ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗರ್ಭದಲ್ಲಿರುವಾಗಲೇ ತಿರಸ್ಕರಿಸಲ್ಪಡುವವಳು ಹೆಣ್ಣು. ಇದು ಈಗಲೂ ಇದೆ. ವಿಜ್ಞಾನ ಮುಂದುವರೆದು ಮಾರಕವಾದಂತಿದೆ. ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವವರಲ್ಲಿ ವಿದ್ಯಾವಂತರೇ ಜಾಸ್ತಿ ಎಂಬುದು ವಿಷಾದನೀಯ ಎಂದು ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷೆ ಡಾ. ವಸುಂಧರ ಭೂಪತಿ ಎಂದು ವಿಷಾದ ವ್ಯಕ್ತಪಡಿಸಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಮಾ. 11 ರಂದು ನವಿಲೆ ಆವರಣದ ಕೃಷಿ ಮಹಾವಿದ್ಯಾಲಯದ ವಿವಿಧೋದ್ದೇಶ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿದರು.
ನೆರೆದಿರುವ ಮಹಿಳಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರನ್ನು ಕುರಿತು, ನಮ್ಮೆಲ್ಲರ ತಾಯಿ ನಮ್ಮನ್ನು ಹೆಣ್ಣೆಂದು ಹೆರಲಿಲ್ಲದಿದ್ದರೆ ಇಂದು ನಾವು ಇಲ್ಲಿ ಇರುತ್ತಿರಲಿಲ್ಲ. ಗಂಡು ಮಕ್ಕಳಿಗಿಂತ ಹೆಣ್ಣು ಯಾವುದರಲ್ಲಿಯೂ ಕಮ್ಮಿ ಇಲ್ಲ. ಪ್ರಸ್ತುತ ಹೆಣ್ಣು ಪುರುಷರಂತೆಯೇ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾಳೆ. ಇಂತಹ ಮುಂದುವರೆದ, ವಿದ್ಯಾವಂತರು ಹೆಚ್ಚಿರುವ ಸಮಾಜದಲ್ಲಿ ಇಂದಿಗೂ ಸಹ ಹೆಣ್ಣು ಹೋರಾಟ ಮಾಡಿ ತನ್ನ ಸ್ಥಾನವನ್ನು ಪಡೆಯಬೇಕಿದೆ. ಲಿಂಗ ತಾರತಮ್ಯ, ವೇತನದಲ್ಲಿ ತಾರತಮ್ಯ ಹೋಗಲಾಡಿಸಬೇಕೆಂದರೆ, ಪ್ರತಿಯೊಬ್ಬರೂ ಹೆಣ್ಣನ್ನು ಗೌರವಿಸಬೇಕು, ಪ್ರೀತಿಸಬೇಕು ಎಂದು ಅವರು ಕರೆ ನೀಡಿದರು.
ಮಹಿಳೆ ಸಶಕ್ತಳು, ಮಹಿಳೆ ಕುಟುಂಬದ ಬೆನ್ನೆಲುಬು. ಅವಳು ಕುಟುಂಬದ ನಿರ್ವಹಣೆಯಿಂದ ಹಿಡಿದು ಎಲ್ಲಾ ಉದ್ಯೋಗ ಕ್ಷೇತ್ರಗಳಲ್ಲಿಯೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಸಶಕ್ತಳು. ಅಲ್ಲದೆ, ವಿದ್ಯಾರ್ಥಿನಿಯರು ಮೊದಲು ಶಿಕ್ಷಣ ಮುಗಿಸಿ, ಆರ್ಥಿಕವಾಗಿ ಸಬಲರಾದ ನಂತರ ನಿಮ್ಮ ಭಾವನೆಗಳಿಗೆ ಸ್ಪಂದಿಸುವ, ಹೆಣ್ಣೆಂದು ಗೌರವಿಸುವಂತ ವರನನ್ನು ವರಿಸಬೇಕೆಂದು ಕಿವಿ ಮಾತು ಹೇಳಿದರು. ತಮ್ಮ ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಡಿ ಎಂದರು.
ಕೆಲವು ಕಡೆ ಇನ್ನೂ ಹೆಣ್ಣು ರಜಸ್ವಾಲೆಯಾದರೆ, ಹೆರಿಗೆಯಾದರೆ ಆಕೆಯನ್ನು ಸರಿಯಾದ ಪೌಷ್ಠಿಕ ಆಹಾರ ಕೊಡದೆ ಮನೆಯಿಂದ ಹೊರಗೆ ಇರಿಸುವಂತ ಮೂಢ ಸಂಪ್ರದಾಯಗಳು ಪ್ರಚಲಿತದಲ್ಲಿವೆ. ಇಂತಹ ಮೂಢನಂಬಿಕೆಗಳು ನಶಿಸಬೇಕಿದೆ. ಪ್ರತಿಯೊಬ್ಬ ಪುರುಷ ಹೆಣ್ಣನ್ನು ತಂಗಿಯಾಗಿ, ಅಕ್ಕನಾಗಿ, ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ, ಸ್ನೇಹಿತೆಯಾಗಿ ಪ್ರೀತಿ, ಗೌರವರಿಂದ ಕಾಣಬೇಕಿದೆ. ಆಗ ಮಾತ್ರ ಒಂದು ಒಳ್ಳೆಯ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಗೌರವಾನ್ವಿತ ಆಡಳಿತ ಮಂಡಳಿ ಸದಸ್ಯರಾದ ನೀತು ಯೋಗಿರಾಜ್ ಪಾಟೀಲ್ ಮಾತನಾಡಿ, ನಾವು ಹೆಣ್ಣಾಗಿ ಜನ್ಮತಾಳಿದ್ದಕ್ಕೆ ಹೆಮ್ಮೆ ಪಡಬೇಕು. ದೇವರು ಹೆಣ್ಣಿಗೆ ಇನ್ನೊಂದು ಜೀವವನ್ನು ಸೃಷ್ಟಿಸುವಂಥ ಶಕ್ತಿಯನ್ನು ನೀಡಿದ್ದಾನೆ. ಹೆಣ್ಣು ತಾನು ಸಬಲಳೆನ್ನುವುದಕ್ಕೆ ಬಾಹ್ಯದಿಂದ ಯಾವ ಪ್ರಚೋದನೆಯನ್ನು ಬಯಸದೆ ತನ್ನನ್ನು ತಾನೇ ಹುರಿದುಂಬಿಸಿಕೊಳ್ಳಬೇಕಿದೆ. ಹೆಣ್ಣು ಸಂಸಾರದ ಬೆನ್ನೆಲುಬಾಗಿದ್ದಾರೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹೆಣ್ಣು ತನ್ನನ್ನು ತಾನು ಸಬಲರನ್ನಾಗಿಸಿಕೊಳ್ಳಬೇಕು. ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ಬಯಸುವುದು ನಮ್ಮ ಹಕ್ಕು. ನಮ್ಮ ಹಕ್ಕಿಗಾಗಿ ನಾವು ಹೋರಾಡಬೇಕಿದೆ. ಪ್ರತಿಯೊಬ್ಬರೂ ಹೆಣ್ಣನ್ನು ಗೌರವಾದರದಿಂದ ಕಾಣಬೇಕು. ಈ ಸಂಸ್ಕೃತಿ ಮನೆಯಿಂದಲೇ, ತಾಯಿ-ತಂದೆಯಿಂದಲೇ ಬರಬೇಕಿದೆ. ಇತ್ತೀಚೆಗೆ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಹೆಣ್ಣಿಲ್ಲದ ಜೀವನ ಊಹಿಸಿಕೊಳ್ಳಲೂ ಆಗದು, ಆದ್ದರಿಂದ ಹೆಣ್ಣನ್ನು ಪ್ರೀತಿಸಿ ಮತ್ತು ಗೌರವಿಸಿ, ಆದರಿಸಿ ಎಂದು ಕರೆ ನೀಡಿದರು.
ಕೃಷಿ ಮತ್ತು ತೋಟಗಾರಿಕೆ ವಿವಿನ ಕುಲಪತಿ ಡಾ.ಎಂ.ಕೆ. ನಾಯಕ್ ಮಾತನಾಡಿ, ವೈಜ್ಞಾನಿಕವಾಗಿ ಮುಂದುವರೆದದ್ದು ಕೆಲವು ಕ್ಷೇತ್ರಗಳಲ್ಲಿ ಅದು ಮಾರಕವಾಗಿ ಪರಿಣಮಿಸಿದೆ. ಭ್ರೂಣವನ್ನು ಹೆಣ್ಣೆಂದು ಪತ್ತೆಹಚ್ಚಿ, ಚಿಗುರುವಾಗಲೇ ಅದನ್ನು ಚಿವುಟುವಂತ ಘೋರ ಕೃತ್ಯ ವಿದ್ಯಾವಂತರಿರುವ, ಮುಂದುವರೆದ ಪಟ್ಟಣಗಳಲ್ಲಿಯೇ ಹೆಚ್ಚು ಕಂಡುಬರುತ್ತಿರುವುದು ವಿಷಾದನೀಯವೆನಿಸುತ್ತಿದೆ. ಹೆಣ್ಣಿಲ್ಲದ ಸಮಾಜವನ್ನು ಊಹಿಸಲೂ ಸಾಧ್ಯವಿಲ್ಲ. ದೇವರು ಎಲ್ಲಾ ಕಡೆ ಇರನು, ಆದ್ದರಿಂದ ತಾಯಿಯನ್ನು ಸೃಷ್ಠಿಸಿದ್ದಾನೆ. ಆಕೆ ಕುಟುಂಬದ ಬೆನ್ನೆಲುಬು. ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಂತೆ ಸಮಾನಳು. ಹೆಣ್ಣನ್ನು ಪೂಜಿಸಿ, ಪ್ರೀತಿಸಿ, ಗೌರವಾದರಗಳಿಂದ ಕಾಣಬೇಕಿದೆ. ಆಗ ಮಾತ್ರ ಸಮಾನ ಜಗತ್ತು ಸಶಕ್ತ ಜಗತ್ತು ಆಗಲು ಸಾಧ್ಯವಿದೆ ಎಂದರು.
ಪ್ರಾಧ್ಯಾಪಕರು ಮತ್ತು ನೋಡಲ್ ಅಧಿಕಾರಿ (ಜೆಂಡರ್ ಬಜೆಟ್) ಡಾ. ಜಯಲಕ್ಷ್ಮೀ ನಾರಾಯಣ ಹೆಗಡೆ ಮಾತನಾಡಿ, ಇವರು ಪ್ರತಿವರ್ಷ ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ದಿನದ ಆಚರಣೆ ಪ್ರಾಮುಖ್ಯತೆ ಕುರಿತು ಮಾತನಾಡುತ್ತಾ, ಹಿಂದೆ ಮಹಿಳೆ ಮತ್ತು ಪುರುಷರಿಂದ ವೇತನ ತಾರತಮ್ಯ ಮಾಡಿದ್ದರ ಪ್ರತಿಫಲ ಮಹಿಳೆಯರು ಒಟ್ಟುಗೂಡಿ ಸಮಾನತೆ ಬೇಕೆಂದು ಧರಣಿ ಮಾಡಿದ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸಲಾಗುತ್ತಿದ್ದು, ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಪ್ರತಿ ವರ್ಷವೂ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ, ಅವರಿಂದ ವಿಷಯ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿ ಸ್ವಾಗತ ಕೋರಿದರು.
ಈ ಸಮಾರಂಭದಲ್ಲಿ ಡಾ. ಬಿ. ಹೇಮ್ಲಾ ನಾಯಕ್, ಡೀನ್ (ಕೃಷಿ), ಡಾ. ಟಿ.ಎಸ್. ವಾಗೀಶ್, ಡೀನ್ (ಸ್ನಾತಕೋತ್ತರ), ಡಾ. ಎಚ್. ರವೀಂದ್ರ, ಆಡಳಿತಾಧಿಕಾರಿಗಳು, ಡಾ. ಕೆ. ಸಿ. ಶಶಿಧರ, ವಿಸ್ತರಣಾ ನಿರ್ದೇಶಕರು, ಕೆ. ಗಣೇಶಪ್ಪ, ಹಣಕಾಸು ನಿಯಂತ್ರಣಾಧಿಕಾರಿಗಳು, ಡಾ ಟಿ. ಹೆಚ್. ಗೌಡ, ಉಪ ಕುಲಸಚಿವರು, ಪಿಪಿವಿಎಫ್ಆರ್ಎ ಉಪಸ್ಥಿತರಿದ್ದರು. ವಿಶ್ವ ವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಕಾರ್ಮಿಕ ವರ್ಗದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post