ಕಲ್ಪ ಮೀಡಿಯಾ ಹೌಸ್ | ನಾಗಮಂಗಲ |
ರಾಜ್ಯದಲ್ಲಿ ಈ ವರ್ಷ ಈಗಾಗಲೇ 7 ಲಕ್ಷ ಕೃಷಿಕರಿಗೆ 475 ಕೋಟಿ ರೂ. ಬೆಳೆ ವಿಮೆ #CropInsurance ಪರಿಹಾರ ಒದಗಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಡ್ಯ #Mandya ಜಿಲ್ಲೆಯ ಆದಿ ಚುಂಚನಗಿರಿಯಲ್ಲಿ ಏರ್ಪಡಿಸಿರುವ ಡಾ.ಬಾಲ ಗಂಗಾಧರನಾಥ ಸ್ವಾಮೀಜಿಯವರ 79ನೇ ಜಯಂತೋತ್ಸವ, 11ನೇ ಸಂಸ್ಮರಣಾ ಸಮಾರಂಭ ಹಾಗೂ ಕೃಷಿ ಮೇಳ ಮತ್ತು ರೈತ ಸಂಗಮ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಶೇ. 2% ಅಂದರೆ ಸುಮಾರು 20 ಲಕ್ಷ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಈ ವರ್ಷ ಬರ ಪರಿಸ್ಥಿತಿ ಹೆಚ್ಚಿರುವ ಕಾರಣ ಇನ್ನೂ 1000 ಕೋಟಿ ರೂ. ವಿಮೆ ಹಣ ರೈತರಿಗೆ ನೇರವಾಗಿ ವರ್ಗಾವಣೆಯಾಗಲಿದೆ ಎಂದರು.
ಕೃಷಿಕರು ಸದೃಢವಾಗಬೇಕು ಆಗ ಮಾತ್ರ ದೇಶದ ಸಂಪೂರ್ಣ ಏಳಿಗೆ ಸಾಧ್ಯ ಎಂದ ಸಚಿವರು ಸಾಂಪ್ರದಾಯಿಕ ಕೃಷಿ ಪದ್ದತಿ ಜೊತೆಗೆ ಯಾಂತ್ರೀಕರಣ, ನವ ಸಂಶೋಧನೆಗಳ ಫಲವೂ ರೈತಗೆ ಸುಲಭವಾಗಿ ತಲುಪಬೇಕು. ಕೃಷಿ ವಿವಿಗಳು #AgriUniversity ಹಾಗೂ ಇಲಾಖೆಗಳು ಈ ಕೆಲಸ ಮಾಡಬೇಕು ಎಂದು ಹೇಳಿದರು.

ಆದಿಚುಂಚನಗಿರಿ ಮಠದ ಹಿರಿಮೆ ಹೆಚ್ಚಿಸಿದ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿಯವರ ಸ್ಮರಣಾರ್ಥ ಕೃಷಿ ಕಾಲೇಜು ಪ್ರಾರಂಭಿಸಲು ಶ್ರೀಮಠ ಪ್ರಯತ್ನ ನಡೆಸಿದೆ. ನಾವೂ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸೂಚನೆ ಪಾಲಿಸಿ ಅವರ ಆಶಯ ಈಡೇರಿಸಲು ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
ಬೆಂಗಳೂರಿನಲ್ಲಿ #Bengaluru ಇತ್ತೀಚೆಗೆ ಸಾವಯವ, ಸಿರಿಧಾನ್ಯ ಅಂತರಾಷ್ಟ್ರೀಯ ವಾಣಿಜ್ಯ ಮೇಳ ಅತ್ಯಂತ ಯಶಸ್ವಿಯಾಗಿ ನಡೆಸಿದೆ. ರೈತರು ಸಕ್ರಿಯವಾಗಿ ಪಾಲ್ಗೊಂಡಿದ್ದು ವಾಣಿಜ್ಯ ಒಪ್ಪಂದಗಳಲ್ಲೂ ಭಾಗಿಯಾಗಿದ್ದಾರೆ. ಇದೇ ರೀತಿ ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೂ ಆದ್ಯತೆ ನೀಡಬೇಕು ಎಂದವರು ಕರೆ ನೀಡಿದರು.
ಸರ್ಕಾರ ಸ್ತ್ರೀ ಸಬಲೀಕರಣಕ್ಕೆ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಕೃಷಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ನುಡಿದಂತೆ ನಡೆದಿದ್ದೇವೆ. ಜನರೂ ಸರ್ಕಾರಕ್ಕೆ ಬಲ ತುಂಬ ಬೇಕು ಎಂದರು.
ಆದಿ ಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಕೃಷಿಕರು ಬರಿ ಶ್ರಮಿಕರಾಗದೆ, ನಿಪುಣರೂ ಅಗಬೇಕು. ಇದೀಗ ಸೆಕೆಂಡರಿ ಕೃಷಿ ಹೆಚ್ಚು ಲಾಭದಾಯಕವಾಗಿದ್ದು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ರೈತರೇ ದೇಶದ ಬೆನ್ನೆಲುಬು, ಅವರ ಬದುಕು ಹಸನಾಗಬೇಕು, ದೇಶದಲ್ಲಿ ಐಟಿ, ಬಿಟಿ ಕ್ಷೇತ್ರದಲ್ಲಿ ಆದಂತೆ ಕೃಷಿ ಕ್ಷೇತ್ರದಲ್ಲಿಯೂ ಸಾಕಷ್ಟು ತಾಂತ್ರಿಕ ಆವಿಷ್ಕಾರಗಳಾಗಿದ್ದು ಅದನ್ನು ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು. ಒಂದೊಮ್ಮೆ ಬಡತನ ಹಸಿವು ಎದುರಿಸಿದ್ದ ಭಾರತದಲ್ಲಿ ಹಸಿರು ಕ್ರಾತಿ ದೇಶದ ಚಿತ್ರಣ ಬದಲಿಸಿತು. ಹಾಗೇ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ತಾಂತ್ರಿಕ ವೈಜ್ಞಾನಿಕ ಬದಲಾವಣೆ ಬೇಕಿದೆ ಎಂದರು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಟ್ರಸ್ಟ್ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಕೃಷಿಗೆ ಸರಿಯಾದ ಆದ್ಯತೆ ನೀಡಿದಾಗ ಮಾತ್ರ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ. ನೀರಿನ ಮಿತ ಬಳಕೆ ಬಗ್ಗೆ ರೈತರು ಗಮನ ಹರಿಸಬೇಕು. ಕೃಷಿ ಶ್ರೇಷ್ಠ ಜೀವನ ಸಂಸ್ಕೃತಿ. ಅದನ್ನು ಉತ್ತಮಗೊಳಿಸುತ್ತಾ ಸಾಗಿ ಎಂದು ರೈತರಿಗೆ ಕರೆ ನೀಡಿದರು.
ಕೃಷಿ ಆಯುಕ್ತ ವೈ.ಎಸ್. ಪಾಟೀಲ್ ಮಾತನಾಡಿ, ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮಾಜಿಕ, ಶೈಕ್ಷಣಿಕ, ಆದ್ಯಾತ್ಮಿಕ ಹಾಗೂ ಕೃಷಿಪರ ಕಾಳಜಿ, ಚಿಂತನೆ ಮತ್ತು ಸೇವೆ ಇಡೀ ಜಗತ್ತೇ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.
ಮಧ್ಯವರ್ತಿಗಳಿಂದ ಕೃಷಿಕರ ಶೋಷಣೆ ತಪ್ಪಿಸಿ ರೈತರನ್ನೇ ಉದ್ಯಮಿಗಳನ್ನಾಗಿಸಬೇಕೆಂಬುದು ಕೃಷಿ ಸಚಿವರ ಆಶಯವಾಗಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಕೃಷಿ ನಿರ್ದೇಶಕ ಡಾ.ಜಿ.ಟಿ ಪುತ್ರ, ಮಂಡ್ಯ ಜಿಲ್ಲಾ ಎಸ್’ಪಿ ಯತೀಶ್, ಸಿಇಒ ತನ್ವೀರ್ ಆಸಿಫ್, ಬೆಂಗಳೂರು ಕೃಷಿ ವಿವಿ ಉಪ ಕುಲಪತಿ ಡಾ.ಎಸ್.ವಿ. ಸುರೇಶ್, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಂ.ಎಸ್. ಬಂಥನಾಳ್ ಜಂಟಿ ಕೃಷಿ ನಿರ್ದೇಶಕ ಅಶೋಕ ಕುಮಾರ್ ಮತ್ತಿತರರು ಹಾಜರಿದ್ದರು
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post