ಕಲ್ಪ ಮೀಡಿಯಾ ಹೌಸ್
ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿ ಮತ್ತು ಕಕ್ಕರಗೋಳ ಗ್ರಾಮದಲ್ಲಿ ಮರಳು ಲೂಟಿಯಾಗುತ್ತಿದ್ದು, ತುಂಗಭದ್ರಾ ನದಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 4 ಟಿಪ್ಪರ್ಗಳನ್ನು ಕಾರಟಗಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಂಗಭದ್ರಾ ಜಲಾಶಯ ಕೊಪ್ಪಳ, ಬಳ್ಳಾರಿ, ರಾಯಚೂರು ಮೂರು ಜಿಲ್ಲೆಗಳ ಜೀವನಾಡಿಯಾಗಿದ್ದು, ರೈತರು ತುಂಗೆಯನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಆದರೆ ಅದೇ ತುಂಗೆಯ ಒಡಲಲ್ಲಿ ಅಕ್ರಮಗಳಿಗೂ ಕೊರತೆ ಇಲ್ಲ. ಮರಳು ದಂಧೆಕೋರರು ತುಂಗೆಯ ಒಡಲನ್ನು ರಾಜಾರೋಷವಾಗಿ ಬಗೆಯುತ್ತಿದ್ದಾರೆ. ಲಾಕ್ಡೌನ್ ಮಧ್ಯೆಯೂ ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ನಿಂತಿಲ್ಲ. ನಿರಂತರವಾಗಿ ದಂಧೆಕೋರರು ಅಕ್ರಮ ಮರಳನ್ನು ಬಗೆಯುತ್ತಿದ್ದಾರೆ. ತುಂಗೆಯ ಒಡಲಿಗೆ ಮರಳು ದಂಧೆಕೋರರು ಕನ್ನ ಹಾಕುತ್ತಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರೂ ಇಲ್ಲಿನ ಜನರಿಗೆ ಕೊರೋನಾ ಭಯ ಇಲ್ಲ. ನಂದಿಹಳ್ಳಿ ಮತ್ತು ಕಕ್ಕರಗೋಳ ಎರಡು ಅವಳಿ ಗ್ರಾಮಗಳಲ್ಲಿ ಮರಳಿಗೆ ಕೊರತೆ ಇಲ್ಲ. ನದಿ ದಡದಿಂದ ಟ್ರ್ಯಾಕ್ಟರ್ ಮೂಲಕ ಒಂದು ಕಡೆ ಮರಳು ಸಂಗ್ರಹ ಮಾಡಿ ಅದನ್ನು ರವಾನೆ ಮಾಡಲಾಗುತ್ತದೆ. ಇಲ್ಲಿನ ಕಾರ್ಮಿಕರನ್ನು ಬಳಸಿ ಮರಳನ್ನು ರಾಜಧಾನಿ ಬೆಂಗಳೂರು ಭಾಗಕ್ಕೆ ಸಾಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ನಿತ್ಯ ಟೆನ್ ವ್ಹೀಲರ್ ಟಿಪ್ಪರ್ನಲ್ಲಿ ಕೊಪ್ಪಳದಿಂದ ಮರಳು ಸಾಗಾಟ ಮಾಡಲಾಗುತ್ತದೆ. ಇದರಲ್ಲಿ ಬೆಂಗಳೂರು ಮೂಲದ ವ್ಯಕ್ತಿಯ ಪಾತ್ರ ಇದೆ ಎನ್ನುವ ಅನುಮಾನವಿದ್ದು, ಆತನೇ ಮರಳು ಸಾಗಾಟಕ್ಕೆ ನೆರವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳೀಯವಾಗಿ ಪಕ್ಷಾತೀತವಾಗಿ ಕೆಲವರು ಮರಳು ಮಾಫಿಯಾದಲ್ಲಿ ಕೈ ಜೋಡಿಸಿದ್ದು, ಅಧಿಕಾರಿಗಳಿಗೆ ಪ್ರತಿ ತಿಂಗಳು ಇಂತಿಷ್ಟು ಮಾಮೂಲಿ ಕೊಡುತ್ತಾರೆ ಎನ್ನುವ ಆರೋಪವೂ ಇದೆ. ಗಣಿ ಭೂ ವಿಜ್ಞಾನ ಅಧಿಕಾರಿಗಳು ಈ ದಂಧೆ ಹಿಂದೆ ಯಾರ ಕೈವಾಡಿದೆ ಎಂದು ತನಿಖೆ ಮಾಡಿ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ವರದಿ: ಮುರುಳಿಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post