೀನಾಕ್ಕೆ ಸರ್ಕಾರ ಏನು ಮಾಡುತ್ತದೆ? ಇತರ ದೇಶಗಳು ಚೀನಾವನ್ನು ಹೇಗೆ ನೋಡುತ್ತದೆ? ಎಂಬುದು ನಮ್ಮೆಲ್ಲರ ಪ್ರಶ್ನೆ. ಹಾಗೆ ಒಮ್ಮೆ ನೋಡುತ್ತಾ ಹೋದರೆ ನಾವು ಉಪಯೋಗಿಸುವ ಶೇ.70 ವಸ್ತುಗಳು ಚೀನಾ ಮೂಲದವೆ ಅಥವಾ ಚೀನಾ ಹೂಡಿಕೆ ಮಾಡಿ ಇತರೆ ಕಂಪೆನಿಗಳಲ್ಲಿ ತಯಾರಿಸಿದ ವಸ್ತುಗಳಾಗಿವೆ. ನಮ್ಮ ಹಣವನ್ನು ಚೀನಾಕ್ಕೆ ತಾಂಬೂಲದಲ್ಲಿ ಇಟ್ಟಿ ಕಾಣಿಕೆ ಕೊಟ್ಟು ಆ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಿ ಇಂದು ಅದು ನೀಡಿರುವ ಅನಾರೋಗ್ಯ ಕೊಡುಗೆಯನ್ನು ಪಡೆದು ನಾವು ಸುಮ್ಮನೆ ಕೂರಬೇಕೆ?
ಚೀನಾ ದೇಶವು ಪ್ರಪಂಚದ ಇತರೆ ದೇಶಗಳಲ್ಲಿ ಹೂಡಿಕೆ ಮಾಡಿ ಆ ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಡಲು ಪ್ರಯತ್ನಿಸಿ ದಶಕಗಳೇ ಕಳಿದಿವೆ, ಈ ವೈರಸ್ ದೇಶದ ಹೂಡಿಕೆ ಭಾರತದಲ್ಲಿ ಕನಿಷ್ಠ 600 ಕೋಟಿ ಇದೆ. ಇದು ಆ ದೇಶಕ್ಕೆ ಅಲ್ಪ ಪ್ರಮಾಣದ ಹೂಡಿಕೆ ಆದರೆ ಇದರ ಪರಿಣಾಮ ನಮಗೆ ಗರಿಷ್ಠ ಮಟ್ಟದ್ದಾಗಿದೆ. ನಮ್ಮ ದೇಶದ ಮೇಲೆ ಈ ವೈರಸ್ ದೇಶವು ಮೂಲ ಸೌಕರ್ಯ, ರಸ್ತೆ, ನೀರು ಇಂತಹ ವಿಭಾಗಗಳಲ್ಲಿ ಹೂಡಿಕೆ ಮಾಡಿರುವುದು ಕಡಿಮೆ. ಆದರೆ ನಮ್ಮ ಮಗ್ಗಲು ಮುಳ್ಳಾಗಿರುವ ಪಾಪಿದೇಶ ಪಾಕಿಸ್ಥಾನ, ಬಾಂಗ್ಲಾದೇಶ, ಶ್ರೀಲಂಕಾ, ಮಾಯನ್ಮಾರ್ ಅಂತಹ ಸಣ್ಣ ರಾಷ್ಟ್ರಗಳಲ್ಲಿ ಬಹುಕೋಟಿ ಹಣಗಳನ್ನು ಹೂಡಿಕೆ ಮಾಡಿ ಆ ದೇಶಗಳ ವಿಶ್ವಾಸಗಳಿಸಿ ತನ್ನ ಸಾಮರ್ಥ್ಯವನ್ನು ವೃದ್ಧಿಗೊಳಿಸಿಕೊಳ್ಳಲು ಆರಂಭಿಸಿ ದಶಕಗಳೇ ಕಳಿದಿವೆ.
ಪಾಪಿಸ್ತಾನದಿಂದ ವೈರಸ್ ದೇಶಕ್ಕೆ ನಮ್ಮ ದೇಶದ ಮೂಲಕ ತಾನೇ ಹಣಹಾಕಿ ರಸ್ತೆ ನಿರ್ಮಿಸಲು ಮುಂದಾಗಿತ್ತು ಈ ವೈರಸ್ ದೇಶ, ಅದಕ್ಕೇನಾದರು ನಮ್ಮ ದೇಶ ಅನುಮತಿ ಕೊಟ್ಟಿದ್ದರೆ ಇಂದು ಪ್ರತಿದಿನ ಅದೆಷ್ಟು ಹೆಣ ಬೀಳುತ್ತಿದ್ದವೋ ನಮ್ಮ ದೇಶದಲ್ಲಿ! ಈ ವೈರಸ್ ದೇಶ ನಮ್ಮ ದೇಶದಲ್ಲಿ ಹೂಡಿಕೆ ಮಾಡಿರುವ ಕಂಪನಿಗಳು ಒಂದಾ ಎರಡಾ? ಕೆಲವು ಉದಾಹರಣೆಗಳನ್ನು ನೀಡುತ್ತೇನೆ ನೋಡಿ.
ತಂತ್ರಾಂಶದ ವಲಯದಲ್ಲಿ ವೈರಸ್ ದೇಶದ ಹೂಡಿಕೆ ಭಾರತದಲ್ಲಿ ಹೆಚ್ಚು, ಅದರಲ್ಲೂ ಈಗ ಆರಂಭಗೊಳ್ಳುವ ಸಂಸ್ಥೆಗಳಿಗೆ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿದೆ. ಯುವಕರನ್ನು ಆಕರ್ಷಿಸಿ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಹಿಂದಿಕ್ಕಿರುವ ಟಿಕ್ ಟಾಕ್ ಚೀನಾದ ಬೈಟ್ ಡ್ಯಾನ್ಸ್ ಸಂಸ್ಥೆಯದು ಭಾರತದಿಂದ ಇದಕ್ಕೆ ಸಿಗುವ ಲಾಭ ಎಷ್ಟು ಗೊತ್ತಾ? ಬರೋಬರಿ ವಾರ್ಷಿಕ ನೂರು ಕೋಟಿ. ಯೋಚಿಸಿ ಒಮ್ಮೆ ನಾವು ಮಾಡುವ ಎರಡು ನಿಮಿಷದ ವಿಡಿಯೋ ಈ ವೈರಸ್ ದೇಶಕ್ಕೆ ಪ್ರಪಂಚದ ನೆಮ್ಮದಿ ಹಾಳು ಮಾಡಲು ನಾವು ನೂರು ಕೋಟಿ ಕೊಟ್ಟ ಹಾಗೆ. ಗೇಟ್ ವೇ ಎಂಬ ಸಂಸ್ಥೆಯ ವರದಿಯ ಪ್ರಕಾರ ವೈರಸ್ ದೇಶದ ಆಲಿಬಾಬ, ಬೈಟ್ ಡ್ಯಾನ್ಸ್, ಟೆನ್ಸೆಂಟ್ ಸೇರಿದಂತೆ ಸುಮಾರು ಹನ್ನೆರಡು ಕಂಪನಿಗಳು ನಮ್ಮ ದೇಶದ ಪ್ರಾರಂಭಿಕ ಹಂತದ 92 ಸಂಸ್ಥೆಗಳ ಮೇಲೆ ಹಣ ಹೂಡಿಕೆ ಮಾಡಿವೆ.
ಆ ಪ್ರಾರಂಭಿಕ ಹಂತದ ಕಂಪನಿಗಳು ನಾವು ದಿನ ನಿತ್ಯ ಬಳಸುವ ಸಂಸ್ಥೆಗಳಾದ ಓಲಾ, ಭಿಜು ಎಜುಕೇಷನ್ ಆಪ್, ಪೇಟಿಎಂ, ಓಯೋ ರೂಂ ಇತ್ಯಾದಿ. ಒಂದು ವರದಿಯ ಪ್ರಕಾರ ಹೊಸದಾಗಿ ಆರಂಭವಾಗುವ 30 ಸಂಸ್ಥೆಗಳಲ್ಲಿ ಸುಮಾರು 18 ಕಂಪನಿಗಳಿಗೆ ಈ ವೈರಸ್ ದೇಶ ಭಾರತದಲ್ಲಿ ತನ್ನ ಹೂಡಿಕೆ ಮಾಡಿದೆ. ನಾವು ಬಳಸುವ ಪ್ರಮುಖ ಸೇವೆಗಳಾದ ಬಿಗ್ ಬ್ಯಾಸ್ಕೆಟ್, ಬೈಜು, ಡೆಲಿವರಿ, ಡ್ರೀಂ11, ಫ್ಲಿಪ್ ಕಾರ್ಟ್, ಹೈಕ್, ಮೇಕ್ ಮೈ ಟ್ರಿಪ್, ಓಲಾ, ಓಯೋ, ಪೇಟಿಎಂ ಮಾಲ್, ಪೇಟಿಎಂ ಡಾಟ್ ಕಾಮ್, ಪಾಲಿಸಿ ಬರ್ಝಾ, ಕ್ವಿರ್ಕ, ರಿವಿಗೊ, ಸ್ನ್ಯಾಪ್ ಡೀಲ್, ಸ್ವಿಗ್ಗಿ, ಜೊಮೊಟೊ, ಉಡಾನ್ ಇವುಗಳ ಮೇಲಿನ ಅಂದಾಜು ಹೂಡಿಕೆ 360 ಕೋಟಿಗೂ ಹೆಚ್ಚು. ವೈರಸ್ ದೇಶದ ಹೂಡಿಕೆ ಇಷ್ಟಿದೆ ಅಂದರೆ ಒಮ್ಮೆ ಊಹಿಸಿಕೊಳ್ಳಿ ಇದರ ವಾರ್ಷಿಕ ಆದಾಯ ಎಷ್ಟಾಗಬಹುದು? ಇದಲ್ಲದೆ ನಮ್ಮ ದೇಶದ ಆಟೋ ಮೊಬೈಲ್ ಕ್ಷೇತ್ರದಲ್ಲಿ ಸುಮಾರು 500 ಮಿಲಿಯನ್ ಹೂಡಿಕೆ ಮಾಡಿದೆ. ಈ ಸಂಸ್ಥೆಗಳ ವ್ಯವಹಾರವು ಭಾರತಕ್ಕೆ ಮಾಹಿತಿ ಭದ್ರತೆ, ಪ್ರಚಾರ ಮತ್ತು ವೇದಿಕೆ ನಿಯಂತ್ರಣದ ವಿಚಾರದಲ್ಲಿ ಸವಾಲಾಗಿ ಪರಿಣಮಿಸಿದೆ.
ಇದಲ್ಲದೆ ಚೀನಾ ವೈರಸ್’ನಿಂದ ವ್ಯಾಪಾರ ವ್ಯವಹಾರವಿಲ್ಲದೆ ನಷ್ಟ ಅನುಭವಿಸುತ್ತಿರುವ ಹಲವು ಸಂಸ್ಥೆಗಳನ್ನು ಖರೀದಿ ಮಾಡಲು ವೈರಸ್ ದೇಶ ಮತ್ತು ಅಲ್ಲಿನ ಹೂಡಿಕೆದಾರರು ನಿರ್ಧರಿಸಿದ್ದಾರೆ. ಒಂದೊಂದೆ ಸಂಸ್ಥೆಗಳನ್ನು ಕಬಳಿಸಿ ವಿವಿಧ ವಿಭಾಗಗಳಲ್ಲಿ ಅಂದರೆ ಶೈಕ್ಷಣಿಕ, ಮನೋರಂಜನೆ, ತಂತ್ರಜ್ಞಾನ, ವಿಜ್ಞಾನ, ಮೂಲ ಸೌಕರ್ಯ, ಆರೋಗ್ಯ ಮತ್ತು ಆಹಾರ ಪದಾರ್ಥ ಹೀಗೆ ಹಲವು ವ್ಯವಹಾರಿಕ ಶೃಂಗಗಳಲ್ಲಿ ತಾನು ಸಾರ್ವಭೌಮತ್ವವವನ್ನು ಪಡೆಯಲು ಹೊಂಚುಹಾಕಿದೆ. ಇದೆಲ್ಲದರ ಪರಿಣಾಮದಿಂದ ವೈರಸ್ ದೇಶಕ್ಕೆ ಆಗುವ ಆರ್ಥಿಕ ಲಾಭದಿಂದ ವಿಶ್ವದ ಬಲಿಷ್ಠ ರಾಷ್ಟ್ರವಾಗಲು ತೀರ್ಮಾನಿಸಿದೆ. ಇತರ ದೇಶಗಳ ಸಮಾದಿಯ ಮೇಲೆ ಅರಮನೆ ಕಟ್ಟುವ ದುಷ್ಟ ಮನಃಸ್ಥಿತಿ ಈ ವೈರಸ್ ದೇಶದ್ದು.
ಈ ವೈರಸ್ ದೇಶದ ಸಂಸ್ಥೆಗಳೊಂದಿಗೆ ನಾವು ವ್ಯವಹರಿಸುವ ಒಂದೊಂದು ರೂಪಾಯಿಯೂ ಸಹ ಇಂದು ಕೊರೋನ ಹೆಸರಲ್ಲಿ ಅದೆಷ್ಟೋ ಜನರ ಪ್ರಾಣ ತೆಗಿಯಲು, ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಹಾಳುಮಾಡಲು ಸಹಕಾರಿಯಾಗಿದೆ ಅಂದರೆ ತಪ್ಪಾಗಲಾರದು. ಇಷ್ಟೆಲ್ಲಾ ನಮ್ಮಿಂದ ವ್ಯವಹಾರ ಮಾಡುವ ಈ ಸಂಸ್ಥೆಗಳು ಇಂದು ಸಂಕಷ್ಟದಲ್ಲಿರುವ ನಮ್ಮ ದೇಶಕ್ಕೆ ಸಹಾಯ ಮಾಡಿದ್ದಾದರು ಎಷ್ಟು? ಇಂದು ನಮ್ಮ ನೆರವಿಗೆ ಬಂದಿರುವುದು ನಮ್ಮ ದೇಶದ ಸಂಸ್ಥೆಗಳು ಹಾಗೂ ಕಾರ್ಖಾನೆಗಳು. ನಮಗೆ ದಿನನಿತ್ಯದ ಅವಶ್ಯಕತೆ ಪೂರೈಸುತ್ತಿರುವುದು ನಮ್ಮ ನಡುವೆ ಇರುವ ದಿನಸಿ ಅಂಗಡಿಗಳು ಮತ್ತು ನಮ್ಮ ಸ್ಥಳೀಯ ತರಕಾರಿ ವ್ಯಾಪಾರಿಗಳು.
ವೈರಸ್ ದೇಶದ ಈ ಹೂಡಿಕೆಗಳು ಮತ್ತು ಸಂಸ್ಥೆಗಳಿಂದ ಭಾರತದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಠಿಯಾಗಿದೆ ಎಂದು ವಾದಿಸುವ ಬುದ್ದಿಜೀವಿಗಳು ನಮ್ಮ ನಡುವೆ ಇದ್ದಾರೆ ಬಾಯ್ಕಾಟ್ ಚೈನಾ ಎಂದರೆ ಇವರ ಉದ್ಯೋಗದ ಕತೆಯೇನು ಎಂದು ಕೇಳುವ ಜನಕ್ಕೆ ಏನು ಹೇಳಬೇಕು? ಚಿನ್ನದ ಸೂಜಿಯೆಂದು ಕಣ್ಣು ಚುಚ್ಚುಸಿಕೊಳ್ಳಲು ಸಾಧ್ಯವೇ?
ಈ ಎಲ್ಲಾ ದೃಷ್ಠಿಕೋನದಲ್ಲಿ ಆಲೋಚಿಸಿ ವೈರಸ್ ದೇಶದ ದುರುದ್ದೇಶವನ್ನು ಅರಿತ ಭಾರತ ಸರ್ಕಾರವು ಈ ದುರುಳ ದೇಶಕ್ಕೆ ಮಾರ್ಮಿಕ ಹೊಡೆತ ಕೊಡಲು ನಿರ್ಧರಿಸಿದೆ. ಭಾರತ ಸರ್ಕಾರವು ತನ್ನ ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಬದಲಿಸಿದೆ. ಭಾರತದ ಗಡಿ ಭಾಗವನ್ನು ಹಂಚಿಕೊಂಡಿರುವ ಪಾಪಿಸ್ತಾನ, ವೈರಸ್ ದೇಶ, ಬಾಂಗ್ಲಾದೇಶ ಸೇರಿದಂತೆ ಯಾವುದೇ ದೇಶವಾಗಲಿ ಅಥವಾ ಆ ದೇಶಕ್ಕೆ ಸೇರಿದ ವ್ಯಕ್ತಿಯಾಗಲಿ ಸಂಸ್ಥೆಯಾಗಲಿ ಭಾರತ ಸರ್ಕಾರದ ಅನುಮತಿ ಇಲ್ಲದೆ ಇನ್ನು ಮುಂದೆ ನಮ್ಮ ದೇಶದಲ್ಲಿ ಯಾವುದೇ ಆರ್ಥಿಕ ಹೂಡಿಕೆ ಮಾಡುವ ಹಾಗಿಲ್ಲ ಹಾಗೂ ಇನ್ನು ಮುಂದೆ ಈ ದೇಶಗಳು ನಮ್ಮ ದೇಶದ ಸಂಸ್ಥೆಗಳ ಮಾಲೀಕತ್ವವನ್ನು ಸರ್ಕಾರದ ಅನುಮತಿ ಇಲ್ಲದೆ ಖರೀದಿಸುವ ಹಾಗಿಲ್ಲ ಎಂಬ ನಿಯಮ ಮಾಡಿದೆ.
ಕೆಲವು ವಾರಗಳ ಹಿಂದಷ್ಟೆ ನಮ್ಮ ದೇಶದ ಬ್ಯಾಂಕ್ ಒಂದರ ಶೇರನ್ನು ಚೀನಾ ದೇಶ ಪಡೆದಿದೆ ಎಂಬುದು ನಮ್ಮ ಗಮನದಲ್ಲಿದೆ ಆದರೆ ಈ ವೈರಸ್ ದೇಶದ ಆಟ ಇನ್ನು ಮುಂದೆ ನೆಡೆಯುವುದಿಲ್ಲ. ಭಾರತ ಸರ್ಕಾರ ತೀವಾಗಿ ಅದರ ವ್ಯವಹಾರವನ್ನು ಗಮನಿಸುವುದರ ಮೂಲಕ ವೈರಸ್ ದೇಶದ ವ್ಯವಹಾರಕ್ಕೆ ಆಂಟಿ ವೈರಸ್ ಹಾಕಿ ಮಟ್ಟ ಹಾಕುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಆ ದೇಶದ ಪಾರುಪತ್ಯವನ್ನು ಶಮನ ಮಾಡುವ ಅನೇಕ ಕಾನೂನುಗಳು ಮುಂದಿನ ದಿನಗಳಲ್ಲಿ ರಚನೆಯಾಗಬಹುದು. ಚೀನಾವನ್ನು ಆರ್ಥಿಕವಾಗಿ ದುರ್ಬಲಗೊಳಿಸದಿದ್ದರೆ ಈ ವೈರಸ್ ದೇಶವನ್ನು ಮಟ್ಟಹಾಕುವುದು ಸುಲಭವಲ್ಲ. ಇನ್ನಾದರು ಭಾರತೀಯರು ಸ್ವದೇಶಿ ವಸ್ತುಗಳ ಬಳಕೆಗೆ ಪ್ರಾಮುಖ್ಯತೆ ನೀಡಬೇಕು.
ಭಾರತ ಸರ್ಕಾರವು ಈ ಪರಿಸ್ಥಿತಿಯನ್ನು ಅರಿತು ತನ್ನ ಮಿತ್ರರಾಷ್ಟ್ರಗಳು ಈ ವೈರಸ್ ದೇಶದಲ್ಲಿ ಮಾಡಿರುವ ಹೂಡಿಕೆ ಮತ್ತು ಅಲ್ಲಿ ಸ್ಥಾಪಿಸಿರುವ ಹಲವು ಕಂಪನಿಗಳನ್ನು ಚೀನಾದಲ್ಲಿ ಸ್ಥಗಿತಗೊಳಿಸಿ ಭಾರತದಲ್ಲಿ ಅವರಿಗೆ ಹೂಡಿಕೆ ಮಾಡಲು ಅನುವು ಮಾಡಿಕೊಡಬಹುದು ಮತ್ತು ವೈರಸ್ ದೇಶದಿಂದ ನಮ್ಮ ದೇಶಕ್ಕೆ ಕಂಪನಿಗಳನ್ನು ಸ್ಥಳಾಂತರಿಸಲು ಒಪ್ಪಿಸಿ ನಮ್ಮ ದೇಶದಲ್ಲಿ ಮಿತ್ರ ರಾಷ್ಟ್ರಗಳ ಕಂಪನಿ ತೆರೆದರೆ ಉದ್ಯೋಗದ ಸಮಸ್ಯೆಯೂ ಬಗೆಹರಿಯುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಯಶಸ್ವಿ ಖಂಡಿತಾ ಏಕೆಂದರೆ ಈಗಾಗಲೆ ಇನ್ನೂರೈವತ್ತಕ್ಕೂ ಹೆಚ್ಚು ಕಂಪನಿಗಳು ವೈರಸ್ ದೇಶದಿಂದ ಹೊರಬರಲು ಜಾಗತಿಕವಾಗಿ ಪ್ರಯತ್ನಿಸುತ್ತಿವೆ.
Get in Touch With Us info@kalpa.news Whatsapp: 9481252093
Discussion about this post