ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಾವು ಕಲಿತ ವಿದ್ಯೆಯಿಂದ ನಮ್ಮ ಊರಿನ ಜನತೆಗೆ ಅನುಕೂಲವಾಗುವ ಮನೋಭಾವವನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಸಲಹೆ ನೀಡಿದರು.
ಭೂತನಗುಡಿಯಲ್ಲಿ ಡಾ.ಸುಶಿತ್ ಶೆಟ್ಟಿ ನಿರ್ಮಿಸಿರುವ ನೂತನ ಎಸ್ಎಲ್ಎನ್ ಡೇ ಕೇರ್, ಸರ್ಜಿಕಲ್ ಕೇರ್ ಮತ್ತು ಡಯಾಗ್ನಸ್ಟಿಕ್ಸ್ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭದ್ರಾವತಿಯಲ್ಲಿನ ಜನರು ಆರೋಗ್ಯ ತಪಾಸಣೆಗೆ ಸುಸಜ್ಜಿತ ಆಸ್ಪತ್ರೆಯ ಸೌಲಭ್ಯವನ್ನು ಪಡೆಯಲು ಪರ ಊರಿನ ಆಸ್ಪತ್ರೆಗಳಿಗೆ ಹೋಗುವುದನ್ನು ನೋಡಿ ನಮಗೆ ಬೇಸರವಾಗುತ್ತಿತ್ತು. ನಮ್ಮ ಊರಿನಲ್ಲಿ ನಾಗರೀಕರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ಸುಸಜ್ಜಿತ ಆಸ್ಪತ್ರೆ ಇಲ್ಲವಲ್ಲ ಎಂಬ ಕೊರಗಿತ್ತು. ಈ ಕೊರಗನ್ನು ಡಾ.ಸುಶಿತ್ ಶೆಟ್ಟಿ ಈ ಒಂದು ನೂತನ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಮೂಲಕ ಆ ಕೊರಗನ್ನು ನೀಗಿಸಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಹೇಳುತ್ತೇನೆ ಎಂದರು.
ಡಾ.ಸುಶಿತ್ ಶೆಟ್ಟಿ ಇದೇ ಊರಿನಲ್ಲಿ ಹುಟ್ಟಿ ಬೆಳೆದು ವೈದ್ಯರಾಗಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಭದ್ರಾವತಿಯಲ್ಲಿಯೇ ಆಸ್ಪತ್ರೆಯನ್ನು ತೆರೆದು, ತಮ್ಮ ವೈದ್ಯಕೀಯ ವೃತ್ತಿಯ ಸೇವೆಯನ್ನು ಭದ್ರಾವತಿ ಕ್ಷೇತ್ರದ ಜನರಿಗೆ ಸಿಗುವಂತೆ ಮಾಡಿ ಎಂದು ಅವರ ಬಳಿ ನಾನು ಕೇಳಿಕೊಂಡೆ. ಅದಕ್ಕೆ ಅವರು ಸಮ್ಮತಿಸಿ ಈಗ ಈ ಒಂದು ಸ್ವಂತ ಕಟ್ಟಡದಲ್ಲಿ ನೂತನ ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳ ಸರ್ವ ಸುಸಜ್ಜಿತ ಆಸ್ಪತ್ರೆಯನ್ನು ತೆರೆದಿರುವುದು ನಿಜಕ್ಕೂ ನಮಗೆ ಸಂತಸ ತಂದಿದೆ. ನಮ್ಮ ಊರಿನ ನಾಗರೀಕರು ಈ ಆಸ್ಪತ್ರೆಯ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಈ ಮೂಲಕ ಕೇಳಿ ಕೊಳ್ಳುತ್ತೇನೆ ಎಂದರು.
ಡಾ.ಸುಶಿತ್ ಶೆಟ್ಟಿ ಹಾಗೂ ಅವರ ಪೋಷಕರು ಮತ್ತು ಕುಟುಂಬದ ಸದಸ್ಯರುಗಳು ಅತಿಥಿ ಸತ್ಕಾರ ಮಾಡಿ ಎಲ್ಲರಿಗೂ ಧನವ್ಯಾದಗಳನ್ನು ಅರ್ಪಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ನೂತನ ಆಸ್ಪತ್ರೆಗೆ ಭೇಟಿ ನೀಡಿ ಡಾ.ಸುಶಿತ್ ಶೆಟ್ಟಿ ಅವರಿಗೆ ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ದಿವಾಕರ ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ಧರ್ಮಪ್ರಸಾದ್, ಪುರಾಣ ಪ್ರಸಿದ್ಧ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ, ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಬಿ.ಎಸ್. ಗಣೇಶ್, ಮಾಜಿ ಜಿಪಂ ಸದಸ್ಯ ಮಣಿಶೇಖರ್, ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post