ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೀದರ್: ಕೋವಿಡ್19 ಮಹಾಮಾರಿಗೆ ಬಸವಕಲ್ಯಾಣ ಶಾಸಕ ಬಿ. ನಾರಾಯಣ ರಾವ್(67) ಇಂದು ಬಲಿಯಾಗಿದ್ದಾರೆ.
ಕೋವಿಡ್19 ಸೋಂಕಿಗೆ ಒಳಗಾಗಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಲೂ ಸಹ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಾರಾಯಣರಾವ್ ಅವರಿಗೆ ಆಗಸ್ಟ್ 31ರಂದು ಸೋಂಕು ದೃಢಪಟ್ಟಿತ್ತು. ಆಪ್ತರ ಸಲಹೆಯ ಮೇರೆಗೆ ಸೆಪ್ಟೆಂಬರ್ 1ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಚೇತರಿಸಿಕೊಂಡಿದ್ದರು.
ನಂತರ ರಾಜಕೀಯ ಮುಖಂಡರು ಹಾಗೂ ಗೆಳೆಯರಿಗೆ ಮೊಬೈಲ್ ಕರೆ ಮಾಡಿ ನಾನು ಕ್ಷೇಮವಾಗಿದ್ದೇನೆ. ನನ್ನ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದ ನಿಮಗೆಲ್ಲರಿಗೂ ವಂದನೆಗಳು ಎಂದು ಹೇಳಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿತ್ತು.
ಸಚಿವ ಈಶ್ವರಪ್ಪ ಸಂತಾಪ
ಕೋವಿಡ್’ನಿಂದಾಗಿ ಬಲಿಯಾಗಿರುವ ನಾರಾಯಣ ರಾವ್ ಅವರ ನಿಧನಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕೋವಿಡ್’ನಿಂದ ನಾರಾಯಣ್ ರಾವ್ ನಿಧನರಾಗಿದ್ದಾರೆ. ಇನ್ನೂ ಎಷ್ಟು ಜನ ಇದಕ್ಕೆ ಬಲಿಯಾಗುತ್ತಾರೋ ಗೊತ್ತಿಲ್ಲ. ಸುರೇಶ್ ಅಂಗಡಿಯವರೂ ಇದಕ್ಕೆ ಸಾವನ್ನಪ್ಪಿದರು. ಈಗ ನಾರಾಯಣ್ ರಾವ್ ಕೂಡ ನಿಧನರಾಗಿದ್ದಾರೆ ಎಂದು ಕಂಬನಿ ಮಿಡಿದರು.
ಅವರು ಬಸವಕಲ್ಯಾಣದ ಅಭಿವೃದ್ಧಿಗೆ ಅವರು ಚಿಂತಿಸಿದ್ದರು. ಹಳ್ಳಿಸೊಗಡಿನಲ್ಲೇ ಸದನದಲ್ಲಿ ಮಾತನಾಡ್ತಿದ್ದರು. ಶ್ರೀಸಾಮಾನ್ಯರ ಸೇವೆಗೆ ಸಾಕಷ್ಟು ಪ್ರಯತ್ನ ನಡೆಸಿದ್ದು, ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಾರಾಯಣ್ ರಾವ್ ನಿಧನ ತುಂಬ ನೋವು ತಂದಿದೆ. ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
Get In Touch With Us info@kalpa.news Whatsapp: 9481252093
Discussion about this post