ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಸ್ಥಳೀಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸ್ಮಾರ್ಟ್ ಸಿಟಿ ಯೋಜನೆಯು ನಗರಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಹುಬ್ಬಳ್ಳಿ ಧಾರವಾಡ ನಗರವು ಇತರ ನಗರಗಳಿಗೆ ಮಾದರಿಯಾಗುವ ರೀತಿಯಲ್ಲಿ ಬೆಳೆವಣಿಗೆಯಾಗಬೇಕು ಎಂದು ಸ್ಮಾರ್ಟ್ ಸಿಟಿ ಮಿಷನ್ ನ ಜಂಟಿ ಕಾರ್ಯದರ್ಶಿ ಕುನಾಲ್ ಕುಮಾರ್ ಹೇಳಿದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿಂದು ಯುರೋಪಿಯನ್ ಯುನಿಯನ್, ವಿಶ್ವ ಆರ್ಥಿಕ ವೇದಿಕೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್, ಎ.ಎಫ್.ಡಿ, ಸ್ಮಾರ್ಟ್ ಸಿಟಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಹಾಗೂ ಇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸುಸ್ಥಿರ ನಗರಗಳ ಭಾರತ ಕಾರ್ಯಕ್ರಮದ ಸಿಟಿ ಸ್ಪ್ರಿಂಟ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ನಗರವನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊಯಬೇಕಾಗಿದೆ. ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಬೇಕು. ಜಲ ಮೂಲಗಳ ಸಂರಕ್ಷಣೆ ಮಾಡಬೇಕು. ನೀರು ಪೋಲಾಗದಂತೆ ನೋಡಿಕೊಳ್ಳಬೇಕಾಗಿದೆ. ಕೆಲವು ಬಾರಿ ಅತಿವೃಷ್ಟಿಯಿಂದಾಗಿ ಸಮಸ್ಯೆಗಳು ಉದ್ಭವಿಸುತ್ತವೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ರಸ್ತೆಗಳುದ್ದಕ್ಕೂ ಬೀದಿ ದೀಪಗಳನ್ನು ಅಳವಡಿಸಬೇಕು. ರಸ್ತೆಗಳಲ್ಲಿ ಹರಿಯುವ ಮಳೆ ನೀರನ್ನು ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು. ಎಲ್ಲರೂ ತಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ದೊಡ್ಡ ಪ್ರಮಾಣದ ಬೆಳವಣಿಗೆಗೆ ಮುಂದಾಗಬೇಕು. ಜಾಗತಿಕವಾಗಿ ಬೆಳೆವಣಿಗೆಯನ್ನು ಸಾಧಿಸಬೇಕಾಗಿದೆ. ಎಲ್ಲ ವರ್ಗದ ಜನರು ಸಮಸ್ಯೆಗಳನ್ನು ಅರಿಯಲು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ದೇಶಪಾಂಡೆ ಫೌಂಡೇಷನ್ ಸಿಇಒ ಅರವಿಂದ ಚಿಂಚೋರೆ ಮಾತನಾಡಿ, ಹಳ್ಳಿಗಳನ್ನು ಸ್ಮಾರ್ಟ್ ರೀತಿಯಲ್ಲಿ ಬದಲಾವಣೆ ಮಾಡಬೇಕಾಗಿದೆ. ಭಾರತವು ಕೈಗಾರಿಕಾ ರಂಗದಲ್ಲಿ ನಂತರ ಬೆಳೆಯುತ್ತಿದೆ. ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿಯು ಇತರ ಸ್ಮಾರ್ಟ್ ಸಿಟಿಗಳಿಗೆ ಮಾದರಿಯಾಗುವತ್ತ ದಾಪುಗಾಲು ಇಡುತ್ತಿದೆ ಎಂದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ಕಾರ್ಯಕ್ರಮ ನಿರ್ದೇಶಕ ನಯೀಮ್ ಕೆರೂವಾಲಾ ಮಾತನಾಡಿ, ಹಸಿರು ಸಂಚಾರ ಪಥ ( ಗ್ರೀನ್ ಮೊಬಿಲಿಟಿ ಕಾರಿಡಾರ್ ) ನಿರ್ಮಾಣ ಹಂತದಲ್ಲಿ ಹಲವಾರು ಸವಾಲುಗಳು ಎದುರಾಗುತ್ತಿವೆ. ನಗರಗಳು ಬೆಳೆವಣಿಗೆ ಹೊಂದಲು ಸಂಪನ್ಮೂಲಗಳು ಅವಶ್ಯಕವಾಗಿವೆ. ಮೂಲ ಸೌಕರ್ಯಗಳು ಸಕಾಲದಲ್ಲಿ ದೊರೆತರೆ ಶೀಘ್ರಗತಿಯಲ್ಲಿ ನಗರಗಳು ಬೆಳೆಯಲಿವೆ. ಹವಾಮಾನ ಬದಲಾವಣೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೊದಲ ಸ್ಥಾನದಲ್ಲಿದೆ. ಸಾರಿಗೆ, ತ್ಯಾಜ್ಯ ವಿಲೇವಾರಿ, ಶುದ್ಧ ಕುಡಿಯುವ ನೀರು, ವಿದ್ಯುತ್ ಹಾಗೂ ಶಕ್ತಿ ಸಂಪನ್ಮೂಲಗಳು ಮುಂತಾದ ಸೌಕರ್ಯಗಳು ಜನರಿಗೆ ದೊರೆಯುವ ಮೂಲಕ ನಗರಗಳು ಬೆಳೆಯಬೇಕು ಎಂದು ತಿಳಿಸಿದರು.
Also read: ಇಂದಿನ ಸೋಲೇ ನಾಳಿನ ಗೆಲುವಿನ ಮೆಟ್ಟಿಲು: ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ಕಿವಿ ಮಾತು
ವಿಶ್ವ ಆರ್ಥಿಕ ವೇದಿಕೆ ಸಿಫೋರ್ ಐಆರ್ ನ ಪುರುಷೋತ್ತಮ ಕೌಶಿಕ್ ಮಾತನಾಡಿ, ಸವಾಲುಗಳ ಬಗ್ಗೆ ಎಲ್ಲರೂ ಚರ್ಚಿಸಬೇಕಿದೆ. ಜಾಗತಿಕವಾಗಿ ಬೆಳೆಯಲು ಎಲ್ಲರೂ ಮುಂದಾಗಬೇಕು. ಯಾವುದು ಮುಖ್ಯ ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಆ ನಂತರ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಮಾತನಾಡಿ, ಭಾರತದಲ್ಲಿ ಹುಬ್ಬಳ್ಳಿ ಧಾರವಾಡ ಉತ್ತಮ ನಗರವಾಗಿ ಬೆಳೆಯುತ್ತಿದೆ. ಬೆಂಗಳೂರಿನ ನಂತರ ಹುಬ್ಬಳ್ಳಿ ಅತಿದೊಡ್ಡ ನಗರವಾಗಿದೆ. ಎಲ್ಲರೂ ಒಟ್ಟಾಗಿ ಉನ್ನತ ಮಟ್ಟದ ಅಭಿವೃದ್ಧಿ ಸಾಧಿಸುವ ಮೂಲಕ ಬೆಳೆಯೋಣ ಎಂದರು.
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಮಾತನಾಡಿ, ಹುಬ್ಬಳ್ಳಿ ಧಾರವಾಡ ನಗರವನ್ನು ಕಾರ್ಬನ್ ಮುಕ್ತ ನಗರವನ್ನಾಗಿ ಮಾಡಲಾಗುವುದು. ನಗರದಲ್ಲಿ 12.5 ಲಕ್ಷ ಜನರಿದ್ದಾರೆ. ಹಲವು ಯೋಜನೆಗಳು ಅವಳಿ ನಗರದಲ್ಲಿ ಜಾರಿಯಲ್ಲಿವೆ ಎಂದರು.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಚಾರ್ಟೆರ್ಡ್ ಅಕೌಂಟೆಂಟ್ ಎಸ್.ಬಿ.ಶೆಟ್ಟಿ, ಸ್ಮಾರ್ಟ್ ಸಿಟಿ ಯೋಜನೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜೀಜ್ ದೇಸಾಯಿ, ಡೆಪ್ಯುಟಿ ಜನರಲ್ ಮ್ಯಾನೇಜರ್ ಚನ್ನಬಸವರಾಜ, ಉದ್ಯಮಿ ವಿ.ಎಸ್.ವಿ. ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post