ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.
ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.
ಉಳವಿ, ನಿಸರಾಣಿ, ಚಂದ್ರಗುತ್ತಿ ಭಾಗಗಳಲ್ಲಿ ಒಲವು-ನಿಲುವು ಹೀಗಿದೆ:
ಉಳವಿ:
ಸೊರಬ ತಾಲೂಕಿನ ಉಳವಿ ಒಂದು ಗ್ರಾಮ ಪಂಚಾಯತ್’ನಲ್ಲಿ ಬಿಜೆಪಿ ಬೆಂಬಲಿತರು ಅಧ್ಯಕ್ಷರು. ಕಳೆದ ಲೋಕ ಉಪಚುನಾವಣೆಯಲ್ಲಿ ಇಲ್ಲಿನ ಮತದಾರ ಜಡಿಎಸ್’ಗೆ ಲೀಡ್ ನೀಡಿದ್ದ. ದೂಗೂರು ಪಂಚಾಯತ್’ಗೂ ಈ ಊರು ಹಂಚಿಹೋಗಿದೆ. ಸುಮಾರು ಮೂರೂವರೆ ಸಾವಿರ ಮತಗಳಿವೆ.
ಇಲ್ಲಿ ಆಸ್ಪತ್ರೆ ಇದ್ದು, ಅದು ಚೆನ್ನಾಗಿದೆ. ಆದರೆ, ಆಯುರ್ವೇದ ವೈದ್ಯರೊಬ್ಬರೇ ಇದ್ದಾರೆ. ಎಂಬಿಬಿಎಸ್ ವೈದ್ಯರು ಅವಶ್ಯ ಬೇಕು. ಇಲ್ಲಿನ ಸಮಸ್ಯೆ ಬಗೆಹರಿಸುವವರಿಗೇ ನಮ್ಮ ಓಟು.
““““““““““““““““““““
ಬಂಗಾರಪ್ಪನವರು ರೈತರಿಗೆ ಮಾಡಿದ ಉಪಕಾರ ಒಂದೇ ಒಂದು. ಹತ್ತು ಎಚ್’ಪಿ ಪಂಪುಗಳಿಗೆ ಉಚಿತ ವಿದ್ಯುತ್ ನೀಡಿದ್ದು. ಈಗ ಬೆಂಬಲ ಬೆಲೆ ಕೇವಲ ಆಶ್ವಾಸನೆ ಮಾತ್ರ. ಕುಡಿಯುವ ನೀರಿಲ್ಲ, ಕೆರೆಗಳಲ್ಲಿ ನೀರಿಲ್ಲ. ಕೈಸೋಡಿಕೆರೆ ತುಂಬಿದ್ರೆ 60 ರಿಂದ 70 ಎಕರೆ ನೀರಾವರಿ ಮಾಡಬಹುದು. ಈಗ ಎಪ್ಪತ್ತು ವರ್ಷದಿಂದ ಹೂಳನ್ನೇ ತೆಗೆದಿಲ್ಲ. ತಾವು ಸೈಕಲ್ ಹೊಡೆದು ಬಂಗಾರಪ್ಪ ಪರ ಪ್ರಚಾರ ಮಾಡಿದ ದಿನಗಳು ನನಗೆ ಇಂದಿಗೂ ನೆನಪಿವೆ.. ಮೋದಿ ಅಲೆಯಿದೆ. ಹುಡುಗ್ರೆಲ್ಲ ಮೋದಿ ಮೋದಿ ಅಂತಾರೆ. ಉಳವಿಯ ಸುಮಾರು 8,500 ಮತಗಳಲ್ಲಿ ಬಿಜೆಪಿಗೆ ಲೀಡ್ ದೊರೆಯುತ್ತೆ.
ಯಾಕಂದ್ರೆ ಮೋದಿ ಮತ್ತೆ ಪ್ರಧಾನಿಯಾಗಬೇಕು.
““““““““““““““““““““
ಇಲ್ಲಿ ಸಮ ಸಮ ಸೆಣಸಾಟ ಇದೆ. ಮಧುಗೆ ಅನುಕಂಪದ ಅಲೆಯಿದೆ. ಇಲ್ಲಿ ಶೇ.70ರಷ್ಟು ಮತದಾನ ಆಗುತ್ತೆ. ಇಲ್ಲಿನ ಮತದಾರ ಜಾಗೃತನಾಗಿದ್ದಾನೆ.
-ದಯವಿಟ್ಟು ಫೋಟೋ ತೆಗೀಬೇಡಿ ಎಂದ ಉಳವಿಯ ಪಾದರಕ್ಷೆ ವ್ಯಾಪಾರಿ ರಾಮು
““““““““““““““““““““
ಯಾರು ಬಂದ್ರೂ ಏನೂ ಆಗಲ್ಲ. ಆದ್ರೆ ನಾವು ಓಟು ಮಾಡೇ ಮಾಡ್ತೀವಿ ಬಿಡಲ್ಲ.
-ಸ್ಥಳೀಯ ಟೈಲರ್ ಅನಿತಾ
““““““““““““““““““““
ನಾವು ವೋಟ್ ಮಾಡ್ತೀವಿ. ಜಿಲ್ಲೆಯ ಅಭಿವೃದ್ಧಿಗೆ, ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಗೆದ್ದವರು ಕೆಲಸ ಮಾಡಬೇಕು. ಇಲ್ಲಿ ನೀರಾವರಿ ಸೌಕರ್ಯ, ಸದ್ಯ ವಿದ್ಯುತ್ ಕೊರತೆ ಇದೆ. ಹಗಲು ಮೂರು ಗಂಟೆಯಷ್ಟು ಅವಧಿ ಮಾತ್ರ ಇರುತ್ತೆ. ರಾತ್ರಿ ಯಾವಾಗ ಬರುತ್ತೋ, ಹೋಗುತ್ತೋ ನೆಲೆಯಿಲ್ಲ. ವೋಲ್ಟೇಜ್ ಪ್ರಾಬ್ಲಮ್. ಇದು ಇಪ್ಪತ್ತು ವರ್ಷದಿಂದ ಕಾಡುತ್ತಿರುವ ಸಮಸ್ಯೆ. ಈಗ ನಮಗೆ ಭರವಸೆ ಎಂದರೆ ಮಧು ಬಂಗಾರಪ್ಪ. ಇಡೀ ತಾಲೂಕಿನಲ್ಲಿ ಸಮಸಮ ಕಾದಾಟ.
““““““““““““““““““““
ಈವರೆಗೂ ಏನೂ ಹೆಲ್ಪ್ ಆಗಿಲ್ಲ. ನಮಗೆ ಟಾಯ್ಲೆಟ್ ಬೇಡ ಸರ್, ಮನೆ ಬೇಕು. ಅದನ್ನೇ ಕೊಟ್ಟಿಲ್ಲ.
-ಪರಶುರಾಮ್
ಸಾಲಮನ್ನಾ ಮಾಡಿರೋದು ಕೇವಲ ಪಹಣಿ ಇರೋವ್ರಿಗೆ ಮಾತ್ರ. ನಮ್ಹತ್ರ ಏನೂ ಇಲ್ಲ. ಸಾಲ ಕೋಡೊವ್ರಿಲ್ಲ. ನಮ್ಮ ವೃತ್ತಿ ಗಾರೆ ಕೆಲಸ. ಸಾಲದ ನೆರವಿಲ್ಲದೇ ನಾವು ಬದುಕೋದು ಹೇಳಿ. ಆದರೆ ಆಪತ್ತಿನಲ್ಲಿ ನಮಗೆ ಮಧು ಬಂಗಾರಪ್ಪ ಸಹಾಯ ಹಸ್ತ ಚಾಚುತ್ತಾರೆ. ಜೆಡಿಎಸ್’ಗೆ ನಮ್ಮ ಒಲವು.
-ರವಿಕುಮಾರ್
ಕಷ್ಟದಲ್ಲಿ ನೆರವು ನೀಡುವಲ್ಲಿ ಮಧು ಮೊದಲಿಗರು. ಅವರೀರ್ವರೂ ಹೇಳಿದ್ದು. ಪ್ರಸ್ತುತ ಸಂಸದ ಬಿವೈಆರ್ ನಮಗೆ ಸುಲಭ ಸಂಪರ್ಕಕ್ಕೆ ಸಿಗುವುದಿಲ್ಲ.
-ರಾಮ್ ಕುಮಾರ್
““““““““““““““““““““
ನಾವು ಹೊಟ್ಕೆರೆ ನೀರಿನಿಂದ ಬೆಳೆ ತೆಗೆಯುವ ಕೂಲಿ ಕೃಷಿಕರು. ಬಗರ್ ಹುಕುಂ ನಿಂದ ಚೂರುಪಾರು ಭೂಮಿ ಸಾಗುವಳಿಯಿದೆ. ಹೊಟ್ಕೆರೆಯಿಂದ ಕಾಲುವೆ ಮಾಡಿಸಿದರೆ ನಾವು ನೆಮ್ಮದಿಯಿಂದ ಬದುಕುತ್ತೇವೆ. ಅದಕ್ಕೆ ಮಂಜೂರಾದ ಹಣವನ್ನು ಯಾವಾಗಲೂ ಬೇರೆ ಕೆಲಸಕ್ಕೆ ತಿರುಗಿಸಿ, ನಮಗೆ ಅನ್ಯಾಯ ಮಾಡಲಾಗುತ್ತಿದೆ. ಈ ಕೆಲಸ ಮಾಡಿ ಕೊಡುವವರಿಗೇ ನಮ್ಮ ಓಟು.
““““““““““““““““““““
ಇಲ್ಲಿ ಜೆಡಿಎಸ್’ಗೆ ಲೀಡು. ನಿಸರಾಣಿ ಪಂಚಾಯತ್’ನಲ್ಲಿ ಸುಮಾರು ಎಂಟು ಸಾವಿರ ಮತಗಳಿವೆ. ನಾವು ಮೋದಿ ನೋಡಲ್ಲ ಲೋಕಲ್ ಲೀಡರ್ ನೋಡ್ತೇವೆ.
““““““““““““““““““““
ಟ್ರೆಂಡು ಮೋದಿಜಿ. ಅವರು ಜನೌಷಧಿ ಕೇಂದ್ರ ಕೊಟ್ರು. ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ನೀಡಿದ್ರು. ನಮಗೆ ಹೋಬಳಿ ಮಟ್ಟಕ್ಕೆ ಜೆಡಿಎಸ್. ಇಲ್ಲಿ ಈಗಿನ ಪರಿಸ್ಥಿತಿ 50:50.
-ಅಣ್ಣಪ್ಪ, ಕಣ್ಣೂರು ರೈತ ಸಂಘದ ಕಾರ್ಯದರ್ಶಿ
““““““““““““““““““““
ನೋಡಿ ಮಧು ಒಳ್ಳೆ ವ್ಯಕ್ತಿ, ಕೆಲಸ ಮಾಡಿದ್ದಾರೆ. ಅಲ್ಪ ಸಂಖ್ಯಾತರಿಗೆ ಗಂಗಾ ಕಲ್ಯಾಣ ಯೋಜನೆ ಲಾಭ ಮಾಡಿಕೊಟ್ಟಿದ್ದಾರೆ. ಕಾಲೋನಿಗಳಿಗೆ ರಸ್ತೆ ಆಗಿವೆ. ಮೇಲಾಗಿ ನಮಗೆ ಸುಲಭವಾಗಿ ಸಿಗುತ್ತಾರೆ. ಹಾಲಿ ಸಂಸದರನ್ನ ನಾವು ಈವರೆಗೂ ನೋಡೇ ಇಲ್ಲ. ಎಲ್ಲೋ ಬರ್ತಾರೆ. ಯಾವಾಗಲೋ ಹೋಗ್ತಾರೆ. ಇಲ್ಲಿನ ವಿದ್ಯುತ್ ಕೊರತೆಗೆ ಗ್ರಿಡ್’ಗಳನ್ನು ಹದಿನೈದು ಕೋಟಿ ರೂ. ಯೋಜನೆ ಮುಖಾಂತರ ತಂದಿದ್ದಾರೆ.
““““““““““““““““““““
ಬನದಕೊಪ್ಪದಲ್ಲಿ ಹೆಸರು ಗೌಪ್ಯವಾಗಿಡಲು ಹೇಳಿದ ಮತದಾರ ಭೇಟಿಯಾದರು. ನಿಸರಾಣಿ ಪಂಚಾಯತ್ ಸುಮಾರು ಎರಡು ಸಾವಿರದ ಆರುನೂರು ಮತದಾರರಿದ್ದಾರೆ. ಮಧು ಅವರು ಜನರೊಂದಿಗೆ ಬೆರೆಯುತ್ತಾರೆ. ಆದರೆ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಆ ರೀತಿ ಇಲ್ಲ. ಅವರು ಜಂಟಲ್’ಮನ್ ಶಾಸಕರು. ಮಧು ಪೀಪಲ್ ಫ್ರೆಂಡ್ (ಮಾಜಿ). ಶಾಸಕರು. ಜಂಟಲ್ ಮನ್ ಶಾಸಕರು ಬಿವೈಆರ್’ಗೆ ಓಟು ಕೇಳಲು ಇನ್ನೂ ಬಂದೇ ಇಲ್ಲ. ಇಲ್ಲಿ ಈ ದೃಷ್ಟಿಯಿಂದ ಸಮ ಸೆಣಸಾಟವಿದೆ ಎಂದರು.
““““““““““““““““““““
ನಿಸರಾಣಿ ಪಂಚಾಯತ್’ಗೆ ಒಂಬತ್ತು ಗ್ರಾಮಗಳು ಸೇರುತ್ತವೆ. ಬಿವೈಆರ್ ಇಲ್ಲಿ ಪರಿಣಾಮಕಾರಿ ಕೆಲಸ ಮಾಡಿಲ್ಲ. ಆದರೂ ಈಗಷ್ಟೇ ಪ್ರಚಾರ ಸಭೆ ನಡೆಸಿದರು. ಅದನ್ನು ಕಂಡ ಮೇಲೆ ಶೇ.70ರಷ್ಟು ಬಿಜೆಪಿಗೆ ಮತ್ತು ಶೇ.30ರಷ್ಟು ಮೈತ್ರಿ ಪಕ್ಷಕ್ಕೆ ಅಂತ ಹೇಳಬಹುದು.
““““““““““““““““““““
ಸೊರಬದಲ್ಲಿ ಮಧು ಬಂಗಾರಪ್ಪ ರೋಡು ಮಾಡಿಸಿದ್ದಾರೆ. ಬಸ್ ಸ್ಡಾಂಡ್ ಆಗಿದೆ. ಅವರು ಜನರೊಡನೆ ಬೆರೆಯುತ್ತಾರೆ. ಹಾಲಿ ಸಂಸದ ಗೆಲ್ಲುವುದಾದರೆ ಅದು ಈಗ ಎದ್ದಿರುವ ಮೋದಿ ಅಲೆಯಿಂದ ಅಷ್ಟೆ…!
ಮಧು ಅವರ ಬಳಿಯ ಕಾರ್ಯಕರ್ತರು ಸರಿಯಿಲ್ಲ. ಆದರೆ ಬಿವೈಆರ್ ಅವರಲ್ಲಿ ಸಂಘಟನೆಯಿದೆ. ಬಳಸಿಕೊಳ್ಳಬೇಕಷ್ಟೆ.
-ಅಂಗಡಿಯೊಡೆಯ ಹೆಸರು ಹೇಳದೇ ನುಡಿದರು
““““““““““““““““““““
ಸ್ಥಳೀಯ ಶ್ರೀಮಾರಿಕಾಂಬ ದೇವಾಲಯಕ್ಕೆ ಡಾಂಬರು ರಸ್ತೆ, ಕುಡಿಯುವ ನೀರಿನ ಸಂಪರ್ಕ ಮಾಡಿಸಿದ್ದಾರೆ. ಆದರೂ ಇಲ್ಲಿ 50:50 ಕಾದಾಟ. ಅವರ ಮಾವನ ಮಗ ಯುವಕ ಹೆಸರು ಹೇಳಲು ಸಂಕೋಚಿಸಿದ..ಆದರೂ ಹೇಳಿದ.. ನಾವು ಯುವಕರೆಲ್ಲ ಮೋದೀಜಿಗೇ ಓಟು ನೀಡುವೆವು.
-ಆನಂದ ಪೂಜಾರಿ, ಹೊಸಬಾಳೆ
““““““““““““““““““““
ಸುಮಾರು 52 ಹಳ್ಳಿಗಳು ಚಂದ್ರಗುತ್ತಿ ಪಂಚಾಯತ್’ಗೆ ಸೇರಿವೆ. ಬಹುದೊಡ್ಡ ಪಂಚಾಯತ್. ಬಡವರಿಗೆ ಮಧು ನೆರವು ನೀಡಿ ಜನಪ್ರಿಯರು. ಅದೇ ಹಾಲಿ ಶಾಸಕರಾದ ಕುಮಾರ್ ಬಂಗಾರಪ್ಪ ಹಾಗೆ ಇಲ್ಲ, ಬಹಳ ಶಿಸ್ತು. ಇಬ್ಬರಿಗೂ ಭಿನ್ನವಾಗಿ ಹಿಂದೆ ಶಾಸಕರಾಗಿದ್ದ ಹರತಾಳು ಹಾಲಪ್ಪ ಇಲ್ಲಿ ಮಿಗಿಲಾದ ಕೆಲಸ ಮಾಡಿ ಜನಮನ ಗೆದ್ದಿದ್ದಾರೆ. ಅವರಿಂದಕೇ ಸೊರಬ ಪ್ರಗತಿಯ ಸ್ಪರ್ಶ ಪಡೆದಿದೆ. ಬಿಜೆಪಿಯ ಒಳ್ಳೆಯ ಮಂತ್ರಿಗಳಾಗಿದ್ದರು. ಅವರ ಪ್ರಭಾವದಿಂದ ಇಲ್ಲಿ ಬಿಜೆಪಿ ಮೇಲುಗೈ ಪಡೆಯಲು ಸಾಧ್ಯ. ಯುವಜನರದ್ದೇ ಸುಮಾರು ಒಂದೂವರೆ ಸಾವಿರ ಮತಗಳಿವೆ. ಅವರೆಲ್ಲರೂ ಮೋದಿಯ ಅಭಿಮಾನಿಗಳು.
““““““““““““““““““““
ಹರತಾಳು ಹಾಲಪ್ಪನವರು ಮಾದರಿಯಾದ ಕೆಲಸ ಮಾಡಿ ಜನಮನ್ನಣೆಗಳಿಸಿದ್ದಾರೆ.
““““““““““““““““““““
ನೋಡಿ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜೋಳದಗುಡ್ಡೆ ಹೊಳೆಯಿಂದ ನೀರು ತರುವ ಪ್ರಯತ್ನ ಮಾಡಬೇಕು. ಇಲ್ಲಿನ ಗ್ರಾಮಪಂಚಾಯತ್ ನಲ್ಲಿ ಕುಂದುಕೊರತೆ ಕೇಳುವವರೇ ಇಲ್ಲ. ಹೊಳೆ ನೀರು ಬತ್ತಿದಾಗ ಬದಲಿಯಾಗಿ ಬೋರ್ ನೀರು ವ್ಯವಸ್ಥೆ ಮಾಡಲಾಗಿಲ್ಲ. ಹೊಳೆಯಲ್ಲಿ ನೀರಿದ್ದಾಗ ಅಧಿಕ ಸಂಖ್ಯೆಯಲ್ಲಿ ಪಂಪುಗಳ ಮೂಲಕ ಖಾಸಗಿಯಾಗಿ ಕೃಷಿ ಕೆಲಸಕ್ಕೆ ನೀರು ಬಳಸುತ್ತಾರೆ. ಹೋಗಲಿ ಚೆಕ್ ಡ್ಯಾಮ್ ನಿರ್ಮಿಸಿ ಹೆಚ್ಚು ನೀರು ಸಂಗ್ರಹಿಸಿದರೆ ಕುಡಿಯುವ ನೀರಿನ ಸಮಸ್ಯೆ ನೀಗಬಹುದು. ಮೂರುಹಳ್ಳಿಗೆ ನೀರು ದೊರಕುತ್ತದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಚುನಾವಣಾ ಅಭ್ಯರ್ಥಿಗಳು ಪ್ರಯತ್ನಿಸಬೇಕು. ಅವರಿಗೇ ನಮ್ಮ ಓಟು.
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಮತದಾನ ಕುರಿತಾಗಿ ಜಾಗೃತಿ ಹೊಂದಿರುವ ಈ ಭಾಗದಲ್ಲಿ ಎರಡೂ ಪ್ರಮುಖ ಪಕ್ಷಗಳ ನಡುವೆ ಬಹುತೇಕ ಸಮ ಸಮ ಸೆಣೆಸಾಟವಿದೆ. ಇಲ್ಲಿ, ಮೈತ್ರಿ ಅಭ್ಯರ್ಥಿಯ ಪರವಾಗಿ ಹೆಚ್ಚಿನ ಒಲವಿದ್ದರೆ, ಮೋದಿ ಹೆಸರಿನ ಬಲವೇ ಬಿಜೆಪಿಗೆ ಶಕ್ತಿಯಾಗಿದೆ. ಈ ಭಾಗದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ಆಗಿದ್ದರೂ, ಇನ್ನೂ ಹೆಚ್ಚಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳು ಇಲ್ಲಿಗೆ ಅಗತ್ಯವಿದ್ದು, ಇದನ್ನು ಪರಿಹಾರ ಮಾಡುವ ವ್ಯಕ್ತಿಗೆ ನಮ್ಮ ಮತ ಎನ್ನುವುದು ಇಲ್ಲಿನವರ ಮನದಾಳದ ಮಾತು.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Discussion about this post