ಕಲ್ಪ ಮೀಡಿಯಾ ಹೌಸ್ | ಗದಗ |
ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಲಕ್ಕುಂಡಿ ಉತ್ಸವದ #Lakkundi_Utsav ಅಂಗವಾಗಿ ತಾಲೂಕಿನ ಲಕ್ಕುಂಡಿ ಗ್ರಾಮದ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಚಾಲನೆ ನೀಡಿದರು.
ಡೊಳ್ಳು ಕುಣಿತ, ನಂದಿಕೋಲು, ಕರಡಿ ಮಜಲು, ಜಾಂಜ್ ಮೇಳ, ಕೀಲುಕುದುರೆ ಕಲಾವಿದರು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದರು. ಇನ್ನು 205ಕ್ಕೂ ಹೆಚ್ಚು ಮಹಿಳೆಯರು ಕುಂಭ ಹೊತ್ತು ಸಾಗಿದರು. ವಿದ್ಯಾರ್ಥಿಗಳು ಕಿತ್ತೂರು ಚೆನ್ನಮ್ಮ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಕನ್ನಡಾಂಬೆ ಸೇರಿದ ವಿವಿಧ ಮಹನೀಯರ ವೇಷಭೂಷಣ ತೊಟ್ಟು ಆಕರ್ಷಿಸಿದರು.
ಲಕ್ಕುಂಡಿ ಗ್ರಾಮದ ದಾನ ಚಿಂತಾಮಣಿ ಅತ್ತಿಮಬ್ಬೆ ಮಹಿಳಾ ವಿವಿಧೊದ್ದೇಶಗಳ ಸಂಘ ಮತ್ತು ಶ್ರೀ ಲಕ್ಷ್ಮೀ ಗಾರ್ಮೆಂಟ್ಸ್ ವತಿಯಿಂದ ಟ್ರ್ಯಾಕ್ಟರ್ನಲ್ಲಿ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ ಹಾಗೂ ಕೋಲಾಟ ತಂಡ ಗಮನ ಸೆಳೆಯಿತು. ಲಕ್ಕುಂಡಿಯ ಶ್ರೀ ಕೋಟೆ ವೀರಭದ್ರೇಶ್ವರ ಕಲಾ ತಂಡದಿಂದ ನಂದಿಕೋಲು, ಎಚ್.ಎಸ್. ವೆಂಕಟಾಪೂರ ಗ್ರಾಮದ ಮಹರ್ಷಿ ವಾಲ್ಮೀಕಿ ಕಲಾ ಸಂಸ್ಥೆ ಹಾಗೂ ಶ್ರೀ ಬಾಲಸಿದ್ದೇಶ್ವರ ತಂಡದಿಂದ ಜಾಂಜ್ ಮೇಳ, ಬೆಟಗೇರಿಯ ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾತಂಡದಿಂದ ವೀರಗಾಸೆ, ನರಗುಂದ ಯೋಗೇಶ ಗುಡಾರದ ತಂಡದಿಂದ ಜಗ್ಗಲಿಗೆ ಪ್ರದರ್ಶನ ಆಕರ್ಷಿಸಿತು.
ಜೊತೆಗೆ ಅಂತರ್ ಜಿಲ್ಲೆಗಳಿಂದ ಆಗಮಿಸಿದ ಉಡುಪಿಯ ಶ್ರೀ ದುರ್ಗಾ ಮಹಿಳಾ ಚಂಡೆ ಬಳಗದಿಂದ ಮಹಿಳಾ ಚಂಡೆ ವಾದ್ಯ, ಚಿಕ್ಕಮಗಳೂರಿನ ಶ್ವೇತಾ ತಂಡದಿಂದ ಮಹಿಳಾ ವೀರಗಾಸೆ, ಮಂಡ್ಯದ ಸವಿತಾ ಚಿರಕುನ್ನಯ್ಯ ತಂಡದಿಂದ ಮಹಿಳಾ ಪೂಜಾ ಕುಣಿತ, ಜಿಲ್ಲೆಯ ಸೊರಟೂರ ಗ್ರಾಮದ ಶ್ರೀ ವೀರಭದ್ರೇಶ್ವರ ಕಲಾತಂಡದಿಂದ ಕೀಲು ಕುದುರೆ ಸೇರಿ ವಿವಿಧ ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದರು.
ಸರಕಾರಿ ಹಿರಿಯ ಪ್ರೌಢಶಾಲೆಯಿಂದ ಆರಂಭಗೊಂಡ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯು ಬಸ್ ನಿಲ್ದಾಣದ ಮಾರ್ಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉತ್ಸವದ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯವರೆಗೆ ಸಾಗಿತು.
ಮೆರವಣಿಗೆಯಲ್ಲಿ ಎಂಸಿಎ ನಿಗಮದ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಪ್ಪ ಪಲ್ಲೇದ, ಗ್ರಾಪಂ ಅಧ್ಯಕ್ಷೆ ಲಲಿತಾ ಗದಗಿನ, ಉಪಾಧ್ಯಕ್ಷ ರೇವಣಸಿದ್ದಪ್ಪ ಮುಳಗುಂದ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಜಿಪಂ ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ ಶಿರಾಳೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ, ಪ್ರಮುಖರಾದ ಅನಿಲ ಮೆಣಸಿನಕಾಯಿ, ಉಮೇಶಗೌಡ ಪಾಟೀಲ ಸೇರಿದಂತೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post