ಕೊಪ್ಪಳ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಡಿಮೆ ಮತದಾನವಾದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಭೂತಾನ್’ನಿಂದ ಆಗಮಿಸಿ, ಮತ ಚಲಾವಣೆ ಮಾಡುವ ಮೂಲಕ ಯುವತಿಯೊಬ್ಬರು ದೇಶಕ್ಕೇ ಮಾದರಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕ ಮ್ಯಾಗೇರಿ ಗ್ರಾಮದ ಅನುಪಮಾ ದೇವೇಂದ್ರಕುಮಾರ್ ಮಸಾಲಿ ಅವರು ಭೂತಾನ್ ದೇಶದ ವಿಶ್ವವಿದ್ಯಾಲಯದೊಂದರಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಕ್ಕಮ್ಯಾಗೇರಿಯಲ್ಲಿ ಮತ ಹೊಂದಿರುವ ಅವರು, ರಜೆ ಪಡೆದುಕೊಂಡು ತಮ್ಮ ಸ್ವಗ್ರಾಮಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಗ್ರಾಮೀಣ ಭಾಗ ಮಾತ್ರವಲ್ಲ ನಗರ ಪ್ರದೇಶದಲ್ಲಿದ್ದು ಮತದಾನದಿಂದ ದೂರ ಉಳಿಯುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿರುವ ಹಲವು ಮಂದಿಗೆ ಪಾಠ ಕಲಿಸುವಂತಹ ಮಾದರಿ ಕಾರ್ಯವನ್ನು ಅನುಪಮಾ ಅವರು ಮಾಡಿದ್ದಾರೆ. ಅಲ್ಲದೇ, ಮತದಾನದಿಂದ ದೂರವುಳಿಯದೇ ಹಕ್ಕು ಚಲಾಯಿಸುವಂತೆ ಕರೆ ನೀಡಿದ್ದಾರೆ.

















