ಮಂಗಳೂರು: ಸುಮಾರು ಎರಡು ವರ್ಷಗಳ ಹಿಂದಿನ ಭರ್ಜರಿ ಸುದ್ದಿ ಅದು. ಆ ವೇಳೆ ಎಲ್ಲೆಲ್ಲಿ ನೋಡಿದರೂ ಉಗ್ರ ಹನುಮಾನ್ ದೇವರ ಚಿತ್ರ ಅಥವಾ ಸ್ಟಿಕ್ಕರ್ ವೈರಲ್ ಆಗಿತ್ತು. ರಾಜ್ಯ ಮಾತ್ರವಲ್ಲ ಇಡಿಯ ದೇಶದಲ್ಲೇ ಆ ಹನುಮಾನ್ ಸ್ಟಿಕ್ಕರ್ ಸಂಚಲನ ಸೃಷ್ಠಿಸಿತ್ತು.
ಆಗ ಯಾವುದೇ ಬೈಕ್, ಕಾರು, ಜೀಪು, ಬಸ್, ಲಾರಿ ಹೀಗೆ ಯಾವುದೇ ವಾಹನಗಳ ಮೇಲೆ ನೋಡಿದರೂ ಹನುಮಾನ್ ಸ್ಟಿಕ್ಕರ್ ರಾರಾಜಿಸುತ್ತಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ, ಹಿಂದುತ್ವದ ಐಕಾನ್ ಎನ್ನುವ ರೀತಿಯಲ್ಲಿ ಆ ಚಿತ್ರ ಮಾರ್ಪಟ್ಟಿತ್ತು. ಹಿಂದೂ ಸಮಾಜದ ಯಾವುದೇ ಮೆರವಣಿಗೆ, ಹಬ್ಬಗಳಾದರೂ ಸರಿ ಅಲ್ಲಿ ಆ ಹನುಮಾನ್ ಚಿತ್ರ ರಾರಾಜಿಸುತ್ತಿತ್ತು.
ಆಂತಹ ಚಿತ್ರವನ್ನು ಬಿಡಿಸಿದ್ದು ಅದ್ಬುತ ಕಲಾವಿದ ಕರಣ್ ಆಚಾರ್ಯ ಎಂಬುದು ಈಗ ಜಗತ್ತಿಗೇ ತಿಳಿದಿದ್ದು, ಇವರ ಕಲಾಕುಂಚಕ್ಕೆ ಮನಸೋತ ಲಕ್ಷಾಂತರ ಮಂದಿ ಈಗ ಅವರ ಅಭಿಮಾನಿಯಾಗಿದ್ದಾರೆ.
ಇಂತಹ ಕರಣ್ ಆಚಾರ್ಯ ಚಿತ್ರಿಸಿರುವ ಮತ್ತೊಂದು ಹನುಮಾನ್ ಚಿತ್ರ ಅವರ ಕಲಾಪ್ರತಿಭೆಗೆ ಸಾಕ್ಷಿಯಾಗುವ ಜೊತೆಯಲ್ಲಿಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದೆ.
ಕರಣ್ ಆಚಾರ್ಯ ಅವರು ತಮ್ಮ ಈ ಮನದಾಳದ ಕಲ್ಪನೆಯ ಚಿತ್ರಕ್ಕೆ ಯಕ್ಷಾಂಜನೇಯ ಎಂಬ ನಾಮಾಂಕಿತ ನೀಡಿದ್ದಾರೆ.
ಯಕ್ಷಗಾನ ಕಲಾವಿದನ ವೇಷದಲ್ಲಿ ಹನುಮನ್ ದೇವರನ್ನು ಚಿತ್ರಿಸಿರುವ ಕರಣ್ ಆಚಾರ್ಯ, ಯಕ್ಷಗಾನ ಕಲಾವಿದರು ಭಾವವನ್ನು ಮುಖದಲ್ಲಿ ವ್ಯಕ್ತಪಡಿಸುವ ರೀತಿಯಲ್ಲೇ ಹನುಮಾನ್ ದೇವರ ಮುಖದಲ್ಲಿ ಭಾವವನ್ನು ಹೊಮ್ಮಿಸಿದ್ದಾರೆ.
ಅತ್ಯಂತ ಪ್ರಮುಖವಾದ ಅಂಶವೆಂದರೆ, ಆಚಾರ್ಯರು ಇತ್ತೀಚೆಗಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿಕೊಂಡು. ಅಂದು ಇವರಿಗೆ ಶುಭ ಹಾರೈಸಿದ್ದು ಸಾವಿರಾರು ಮಂದಿ. ನಿಜಕ್ಕೂ ಇಷ್ಟೊಂದು ಪ್ರೀತಿಯ ಶುಭ ಹಾರೈಕೆಗೆ ಮನಸೋತ ಕರಣ್ ಆಚಾರ್ಯ, ಎಲ್ಲರಿಗೂ ಧನ್ಯವಾದ ಹೇಳಲು(token of thanks) ಈ ಚಿತ್ರ ರಚಿಸಿದ್ದು, ಅವರಿಗೇ ಇದನ್ನು ಅರ್ಪಿಸಿದ್ದಾರೆ.
ಈ ಚಿತ್ರವನ್ನು ಕರಣ್ ಆಚಾರ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಹಳಷ್ಟು ವೈರಲ್ ಆಗಿದೆ. ಈ ಚಿತ್ರ ವೈರಲ್ ಆಗುತ್ತಿರುವ ವೇಗವನ್ನು ಗಮನಿಸಿದರೆ ಇದು ಮತ್ತೊಂದು ಐಕಾನ್ ಆಗುವ ಸಾಧ್ಯತೆಯಿದೆ.
Discussion about this post