ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಹಾವಳಿಯಿಂದಾಗಿ ಅನ್ಯ ಜಿಲ್ಲೆ ಹಾಗೂ ರಾಜ್ಯದಿಂದ ಬರುವವರನ್ನು ಅನುಮಾನದಿಂದ ನೋಡುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಬೇರೆ ರಾಜ್ಯದಿಂದ ಬಂದು ಇಲ್ಲಿನ ಸವಳಂಗ ರಸ್ತೆಯಲ್ಲಿರುವ ಫುಟ್ಪಾತ್’ನಲ್ಲಿ ಕೋವಿಡ್19 ನಿಯಮ ಪಾಲಿಸದೆ ವಾಸಿಸುತ್ತಿದ್ದ ಅಜ್ಜಿಯೊಬ್ಬಳಿಗೆ ಜಯನಗರ ಪೋಲಿಸರು ಸುರಕ್ಷಿತ ನೆಲೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಯನಗರ ಪೋಲಿಸ್ ಠಾಣೆಯ ಎಎಸ್ಐ ಪುಟ್ಟಯ್ಯ ಹನಗೋಡಿಮಠ ಅವರು ರೌಂಡ್ಸ್ ಮಾಡುವಾಗ ಉಷಾ ನರ್ಸಿಂಗ್ ಹೋಂ ಎದುರು ಸಂಚಾರಿ ಪೊಲೀಸ್ ಟವರ್ ಬಳಿಯ ಅಂಗಡಿಯ ಮುಂದೆ ಅಜ್ಜಿಯೊಬ್ಬಳು ಕಳೆದ ಕೆಲವು ದಿನಗಳಿಂದ ವಾಸಿಸುತ್ತಿರುವುದನ್ನು ಗಮನಿಸಿದ್ದರು. ಆಕೆಯನ್ನು ವಿಚಾರಿಸಿದಾಗ ಕನ್ನಡ ಬಾರದ ಆಕೆ ಹಿಂದಿಯಲ್ಲಿ ತನ್ನ ಹೆಸರು ಮೀನಾಕ್ಷಿ, ವಯಸ್ಸು 62, ತಾನು ಉತ್ತರ ಭಾರತದವಳು ಎಂದು ಮಾಹಿತಿ ನೀಡಿದ್ದಳು. ಅಲ್ಲದೆ ತಾನು ನಿರ್ಗತಿಕಳು ಎಂದು ತಿಳಿಸಿದ್ದಳು.
ದೇಶದೆಲ್ಲೆಡೆಯಂತೆ ಶಿವಮೊಗ್ಗದಲ್ಲೂ ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ವಯೋವೃದ್ಧೆಯು ಮಾಸ್ಕ್ ಧರಿಸದೆ ಎಲ್ಲೆಲ್ಲೋ ತಿರುಗಾಡಿಕೊಂಡಿರುವುದು ಸರಿಯಲ್ಲ. ಅಲ್ಲದೆ ಮಳೆ-ಚಳಿಯಲ್ಲೂ ಮಲಗುವುದು ಆರೋಗ್ಯಕ್ಕೆ ಸರಿಯಲ್ಲ ಎಂದು ಎಎಸ್ಐ ಪುಟ್ಟಯ್ಯ ಈ ವಿಷಯವನ್ನು ಪ್ರಭಾರ ಸಬ್ ಇನ್ಸ್ಪೆಕ್ಟರ್ ರಹತಲಿ ಅವರ ಗಮನಕ್ಕೆ ತಂದರು.
ಕೂಡಲೇ ಅವರು ಸಾರ್ವಜನಿಕ ಹಿತ ದೃಷ್ಟಿಯಿಂದ ವೃದ್ಧೆಯನ್ನು ವಶಕ್ಕೆ ಪಡೆದು ಈಕೆಗೆ ವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಸದರಿ ಇಲಾಖೆಯ ಅಧಿಕಾರಿ ಶಿಲ್ಪ ದೊಡ್ಡಮನಿ ಅವರು ಭದ್ರಾವತಿ ತಾಲೂಕಿನ ಆಗರದಹಳ್ಳಿಯಲ್ಲಿರುವ ಇಲಾಖೆಯ ವಸತಿ ಕಲ್ಪಿಸಲು ಕ್ರಮ ವಹಿಸಿದ್ದಾರೆ. ಪೋಲಿಸರ ಈ ಕಾರ್ಯಕ್ಕೆ ಪ್ರತಿ ನಿತ್ಯ ಅನಾಥ ವೃದ್ಧೆಗೆ ಊಟ, ತಿಂಡಿಯನ್ನು ಒದಗಿಸುತ್ತಿದ್ದ ಉಷಾ ನರ್ಸಿಂಗ್ ಹೋಂ ಬಳಿಯ ಆಟೋ ಸ್ಟ್ಯಾಂಡ್ನ ಆಟೋ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post