ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಈ ಕಾರ್ಖಾನೆಯು ಕರ್ನಾಟಕದ ಹಿಂದುಳಿದ ಪ್ರದೇಶದಲ್ಲಿ ಅಂದರೆ ಉತ್ತರ ಕರ್ನಾಟಕದ ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯಲ್ಲಿ 1993 ರಲ್ಲಿ ಸ್ಥಾಪನೆಗೊಂಡಿದ್ದು, ಕಂಪನಿಯ ಪ್ರಮುಖವಾಗಿ ಬೀಡುಕಬ್ಬಿಣ ಮತ್ತು ಬೂದು ಕಬ್ಬಿಣದ ಎರಕಗಳನ್ನು ಉತ್ಪಾದಿಸುತ್ತಿದೆ. ಈ ಉತ್ಪಾದನೆಗಳು ಮುಖ್ಯವಾಗಿ ವಾಹನ ತಯಾರಿಕಾ ವಲಯಕ್ಕೆ ಬಿಡಿಭಾಗವಾಗಿ ಪೂರೈಸಲ್ಪಡುತ್ತವೆ.ಕಾರ್ಖಾನೆಯು ಸ್ಥಾಪನೆಯಾದಾಗಿನಿಂದಲೂ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುತ್ತಿದ್ದು, ಇದರ ಭಾಗವಾಗಿ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್’ನ ಮುಖಾಂತರ ಗ್ರಾಮದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಇವುಗಳಿಗೆ ಒತ್ತುಕೊಟ್ಟು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತದೆ. ಈ ಚಟುವಟಿಕೆಗಳಲ್ಲಿ ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವೂ ಒಂದಾಗಿದೆ.
ಪರಿಸರ ಸಂರಕ್ಷಿಸುವ ಕುರಿತು ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಸಹ ‘‘ಒಂದು ವೇಳೆ ಪ್ಲಾಸ್ಟಿಕ್ ಉಳಿದುಕೊಂಡರೆ ನಮ್ಮ ಉಳಿವಿಲ್ಲ ! (‘‘No to Plastic, Yes to Earth’’’) ಎಂಬುವ ಈ ವರ್ಷದ ಮುಖ್ಯ ವಿಷಯದ ಮೇಲೆ ನವೆಂಬರ್ 18 ಹಾಗೂ 19ರ ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಸಂದೇಶ – ಪೃಥ್ವಿಯನ್ನು ರಕ್ಷಿಸಿ, ಸಂರಕ್ಷಿಸಿ, ಉಳಿಸಿ ಮುಂದಿನ ಪೀಳಿಗೆಗಾಗಿ!
ಮೊದಲ ದಿನ ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಭಾಗ್ಯನಗರ ಮುಖ್ಯ ರಸ್ತೆಯಿಂದ ಪಾನಘಂಟಿ ಮಂಗಳ ಭವನದ ತನಕ ಅವರಣದ ತನಕ ಕುಷ್ಟಗಿಯ ಮಹಿಳಾ ವೀರಗಾಸೆ ತಂಡದವರಿಂದ ಮತ್ತು ಪರಿಸರ ಪ್ರೇಮಿಗಳಿಂದ ಮೆರವಣಿಗೆ ಮೂಲಕ ‘‘ಪರಿಸರ ಜಾಥಾ’’ ನಡೆಸಲಾಯಿತು.
ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ -2019 ಧ್ವಜಾರೋಹಣ ಮತ್ತು ‘‘ಸಕಾಳ್ -ಪೋಟೋಗ್ರಫಿ’’ ವಸ್ತು ಪ್ರದರ್ಶನದಲ್ಲಿ ಪರಿಸರ, ವನ್ಯಜೀವಿ, ಶಕ್ತಿ, ಗಾಳಿ, ನೀರು ಕುರಿತು ಜಾಗೃತಿ ಮೂಡಿಸುವ ದೇಶೀಯ ಹಾಗೂ ವಿದೇಶೀಯ ಛಾಯಾಚಿತ್ರಗಾರರ ಚಿತ್ರಪಟಗಳನ್ನು ಪ್ರದರ್ಶಿಸಲಾಗಿತ್ತು. ಈ ಸಕಾಲ ಪೋಟೋಗ್ರಾಫಿ ಗ್ಯಾಲರಿಯನ್ನು ಶ್ರೀ ಸಂಜೀವ್ ವಿ ಕುಲಕರ್ಣಿ ಜಿಲ್ಲಾ ಹಿರಿಯ ಮತ್ತು ಸತ್ರ ನ್ಯಾಯಧೀಶರು ಕೊಪ್ಪಳ ಮತ್ತು ಶ್ರೀ ಆರ್.ವಿ. ಗುಮಾಸ್ತೆ ವ್ಯವಸ್ಥಾಪಕ ನಿರ್ದೇಶಕರು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಇವರು ಉದ್ಘಾಟನೆ ಮಾಡಿದರು.
ನಂತರ ಕಾರ್ಯಕ್ರಮದ ಉದ್ಘಾಟನೆ ‘‘ಪಾನಘಂಟಿ ಮಂಗಳ ಭವನದ ಆವರಣದಲ್ಲಿ ಜೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಕೊಪ್ಪಳ ಜಿಲ್ಲಾ ಹಿರಿಯ ಮತ್ತು ಸತ್ರ ನ್ಯಾಯಧೀಶರು ಶ್ರೀ ಸಂಜೀವ್ ವಿ ಕುಲಕರ್ಣಿ, ಕಿರ್ಲೋಸ್ಕರ್ ಪೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ, ಕೊಪ್ಪಳ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶ್ರೀ ಟಿ. ಶ್ರೀನಿವಾಸ , ಬೆಂಗಳೂರು ವಾಟರ್ ಲಿಟರರಿ ಫೌಂಡೇಶನ್ ಸಂಸ್ಥಾಪಕ ಶ್ರೀ ಅಯ್ಯಪ್ಪ ಎಂ ಮಸಗಿ, ಹಾಗೂ ಈ ಸಾಲಿನ ವಸುಂಧರ ಸನ್ಮಾನ್ ಪ್ರಶಸ್ತಿ ಪುರಸ್ಕೃತರು ಹಾಗೂ ಪುಣೆ ವಸುಂಧರಾ ಕ್ಲಬ್ ಚಿತ್ರೋತ್ಸವದ ನಿರ್ದೇಶಕರಾದ ಶ್ರೀ ವಿರೇಂದ್ರ ಚಿತ್ರವ್ ಈ ಸಂದರ್ಭದಲ್ಲಿದ್ದರು.
ಕೆಎಫ್’ಐಎಲ್ ಆಫೀಸರ್ಸ್ ಲೇಡಿಸ್ ಕ್ಲಬ್ ಸದಸ್ಯರು ಪರಿಸರ ಗೀತೆಯನ್ನು ಹಾಡುವುದರ ಮೂಲಕ ಪ್ರಾರ್ಥನೆ ನೆರವೇರಿಸಿದರೆ, ಹೊಸಪೇಟೆಯ ಸ್ವರಗಂಗಾ ಸುಗಮ ಸಂಗೀತ ಅಕಾಡಮಿಯ ಅಧ್ಯಕ್ಷರಾದ ಶ್ರೀ ಎಸ್.ಪಿ.ಟಿ ಅನೂಪ್ ಕುಮಾರ್ ರಾಗ ಸಂಯೋಜನೆ ಮಾಡಿ ಹಾರ್ಮಿನಿಯಂ ಸಾಥ್ ಮತ್ತು ಕುಮಾರ ಶ್ರೀ ಹನುಮಂತು ತಬಲದಲ್ಲಿ ಸಾಥ್ ನೀಡಿದರು.
ಪುಣೆ ವಸುಂಧರಾ ಕ್ಲಬ್ ಚಿತ್ರೋತ್ಸವದ ನಿರ್ದೇಶಕರಾದ ಶ್ರೀ ವಿರೇಂದ್ರ ಚಿತ್ರವ್ ಅವರು ವಸುಂಧರಾ ಕ್ಲಬ್ ಚಟುವಟಿಕೆ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಹಿರಿಯ ಮತ್ತು ಸತ್ರ ನ್ಯಾಯಧೀಶರು ಶ್ರೀ ಸಂಜೀವ್ ವಿ ಕುಲಕರ್ಣಿ ಅವರು ಮಾತನಾಡಿ, ಕಿರ್ಲೋಸ್ಕರ್ ಕಾರ್ಖಾನೆ ಪರಿಸರ ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ನಮ್ಮ ನ್ಯಾಯಾಂಗ ಇಲಾಖೆಯ ಆಯೋಜಿಸುವ ಪರಿಸರ ಉಳಿಸುವ ಜಾಗೃತಿ ಕಾರ್ಯಕ್ರಮಗಳಲ್ಲಿ ಕೈಜೋಡಿಸುತ್ತಿರುವುದು ಮತ್ತು ಪ್ಲಾಸ್ಟಿಕ್ ತೊಲಗಿಸಿ ಜೀವ ರಕ್ಷಣೆ ಮಾಡುವ ಜಾಗೃತಿ ಇದಾಗಿದ್ದು, ಇದಕ್ಕಾಗಿ ನಮ್ಮ ಸಹಕಾರ ಇರುತ್ತದೆ ಎಂದರು.
ಸಿವಿಲ್ ನ್ಯಾಯಾಧೀರಾದ ಟಿ. ಶ್ರೀನಿವಾಸ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ವಾತಾವರಣ ಹಾಗೂ ಹವಾಮಾನ ಕೆಟ್ಟು ಹೋಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಈ ಕಿರ್ಲೋಸ್ಕರ್ ಕಾರ್ಖಾನೆಯ ಕಾರ್ಯಕ್ರಮ ಮಹತ್ವ ಪೂರ್ಣ, ಈ ಭಾಗದಲ್ಲಿ ಇನ್ನೂ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಲು ಶ್ರಮಿಸಬೇಕಾಗಿದೆ. ಮುಂದಿನ ಪೀಳಿಗೆಗಾಗಿ ಪರಿಸರ ರಕ್ಷಣೆಗೆ ಮುಂದಾಗಿ ಮಾದರಿಯಾಗಬೇಕಾಗಿದೆ ಹಾಗೂ ಸಾಲುಮರದ ತಿಮ್ಮಕ್ಕನ ಪರಿಸರ ಕಾಳಜಿ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ, ಶ್ಲಾಘಿಸಿದರು.
ಶ್ರೀ ಆರ್.ವಿ. ಗುಮಾಸ್ತೆ ಅವರು ಮಾತನಾಡಿ, ವ್ಯವಸ್ಥಾಪಕ ನಿರ್ದೇಶಕರು ಕಿರ್ಲೋಸ್ಕರ್ ಪೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಇವರು ತಮ್ಮ ಭಾಷಣದಲ್ಲಿ ಕಂಪನಿಯು ಪರಿಸರ ಕಾಳಜಿಗೆ ಆಯೋಜಿಸದ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮೀಣ, ನಗರ ಮತ್ತು ಕೈಗಾರಿಕಾ ಪ್ರದೇಶಗಳಿಗೆ ನೀರಿನ ಜಾಗೃತಿ ಮೂಡಿಸುವ ಅಭಿಯಾನಗಳು, ಕಾರ್ಯಾಗಾರಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ರೂಪಿಸಿ, ಇದುವರೆಗೆೆ 8,000 ಕ್ಕೂ ಹೆಚ್ಚು ನೀರಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, 189 ಕ್ಕೂ ಅಧಿಕ ಕೈಗಾರಿಕೆಗಳು, 321ಕ್ಕೂ ಅಧಿಕ ಅಪಾರ್ಟ್ಮೆಂಟ್’ಗಳಲ್ಲಿ, 43 ಐಷಾರಾಮಿ ಸಂಸ್ಥೆಗಳಲ್ಲಿ, 30,000 ಕ್ಕೂ ಹೆಚ್ಚು ಮನೆಗಳಲ್ಲಿ, 233 ಶಿಕ್ಷಣ ಸಂಸ್ಥೆಗಳು ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ 9,000ಕ್ಕೂ ಹೆಚ್ಚು ಸ್ಥಳಗಳಲ್ಲಿ ನೀರಿನ ಸಂರಕ್ಷಣೆ ಮತ್ತು ಸಂಸ್ಕರಣೆ ಯೋಜನೆ ಮಾಡಿ 40,000 ಹೆಕ್ಟೇರ್ ಒಣಭೂಮಿಯನ್ನು ಮಳೆ ನೀರು ಮತ್ತು ಬದು ನೀರು ಕೊಯ್ಲು ಮೂಲಕ ಹಸಿ ಭೂಮಿಯಾಗಿ ಪರಿವರ್ತಿಸಿದ ಮತ್ತು ಈ ಅಂಗವಾಗಿ, ಪರಿಸರ, ವನ್ಯಜೀವಿ, ಕೃಷಿ ಇತ್ಯಾದಿ ವಿಭಾಗಗಳಲ್ಲಿ ಸಾಧನೆ ಮಾಡಿದ ಶ್ರೀ ಅಯ್ಯಪ್ಪ ಎಂ ಮಸಗಿ, ವಾಟರ್ ಲಿಟರರಿ ಫೌಂಡೇಷನ್ ಸಂಸ್ಥಾಪಕರು, ಬೆಂಗಳೂರು, ಇವರಿಗೆ ವಸುಂಧರ ಸನ್ಮಾನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಶ್ರೀ ಕಿರಣ್ ಶೇಜೆಕರ್ ಪ್ರಶಂಸಾ ಪತ್ರ ಓದಿದರು.
ಈ ಸಂದರ್ಭದಲ್ಲಿ ಕೊಪ್ಪಳದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಾರ್ವಜನಿಕರು ಭಾಗವಹಿಸಿದ್ದರು. ಅಯ್ಯಪ್ಪ ಎಂ ಮಸಗಿಯವರು ತಮ್ಮ ಭಾಷಣದಲ್ಲಿ ಅನೇಕ ರಾಜ್ಯಗಳಲ್ಲಿ ಮತ್ತು ಕರ್ನಾಟಕದ ಹಲವಾರು ಭಾಗ ನೀರಿನ ಸಂರಕ್ಷಣೆಗಾಗಿ ಮಾಡಲಾದ ಸಮಗ್ರ ಚಿತ್ರಣವನ್ನು ಪರಿಚಯಿಸಿದರು.
ಸಮಾರೋಪ ಸಮಾರಂಭ
ಕಿರ್ಲೋಸ್ಕರ್ – ವಸುಂಧರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ಅದ್ದೂರಿಯಾಗಿ ಜರುಗಿತು.
ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ಶ್ರೀ ರಘುನಂದನ ಮೂರ್ತಿ ಮಾತನಾಡಿ, ಪರಿಸರ ಸಂರಕ್ಷಣೆಯ ಕುರಿತು ಕಿರ್ಲೋಸ್ಕರ್ ಸಂಸ್ಥೆಯು ವಸುಂಧರಾ ಕ್ಲಬ್ ಜೊತೆಗೂಡಿ ದೃಶ್ಯ ಮಾಧ್ಯಮದ ಮೂಲಕ ಮಾಡುತ್ತಿರುವ ಚಟುವಟಿಕೆಗಳು ತುಂಬಾ ಶ್ಲಾಘನೀಯವಾದುದು. ಕೊಪ್ಪಳ ನಗರದಲ್ಲಿ ತಮ್ಮ ಕಂಪನಿಯ ಸಹಕಾರದಿಂದ ಅನೇಕ ಹೊಸ ಹೊಸ ಪರಿಸರಕ್ಕೆ ಸಂಬಂಧಿಸಿದ ಕೆಲಸಕಾರ್ಯಗಳು ಆಗಬೇಕಾಗಿದೆ. ತಾವು ನಮ್ಮ ಆಡಳಿತದ ಜೊತೆ ಕೈ ಜೋಡಿಸಲು ಮನವಿ ಮಾಡಿದರು.
ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ. ದತ್ತಾತ್ರೇಯ ಡಿ.ಬಂಟ್ ಮಾತನಾಡಿ, ನಾವೆಲ್ಲ ನಾಗರಿಕರಾಗಿ ಸೋಲುತ್ತಾ ಬಂದಿದ್ದೇವೆ. ಬರೀ ಕರ್ತವ್ಯದಲ್ಲಿ ಮುಂದುವರೆಯುತ್ತಾ ಬಂದಿದ್ದೇವೆ. ಎಲ್ಲರಿಗೂ ಪರಿಸರ ಸಂರಕ್ಷಣೆಯ ಬಗ್ಗೆ ಅರಿವಿದೆ. ಆದರೆ, ಗೊತ್ತಿದ್ದೂ, ಗೊತ್ತಿದ್ದೂ, ಅದನ್ನು ಹಾಳುಮಾಡುತ್ತಾ ಬಂದಿದ್ದೇವೆ. ಆರೋಗ್ಯ ಮತ್ತು ಪರಿಸರಕ್ಕೆ ಇರುವಂತಹ ಸಂಬಂಧಗಳ ಬಗ್ಗೆ ತಿಳಿಸಿದರು. ನಮ್ಮ ಗ್ರಾಮ -ನಗರಗಳ ಪಕ್ಕದಲ್ಲಿಯೇ ನದಿ-ಕಾಲುವೆಗಳು ಹರಿದು ಹೋದರೂ ನಮಗೆ ಕುಡಿಯುವ ನೀರಿನ ಬವಣೆ ತಪ್ಪಿದ್ದಲ್ಲ. ಎಂಬ ವಾಸ್ತವಾಂಶವನ್ನು ತಿಳಿಸಿಕೊಟ್ಟರು.
ಸಾವಯವ ಕೃಷಿಯಲ್ಲಿ ಅಮೋಘ ಸಾಧನೆ ಮಾಡಿ, ಕೃಷಿಕರ ಮನೆಗಳಲ್ಲಿ ವಾಸ್ತವ್ಯ ಹೂಡಿ ಬದುಕು, ಆಹಾರ ಸಂಸ್ಕೃತಿಯ ಅಧ್ಯಯನ ನಡೆಸುವುದರ ಮೂಲಕ, ಕೃಷಿ ವೀಕ್ಷಣೆ ಮಾಡಿ ಸುಮಾರು 700 ಕ್ಕೂ ಹೆಚ್ಚು ಕೃಷಿಕರನ್ನು ಸಂರ್ಪಕ ಮಾಡುವುದರ ಮೂಲಕ ಕೃಷಿಯ ಬಗ್ಗೆ ಅಮೂಲ್ಯ ಮಾಹಿತಿ ಮತ್ತು ಚಿತ್ರಗಳನ್ನು ದಾಖಲಿಸಿ ಅರಣ್ಯ ಇತಿಹಾಸ, ಪರಿಸರ ಸಂರಕ್ಷಣೆ, ಗ್ರಾಮೀಣ ಜನಜೀವನ ಕುರಿತು ಹಳ್ಳಿಯಿಂದ ವಿಶ್ವವಿದ್ಯಾಲಯದವರೆಗೆ ನೂರಾರು ಕಾರ್ಯಕ್ರಮನ್ನು ಮಾಡಿದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶ್ರೀ ಶಿವಾನಂದ ಕಳವೆ ಅವರಿಗೆ ವಸುಂಧರಾ ಸನ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಅವರು, ಕೊಳವೆ ಭಾವಿಗಳನ್ನು ಹಾಕಿ ಹಾಕಿ ವಸುಂಧರೆಯನ್ನು ಬರಿದು ಮಾಡಿದ್ದೇವೆ. ಯಾರು ಕಾರಣ? ನಾವೆಲ್ಲರೂ ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ನಾವೆಲ್ಲರೂ ಬದುಕಲು ಹಾಗೂ ಮುಂದಿನ ಪೀಳಿಗೆಯನ್ನು ಬದುಕಿಸಲು ಕೈಜೋಡಿಸಿ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು. ಯಾರೋ ಬಂದು ಮಾಡುತ್ತಾರೆಂದು ಕಾಯುವುದು ಬೇಡ, ಈ ಕಾರ್ಯ ನನ್ನಿಂದಾಗಲಿ ಎಂಬ ದೃಢ ಸಂಕಲ್ಪದಿಂದ ಮುನ್ನುಗ್ಗಿದಲ್ಲಿ ಎಲ್ಲಾ ವಿಷಯಗಳಿಗೆ ಪರಿಹಾರ ಏರ್ಪಡುತ್ತದೆ. ಕೆರೆಗಳಲ್ಲಿ ಹೂಳುಗಳನ್ನು ತೆಗೆಯುವ ಮೂದಲು ನಮ್ಮ ತಲೆಯಲ್ಲಿ ಇರುವ ಹೂಳುಗಳನ್ನು ತೆಗೆದಾಗ ಮಾತ್ರ ಅತ್ಯುತ್ತಮವಾದುದು ಎಂದರು.
ಶ್ರೀ ರವಿಕುಮಾರ್ ಯಾದವ್ ಅವರು ಪ್ರಶಂಸಾ ಪತ್ರವನ್ನು ಓದಿದರು.
ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆಯವರು ಮಾತನಾಡಿ, ಸುಮಾರು 30-40 ವರ್ಷದ ಕೆಳಗೆ ಕೃಷಿಯು ಇಷ್ಟು ದುಸ್ಥಿತಿಯಲ್ಲಿ ಇರಲಿಲ್ಲ. ಆಹಾರ ಪದ್ಧತಿಯಲ್ಲಿ ವ್ಯತ್ಯಾಸ ಇರಲಿಲ್ಲ. ಆದರೆ, ಮಾನವನ ಅತಿಯಾದ ದುರಾಸೆಯಿಂದಾಗಿ, ಆ ಭಾವಿಗಳಲ್ಲಿಯೇ ಬೋರ್ ಹೊಡೆದು ಹೆಚ್ಚು ನೀರನ್ನು ಬಳಸಿ, ಹಾಳುಮಾಡಿ ಈಗ ಭಾವಿಗಳು, ಕೊಳವೆ ಭಾವಿಗಳು ಬತ್ತಿ ಹೋಗುತ್ತಿದೆ. ಹಾಗೆ ಮಾಡಿರುತ್ತಾನೆ. ಮೊದಲು 30- 40 ಅಡಿ ಅಳ ತೊಡಿದರೆ ನೀರು ಸಿಗುತ್ತಿತ್ತು. ಇಂದು 900-1000 ಅಡಿ ತೋಡಿದರೂ ನೀರು ಸಿಗುತ್ತಿಲ್ಲ. ಮಾನವನ ದುರಾಸೆಯಿಂದ ಇಂದು ಪರಿಸರ ಹಾಳಾಗಿದೆ. ದೇಶದಲ್ಲಿ ಹೆಚ್ಚು ಹೆಚ್ಚು ಕೃಷಿ ಕಾಲೇಜುಗಳು, ವಿಶ್ವ ವಿದ್ಯಾಲಯಗಳು ಆಗಿವೆ. ಆದರೆ, ಅದರಲ್ಲಿ ಓದಿದವರಲ್ಲಿ ಹೆಚ್ಚು ಸರಕಾರಿ, ಖಾಸಗಿ ನೌಕರಿಗೆ ಹೋಗುತ್ತಿದ್ದು, ಕೃಷಿಗೆ ಯಾರೂ ಆದತ್ಯೆ ನೀಡಿರುವುದಿಲ್ಲ, ಗ್ರಾಮೀಣಾಭಿವೃದ್ಧಿ ಟ್ರಸ್ಟ್ನಿಂದ ಸಾಕಷ್ಟು ಕೆಲಸಗಳನ್ನು ಹಮ್ಮಿಕೊಂಡು ಬಂದಿದೆ. ಇದಕ್ಕೆ ಎಲ್ಲರೂ ಕೈಜೋಡಿಸಿ ಮುನ್ನುಗಿದಲ್ಲಿ ಮಾತ್ರ ಅಶಯವನ್ನು ಈಡೇರಿಸಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಕಿರ್ಲೋಸ್ಕರ್ ಲೇಡೀಸ್ ಕ್ಲಬ್’ನ ಮಹಿಳೆಯರು ಹಾಡಿದ ಪರಿಸರ ಗೀತೆ ಸುಶ್ರಾವ್ಯವಾಗಿದ್ದು, ಎಲ್ಲರ ಮನಸೆಳೆಯುವಂತಿತ್ತು. ಕೊಪ್ಪಳದ ಭಾಗ್ಯನಗರದ ದೀಕ್ಷಾ ಭರತನಾಟ್ಯ ಸಮಿತಿಯ ಮಕ್ಕಳಿಂದ ಭರತನಾಟ್ಯದ ಮೂಲಕ ಇಂದಿನ ಸ್ಥಿತಿಗತಿ, ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಭರತ ನಾಟ್ಯ ನೃತ್ಯ-ರೂಪಕ ಎಲ್ಲರ ಮನ ಸೆಳೆಯಿತು. ಹಾಗೂ ಎಲ್ಲರ ಪ್ರಶಂಸೆಗೆ ಒಳಗಾಯಿತು.
ಈ ಕಾರ್ಯಕ್ರದಲ್ಲಿ ಕಾರ್ಖಾನೆಯ ಕಾರ್ಮಿಕರು, ಗುತ್ತಿಗೆದಾರರು, ಪರಿಸರ ಪ್ರೇಮಿಗಳು, ಪ್ರಾಯೋಜಕರು, ವಿವಿಧ ಕಾರ್ಖಾನೆಗಳ ಹಿರಿಯ ಅಧಿಕಾರಿಗಳು ಹಾಗೂ ಕಿರ್ಲೋಸ್ಕರ್ ಲೇಡೀಸ್ ಕ್ಲಬ್’ನ ಸದಸ್ಯೆರು ಭಾಗವಹಿಸಿದ್ದರು.
ಶ್ರೀ ಬಿ. ಚಂದ್ರಶೇಖರ್, ಪ್ರಾಸ್ತಾವಿಕ ಭಾಷಣ ಮಾಡಿ ಈ ಚಲನಚಿತ್ರೋತ್ವವದ ಆಶಯಗಳನ್ನು ಹಾಗೂ ಈ 10 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ವಿವರಿಸಿದರು.
ಶ್ರೀ ಮೇಘರಾಜ್ ವಂದನಾರ್ಪಣೆ ಮಾಡಿದರು ಮತ್ತು ನಾಡಿಗೇರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ವರದಿ: ಮುರಳೀಧರ ನಾಡಿಗೇರ್, ಕೊಪ್ಪಳ
Discussion about this post