ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ನೂತನ ರೈಲು ಮಾರ್ಗ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನುನಡೆಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ #Minister Prahlad Joshi ಅವರು, ಅಧಿಕಾರಿಗಳಿಗೆ ಮಾಹಿತಿ ಪಡೆದುಕೊಂಡರು.
ನೈಋತ್ಯ ರೈಲ್ವೆಯ ಕೇಂದ್ರ ಕಚೇರಿ ರೈಲ್ ಸೌಧದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರರೊಂದಿಗೆ ಚಾಲ್ತಿಯಲ್ಲಿರುವ ಹಾಗೂ ಪ್ರಸ್ತಾವಿತ ರೈಲ್ವೆ ಯೋಜನೆಗಳ ಪರಿಶೀಲನಾ ಸಭೆಯನ್ನು ನಡೆಸಿದರು.
ರಾಜ್ಯದ ಪ್ರಮುಖ ರೈಲ್ವೆ ಯೋಜನೆಗಳಾದ ಹುಬ್ಬಳ್ಳಿ-ಅಂಕೋಲಾ ಹೊಸ ಮಾರ್ಗ, ತುಮಕೂರು-ಚಿತ್ರದುರ್ಗ ಹೊಸ ಮಾರ್ಗ, ಧಾರವಾಡ-ಬೆಳಗಾವಿ ಹೊಸ ಮಾರ್ಗ, ಬಾಗಲಕೋಟೆ-ಕುಡಚಿ ಹೊಸ ಮಾರ್ಗ, ಗಡಗ-ವಾಡಿ ಹೊಸ ಮಾರ್ಗಗಳು ಹಾಗೂ ಪ್ರಗತಿಯಲ್ಲಿರುವ ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದರು.
ಹೆಚ್ಚುವರಿಯಾಗಿ, ಡಿಸೆಂಬರ್ ಒಳಗೆ ರೈಲ್ವೆ ಮಂಡಳಿಗೆ ಸಲ್ಲಿಸಲಿರುವ ಗಡಗ-ಯಳವಿಗಿ ಹೊಸ ಮಾರ್ಗದ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು.
ಇನ್ನು, ರೂ. 397 ಕೋಟಿ ವೆಚ್ಚದ ಹುಬ್ಬಳ್ಳಿ ನಿಲ್ದಾಣ ಪುನರಾಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಸುಮಾರು ರೂ. 17,000 ಕೋಟಿ ರೂ. ವೆಚ್ಚದ ಹುಬ್ಬಳ್ಳಿ-ಅಂಕೋಲಾ ಹೊಸ ಮಾರ್ಗ ಯೋಜನೆಯ ವಿವರಗಳನ್ನೂ ಅವರು ಪರಿಶೀಲಿಸಿದರು.
ಇದೇ ವೇಳೆ, 2025ರಲ್ಲಿ ನೈಋತ್ಯ ರೈಲ್ವೆಯ ಹೊಸ ಮಾರ್ಗ ನಿರ್ಮಾಣ, ರೈಲು ದ್ವಿಪಥಿಕರಣ ಹಾಗೂ ರಸ್ತೆ ಮೇಲ್ಸೇತುವೆ ಮತ್ತು ರಸ್ತೆ ಕೆಳಸೇತುವೆ ಕಾಮಗಾರಿಗಳ ಸಾಧನೆಗಳನ್ನು ಪರಿಶೀಲಿಸಿದರು. ರೈಲ್ವೆ ಅಭಿವೃದ್ಧಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿ, ಯಾವುದೇ ಅಡೆತಡೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಪ್ರಮುಖವಾಗಿ, ಅಳನಾವರ (17.2 ಕೋಟಿ), ಬಾದಾಮಿ (15.1 ಕೋಟಿ), ಕೊಪ್ಪಳ (21.14 ಕೋಟಿ) ಮತ್ತು ಬಂಟ್ವಾಳ (26.18 ಕೋಟಿ) ರೈಲು ನಿಲ್ದಾಣಗಳಲ್ಲಿ ಅಮೃತ ಭಾರತ ಸ್ಟೇಷನ್ ಯೋಜನೆ (ಅಆಖಖ) ಅಡಿಯಲ್ಲಿ ನಡೆಯುತ್ತಿರುವ ಪ್ರಗತಿಯನ್ನು ಅವರು ಪರಿಶೀಲಿಸಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಂಡಿರುವ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಅವರು ಸಚಿವರ ಮಾರ್ಗದರ್ಶನವನ್ನು ಅನುಸರಿಸಲಾಗುವುದು ಎಂದು ಭರವಸೆ ನೀಡಿ, ಕರ್ನಾಟಕ ಹಾಗೂ ಈ ಪ್ರದೇಶದ ಹಿತಕ್ಕಾಗಿ ಅಭಿವೃದ್ಧಿ ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸುವ ನೈಋತ್ಯ ರೈಲ್ವೆಯ ಬದ್ಧತೆಯನ್ನು ಪುನರುಚ್ಚರಿಸಿದರು.
ಹುಬ್ಬಳ್ಳಿ ಸೆಂಟ್ರಲ್ ಶಾಸಕ ಮಹೇಶ್ ತೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಆಯುಕ್ತರಾದ ರುದ್ರೇಶ್ ಗಾಳಿ, ಸಹಾಯಕ ಆಯುಕ್ತ ವಿಜಯ್ ಕುಮಾರ್, ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೆಲಾ ಮೀನಾ, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಹಿರಿಯ ಅಧಿಕಾರಿಗಳು ಹಾಗೂ ನೈಋತ್ಯ ರೈಲ್ವೆಯ ಮುಖ್ಯ ವಿಭಾಗಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post