ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಡಗು: ಮದುವೆ ಅಂದರೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖ ಹಂತ. ಅದೇ ರೀತಿ ಪರೀಕ್ಷೆಯು ಅತೀ ಮುಖ್ಯ. ಅದರಲ್ಲೂ ಪರೀಕ್ಷೆ ಹಾಗೂ ಮದುವೆ ಒಂದೇ ದಿನ ಬಂತು ಅಂದರೆ ಎರಡು ಜೀವನದ ಅತೀ ಪ್ರಮುಖ ಘಟ್ಟ.
ಹೌದು, ಇಲ್ಲಿ ಯುವತಿಯೊಬ್ಬಳು ತನ್ನ ವಿವಾಹ ದಿನದಂದೇ ಧಾರೆ ಸೀರೆಯಲ್ಲೇ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಕೊಡಗು ಜಿಲ್ಲೆಯ ಮಡಿಕೇರಿ ಪಟ್ಟಣದ ಅಶೋಕಪುರ ಬಡವಾಣೆಯ ನಿವಾಸಿ ಸ್ವಾತಿ ತನ್ನ ಮದುವೆ ಮುಗಿಸಿಕೊಂಡು ಪರೀಕ್ಷೆಗೆ ಹಾಜರಾಗಿದ್ದಾರೆ.
ನವವಧು ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಹ್ವಾನಿಸಿದ್ದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆಕೆಯ ವಿವಾಹದ ದಿನದಂದೇ ಪರೀಕ್ಷೆಯೂ ನಿಗದಿಯಾಗಿತ್ತು. ಅತ್ತ ಮದುವೆಯನ್ನು ಮುಂದಕ್ಕೆ ಹಾಕುವಂತಿಲ್ಲ, ಇತ್ತ ಪರೀಕ್ಷೆಯನ್ನೂ ಬಿಡುವಂತಿಲ್ಲ ಎಂಬ ಪರಿಸ್ಥಿತಿ. ಈ ವೇಳೆ ಧೃತಿಗೆಡದೆ ಎರಡನ್ನೂ ಯಾವುದೇ ಪ್ರಯಾಸವಿಲ್ಲದೆ ನಿಭಾಯಿಸಿದ್ದಾರೆ ಯುವತಿ.
ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ನಿವಾಸಿ ಸುರೇಶ್ ಎಂಬುವವರ ಜೊತೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಮದುವೆ ನಡೀತು. ಮದುವೆಯ ದಿನ ಮುಂಜಾನೆ 6 ರಿಂದ 9 ಗಂಟೆಯ ಒಳಗೆ ಮದುವೆ ಶಾಸ್ತ್ರಗಳನ್ನು ಮುಗಿಸಿಕೊಂಡು, ನಂತರ ಮಡಿಕೇರಿ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಧಾರೆ ಸೀರೆಯಲ್ಲೇ ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ಬಳಿಕ ಮತ್ತೆ ಹಾಲ್ಗೆ ಬಂದು ಆರತಕ್ಷತೆಯಲ್ಲಿ ಪಾಲ್ಗೊಂಡರು.
ಸ್ವಾತಿಯ ಶ್ರದ್ಧೆಯನ್ನು ನೋಡಿದ ಸ್ಥಳೀಯರು ಭೇಷ್ ಎಂದಿದ್ದು ಯುವತಿ ದಾಂಪತ್ಯ ಜೀವನ ಹಾಗೂ ವೃತ್ತಿ ಜೀವನ ಎರಡರಲ್ಲೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post