ನವದೆಹಲಿ: ಪಾಕಿಸ್ಥಾನದ ಪಡೆಗಳು ಅಕ್ರಮವಾಗಿ ಬಂಧಿಸಿರುವ ನಮ್ಮ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಕೊಂಚ ತೊಂದರೆಯಾದರೂ ಅದರ ಭೀಕರ ಪರಿಣಾಮವನ್ನು ನೀವು ಎದುರಿಸುತ್ತೀರಿ ಎಂದು ಭಾರತ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದೆ.
ಭಾರತದ ವಾಯುಗಡಿಯೊಳಗೆ ಇಂದು ಮುಂಜಾನೆ ಪಾಕ್ ವಿಮಾನಗಳು ಅತಿಕ್ರಮ ಪ್ರವೇಶ ಮಾಡಿದ್ದು ಮಾತ್ರವಲ್ಲದೇ, ನಮ್ಮ ಮಿಗ್ ವಿಮಾನವನ್ನು ಹೊಡೆದುರುಳಿಸಿ, ಪೈಲಟ್ ಅಭಿನಂದನ್ ಅವರನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪಾಕ್ ಹೈ ಕಮಿಷನರ್ ಅವರನ್ನು ಕರೆಸಿಕೊಂಡ ಭಾರತ ಸರ್ಕಾರ ಈ ರೀತಿ ಎಚ್ಚರಿಕೆ ನೀಡಿ ಕಳುಹಿಸಿದೆ.
ಅಂತಾರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಜಿನೀವಾ ಸಮಾವೇಶದ ಒಪ್ಪಂದದ ಪ್ರಕಾರ ನಡೆದುಕೊಳ್ಳದ ನೀವು, ನಮ್ಮ ವಾಯುಸೇನೆಯ ಯೋಧನನ್ನು ಅಕ್ರಮವಾಗಿ ಬಂಧಿಸಿದ್ದೀರಿ. ಇದರ ಕುರಿತಾಗಿ ಯುಎನ್ ನಿಯಮಗಳ ಪ್ರಕಾರ ನಮಗೆ ಅಧಿಕೃತವಾಗಿ ಮಾಹಿತಿಯನ್ನೂ ಸಹ ನೀವು ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಯೋಧನನ್ನು ಗೌರವಯುತವಾಗಿ ನೀವು ನಡೆಸಿಕೊಳ್ಳಬೇಕು. ಅಲ್ಲದೇ ಅತ್ಯಂತ ಶೀಘ್ರದಲ್ಲಿ ಅವರನ್ನು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕಳುಹಿಸುವ ಕುರಿತಾಗಿ ನೀವು ಭರವಸೆ ನೀಡಬೇಕು. ಇದರ ಹೊರತಾಗಿ ಏನಾದರೂ ತೊಂದರೆಯಾದರೆ ಪರಿಣಾಮ ಎದುರಿಸುತ್ತೀರಿ ಎಂದು ಎಚ್ಚರಿಸಿದೆ.
ಇನ್ನು, ಬಾಲಾಕೋಟ್’ನಲ್ಲಿ ಭಾರತೀಯ ವಾಯುಪಡೆ ನಡೆಸಿದ ದಾಳಿ ಮಿಲಿಟರಿ ಕಾರ್ಯಾಚರಣೆಯಲ್ಲ. ಬದಲಾಗಿ ಅದು ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಾಗಿತ್ತು. ನಾವು ನಿಮ್ಮ ಸೇನೆಯನ್ನು ಟಾರ್ಗೆಟ್ ಮಾಡಿಲ್ಲ. ಆದರೆ, ನೀವು ನಮ್ಮ ಸೇನೆಯನ್ನು ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ. ಇಂತಹ ಕೃತ್ಯಗಳನ್ನು ತತಕ್ಷಣವೇ ನಿಲ್ಲಿಸುವುದು ನಿಮಗೇ ಒಳ್ಳೆಯದು ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.
Discussion about this post