ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ನಗರದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಮಾರ್ಚ್ 4ರಂದು ಆಡಳಿತ ಕಛೇರಿಯ ಮುಂಭಾಗ 50ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಅವರು ಸುರಕ್ಷತಾ ಧ್ವಜವನ್ನು ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
1992ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮವಾಗಿ ಈ ಕಾರ್ಖಾನೆ ಪ್ರಾರಂಭಿಸಲಾಯಿತು. ಆರಂಭದಿಂದಲೂ ಸುರಕ್ಷತೆ, ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಗಮನ ಹರಿಸಿ, ಉತ್ಪಾದನೆ ಮಾಡುತ್ತ ಪ್ರತಿ ಹಂತದಲ್ಲಿ ಉನ್ನತ ಮಟ್ಟಕ್ಕೆ ಏರಿದೆ. ಅದರಂತೆ ಪ್ರತಿ ವರ್ಷ ಮಾರ್ಚ್ 4 ರಿಂದ 10 ರವರೆಗೆ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಮತ್ತು ಸಪ್ತಾಹ ಆಚರಣೆ ಮಾಡುತ್ತ ಬಂದಿದೆ ಎಂದು ಹೇಳಿದರು.
14 ವರ್ಷದಲ್ಲಿ ಗುಲ್ಬರ್ಗ ವಲಯ ಮತ್ತು ಬಳ್ಳಾರಿ ಕೊಪ್ಪಳ ವಲಯ ಸುರಕ್ಷತಾ ಸಮಿತಿಯ ಸಹಯೋಗದಿಂದ ವಲಯ ಮಟ್ಟದಲ್ಲಿ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗಿದೆ. ಒಂದು ವರ್ಷದಲ್ಲಿ ಅನುಭವಿಸಿದ ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಸರ್ಕಾರದ ಕಟ್ಟುನಿಟ್ಟಿನ ನಿಯಮ ನಿಬಂಧನೆಗಳನ್ನು ಅಳವಡಿಸಿ ಸುರಕ್ಷತೆ ಹೆಚ್ಚಾಗಿ ಗಮನಹರಿಸಲಾಗಿದ್ದು, 2006-07ನೇ ಸಾಲಿನಲ್ಲಿ ಮೆ. ಜಿಂದಾಲ್ ಕಾರ್ಖಾನೆಯ ಸಹಾಯದಿಂದ ಒಂದು ಬಾರಿ ರಾಜ್ಯ ಮಟ್ಟದ ಸುರಕ್ಷತಾ ದಿನಾಚರಣೆ ಆಚರಿಸಲಾಗಿದೆ. ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವುದು ಮತ್ತು ಕಾರ್ಖಾನೆಗಳಲ್ಲಿ ಅಪಘಾತವನ್ನು ತಗ್ಗಿಸಿ, ಶೂನ್ಯ ಅಪಘಾತಕ್ಕೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರತಿದಿನ ಸುರಕ್ಷತಾ ಪ್ರತಿಜ್ಞೆ, ಸುರಕ್ಷತಾ ಕಾರ್ಯಸ್ಥಾನದ ಬಗ್ಗೆ ಒಟ್ಟಾಗಿ ಸೇರಿ ಮಾತನಾಡುವುದು, ವಿಭಾಗಗಳಲ್ಲಿ ಅಸುರಕ್ಷಿತ ಕಾರ್ಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವುದು. ಹಿರಿಯ ಆಡಳಿತ ಅಧಿಕಾರಿಗಳ ಸಮೇತ ವಿಭಾಗಳ ವೀಕ್ಷಣೆ ಮಾಡಿ ಸುರಕ್ಷತೆ ಬಗ್ಗೆ ಸಲಹೆ ಪಡೆಯುವುದರ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ವಿವರಿಸಿದರು.
ಕಾರ್ಖಾನೆಯ ಉದ್ಯೋಗಿಗಳು, ಕಾರ್ಮಿಕರ ಸಹಕಾರದಿಂದ ಉತ್ತಮ ಸುರಕ್ಷತಾ ವಾತಾವರಣ ಹೊಂದಲು ಪ್ರತಿದಿನ ಪ್ರಯತ್ನ ಮಾಡಲಾಗುತ್ತಿದೆ. 2016 ಮತ್ತು 2018ನೇ ಸಾಲಿನಲ್ಲಿ ಎನ್ಎಸ್ಸಿ ಬೆಂಗಳೂರು ವತಿಯಿಂದ ಕಾರ್ಖಾನೆಗೆ ಉತ್ತಮ ಸುರಕ್ಷಾ ಪುರಸ್ಕಾರ ಪ್ರಶಸ್ತಿಯನ್ನು ನೀಡಲಾಗಿದ್ದು, ಅತ್ಯುತ್ತಮ ಸುರಕ್ಷಾ ಕಾರ್ಖಾನೆ ಪುರಸ್ಕಾರಕ್ಕಾಗಿ ಶ್ರಮಪಡಬೇಕಾಗಿದೆ ಮತ್ತು ಎಲ್ಲರ ಸಹಕಾರದಿಂದ ಮಾತ್ರ ಅಪಘಾತ ರಹಿತ ಕಂಪನಿಯಾಗಿ ಮುಂದುವರೆಯಲು ಸಾಧ್ಯವಾಗಿ ಎಂದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹತ್ತಿರ ಇದ್ದ ವಿಎಸ್ಎಲ್ ಲಿಮಿಟೆಡ್ ಕಾರ್ಖಾನೆಯನ್ನು ಎರಡು ತಿಂಗಳ ಹಿಂದೆ ಸ್ವಾಧೀನ ಪಡಿಸಿಕೂಳ್ಳಲಾಗಿದೆ. ಈಗ ನಮ್ಮ ಕಾರ್ಖಾನೆ ಜೊತೆ ಆ ಕಾರ್ಖಾನೆಯನ್ನು 15 ದಿನಗಳ ಹಿಂದೆ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಿ ಉತ್ಪಾದನೆ ಪ್ರಾರಂಭಿಸಲಾಯಿತು. ಈ ಕಾರ್ಖಾನೆಯಿಂದ ಆ ಭಾಗದಲ್ಲಿ ಉತ್ತಮವಾದ ಕೆಲಸ ಮಾಡಲು ಅನುಕೂಲ ಸಿಕ್ಕಿದೆ. ಇದು ತಮ್ಮೆಲ್ಲಾರ ಸಹಕಾರದಿಂದ ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.
ಹಿರಿಯೂರು ಪ್ಲಾಂಟ್ ಕಾರ್ಖಾನೆಯಲ್ಲಿ ಸುರಕ್ಷತಾ ಅಧಿಕಾರಿಗಳನ್ನು ಹೆಚ್ಚಿಸಿ ಅವರ ಮಾರ್ಗದರ್ಶನದಿಂದ ತರಬೇತಿ, ಸುರಕ್ಷತಾ ಕಾರ್ಯಾಚರಣೆ ಮಾಡುವುದರ ಮೂಲಕ ಯಾವುದೇ ಅಪಘಾತ ಇಲ್ಲದೆ 9 ತಿಂಗಳಿನಿಂದ ಉತ್ಪಾದನೆ ನಿಲ್ಲಿಸಿದ್ದ ಕಾರ್ಖಾನೆಯನ್ನು ಪ್ರಾರಂಭಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹಾಗೂ ಪ್ರತಿಯೊಬ್ಬರು ಸಹ ಕೊವೀಡ್ ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದರು.
ಸುರಕ್ಷತಾ ಅಧಿಕಾರಿ ಮುರಳೀಧರ್ ನಾಡಿಗೇರ್ ಮಾತನಾಡಿ, ಸುರಕ್ಷತಾ ವರದಿಯನ್ನು ಎಲ್ಲರಿಗೂ ತಿಳಿಸಿದರು. ಕಾರ್ಖಾನೆಯು ಯಾವುದೇ ಅಪಘಾತ ಇಲ್ಲದೆ ಕೋಕ್ ಓವನ್ ಮತ್ತು ಹಿರಿಯೂರು ಪ್ಲಾಂಟ್ಗಳನ್ನು ಪ್ರಾರಂಭ ಮಾಡಲಾಗಿದೆ. ಪ್ರತಿ ಹಂತದಲ್ಲಿ ಕೋವಿಡ್ ಸುರಕ್ಷ ಕಟ್ಟುನಿಟ್ಟಿನ ನೀತಿಯನ್ನು ಜಾರಿಗೆ ಮಾಡಿ ಗಣನೀಯ ಸಾಧನೆಯನ್ನು ಮಾಡಲಾಗಿದೆ. ಸಕಾಲದಲ್ಲಿ ಪ್ರತಿದಿನ ಸುರಕ್ಷತಾ ತರಬೇತಿ ನೀಡಿ ಅಪಘಾತಗಳನ್ನು ತಡೆಯಲು ಪ್ರಯತ್ನ ನಡೆಸಲಾಗುತ್ತದೆ ಎಂದರು.
ವಿಭಾಗದ ಅಧಿಕಾರಿಗಳು ಮತ್ತು ಉದ್ಯೋಗಿಗಳ ಸಹಕಾರದಿಂದ ಪ್ರತಿ ತಿಂಗಳು ಸುರಕ್ಷತಾ ಅಣಕು ಪ್ರದರ್ಶನ ನಡೆಸುವುದರ ಮೂಲಕ ತಿಳುವಳಿಕೆಯನ್ನು ಹೆಚ್ಚಿಸಲಾಗುತ್ತಿದೆ. ಸುರಕ್ಷತಾ ಸಾಧನ ಸಾಮಾಗ್ರಿಗಳ ಬಳಕೆಯಲ್ಲಿ ಗಣನೀಯವಾಗಿ ಸಾಧನೆಯನ್ನು ಮಾಡಿದೆ. ಸುರಕ್ಷತೆಗೆ ಮೊದಲ ಆದ್ಯತೆಯ ಫಲವಾಗಿ ಕಾರ್ಖಾನೆಯಲ್ಲಿ ರಿಪೋರ್ಟಬಲ್ ಅಪಘಾತ ಶೂನ್ಯ ಪ್ರಮಾಣಕ್ಕೆ ಇಳಿಕೆಯಾಗಿದೆ. ಸುರಕ್ಷತಾ ಸಭೆಗಳನ್ನು ಪ್ರತಿ ತಿಂಗಳು ಸಭೆ ಆಯೋಜಿಸಿ, ಹೊಸ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದಿನನಿತ್ಯ ಪ್ರತಿ ಶಿಪ್ಟ್ನಲ್ಲಿ ಸುರಕ್ಷತಾ ಪ್ರತಿಜ್ಞೆ ಮತ್ತು ಸುರಕ್ಷತೆ ಬಗ್ಗೆ ಮಾತನಾಡುವ ಹವ್ಯಾಸ ಹೆಚ್ಚಿಸಲಾಗಿದೆ. ಪ್ರತಿ ತಿಂಗಳು ಸುರಕ್ಷಾ ಆಡಿಟ್ ಮಾಡಿ ವರದಿ ಸಲ್ಲಿಸಿ, ಕಾರ್ಯ ಸ್ಥಳದಲ್ಲಿ ಉತ್ತಮ ಸುರಕ್ಷತಾ ವಾತಾವರಣ ಮೂಡಿಸಲಾಗಿದೆ. ಹೊಸದಾಗಿ ಅಗ್ನಿಶಾಮಕ ವಾಹನವನ್ನು ಖರೀದಿಸಿ ಬೆಂಕಿ ಅಪಘಾತ ತಡೆಯಲಾಗುತ್ತಿದೆ. ಎನ್ಎಸ್ಸಿ ಬೆಂಗಳೂರು ಇವರಿಂದ ಸುರಕ್ಷತಾ ಆಡಿಟ್ ಮಾಡಿಸಿ ಕ್ರಮಕೈಗೂಳ್ಳಲಾಗಿದೆ. 475 ದಿನದಿಂದ ಮಿಷನ್ ಶಾಪ್ನಲ್ಲಿ ಯಾವುದೇ ಅಪಘಾತ ಇಲ್ಲದೆ ಉತ್ಪಾದನೆ ಮಾಡಲಾಗಿದೆ ಎಂದು ಹೇಳಿದರು.
ಕಳೆದ ಸಾಲಿನಲ್ಲಿ ಫೌಂಡ್ರಿ ವಿಭಾಗದ ಕೋರ್ ಶಾಪ್ ಹೆಚ್ಚಿನ ಅಪಘಾತಗಳು ಸಂಭವಿಸಿ ಸಮಸ್ಯೆಯಾಗಿತ್ತು. ನಂತರ ಅನೇಕ ಬದಲಾವಣೆ ಪ್ರತಿಫಲ ಈ ಸಾಲಿನಲ್ಲಿ ಕಳೆದ 3 ಕ್ವಾಟರ್ನಲ್ಲಿ ಅಪಘಾತ ರಹಿತ ಕೆಲಸ ಮಾಡಲಾಗಿದೆ. ಬಳ್ಳಾರಿ ಕೊಪ್ಪಳ ವಲಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಎಸ್ಹೆಚ್ಇ ವಾಟ್ಸಾಪ್ ಸಮೂಹ ಗುಂಪಿನಲ್ಲಿ ಸುರಕ್ಷತೆಗೆ ಆದ್ಯತೆ ಮತ್ತು ಗಣನೀಯ ಪ್ರಗತಿ ಕಾಣಲಾಗಿದೆ. ದಿನದಿಂದ ದಿನಕ್ಕೆ ರಸ್ತೆಗಳು, ಲೈಟಿಂಗ್, ಹೌಸ್ ಕೀಪಿಂಗ್ ವ್ಯವಸ್ಥೆ ಪ್ರಗತಿಯಿಂದ ಸುರಕ್ಷತೆಗೆ ವರದಾನವಾಗಿದೆ ಮತ್ತು ವಿಭಾಗಗಳಲ್ಲಿ ಸುರಕ್ಷತೆಗಾಗಿ ಹೊಸ ಹೊಸ ಯಂತ್ರಗಳು ಮತ್ತು ಉಪಕರಣಗಳ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಸಂಧರ್ಭದಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಉದ್ಯೋಗಿಗಳಿಗೆ ಬಹುಮಾನ ನೀಡಿದರು.
ಕಾರ್ಮಿಕರಿಗೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಮತ್ತು ಶಿಶಿಕ್ಷುಕರಿಗೆ ಉತ್ತಮ ಸುರಕ್ಷ ಪ್ರಶಸ್ತಿಗಳನ್ನು ನೀಡಲಾಯಿತು ಮತ್ತು ಮಸನವ ಸಂಪನ್ಮೂಲ ವಿಭಾಗದಿಂದ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಪ್ರಶಂಸಾಪತ್ರವನ್ನು ನೀಡಲಾಯಿತು.
ಕೊನೆಯಲ್ಲಿ ಸುರಕ್ಷತಾ ದಿನಾಚರಣೆಯಲ್ಲಿ ಭಾಗವಹಿಸಿದ ಎಲ್ಲಾರಿಗೂ ಸಿಹಿಯನ್ನು ಹಂಚಿ ಸಂತಸವನ್ನು ಹಂಚಿಕೂಳ್ಳಲಾಯಿತು. ಈ ಸಾಧನೆ ಸದಾಕಾಲವೂ ಮುಂದುವರೆದು ಶೂನ್ಯ ಅಪಘಾತ ತಲುಪಲು ಮುಂದುವರೆಯಬೇಕಾಗಿದೆ. ಸುರಕ್ಷತೆಯಿಂದ ಕಾರ್ಯ ನಿರ್ವಹಿಸಿ, ಮನೆಗೆ ಹಿಂದಿರುಗಿ ಎಂಬ ಘೋಷಣೆಯೊಂದಿಗೆ ಆಯೋಜಿಸಿದ ಸಮಾರಂಭ ಮುಕ್ತಾಯವಾಯಿತು. ಸುರಕ್ಷತಾ ವಿಭಾಗದ ಸೀನಿಯರ್ ಮ್ಯಾನೇಜರ್ ರವಿಕುಮಾರ್ ಅವರು ಸುರಕ್ಷತಾ ಪ್ರತಿಜ್ಞೆ ಮಾಡಿಸಿದರು.
ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷ ಪಿ.ನಾರಾಯಣ್, ಹಣಕಾಸು ವಿಭಾಗದ ಪ್ರೆಸಿಡೆಂಟ್ ಆರ್.ಎಸ್. ಶ್ರೀವತ್ಸನ್ ಮತ್ತು ಬೀಡು ಕಬ್ಬಿಣ ವಿಭಾಗದ ಹಿರಿಯ ಉಪಾಧ್ಯಕ್ಷ ಎಂ.ಜಿ. ನಾಗರಾಜ್ ಮತ್ತು ಹಿರಿಯ ಅಧಿಕಾರಿಗಳು, ಉದ್ಯೋಗಿಗಳು, ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ವರದಿ: ಮುರಳಿಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post