ಯಕ್ಷರಂಗದಲ್ಲಿ ಅರಳುತ್ತಿರುವ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ. 300ಕ್ಕೂ ಹೆಚ್ಚು ವೇದಿಕೆಯಲ್ಲಿ ಜನ ಮೆಚ್ಚುವಂತಹ ಯಕ್ಷಗಾನ ಪ್ರದರ್ಶನವನ್ನು ನೀಡಿ, ನೂರಾರು ಬಹುಮಾನಗಳನ್ನೂ ಗಳಿಸಿಕೊಂಡಿರುವ ಪ್ರತಿಭೆ. ಈಕೆ ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕಾಸರಗೋಡಿನ ಪೆರಡಾಲ ಗ್ರಾಮದ ಕುಂಟಿಕ್ಕಾನದಲ್ಲಿ ವಾಸವಾಗಿರುವ ಶಂಕರನಾರಾಯಣ ಭಟ್ ಹಾಗೂ ವಿಜಯಲಕ್ಷ್ಮೀ ದಂಪತಿಗಳ ಮುದ್ದಿನ ಮಗಳಾಗಿರುವ ಈಕೆ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಕುಂಟಿಕ್ಕಾನ, ನೀರ್ಚಾಲ್ ಹಾಗೂ ಎಡನೀರು ಎಂಬಲ್ಲಿ ಪಡೆದರು.
ಯಕ್ಷಗಾನದ ಮುಮ್ಮೇಳ ಹಾಗೂ ಹಿಮ್ಮೇಳ ಶಿಕ್ಷಣವನ್ನು ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಎಂಬ ಸಂಸ್ಥೆಯಲ್ಲಿ ಗುರುಗಳಾದ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರಿಂದ ಕಲಿಯುತ್ತಿದ್ದಾರೆ. ಕಾಲೇಜಿನ ಕಲೋತ್ಸವದ ಯಕ್ಷಗಾನ ಸ್ಪರ್ಧೆಗಳ ಸಂದರ್ಭದಲ್ಲಿ ದಿವಾಣ ಶಿವಶಂಕರ ಭಟ್ಟರ ಮಾರ್ಗದರ್ಶನನ್ನೂ ಪಡೆದಿದ್ದಾರೆ.
9ನೇ ತರಗತಿಯಲ್ಲಿ ಇದ್ದಾಗ ಯಕ್ಷಗಾನ ರಂಗ ಪ್ರವೇಶ ಮಾಡಿದ ವಿದ್ಯಾ, ಈಗಾಗಲೇ ಮಂಗಳೂರು, ಬೆಂಗಳೂರು, ಕೊಯಂಬತ್ತೂರು ಹಾಗೂ ಉತ್ತರ ಕೇರಳದ ಹಲವಾರು ಕಡೆಗಳನ್ನೂ ಸೇರಿ 300ಕ್ಕೂ ಹೆಚ್ಚು ವೇದಿಕೆಯಲ್ಲಿ ಕಲಾಪ್ರದರ್ಶನ ನೀಡಿದ್ದಾಳೆ. ಅವುಗಳಲ್ಲಿ ಹಲವಾರು ಪ್ರಸಂಗ- ಕಥನಕಗಳಿಂದ ಆರಿಸಿದ ಪಾತ್ರಗಳನ್ನು ಅಭಿನಯಿಸುವುದರ ಮೂಲಕ ಪ್ರದರ್ಶಿಸಿದ ಏಕ ವ್ಯಕ್ತಿ ದ್ವಿವ್ಯಕ್ತಿ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದಿದೆ. ಜೊತೆಗೆ 2019 ಎಪ್ರಿಲ್ 23 ರಂದು ದುರ್ಗಾಪೂಜೆಯ ದಿನದಂದು ಕುಂಟಿಕ್ಕಾನ ಶಂಕರ ನಾರಾಯಣ ದೇವರ ಸನ್ನಿಧಿಯಲ್ಲಿ ಮೊದಲ ಬಾರಿ ಭಾಗವತಿಕೆಯನ್ನು ಮಾಡುವುದರ ಮೂಲಕ ಯಕ್ಷಗಾನದ ಭಾಗವತಿಕೆ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.
ಭೂಗರ್ಭಶಾಸ್ತ್ರ ಪದವಿಯಲ್ಲಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 2ನೆಯ ರಾಂಕ್’ನ್ನು ಪಡೆದಂತಹ ಇವರು ಹವ್ಯಕ ವಿದ್ಯಾರತ್ನ ಪ್ರಶಸ್ತಿ, ಹನುಮಾನ್ ಫ್ರೆಂಡ್ಸ್ ಕ್ಲಬ್ ವಾಂತಿಚಾಲು ಇವರ ವತಿಯಿಂದ ಯಕ್ಷ ಯುವಪ್ರತಿಭೆ, ವರುಣ ಕಲಾ ಸಂಸ್ಥೆ ಸವಣೂರು ಇವರ ವತಿಯಿಂದ ಯುವಸಾಧಕಿ ಪ್ರಶಸ್ತಿ, ಪಡೆದು ಸಾಧನೆಯನ್ನು ಮಾಡಿದ್ದಾರೆ.
ವಿದ್ಯಾರವರು ಯಕ್ಷಗಾನದಲ್ಲಿ ಪ್ರಮುಖವಾಗಿ ಕೃಷ್ಣ, ಸತ್ಯಭಾಮ, ಜಾಂಬವಂತ, ಸುದರ್ಶನ, ಸುಧನ್ವ, ದೇವೆಂದ್ರ, ವಿಷ್ಣು, ಮಾಲಿನಿ, ಶಿವ, ಲಕ್ಷ್ಮಣ, ಹು ಹು ಗಂಧರ್ವ, ಹನೂಮಂತ, ರಾಮ, ಮಾಯಾ ಶೂರ್ಪನಖಿ, ಮಾಯಾ ಪೂತನಿ ಎಂಬೀ ಪಾತ್ರಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಜೀವವನ್ನು ತುಂಬಿದ್ದಾರೆ. ಇವುಗಳ ಪೈಕಿ ಸುದರ್ಶನನ ಪಾತ್ರವು ತನಗೆ ಅಚ್ಚುಮೆಚ್ಚು ಎನ್ನುತ್ತಾರೆ.
ಪ್ರಸ್ತುತ ಮಂಗಳೂರು ಆಕಾಶವಾಣಿಯ ಮಹಿಳಾ ಯಕ್ಷಗಾನ ತಂಡದ ಬಿ ಗ್ರೇಡ್ ಕಲಾವಿದೆ ಮತ್ತು ಹಾಗೂ ಪೆರ್ಲ ನಲಾಂದ ಕಾಲೇಜನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಪುರಸ್ಕಾರಗಳು ನೀಡಿ ಗೌರವಿಸಿದ ಕ್ಷಣಗಳನ್ನೂ, ಪ್ರಚೋದನೆ ನೀಡುವ ರಂಗಸಿರಿ ಸ್ಥಾಪಕರಾದ ಶ್ರೀಶ ಕುಮಾರ ಪಂಜಿತಡ್ಕ, ನಾಟ್ಯಾಭ್ಯಾಸ ಕಲಿಸಿದ ಗುರುಗಳನ್ನೂ, ಪ್ರೋತ್ಸಾಹಿಸುವ ಗೆಳೆಯರನ್ನೂ ಸದಾ ನೆನಪಿಸಿಕೊಳ್ಳುತ್ತಾರೆ.
ತಮ್ಮನಾದ ಶಂಕರನಾರಾಯಣ ಶರ್ಮಾ, ಅಕ್ಕಂದಿರಾದ ವಸುಧ, ವಂದನ, ಹಾಗೂ ಚಿಕ್ಕಪ್ಪ ವೆಂಕಟೇಶ್ವರ ಭಟ್ ಸದಾ ಬೆಂಬಲಿಗರಾಗಿದ್ದಾರೆ.
ಕಲೀತಾ ಕಲೀತಾ ಯಾವುದೇ ವಿದ್ಯೆಯೂ ಕೂಡಾ ನಮ್ಮ ಕೈ ಸೇರಿ ಬಾಳ ಬೆಳಗಲು ಸಾಧ್ಯ ಎಂಬ ಮಾತೊಂದಿದೆ. ಖಂಡಿತವಾಗಿಯೂ ನಂಬಲೇಬೇಕಾದ್ದು. ಏಕೆಂದರೆ ನಾವು ಆಸಕ್ತಿ ವಹಿಸಿ ಪ್ರಯತ್ನಪಟ್ಟು ಕಲಿತ ವಿದ್ಯೆಗಳೇ ಮುಂದೆ ನಮ್ಮನ್ನೊಂದು ಪಥದಲ್ಲಿ ಚಲಿಸುವಂತೆ ಪ್ರೇರೇಪಿಸುವಂತಹವುಗಳು. ಯಕ್ಷಗಾನ ರಂಗದಲ್ಲಿ ತನ್ನ ಇನ್ನಷ್ಟು ಸಾಧನೆಯನ್ನು ಮಾಡುವುದರ ಜೊತೆ ಜೊತೆಗೆ ಇವರು ಕಟ್ಟಿಕೊಂಡಿರುವ ಎಲ್ಲಾ ಕನಸುಗಳು ಆದಷ್ಟು ಬೇಗ ನನಸಾಗಲಿ ಎಂದು ಶುಭ ಹಾರೈಸುತ್ತಿದ್ದೇವೆ.
ಲೇಖನ: ಅಭಿಷೇಕ್ ನಾಯಕ್ ಮಲೆನಾಡು
ಚಿತ್ರಕೃಪೆ/ವೀಡಿಯೋ/ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post