ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಬರವಣಿಗೆ ಎಂಬುದನ್ನು ಯಾರು ಬೇಕಾದರೂ ಮಾಡಬಹುದಾದರೂ, ಅದರಲ್ಲಿ ವೈಶಿಷ್ಟ್ಯವನ್ನು ಮೂಡಿಸಿ ಬರೆಯಲು ಆಳವಾದ ಓದು, ಸಾಹಿತ್ಯ ಜ್ಞಾನ ಭಾಷಾ ಹಿಡಿತ ಎಲ್ಲವೂ ಬಹು ಮುಖ್ಯವಾಗಿ ಬೇಕಾದವುಗಳಾಗಿವೆ.
ಕನ್ನಡ ನಮ್ಮ ಮಾತೃಭಾಷೆ. ಇದು ಕೇಳಲು ಚಂದವೂ, ಕಲಿಯಲು ತುಸು ಕಠಿಣವೂ ಹೌದು. ನುಡಿ ಹಬ್ಬದ ಈ ಶುಭ ಸಂದರ್ಭದಲ್ಲಿ ವಾಗ್ದೇವಿಯ ಅಡಿಗೆ ತಮ್ಮ ಲೇಖನಗಳನ್ನು ಸಮರ್ಪಿಸಿ, ಆಕೆಯ ಮೆರುಗು ಹೆಚ್ಚಿಸಿದ ಒಬ್ಬ ವಿಶೇಷ ವ್ಯಕ್ತಿಯನ್ನು ಶಿವಮೊಗ್ಗೆಯಲ್ಲಿ ಅರಳಿದ ಮೊಗ್ಗಿನ ಮಾಲಿಕೆಯಲ್ಲಿ ಪರಿಚಯಿಸುತ್ತಿದ್ದೇನೆ. ಕನ್ನಡಕ್ಕೆ ಹೆಮ್ಮೆ ಎನಿಸಿದ ಮಹನೀಯರ ಪರಿಚಯವನ್ನು ಈ ಮಾಲಿಕೆಯಲ್ಲಿ ಮಾಡಿಕೊಡಲಿದ್ದೇನೆ. ಅವರು ಯಾರೆಂದರೆ ತಮ್ಮ ಬರವಣಿಗೆಗಳಿಂದಲೇ ಎಲ್ಲರ ಮನಕ್ಕೆ ಆನಂದ ನೀಡಿದ ನಮ್ಮ ಕೆ.ಜಿ. ಕೃಷ್ಣಾನಂದ.
ತೀರ್ಥಹಳ್ಳಿ ಮತ್ತು ಹೊಸನಗರ ನಡುವಿನ ಸ್ವಚ್ಛ ಮಲೆನಾಡಿನ ಅಂಬುತೀರ್ಥ ಸಮೀಪದ ಕೋಗಿಲೆ ಎಂಬ ಗ್ರಾಮದಲ್ಲಿ ಆಗಸ್ಟ್ 15ರಂದು ಕೆ.ಎಸ್. ಗುಂಡೂರಾವ್ ಮತ್ತು ಶ್ರೀಮತಿ ಶಾರದಮ್ಮ ಇವರ ಮೂವರು ಗಂಡು ಮಕ್ಕಳಲ್ಲಿ ಮೊದಲಿಗರಾಗಿ ಕೆ.ಜಿ ಕೃಷ್ಣಾನಂದ ಅವರು ಜನಿಸಿದರು.
ತಮ್ಮ ಉದ್ಯೋಗದ ಕಾರಣದಿಂದ ಬಂದು ನೆಲೆ ನಿಂತದ್ದು ಶಿವಮೊಗ್ಗದಲ್ಲಿ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿತ್ತೀಯ ಸಂಸ್ಥೆಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಅದು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ವಿಲೀನವಾದಾಗ ಸ್ವಯಂ ನಿವೃತ್ತಿ ಪಡೆದು ಈಗ ವಿಶ್ರಾಂತ ಜೀವನ ನಡೆಸುತ್ತಿರುವವರು.
ಶಾಲಾ ಜೀವನದಿಂದಲೂ ಭಾಷಣ, ಚರ್ಚಾಸ್ಪರ್ದೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಇವರು ನಂತರ ಕವಿತೆ ರಚನೆ ಹಾಗೂ ಕಥಾ ರಚನೆ ಅನುವಾದ ಮತ್ತು ಅಂಕಣ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಇವರ ಸಾಲುಮರದ ತಿಮ್ಮಕ್ಕ, ಗಾಂಧಿ ಮತ್ತು ನಾನು ಮುಂತಾದ ಕವನಗಳು ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ವಾರಪತ್ರಿಕೆಗಳಾದ ಸುಧಾ ಮತ್ತು ತರಂಗಗಳಲ್ಲಿ ಇವರ ಕಥೆಗಳು ಪ್ರಕಟಿತವಾಗಿ ಬಹುಮಾನಕ್ಕೂ ಭಾಜನವಾಗಿವೆ. ನಾವಿಕದಲ್ಲಿ ಪ್ರಕಟಿತ ಇವರ ಕಥೆಗಳಾದ “ಮಲೆನಾಡಿನ ಕಥೆಗಳು” ನಗರದ ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು.
ಮೊದಲಿನಿಂದಲೂ ಓದುವ ಹವ್ಯಾಸ ಹೆಚ್ಚಿದ್ದ ಇವರು ಈ ಹಿಂದೆ ತಾವು ಮಾಡಿದ ಸಾಹಿತ್ಯ ಆರಾಧನೆಯನ್ನು ಇಂದಿಗೂ ಮಾಡುತ್ತಾ ಬಂದಿದ್ದಾರೆ. ಶಿವಮೊಗ್ಗದಲ್ಲಿ ರಾಜಕೀಯವಾಗಿಯೂ ಸಾಂಸ್ಕೃತಿಕವಾಗಿಯು ಸದಾ ತನ್ನ ಕಾರ್ಯಗಳಿಂದಲೇ ಜನತೆಗೆ ಚಿರಪರಿಚಿತರಾದ ಸನ್ಮಾನ್ಯ ಕೆ.ಎಸ್. ಈಶ್ವರಪ್ಪನವರ ಅಧ್ಯಕ್ಷತೆಯ ಶ್ರೀಗಂಧ ಸಂಸ್ಥೆಯ ಸ್ಥಾಪಕ ಸದಸ್ಯರಾದ ಕೆ.ಜಿ. ಕೃಷ್ಣಾನಂದ ಅವರು ಸಂಸ್ಥೆಯ ಹಲವು ಕಾರ್ಯಕ್ರಮದ ಕುರಿತು ವಿಶೇಷ ಲೇಖನಗಳನ್ನು ಮತ್ತು ಗಣ್ಯರ ಸನ್ಮಾನ ಪತ್ರಗಳನ್ನು ರಚಿಸಿದ್ದಾರೆ.
ನಿವೃತ್ತರಾದ ಮೇಲೆ ಕೆ.ಜಿ.ಕೃಷ್ಣಾನಂದ ಅವರು ಶಿವಮೊಗ್ಗದ ದಿನಪತ್ರಿಕೆಗಳಿಗೆ ಅಂಕಣ ಬರಹಗಳನ್ನು ಬರೆಯಲಾರಂಭಿಸಿದರು. ಕೋವಿಡ್ ಸಮಯದಲ್ಲಿ ತಮಗಾದ ಅನುಭವಗಳನ್ನು ಸೊಗಸಾದ ಲೇಖನವಾಗಿ ಈಶ್ವರಪ್ಪನವರು ಆರಂಭಿಸಿ ವೈದ್ಯ ಸಂಪಾದಕತ್ವದ ಮಲೆನಾಡು ಮಿತ್ರ ಪತ್ರಿಕೆಯಲ್ಲಿ ಬರಲಾರಂಭಿಸಿ ನಂತರ ಅದನ್ನೇ “ಒಳಸುಳಿಯೊಳಗಿಳಿದು” ಎಂಬ ಪುಸ್ತಕ ರೂಪದಲ್ಲಿ ತಂದು ಪ್ರಕಟಿಸಿದರು. ಅದೀಗ ಸಾರ್ವಜನಿಕ ಗ್ರಂಥಾಲಯ ಬೆಂಗಳೂರಿನ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಯಾಗಿದೆ ಎನ್ನುವುದು ಸಹ ಸಂತಸದ ವಿಷಯವೆ.
ಅವರು ನಿರಂತರವಾಗಿ ಶ್ರೀನಿವಾಸನ್ ಸಂಪಾದಕತ್ವದ ನಗರದ ಅಜೇಯ ಪತ್ರಿಕೆಗೆ ಬರೆಯುತ್ತಿರುವ “ವಾರದ ವಿದ್ಯಮಾನ” ಅಂಕಣವಂತೂ ಎಲ್ಲರೂ ಕಾತರದಿಂದ ಕಾಯುತ್ತಿರುವ ಅಂಕಣ ಎಂದರೆ ತಪ್ಪಾಗುವುದಿಲ್ಲ. ನಾನು ಕೂಡ ಅದಕ್ಕೆ ಹೊರತಲ್ಲ. ಆ ಲೇಖನದಲ್ಲಿ ಅವರ ಬರವಣಿಗೆಯ ಶೈಲಿ ಸೂಜಿಮೊನೆಯಷ್ಟೇ ಹರಿತ.
ಸ್ವಯಂ ನಿವೃತ್ತಿ ಪಡೆದಿರುವ ಇವರು ಓದುವುದು ತುಸು ಹೆಚ್ಚೇ ಅನಿಸುತ್ತದೆ. ಆ ಕಾರಣಕ್ಕಾಗಿ ಸ್ವಯಂ ನಿವೃತ್ತಿ ಪಡೆದಿದ್ದು ಸಾರ್ಥಕವಾಗಿದ್ದು ಸದಾ ಓದಲು ಬರೆಯಲು ಮತ್ತು ಆರಾಮವಾಗಿರಲು ಸಹಕಾರಿಯಾಗಿದೆಯೇನೊ. ಅವರಲ್ಲಿ ಮಾತನಾಡಿದಾಗಲೂ ಅವರ ಜೀವನಾನುಭವದ ಮಾತುಗಳನ್ನು ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ. ಯಾವುದಾದರೂ ವಿಶೇಷ ವಿಷಯದ ಕುರಿತಾಗಿ ಅವರು ಬರೆದ ಕವನಗಳು ಜನಪ್ರಿಯ ಆಗಿರುವುದನ್ನ ಕಂಡಿದ್ದೇನೆ.
ಅದರಲ್ಲಿ ನನಗೆ ಮೆಚ್ಚುಗೆಯಾದದ್ದು ಅನ್ನೋದಕ್ಕಿಂತ ಯಾವಾಗ ಓದಿದರೂ ಖುಷಿಯಾಗುವ ಕವನಗಳಲ್ಲಿ ಒಂದು ಅ. ನಾ. ವಿಜೇಂದ್ರ ಅವರ ಅರವತ್ತರ ಜನ್ಮದಿನಕ್ಕೆ ಬರೆದ ಕವನವಾದರೆ ಮತ್ತೊಂದು ಇತ್ತೀಚೆಗೆ ಸದ್ದು ಮಾಡಿದ ಧರ್ಮಸ್ಥಳದ ಬುರುಡೆ ಪ್ರಕರಣದ ಕುರಿತಾದ ಕವನ. ಅದೆಂತಹ ಕಲ್ಪನೆ ಸಾಹಿತ್ಯದ ಚಿಂತನೆಯ ಪ್ರೌಢತೆಗೆ ಮತ್ತು ವಿಡಂಬನಾತ್ಮಕವಾಗಿ ಬರೆದ ಕವನ ಯಾವಾಗಲೂ ಸಮಾಜದ ಅಂಕುಡೊಂಕುಗಳಿಗೆ ಹಿಡಿದ ಕೈಗನ್ನಡಿಯಂತಿದೆ.
ಇವರ ಈ ಪ್ರತಿಭೆ ಗುರುತಿಸಿ ಇತ್ತೀಚೆಗಷ್ಟೇ ಸರ್. ಎಂ. ವಿಶ್ವೇಶ್ವರಯ್ಯ ಕೋ ಆಪರೇಟಿವ್ ಸೊಸೈಟಿಯವರು ಸಮಾಜದ ಗಣ್ಯರಿಗೆ ಕೊಡ ಮಾಡುವ ಪುರಸ್ಕಾರದಲ್ಲಿ ಕೆ.ಜಿ.ಕೃಷ್ಣಾನಂದ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಅತ್ಯಂತ ಸಂತೋಷದ ಸಂಗತಿ.
ಇವರು ಕೇವಲ ಸಾಹಿತ್ಯ ಅಷ್ಟೇ ಅಲ್ಲ ಸಾಮಾಜಿಕ ಕಳಕಳಿಯನ್ನು ಸಹ ಒಳಗೊಂಡವರು. ಕಲ್ಲಹಳ್ಳಿಯ ಅಭೀಷ್ಟವರದ ಶ್ರೀ ಮಹಾಗಣಪತಿ ದೇವಾಲಯದ ಅಭಿವೃದ್ಧಿಗೆ, ಅದರ ಜನಪ್ರಿಯತೆಗೆ ಇವರ ಪಾಲು ಸಹ ಇದೆ. ತಮ್ಮ ತೀಕ್ಷ್ಣವಾದ ಬರಹಗಳಿಂದ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಒಟ್ಟಿನಲ್ಲಿ ಇವರ ಎಲ್ಲ ಕಾರ್ಯಗಳು ಕೂಡ ಶ್ಲಾಘನೀಯವಾದವುಗಳೇ.
ವಾಗ್ದೇವಿಗೆ ಅಕ್ಷರದ ಪುಷ್ಪಗಳನ್ನ ಸಾಹಿತ್ಯಕವಾಗಿ ಜೋಡಿಸಿ ಸುಂದರಮಾಲೆ ಹೆಣೆದು ಸಮರ್ಪಿಸಿ ತಮ್ಮ ಸೇವೆ ನೀಡುತ್ತಿರುವ ಸರಳ ಸಜ್ಜನ ಸಹೃದಾಯಿಯಾದ ಕೆ.ಜಿ. ಕೃಷ್ಣಾನಂದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಕೃಷಿ ಮಾಡಲಿ ಮತ್ತಷ್ಟು ಪ್ರಶಸ್ತಿಗೆ ಭಾಜನರಾಗಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

