ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅದೊಂದು ಕಾಲವಿತ್ತು ಅಜ್ಜನ ಕತೆಗಳೆಲ್ಲವೂ ರಾಮನೂರಿನಿಂದಲೇ ಶುರುವಾಗುತ್ತಿದ್ದವು. ಅಲ್ಲಿ ಬಣ್ಣಗಳ ಭೇದವಿರಲಿಲ್ಲ, ಧರ್ಮಗಳ ಹಂಗಿರಲಿಲ್ಲ. ದಿನವೂ ಒಂದೊಂದು ಕಥೆಗಳ ಸುಗ್ಗಿ. ಕೃಷ್ಣ ವರ್ಣದ ರಾಮ ಅನಂತ ವರ್ಣಗಳಿಗೂ ಪ್ರಿಯ. ನ್ಯಾಯ ನೀತಿ ಮತ್ತು ಧರ್ಮದ ಚೌಕಟ್ಟಿನ ಒಳಗೆ ಬದುಕುವ ಪದ್ಧತಿಗೆ ಒಂದು ಚಂದದ ಹೆಸರಿದೆ.. ರಾಮರಾಜ್ಯ.! ಭರತನ ನಾಡಿನಲ್ಲಿ ರಾಮನ ಊರುಂಟು, ಜಟಾಯುವಿನ ಅವಶೇಷವುಂಟು, ಅಳಿಲಿನ ಸೇತುವುಂಟು, ನೆರೆಯಲಿ ರಾವಣ ದೇಶವುಂಟು.. ಹೀಗೆ ಕಣ್ಣಿಗೆ ರಾಚುವ ಸತ್ಯಗಳ ನಡುವೆ ಅವೆಲ್ಲವೂ ನಂಬಿಕೆಗಳು, ದಾಖಲೆ ರಹಿತ ವ್ಯಾಖ್ಯಾನಗಳು ಎನ್ನುವ ಮೌಢ್ಯ ಶಿಕ್ಷಣವೂ, ದೋಗಲೆ ಇತಿಹಾಸಕಾರರು ಉಂಟು.
ಮತ್ತೆ ರಾಮನೂರಿಗೆ ಬರೋಣ. ಅಯೋಧ್ಯೆ.. ಅಬ್ಬಾ ಆ ಹೆಸರಿನಲ್ಲೇ ಎಷ್ಟು ಧನಾತ್ಮಕ ಶಕ್ತಿ ಇದೆ. ಸಹಸ್ರಮಾನಗಳ ಹಿಂದೆಯೇ ಭರತ ಖಂಡದ ಉದ್ದಗಲಗಳನ್ನು ಅಳೆದುದಲ್ಲದೇ, ಭೌಗೋಳಿಕವಾಗಿ ಗುರುತಿಸಿದ ಭವ್ಯ ವಿಜ್ಞಾನದ, ಅಪರಿಮಿತ ಬುದ್ಧಿಮತ್ತೆಯ ದೇಶವಿದು. ಅದೆಂತಹುದೋ ಒಂದು ವಿಷಮ ಘಳಿಗೆ.. ಅಸಂಖ್ಯಾತ ಅಧರ್ಮಿ ದಾಳಿಕೋರರಿಗೆ ಸಿಕ್ಕ ಐತಿಹಾಸಿಕ ದೇಗುಲಗಳು, ಲಕ್ಷಾಂತರ ಗ್ರಂಥಗಳು, ಕೋಟ್ಯಾಂತರ ಜನರ ನಂಬಿಕೆಗಳು ನಾಶವಾದವು. ಅಳಿದುಳಿದ ಐತಿಹ್ಯಗಳನ್ನು ಕದಡಿ, ಸಮಾಧಿ ಕಟ್ಟುವ ಕೆಲಸವನ್ನು ಕೆಲವು ವಿಷ ವಿದ್ವಾಂಸರು ಬಾಡಿಗೆಗೆ ಪಡೆದರು. ಆದರೂ ರಕ್ತದಲ್ಲಿ ಬೆರೆತ ಸಂಸ್ಕೃತಿಯ ಹೇಗೆ ತಾನೆ ಬೇರ್ಪಡಿಸಿಯಾರು?
ಹಿಂದೂ ಎಂದರೆ ಅದು ಧರ್ಮವಲ್ಲ, ಅದೊಂದು ಪರಂಪರೆ. ಅಲ್ಲಿ ಎಲ್ಲ ಧರ್ಮಗಳಿವೆ, ಅಸಂಖ್ಯಾತ ವರ್ಣಗಳಿವೆ, ಅನೇಕ ಆಚರಣೆಗಳಿವೆ, ಅನಂತ ದೈವಗಳಿವೆ, ಅಪರಿಮಿತ ಜನರಿದ್ದಾರೆ. ಆದರೂ ಭಾರತ ಒಂದೇ. ಇನ್ನೂ ತೊದಲಾಡುವ ಹಸುಳೆಯ ಕೇಳಿ ಭಾರತದ ಮೂಲಪುರುಷ ಯಾರು? ಶ್ರೀರಾಮ. ಇಲ್ಲಿ ಪಂಗಡಗಳ ನಡುವೆ ಕಲಹವಿಲ್ಲ, ಮತಾಂತರದ ಮೊಗ ಹೊತ್ತ ವ್ಯಾಪಾರಿಗಳಿಲ್ಲ. ದಿನ ಮೂಡುವ ಮೊದಲೇ ತೆರಳುವ ಉದ್ಯೋಗಿಗೂ ರಾಮನಿದ್ದಾನೆ, ಸಂಜೆ ಹರಿದ ಅಂಗಿಯ ಕಳಚಿ ಮುಳುಗು ಹಾಕಿ ಕುಂಕುಮ ಇಟ್ಟು ಮಲಗುವ ತಿರುಕನಿಗೂ ರಾಮನಿದ್ದಾನೆ.
ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸುಂದರ ವಿಗ್ರಹ ಮೇಘಶ್ಯಾಮ್
ಗಂಗಾ ತುಳಸೀ ಶಾಲಗ್ರಾಮ್
ಭದ್ರ ಗಿರೀಶ್ವರ ಸೀತಾರಾಮ್
ಭಗತ್ ಜನಪ್ರಿಯ ಸೀತಾರಾಮ್
ಜಾನಕೀರಮಣ ಸೀತಾರಾಮ್
ಜಯ ಜಯ ರಾಘವ ಸೀತಾರಾಮ್
ಮುಂಜಾವಿನ ತಂಪಿನ ಏಳುವ ಕ್ಷಣದಿಂದ ಹಿಡಿದು ಹಾಸಿಗೆ ಹಿಡಿಯುವ ಕಾರಿರುಳ ಘಳಿಗೆಯ ತನಕವೂ ರಾಮನಿದ್ದಾನೆ. ಬದುಕನ್ನು ಮೀರಿ ಪಾರಮಾರ್ಥಿಕ ನಂಬಿಕೆಗಳಲ್ಲೂ ರಾಮನಿದ್ದಾನೆ. ಭವ್ಯ ಭಾರತದ ನೆಲದಲ್ಲಿ ರಾಮನ ನೆರಳಿದೆ, ನೆನಪಿದೆ..
Get In Touch With Us info@kalpa.news Whatsapp: 9481252093
Discussion about this post