ಕಲ್ಪ ಮೀಡಿಯಾ ಹೌಸ್
ಹೊಸಪೇಟೆ: ತೆರಿಗೆ ಹೆಚ್ಚಳ ಮಾಡುವ ಮೂಲಕ ಜನತೆಯ ಗಾಯದ ಮೇಲೆ ಬರೆ ಎಳೆದಿರುವ ಹಿನ್ನೆಲೆಯಲ್ಲಿ ವಿನಾಯಕ ನಗರ ನಿವಾಸಿಗಳು ನಗರ ಸಭೆಗೆ ಮುತ್ತಿಗೆ ಹಾಕಿ ತೆರಿಗೆಯನ್ನು ಕಡಿತ ಮಾಡಿ ಹಳೆಯದಾದ ನೀತಿಯನ್ನು ಅನುಸರಿಸಿ ಸಾರ್ವಜನಿಕರಿಗೆ ಆಗುವ ತೊಂದರೆ ತಡೆಯಲು ಮನವಿ ಮಾಡಿದರು.
ನಗರದ ಜನತೆಯು ಕೊರೋನಾದಿಂದ ತತ್ತರಿಸುತ್ತಿರುವಾಗಲೇ, ನಗರಸಭೆಯವರು, ಸಾರ್ವಜನಿಕರಿಗೆ ಗಾಯದಮೇಲೆ ಬರೆ ಎಳೆದಿದ್ದಾರೆ. ಕೊರೋನಾ ಹಿನ್ನಲೆ ಜನರಿಗೆ ದುಡಿಮೆ ಇಲ್ಲದೆ, ಕಷ್ಟ ಪಡುತ್ತಿದ್ದಾರೆ. ಈ ಸಂಧರ್ಭದಲ್ಲಿ ನಗರಸಭೆ ಯಾವುದೇ ಸದ್ದುಗದ್ದಲವಿಲ್ಲದೆ, ಸರ್ಕಾರದ ಆದೇಶ ಮತ್ತು ಯಾರ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಪಡೆಯದೆ, ನಗರಸಭೆ ವ್ಯಾಪ್ತಿಯ ಆಸ್ತಿ ಮೇಲೆ ಒಂದಕ್ಕೆ ಐದು ಪಟ್ಟು ತೆರಿಗೆಯನ್ನು ಹೆಚ್ಚಿಸಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಪ್ರಸಕ್ತ ಇರುವ ತೆರಿಗೆ ಮಿತಿಗಿಂತ ಐದು ಪಟ್ಟು ಹೆಚ್ಚು ತೆರಿಗೆಯನ್ನು ವಿಧಿಸಿದೆ. ಹಾಗೂ ಇದೇ ತಿಂಗಳು 30ನೆ ತಾರೀಖಿನ ಒಳಗೆ ತೆರಿಗೆ ಕಟ್ಟುವವರಿಗೆ ಶೇ.5ರಷ್ಟು ರಿಯಾಯ್ತಿ ನೀಡಿ ಆದೇಶ ನೀಡಿರುತ್ತಾರೆ. ಯಾವುದೇ ಆದೇಶ ಇಲ್ಲದೆ ಹೆಚ್ಚಿಸಿ ನಗರಸಭೆಗೆ ತೆರಿಗೆ ಕಟ್ಟಲು ಹೋದ ಜನರು ಹೌಹಾರುವುದು ಖಂಡಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಯಾವ ಅಂಕಿಅಂಶಗಳ ಆಧಾರದ ಮೇಲೆ ಹಾಗೂ ವೈಜ್ಞಾನಿಕ ತಳಹದಿಯ ಮಾಪನಗಳ ಆಧಾರದ ಮೇಲೆ, ಇಷ್ಟೊಂದು ತೆರಿಗೆಯನ್ನು ಹೆಚ್ಚಿಗೆ ಮಾಡಲಾಗಿದೆ. ತಕ್ಷಣ ಸಚಿವ ಅನಂದ್ ಸಿಂಗ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ, ಮೊದಲು ಇದ್ದಂತೆಯೇ ತೆರಿಗೆಯನ್ನು ಕಟ್ಟಲಿಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ತಪ್ಪಿದಲ್ಲಿ ಹೊಸಪೇಟೆಯ ಜನತೆ ನಗರಸಭೆಯ ವಿರುದ್ಧ ಸರ್ಕಾರದ ಮುಂದೆ ಹೋಗಲು ಮನಸ್ಸು ಮಾಡಿರುತ್ತಾರೆ. ಶೀಘ್ರವೇ ಹೊಸಪೇಟೆ ನಗರಸಭೆ ಎಚ್ಚೆತ್ತುಕೊಂಡು, ಮೊದಲಿನಂತೆಯೇ ಇದ್ದ ತೆರಿಗೆಯ ಪದ್ಧತಿಯನ್ನು ಮುಂದಿನ ಎರಡು ವರ್ಷಗಳವರೆಗೂ ಅನುಸರಣೆಗೆ ತರಬೇಕು. ಇಲ್ಲವಾದಲ್ಲಿ ನಗರಸಭೆಯ ವಿರುದ್ಧ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದು ನಿಶ್ಚಿತವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ: ಮುರುಳಿಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post