ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಸೋಂಕಿಗೆ ಇತ್ತೀಚೆಗೆ ಬಲಿಯಾದ ಇಬ್ಬರು ಪೌರ ಕಾರ್ಮಿಕರ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮೇಯರ್ ಸುವರ್ಣಾ ಶಂಕರ್ ತಿಳಿಸಿದರು.
ಪೌರ ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ವರು ಮಾತನಾಡಿದರು.
ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಪಾಲಿಕೆಯ ಇಬ್ಬರು ಪೌರ ಕಾರ್ಮಿಕರು ಬಲಿಯಾಗಿದ್ದಾರೆ. ಇಬ್ಬರ ಕುಟುಂಬಕ್ಕೆ ಪಾಲಿಕೆ ವತಿಯಿಂದ ಮೂರು ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ಅಲ್ಲದೇ, ಸಾವಿಗೀಡಾಗುವ ಕೊರೋನಾ ವಾರಿಯರ್ಸ್ಗಳ ಕುಟುಂಬಕ್ಕೆ ಸರ್ಕಾರ 30 ಲಕ್ಷ ರೂ. ಪರಿಹಾರ ನೀಡಲಿದೆ ಎಂದರು.
ಇನ್ನು, ನಗರದ ಸ್ವಚ್ಛತೆ ಹಾಗೂ ನಗರದ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಪಾಲಿಕೆ ವತಿಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ಹಾಗೂ ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಕಲ್ಯಾಣ ಭವನ ನಿರ್ಮಾಣಕ್ಕಾಗಿ ಶಂಕುಸ್ಥಾಪನೆಯನ್ನು ಸಹ ಗಾಂಧೀ ಜಯಂತಿಯಂದು ನಡೆಸಲಾಗುವುದು ಎಂದರು.
ಆಯುಕ್ತ ಚಿದಾನಂದ ವಟಾರೆ ಮಾತನಾಡಿ, ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪೌರ ಕಾರ್ಮಿಕರ ತ್ಯಾಗ ಬೆಲೆಕಟ್ಟಲಾಗದು. ಪಾಸಿಟಿವ್ ಬಂದಿರುವ ಕಂಟೈನ್ಮೆಂಟ್ ಝೋನ್’ಗಳಲ್ಲೂ ಸಹ ಸ್ವಚ್ಛತಾ ಕಾರ್ಯ ನಡೆಸಿರುವುದು ಇವರಿಗೆ ಇರುವ ಬದ್ಧತೆಯನ್ನು ತೋರಿಸಿದೆ. ಇಂತಹ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಇದಕ್ಕಾಗಿ ಪಾಲಿಕೆ ಎಂದಿಗೂ ಬದ್ದವಾಗಿದೆ ಎಂದರು.
ಮೇಯರ್, ಉಪಮೇಯರ್ ಹಾಗೂ ಪ್ರತಿಪಕ್ಷ ನಾಯಕರು ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಅವರುಗಳ ಕಾಲಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದರು.
ಉಪಮೇಯರ್ ಸುರೇಖಾ ಮುರಳೀಧರ್, ಪ್ರತಿಪಕ್ಷ ನಾಯಕ ಯೋಗೀಶ್, ಪಾಲಿಕೆ ಸದಸ್ಯ ಎಸ್.ಎನ್. ಚನ್ನಬಸಪ್ಪ, ಧೀರರಾಜ ಹೊನ್ನವಿಲೆ ಸೇರಿದಂತೆ ಹಲವರು ಇದ್ದರು.
Get In Touch With Us info@kalpa.news Whatsapp: 9481252093

















