ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
24 ಜನವರಿ ಸಂಜೆ 3.30 ಘಂಟೆಗೆ(ದೃಕ್ ಸಿದ್ಧಾಂತ ಪ್ರಕಾರ) ಶನಿಯು ಉತ್ತರಾಷಾಢ ನಕ್ಷತ್ರದ ಎರಡನೆಯ ಪಾದದಲ್ಲಿ ಶನಿಯು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಮಕರ ರಾಶಿಯ ಮೊದಲ ಹತ್ತು ಡಿಗ್ರಿಯು ಶನಿಗೆ ರುದ್ರಮುಖವಾಗುತ್ತದೆ. ಈ ಹತ್ತು ಡಿಗ್ರಿಯು ಪಾಶ, ನೀಗಡ(ಬಂಧನ, ಸಂಕೋಲೆ, ಶೃಂಕಲ ಇತ್ಯಾದಿ ಹೆಸರುಗಳಿವೆ) ದ್ರೇಕ್ಕಾಣವಾಗುತ್ತದೆ.
ನೈಸರ್ಗಿಕ ಕುಂಡಲಿಯ ಮೇಷ ರಾಶಿಗೆ ಇದು ಹತ್ತನೆಯ ಕರ್ಮ ಭಾವವಾಗುತ್ತದೆ. ಅದೆಷ್ಟೋ ಬಾರಿ ಶನಿಯು ತನ್ನ ಭ್ರಮಣೆಯಲ್ಲಿ ಬಂದಿರಬಹುದು. ಸಾಮಾನ್ಯವಾಗಿ ಒಬ್ಬ ಮನುಷ್ಯನು ತನ್ನ ಜೀವನದಲ್ಲಿ ಶನಿಯು ಮೂರನೆಯ ಸಲ ಮಕರ ರಾಶಿಗೆ ಮೂರನೆಯ ಬಾರಿ ಪ್ರವೇಶಿಸುವುದನ್ನು ನೋಡಬಹುದು. ಜೀವನದಲ್ಲಿ ನಾಲ್ಕು ಬಾರಿ ನೋಡಬೇಕಾದರೆ 120 ವರ್ಷ ಆಯಸ್ಸು ಬೇಕು. ಮೂರು ಬಾರಿಗೆ ಸಾಮಾನ್ಯ ತೊಂಬತ್ತು ವರ್ಷವಾದರೂ ಆಯಸ್ಸು ಇರಬೇಕು. ಯಾಕೆಂದರೆ ಒಂದು ಸುತ್ತು ಮೇಷದಿಂದ ಮೇಷದವರೆಗೆ ಬರಲು ಶನಿಗೆ ಮೂವತ್ತು ವರ್ಷ ಬೇಕಾಗುತ್ತದೆ.
ಒಂದು ರಾಶಿಯಲ್ಲಿ ಮೂವತ್ತು(ಎರಡುವರೆ ವರ್ಷ) ತಿಂಗಳ ಸಂಚಾರದ ಪ್ರಕಾರ ಹನ್ನೆರಡು ರಾಶಿ ಪೂರ್ಣಗೊಳಿಸಲು (12×2.5=30)ಮೂವತ್ತು ವರ್ಷಗಳು ಬೇಕಾಗುತ್ತದೆ. ಇದಕ್ಕಾಗಿ ಈ ಗ್ರಹವನ್ನು ಮಂದ, ಶನಿ ಎಂದು ಕರೆದರು. ಶನಿಗೆ ಇನ್ನೂ ಬೇರೆ ಬೇರೆ ಹೆಸರಿದೆ. ಛಾಯಾ ಸೂನು, ತರಣೀ ತನಯ, ಆರ್ಕಿ, ಮಂದ, ದಿನೇಶಾತ್ಮಜ ಇತ್ಯಾದಿ ಹೆಸರುಗಳಿವೆ. ಯಾಕೆ ಹೀಗೆ ಹೆಸರುಗಳಿಂದ ಕರೆದಿದ್ದಾರೆ ಅಂದರೆ, ಈ ಹೆಸರುಗಳು ಗುಣ ಸೂಚಕ. ಮಂದ ಎಂದರೆ ನಿಧಾನ ಚಲನೆಯವ, ದಿನೇಶಾತ್ಮಜ ಎಂದರೆ ಇವನಿಗೆ ರಾತ್ರಿ ಪಿತೃಕಾರಕತ್ವ ಇರುವುದರಿಂದ ರವಿಯ ಮಗನೆಂದು ಕರೆದರು. ಯಮಾಗ್ರಜಂ ಎಂದೂ ಕರೆದರು. ಮರಣ ಸೂಚಕ ಶಕ್ತಿ ಇವನಲ್ಲಿ ಇರುವುದರಿಂದ ಯಮಾಗ್ರಜಂ(ಯಮಧರ್ಮನ ಅಣ್ಣ) ಎಂದಾಯ್ತು. ಜ್ಯೋತಿಷ್ಯ ಗ್ರಂಥಗಳಲ್ಲಿ ಇವನ ನಾಮಾವಳಿ ಹೇಳಿದ್ದು ಈ ಗ್ರಹನ ಗುಣಗಳಿಗನುಗುಣವಾಗಿ. ಯಮ ಎಂದರೆ ನಿಯಾಮಕ. ಅವನಿಗೇ ಅಣ್ಣ ಎಂದರೆ ಯಮನಿಗೇ ಆದೇಶ ನೀಡುವವನು ಎಂದಾಗುತ್ತದೆ.
ಶನಿಯನ್ನು ಪಾಪ ಗ್ರಹ ಎಂದರು. ಪಾಪ ಎಂದರೆ ಅನ್ಯಾಯ ಮಾಡುವವನು ಎಂದರ್ಥವಲ್ಲ. ದುಷ್ಕರ್ಮಗಳಿಗೆ ಪ್ರಾಯಶ್ಚಿತ್ತ ವಿಧಿಸುವವನು ಎಂದರ್ಥ. ಒಂದು ರೀತಿಯ ನ್ಯಾಯಾಧೀಶನು ಇವನು. ಹಾಗಾಗಿ ಶನಿ ಚಾರವನ್ನು ಗಂಭೀರವಾಗಿ ಪರಿಗಣನೆ ಮಾಡುತ್ತಾರೆ.
ಜಗತ್ತಿಗೇನು ಫಲ?
ನಿನ್ನೆಯ ನಿರ್ಧಾರದ ಫಲ ಇವತ್ತು, ಇವತ್ತಿನದ್ದು ನಾಳೆಗೆ ಎಂಬಂತೆ ಇಷ್ಟರವರೆಗೆ ಮತಾಂಧರು ನಡೆಸಿದ ಕಾರ್ಯಾಚರಣೆಗೆ ಪ್ರತಿಫಲ ದೊರೆಯಲಿದೆ. ಶನಿಯು ಯಮ ಸ್ವರೂಪಿ ನ್ಯಾಯಾಧೀಶ. ಅವನಿಗೆ ನ್ಯಾಯ ತೀರ್ಮಾನಿಸುವ ಹಕ್ಕಿದೆ. ಹಾಗಾಗಿ ಮಕರದ ಮೊದಲ ಹತ್ತು ಡಿಗ್ರಿ ಸಂಚಾರದಲ್ಲಿ ಅನೇಕ ಮತಾಂಧರ ವಧೆ, ಉನ್ನತ ವ್ಯಕ್ತಿ(ಖಳರು)ಗಳ ಬಂಧನಗಳು ಇತ್ಯಾದಿ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಆ ಮತಾಂಧರು, ದುಷ್ಟ ರಾಜಕಾರಣಿಗಳು ಹತಾಶರಾಗಿ ಯುದ್ಧಸ್ಥಿತಿ ನಿರ್ಮಿಸಬಹುದು. ಆದರೆ ಅವರ ಆಟ ನಡೆಯಲಾರದು. ಪರಿಣಾಮವಾಗಿ ಈ ಸಂಗ್ರಾಮದಲ್ಲಿ ವಧೆ, ಬಂಧನ, ಆಸ್ತಿ ಮುಟ್ಟುಗೋಲು ಹಾಕುವಂತಹ ಕ್ರಿಯೆಗಳು ನಡೆಯಲಿದೆ. ಮಕರವು ಸ್ವಕ್ಷೇತ್ರ ಆಗಿರುವ ಕಾರಣ ಬೆಳೆ, ಪರಿಸರಗಳು ಹಸಿರಾಗುತ್ತಲಿರುತ್ತದೆ. ಇದು ಪೃಥ್ವೀ ತತ್ವ ರಾಶಿ ಆಗಿರುವುದರಿಂದ ಭೂಭಾರ ಹರಣಾಯಚ ಎಂಬಂತೆ ಭೂಕಂಪನಾದಿಗಳ ಮೂಲಕ ಪ್ರಕೃತಿಯು ತನ್ನ ಸಮತೋಲನ ಸರಿಪಡಿಸಿಕೊಳ್ಳಬಹುದು.
ಇಲ್ಲಿ ಮುಂದಕ್ಕೆ ರಾಶಿ ಫಲಗಳ ಚಿಂತನೆ ಮಾಡೋಣ. ಅದಕ್ಕಿಂತ ಮುಂಚೆ ಯಾರ ಜನ್ಮ ಜಾತಕದಲ್ಲಿ ಶನಿಯು ಮಿಥುನದಲ್ಲಿ ಇರುತ್ತಾನೋ ಅವರಿಗೆ ವಿಪರೀತ ತೊಂದರೆಯ ಕಾಲ. ಇದನ್ನು ಮರಣ ಸಮಾನ ಯೋಗ ಎಂದಿದ್ದಾರೆ. ಯಾರ ಜಾತಕದಲ್ಲಿ ತುಲಾ ರಾಶಿಯಲ್ಲಿ ಶನಿ ಇದ್ದವರಿಗೆ ಒಂದೆಡೆ ಉತ್ತಮ ಲಾಭ ತಂದರೂ ಅಷ್ಟೇ ಅಪವಾದ(ಹಗರಣ, ಸ್ಕ್ಯಾಂ, ಮೋಸ ಹೋಗುವಿಕೆ ಇತ್ಯಾದಿ) ಇತ್ಯಾದಿ ಅಶುಭ ಫಲಗಳ ಅನುಭವಗಳೂ ಉಂಟಾಗಲಿದೆ. ಗ್ರಹಗೋಚಾರದಲ್ಲಿ ಆಪತ್ತುಗಳಾಗುತ್ತದೆ ಎಂದು ನಾನು ಹೇಳಲ್ಲ. ಅವರವರ ವ್ಯಾಪ್ತಿ ಮೀರಿದರೆ ಆಪತ್ತು. ಈ ಹಾಡೊಂದು ಬಹಳ ಸೂಕ್ತ ಅನ್ನಿಸುತ್ತದೆ.
ಗುಂಡಿನ ಮತ್ತೇ ಗಮ್ಮತ್ತೂ, ಅಳತೆ ಮೀರಿದರೆ ಆಪತ್ತೂ ಎಂಬ ಹಾಡು ನಮ್ಮ ದೈನಂದಿನ ವ್ಯವಹಾರಕ್ಕೆ ಗೋಚರ ರೀತಿಯ ಫಲಕ್ಕೆ ಸರಿಯಾದ ಉದಾಹರಣೆಯಾಗುತ್ತದೆ.
ಮೇಷ ರಾಶಿ
ಈ ರಾಶಿಯವರಿಗೆ ಕರ್ಮಸ್ಥಾನದಲ್ಲಿ ಶನಿ ಬರುತ್ತಾನೆ. ಹಣದ ಅಭಾವ ಕಾಡಬಹುದು. ಹಾಗೆಂದು ಸರ್ವ ನಾಶ ಎಂಬ ಅರ್ಥವಲ್ಲ. ಮುಂದೆ ಶನಿಯು ಕುಂಭಕ್ಕೆ ಬರುವಾಗ ಕೊಡುವ ಸೌಭಾಗ್ಯದ ವೃದ್ಧಿಗಾಗಿ investment ಎಂದು ತಿಳಿಯಿರಿ. ತಕ್ಷಣ ಲಾಭವಾಗದು. ಖರ್ಚು ಹೆಚ್ಚಾದೀತಷ್ಟೆ.
ವೃಷಭ
ಈವರೆಗೆ ಪಟ್ಟಂತಹ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಆದರೆ ಇದು ಈ ರಾಶಿಗೆ ಧರ್ಮ ಸ್ಥಾನವಾಗುತ್ತದೆ. ಆಗ ಶನಿಯು ನಿಮ್ಮನ್ನು ವ್ಯವಹಾರಿಕವಾಗಿ ಅಡ್ಡ ಮಾರ್ಗ ಬಳಸುವಂತೆ ಪ್ರೇರೇಪಿಸಬಹುದು. ಎಚ್ಚರದಿಂದ ವ್ಯವಹರಿಸಿ.
ಮಿಥುನ
ಈ ರಾಶಿಗೆ ಅಷ್ಟಮದಲ್ಲಿ ಶನಿ. ಇದು ಸ್ವಲ್ಪ ಆರೋಗ್ಯದ ಮೇಲೆ ಅಪಾಯಕಾರಿ ಸಂಚಾರ. ವ್ಯವಹಾರ ನಷ್ಟ,ನಿಷ್ಟುರ ಅಪಮಾನಗಳು. ಕೊನೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಬಹುದು. ನಿಮ್ಮ ಜಾತಕದಲ್ಲೂ ಶನಿಯು ಮಿಥುನದಲ್ಲೇ ಇದ್ದಿದ್ದರೆ ಅಪಾಯ ಪ್ರಮಾಣ ಹೆಚ್ಚಾದೀತು. ಇದು ಮರಣ ಸಮಾನ ಯೋಗವಾದೀತು.
ಕರ್ಕ
ಹೊದಿಕೆಯನ್ನು ಕಾಲಿಗೆಳೆದರೆ ತಲೆಗೆ ಇಲ್ಲ,ತಲೆಗೆ ಎಳೆದರೆ ಕಾಲಿಗಿಲ್ಲ ಎಂಬಂತಹ ವ್ಯವಹಾರಿಕ ಸಮಸ್ಯೆಗಳು ಉಂಟಾಗುತ್ತದೆ. ಆರೋಗ್ಯದ ವಿಚಾರವೂ ಅಷ್ಟೆ. ಒಂದು ರೋಗಕ್ಕೆ ಔಷಧಿ ತೆಗೆದುಕೊಂಡರೆ ಬಿಪಿಗೆ ಆಗಲ್ಲ, ಬಿಪಿಗೆ ಸರಿಮಾಡಿಕೊಂಡರೆ ಶುಗರ್ ಗೆ ಆಗಲ್ಲ ಎಂಬಂತಾದೀತು. ಎಚ್ಚರದಿಂದ ವ್ಯವಹರಿಸಿಕೊಳ್ಳಿ.
ಸಿಂಹ
ಈವರೆಗಿದ್ದ ಸ್ವಜನ ಬಂಧು ನಿಷ್ಟುರ ಜಗಳಗಳು ತನ್ನಿಂದ ತಾನೇ ದೂರವಾಗಿ, ಮತ್ತೆ ಸ್ನೇಹದ ಚಿಗುರುಡೆಯಲು ಶುರುವಾಗುತ್ತದೆ. ಉತ್ತಮ ಫಲ ನೀಡುವ ಕಾಲ ಇದು.
ಕನ್ಯಾ
ಈ ರಾಶಿಯವರಿಗೆ ವೃಥಾ ನಿಷ್ಟುರಗಳೆದುರಾದಾವು. ಅನಗತ್ಯ ಹೇಳಿಕೆಗಳಿಂದ ಸಮಸ್ಯೆಗಳೆದುರಾದೀತು. ಇವತ್ತು ಸ್ನೇಹದಿಂದ ಇದ್ದವರು ನಾಳೆ ಕಾರಣ ಇಲ್ಲದೆ ಮನಸ್ಥಾಪ ಹೊಂದುವ ಒಂದು ಸನ್ನಿವೇಶ ಇದಿರಾದೀತು. ಸುಮ್ಮನೆ ಹೇಳಿಕೆಗೆ ಪ್ರತಿಹೇಳಿಕೆ ನೀಡದೆ ಮೌನವಾಗಿದ್ದರೆ ವಿಕೋಪಕ್ಕೆ ಹೋಗದು. ಅಲ್ಲದೆ ಆರೋಗ್ಯದ ಮೇಲೂ ದುಷ್ಪರಿಣಾಮಗಳಾದೀತು.
ತುಲಾ
ಇವರಿಗೆ ಚತುರ್ಥ ಶನಿ. ಸುಖಕ್ಕೆ ಹಾನಿಯಾಗುತ್ತದೆ. ನೆಮ್ಮದಿಯಿಂದ ಇರೋಣ ಅಂದರೆ ಸುಮ್ಮ ಸುಮ್ಮನೆ ಚರ್ಚೆಗಳು ವಾದಗಳು ನಿಮ್ಮ ನೆಮ್ಮದಿಗೆ ಭಂಗ ತರುವಂತಹ ಒಂದು ಕಾಲ ಇದು. ಹೀಗಿದ್ರೂ ಶನಿಯ ಮೂರನೆಯ ದೃಷ್ಟಿಯು ಆರನೆಯ ಮನೆಗಿರುವುದರಿಂದ ಶತ್ರುಗಳಿಂದ ಲಾಭವೂ ಇದೆ, ಶತ್ರು ಕೃತ್ಯಗಳು ನಿಮಗೆ ಲಾಭವನ್ನೂ ತರಬಹುದು.
ವೃಶ್ಚಿಕ
ಸುಮಾರು ಏಳುವರೆ ವರ್ಷದಿಂದ ಇದ್ದಂತಹ ಆಡು ಮಾತಿನ ಸಾಡೇ ಸಾತ್ ಈಗ ಸೌಭಾಗ್ಯ ವೃದ್ಧಿಯನ್ನು ಉಂಟುಮಾಡುತ್ತದೆ. ಹಲವು ಮೂಲಗಳಿಂದ, ನಿಮ್ಮ ಸಾಧನೆ(Efforts) ಅವಲಂಭಿಸಿ ಲಾಭಗಳು ಬರಬಹುದು. ದಿಢೀರನೆ ಶೇರು ಮಾರ್ಕೆಟ್ ಮೂಲಕ ಲಾಭಗಳು ಬರುತ್ತವೆ.
ಧನುಸ್ಸು
ಜನ್ಮದಿಂದ ದ್ವಿತೀಯಕ್ಕೆ ಶನಿ ಕಾಲಿಟ್ಟಿದ್ದಾನೆ. ಇದು ಸಂಪತ್ತು ನಾಶ ಮಾಡುವ ಕಾಲ. ಇದನ್ನು ಸದ್ವಿನಿಯೋಗ (Investment) ಮಾಡಿಕೊಂಡರೆ ಶುಭ ಫಲವನ್ನು ಮುಂದೆ ಕುಂಭಕ್ಕೆ ಶನಿ ಬಂದಾಗ ನೀಡುತ್ತಾನೆ. ವೃಥಾ ಕಲಹ ಚರ್ಚೆಗಳಿಗೆ ಅವಕಾಶ(Controversy) ಮಾಡಿ ಕೊಡಬೇಡಿ.
ಮಕರ
ನಿಮ್ಮ ರಾಶಿಗೆ ಸ್ವಕ್ಷೇತ್ರಗತನಾಗಿ ಶನಿ ಪ್ರವೇಶಿಸುತ್ತಾನೆ. ಹಾಗಾಗಿ ಅಷ್ಟೊಂದು ಕೆಟ್ಟದ್ದು ಎಂದು ಹೇಳಲಾಗದು. ಆರೋಗ್ಯದ ಬಗ್ಗೆ ಎಚ್ಚರ ಇರಬೇಕು. ಸಹೋದರರೊಡನೆ ನಿಷ್ಟುರಕ್ಕಿಳಿಯದೆ ಒಂದೋ ಸ್ನೇಹದಿಂದ, ಇಲ್ಲವೇ ತಟಸ್ಥರಾಗಿರಿ. ಕಲಹಕ್ಕಿಳಿದರೆ ರಗಳೆಗಳಾದೀತು.
ಕುಂಭ
ಈ ಎರಡುವರೆ ವರ್ಷದಿಂದ ನಿಮಗೆ ಸಾಕಷ್ಟು ಲಾಭವನ್ನು ಕೊಟ್ಟಿದ್ದ ಕ್ಷೇತ್ರ ಧನು ಸಂಚಾರ ಕಾಲ. ಈಗ ವಿಪರೀತ ಖರ್ಚಿನ ವ್ಯವಹಾರ ಮಾಡಿಸುತ್ತಾನೆ. ಖರ್ಚು ಆದರೂ, ಮುಂದೆ ಲಾಭ ಸಿಗುವ ಖರ್ಚುಗಳಾಗಿದ್ದರೆ ನೆಮ್ಮದಿ. ದುರ್ವ್ಯಯವಾದರೆ ದುಃಖ. ಒಟ್ಟಿನಲ್ಲಿ ವಿತ್ತ ನಾಶದ ಕ್ಷೇತ್ರ ಮಕರ.
ಮೀನ
ನಿಮಗೆ ಲಾಟರಿ ಹೊಡೆಯುವಂತಹ ಒಂದು ಕಾಲ ನಿರ್ಮಾಣ ಆಗುತ್ತದೆ. ಹಾಗೆಂದು ಲಾಟರಿ ಟಿಕೇಟು ತೆಗೆದುಕೊಂಡು ಕುಳಿತುಕೊಳ್ಳಬಾರದು. ಪ್ರತೀ ವ್ಯವಹಾರದಲ್ಲೂ ಲಾಭ ಸಿಗಲಿದೆ. ನಿಮ್ಮ ನಿಮ್ಮ ಸಾಧನೆ, ವ್ಯವಹಾರಕ್ಕನುಗುಣವಾಗಿ ಲಾಭಗಳು ಲಭಿಸಲಿದೆ.
ಶನಿಯ ದೋಷ ನಿವೃತ್ತಿಗಾಗಿ, ಶನಿಯ ಅನುಗ್ರಹ ಪ್ರಾಪ್ತಿಗಾಗಿ ಅಂದರೆ ಪ್ರಾಯಶ್ವಿತ್ತ ಮತ್ತು ಪ್ರೀತ್ಯರ್ಥಕ್ಕಾಗಿ ಹನುಮನ ಸೇವೆ, ಈಶ್ವರನ ಸೇವೆ, ಶಾಸ್ತಾರ(ಅಯ್ಯಪ್ಪ ಸ್ವಾಮಿ) ಸೇವೆಯನ್ನು ಮಾಡಿ. ಶನಿಯ ಪ್ರೀತ್ಯರ್ಥ ಎಳ್ಳು ದೀಪ, ಎಳ್ಳು ದಾನ, ಶನಿ ಶಾಂತಿ ಇತ್ಯಾದಿ ಮಾಡಿರಿ.
Get in Touch With Us info@kalpa.news Whatsapp: 9481252093
Discussion about this post