ಅತೃಪ್ತ ಶಾಸಕರ ಜನ್ಮ ಕುಂಡಲಿಯನ್ನು ಜಾಲಾಡುತ್ತಾ ಚರ್ವಿತಚರ್ವಣವೆಂಬಂತೆ 2 ಅಮೂಲ್ಯ ವಾರಗಳನ್ನು ವ್ಯರ್ಥವಾಗಿ ಕಳೆದ ಕರುನಾಡಿನ ಕುರುಡು ದೃಶ್ಯ ಮಾಧ್ಯಮಗಳಿಗೆ ಹಿಮಾದಾಸಳ ಅಮೋಘ ಸಾಧನೆಯು ಸುದ್ದಿಯಾಗದೇ ಉಳಿಯಿತು. ಕಾಶ್ಮೀರದ ಮಹತ್ತರ ಬೆಳವಣಿಗೆಗಳೂ ಪ್ರಮುಖವೆನಿಸಲಿಲ್ಲ.
ಅಷ್ಟೋ ಇಷ್ಟೋ ಎಂಬಂತೆ ಚಂದ್ರಯಾನ 2ರ ಸಾಧನೆಯೊಂದು ಮಾತ್ರ ಸ್ವಲ್ಪ ಸುದ್ದಿ ಮಾಡಿದರೂ TRPಯ ನಶೆಯೇರಿಸಿಕೊಂಡು ಸದಾ ಅತೃಪ್ತರಾಗಿರುವ ಇವರಿಗೆ ಜುಲೈ 29ರ ರಾತ್ರಿ ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ್ ಕಾಣೆಯಾಗಿದ್ದು ಕಾಫಿಯಂತೆ ಬಿಸಿ ಬಿಸಿ ಸುದ್ದಿಯಾಗಿತ್ತು. ಉಸಿರು ಬಿಡದಂತೆ ಒಂದೇ ಸಮನೆ ಅದನ್ನು ಬಗೆ ಬಗೆಯಾಗಿ ಹೇಳಿ, ತೋರಿಸಿ, ವೈಭವೀಕರಿಸಿ ಮಸಾಲೆ ಬೆರೆಸಿ ವರದಿ ಮಾಡಿ ತಾವು ವಿಕೃತ ವಿಘ್ನ ಸಂತೋಷಿಗಳೆಂದು ತೋರಿಸಿಕೊಟ್ಟದ್ದು ನಮ್ಮ ದುರಂತ.
ಯಶಸ್ವಿ ಉದ್ಯಮಿಯಾಗಿ ಆತ ತೃಣದಿಂದ ಬೆಳೆದು ತ್ರಿವಿಕ್ರಮನಾಗಿದ್ದು, ಕಂಡವರು ಹುಬ್ಬೇರಿಸುವಂತೆ ಅಂತಾರಾಷ್ಟ್ರೀಯ ಮಟ್ಟದ ಉದ್ಯಮವನ್ನು ತನ್ನ ಅವಿರತ ಪ್ರಯತ್ನದಿಂದ ಛಲದಿಂದ ಕಟ್ಟಿ, ಬೆಳೆಸಿ ಕಾಫಿಗೆ ಗೌರವವನ್ನು ತಂದವರು. ಅವರ ಧಾರುಣ ಸಾವಿನ ಸುದ್ದಿಯನ್ನು ಮಾಧ್ಯಮಗಳಲ್ಲಿ ದಿಢೀರನೇ ಕೇಳಿದ ಕನ್ನಡಿಗರಿಗೆಲ್ಲಾ ಆಘಾತವಾಗಿರುವುದಂತೂ ನಿಜ. ಉದ್ಯಮಿಯಾಗ ಬಯಸುವ, ಹಣ ಮತ್ತು ಯಶಸ್ಸಿನ ಬೆನ್ನತ್ತಿ ಹೊರಡುವ ಪ್ರತಿಯೊಬ್ಬರಿಗೂ ನಿತ್ಯ ಪಾಠವಾಗಬಲ್ಲ ಜೀವನದ ಸತ್ಯವನ್ನು ಅನಾವರಣಗೊಳಿಸಿ ಮತ್ತೆಂದೂ ಮರಳಿಬಾರದ ಲೋಕದತ್ತ ಶಾಶ್ವತವಾಗಿ ತೆರಳಿದ ಅದಮ್ಯ ಚೇತನಕ್ಕೆ ಭಾವಪೂರ್ಣ ಅಶ್ರುತರ್ಪಣ. ಧೈರ್ಯದಿಂದ ಸಾಹಸ ಮಾಡಿ. ಗೆದ್ದರೆ ಯಶಸ್ಸು, ಸೋತರೆ ಪಾಠವೆಂಬ ಆಂಗ್ಲ ನಾಣ್ಣುಡಿಯ ನಿಜವಾದ ಅರ್ಥವನ್ನು ನಾನು ಅರಿತದ್ದು ಈ ಘಟನೆಯಿಂದಲೇ.
ಸಾವನ್ನು ವೈಭವೀಕರಿಸಿ ಸಾಧಿಸುವುದೇನು? ಛೇ! ಈ ಸಾವು ನ್ಯಾಯವೇ ಎಂದೆನಿಸುವುದಾದರೂ ಉಳ್ಳವರ ಪಾಡನ್ನು ನಾವು ಊಹಿಸಿಕೊಳ್ಳುವುದು ಅಸಾಧ್ಯ. ಹೀಗಾಗಬಾರದಿತ್ತು ಎನ್ನಬಹುದಷ್ಟೇ. ಕಾಲವು ನಮಗೆ ಹಿಂದಕ್ಕೆ ಹೋಗುವ ಅವಕಾಶವನ್ನೆಂದೂ ಕೊಡಲಾರದು. ಏನಾಗಲಿ ಮುಂದೆ ಸಾಗು ನೀನೆಂಬುದೇ ಬದುಕಿನ ನಿತ್ಯ ಸತ್ಯ. ವ್ಯಕ್ತಿಯೊಬ್ಬನಿಗೆ ಸಾಯಲು 100 ಕಾರಣಗಳಿರಬಹುದಾದರೂ, ಬದುಕಲು 101 ಕಾರಣಗಳಿರುತ್ತದೆ. ಇದು ತಿರುವುಮುರುವಾದಾಗ ಇಂಥದ್ದು ಸಂಭವಿಸುತ್ತದೆ. ದಾರ್ಶನಿಕರಾಗುವುದು ಸುಲಭ. ಸಾಧಕರಾಗುವುದು ಕಷ್ಟ. ಸಾವಿನಲ್ಲೂ ನಾವು ಬಹಳ ಕಲಿಯುವುದಿದೆ.
ನಕಾರಾತ್ಮಕವಾದುದನ್ನು ಬಿಟ್ಟರೆ ಯಾವ ಸಾಧನೆಯುೂ ಸಾಧ್ಯ. ಸಾವಿನ ಬದಲು ಅವರ ಬದುಕು ಸಾಧನೆಗಳ ಬಗ್ಗೆ ಚರ್ಚೆಯಾಗಲಿ. ಸಮುದ್ರಮಥನದಲ್ಲಿ ಮೊದಲು ಬಂದಿದ್ದು ವಿಷವೇ. ವಿಷಕಂಠರಾದವರಿಗೆ ಮಾತ್ರ ಕೊನೆಯಲ್ಲಿ ಅಮೃತದ ಪ್ರಾಪ್ತಿ. ಆದರೆ ನೆನಪಿರಲಿ Short cut will cut you short.
ಭಾರತವು ವಿಜ್ಞಾನ ಜಗತ್ತಿಗೆ ನೀಡಿದ್ದ ಬಲು ದೊಡ್ಡ ಕೊಡುಗೆಯೆಂದರೆ ಶೂನ್ಯದ ಆವಿಷ್ಕಾರ. ಅದರ ಮೌಲ್ಯವು ನಾವು ಅದನ್ನು ಬಳಸಿಕೊಳ್ಳುವುದರ ಪರಿಯಲ್ಲಿದೆ. ಸಂಖ್ಯೆಯೊಂದರ ಎಡಕ್ಕೆ ಶೂನ್ಯ ಸೇರಿಸಿದರೆ ನಿರರ್ಥಕವೆನಿಸುವುದಾದರೂ, ಅದನ್ನು ಬಲಕ್ಕೆ ಸೇರಿಸಿದರೆ ಸಾರ್ಥಕವಾಗುವುದು. ಇದುವೇ ಜೀವನದ ಸಂಖ್ಯಾಶಾಸ್ತ್ರದ ತತ್ವವೆಂದು ತಿಳಿದವನಿಗೆ ಶೂನ್ಯವು ಎಂದಿಗೂ ಮನಸ್ಸನ್ನು ತುಂಬಿಕೊಳ್ಳುವುದು ಅಸಾಧ್ಯ. ಹೀಗಾದರೆ ಮಾತ್ರ ಬದುಕಿನಲ್ಲಿ ಸಾರ್ಥಕತೆಯನ್ನು ಕಾಣಬಹುದು. ಇಲ್ಲವಾದರೆ ಬುದ್ಧನಂತೆ ಶೂನ್ಯದಲ್ಲೇ ಪರ್ಯವಸಾನವಾದೀತು. ಯಾರಿಗೂ ಎಂದೂ ಹೀಗಾಗದಿರಲೆಂಬುದೇ ನಮ್ಮ ಆಶಯ. ಮಹತ್ವವಿರುವುದು ಬುದ್ಧನ ಹೊಸ ಹುಟ್ಟಿಗೇ, ಹೊರತು ಹಳೆಯ ಸಿದ್ಧಾರ್ಥನ ಸಾವಿಗಲ್ಲ. ಸನಾತನ ದರ್ಶನದಲ್ಲಿ ಆತ್ಮಕ್ಕೆ ಸಾವಿಲ್ಲವಾದುದರಿಂದ ಅದರ ಬಗ್ಗೆ ಹೆಚ್ಚಿನ ನಿಷ್ಕರ್ಷೆ ಅನಗತ್ಯ ಮತ್ತು ನಿರಪೇಕ್ಷ.
ಬೆಟ್ಟದಷ್ಟನ್ನು ಸಾಧಿಸುವ ಬಯಕೆ, ಆಗಸಕ್ಕೇ ಬಲೆ ಬೀಸುವ ಕನಸು, ಸಮುದ್ರವನ್ನೇ ಕುಡಿಯುವಷ್ಟು ಬಾಯಾರಿಕೆ, ಪಡೆದಷ್ಟೂ ತೀರದ ಹಸಿವು ನಮ್ಮನ್ನು ಸಾಧನೆಯ ಶಿಖರಾಗ್ರಕ್ಕೂ ಏರಿಸಬಲ್ಲವು. ಸ್ವಲ್ಪ ಎಡವಟ್ಟಾದರೆ ಸೋಲಿನ ಪ್ರಪಾತಕ್ಕೂ ತಳ್ಳಬಲ್ಲವು. ಸ್ವಪ್ರಯತ್ನವು ಮಾತ್ರ ಸಾಲದು. ಜೊತೆಗೆ ದೈವೀಕೃಪೆಯೆನ್ನಿ ಅಥವಾ ಅದೃಷ್ಟವೆನ್ನಿ. ಅದು ಬೇಕೇ ಬೇಕು. ಇಲ್ಲವಾದರೆ ಸೋಲೆಂಬುದೇ ಇರುತ್ತಿರಲಿಲ್ಲ. ಆದರೆ 100 ಬಾರಿ ಸೋತರೂ ಧೃತಿಗೆಡದೆ ಪುಟಿದೇಳುವ ಅದಮ್ಯ ಜೀವನ ವಿಶ್ವಾಸವೇ ಸಾಧಕನ ಮುಖ್ಯಲಕ್ಷಣ. ಸಾವು ಎನ್ನುವುದು ಜೀವನದ ಕೊನೆಯಲ್ಲವೆಂಬ ದಾರ್ಶನಿಕ ಸತ್ಯವನ್ನು ತಿಳಿದವನೆಂದೂ ಆತ್ಮಹತ್ಯೆಗೆಳಸಲಾರ. ತಪ್ಪು ಮಾಡದವರು ಯಾರುಂಟು? ಆದರೆ ತಿದ್ದಿಕೊಂಡವನೇ ಜಾಣ.
ಕಷ್ಟ ಬಂದಾಗ ಸಾವು ಪರಿಹಾರವಾಗುವುದೇ? ಸಾಧನ ಶರೀರವನ್ನೂ, ಸಾಧನಾ ಲೋಕವನ್ನೂ ತೊರೆದು ಮುಕ್ತಿಯು ಅಸಾಧ್ಯವೆಂಬುದು ವೈದಿಕ ಸತ್ಯ. ಆರ್ಷ ಬೋಧೆಯಲ್ಲಿ ಹಂತಹಂತವಾಗಿ ಬರುವ ಜೀವನದ 4 ಪುರುಷಾರ್ಥಗಳ ಮರ್ಮವನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ. ಜೀವನದ ನಿಜವಾದ ಗುರಿಯ ಬಗ್ಗೆ ದಾರ್ಶನಿಕ ದೃಷ್ಟಿ ಇಲ್ಲದಿದ್ದರೆ ಲೌಕಿಕ ಬುದ್ಧಿಗೆ ಮಂಕು ಬಡಿದಾಗ ಶೂನ್ಯವು ಆವರಿಸಿ ಇಂತಹಾ ಅತಿರೇಕಕ್ಕೆ ಕಾರಣವಾಗಬಹುದು. ವ್ಯವಹಾರದಲ್ಲಿ ಹಣದ ಹೊರತಾಗಿ ಮನುಷ್ಯ ಕಳೆದುಕೊಳ್ಳುವುದು ಏನಿದೆ? ಹುಟ್ಟಿನಿಂದ ಪಡೆದು ಬಂದದ್ದೇನೂ ಇಲ್ಲವಷ್ಟೇ? ಜೀವಕ್ಕಿಂತ ಹೆಚ್ಚಿನದ್ದೇನಿದೆ?
ಸಿದ್ಧಾರ್ಥ್ ಹಿಂದೊಮ್ಮೆ ನುಡಿದಿದ್ದ ಮಾತುಗಳು ನಮ್ಮನ್ನು ಬಹುವಾಗಿ ಕಾಡದಿರವು ಮನುಷ್ಯ ಐದಾರು ಕೋಟಿ ಗಳಿಸಿದ ಹಣದ ಮೇಲಿನ ಆಕರ್ಷಣೆಯ ಕಡಿಮೆಯಾಗಿ ನಂತರ ಕೀರ್ತಿಯೇ ಪ್ರಮುಖವೆನ್ನಿಸುತ್ತದೆ. ಅದೊಂದು ಹುಚ್ಚು ಪ್ರವಾಹದಂತೆ. ಇಷ್ಟೆಲ್ಲಾ ತಿಳಿದ ಮನುಷ್ಯನೊಬ್ಬ ತಾನು ಕೇವಲ ಸಾಲಕ್ಕೆ ಬೆದರಿ ಹೀಗೆ ಏಕಾಏಕಿ ಸಾಯುವ ನಿರ್ಧಾರ ಮಾಡುವುದು ಸಾಧ್ಯವೇ? ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಹಾಗಾಗಿ ಯಾವ ತಪ್ಪೂ ಮಾಡದೇ ಇದ್ದ ಶ್ರೀಮಂತನೊಬ್ಬ ಹೀಗೆ ಹೆದರಿ ಜೀವಕಳೆದುಕೊಳ್ಳುವ ನಿರ್ಧಾರ ಮಾಡಲಾರ. ಆದಾಯ ಘೋಷಿತವಾಗದ 480 ಕೋಟಿ ಆಸ್ತಿಯನ್ನು ಸಿದ್ದಾರ್ಥ್ ಐಟಿ ಅಧಿಕಾರಗಳ ಮುಂದೆ ಈ ಹಿಂದೆ ಒಪ್ಪಿಕೊಂಡದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ಅವರದ್ದು ತಪ್ಪೇ ಇಲ್ಲವೆನ್ನುವುದು ಅತಿರೇಕವಾದೀತು. ಭಾರತೀಯರಲ್ಲಿ ಇತ್ತೀಚೆಗೆ ಸಮಾಜಘಾತಕರನ್ನೂ ಕೂಡಾ ಸಾವಿನ ನಂತರ ಸಜ್ಜನರೆಂದು ಕೊಂಡಾಡುವ ಬೂಟಾಟಿಕೆಯು ಸರ್ವೇಸಾಮಾನ್ಯವಾಗಿದೆ.
ಆತ ಬದುಕಿದ್ದಾಗ ಕವಡೆ ಕಾಸಿನ ಸಹಾಯವನ್ನೂ ಮಾಡದವರು ಅದೇ ವ್ಯಕ್ತಿ ಸತ್ತಾಗ ಬಂದು ಗುಣಗಾನ ಮಾಡಿ ಬಕೀಟುಗಟ್ಟಲೇ ಕಣ್ಣೀರು ಸುರಿಸಿದ್ದನ್ನೂ ನಾವು ಕಾಣುತ್ತೇವೆ. ಅದೇನೇ ಇರಲಿ. ವ್ಯಕ್ತಿಯು ಸತ್ತ ಮೇಲೆ ಸಮಾಜ ಏನನ್ನು ಕುರಿತು ಚಿಂತಿಸಬೇಕು? ಈಗ ಸಿದ್ಧಾರ್ಥ್ ಸಾವನ್ನು ಮರೆತು ಅವರ ಬದುಕಿನ ಬಗ್ಗೆ, ನಡೆದು ಬಂದ ಕಠಿಣ ಹಾದಿಯ ಬಗ್ಗೆ, ಶಿಸ್ತು ಸಂಯಮದ ಕಾರ್ಯಕ್ಷಮತೆಯ ಬಗ್ಗೆ, ನಂಬಿ ಬಂದ ಮೌಲ್ಯ ಆದರ್ಶಗಳ ಬಗ್ಗೆ, ಯಶಸ್ಸಿನತ್ತ ಅವರಿಟ್ಟ ಮೊದಲ ಬಾಲಿಶ ಹೆಜ್ಜೆಗಳ ಬಗ್ಗೆ, ನಂತರ ಓಡಿದ ನಾಗಾಲೋಟದ ಬಗ್ಗೆ, ಬೆಳೆದ ತದನಂತರದ ದೈತ್ಯ ದಾಂಗುಡಿಯ ಬಗ್ಗೆ, ಕಂಡ ಬಣ್ಣದ ಕನಸುಗಳ ಬಗ್ಗೆ, ನವಿರಾದ ಮಾನವೀಯ ಸಂಬಂಧಗಳ ಬಗ್ಗೆ, ಕಷ್ಟಕ್ಕೆ ಮಿಡಿಯುವ ಹೂಮನಸ್ಸಿನ ಬಗ್ಗೆ, ಸನ್ನಡತೆಯ ಬಗ್ಗೆ, ಕೊಟ್ಟಿರುವ ಉದಾರ ದಾನಗಳ ಬಗ್ಗೆ, ಬಿಟ್ಟು ಹೋದ ಸುಂದರ ನೆನಪುಗಳ ಬಗ್ಗೆ, ಕಟ್ಟಿಕೊಟ್ಟ ಸಹಸ್ರಾರು ಸುಭದ್ರ ಬದುಕುಗಳ ಬಗ್ಗೆ ಚರ್ಚೆಯಾಗಲಿ, ವಿಚಾರ ವಿಮರ್ಶೆಯಾಗಲಿ.
ಈ ಸುವಿಚಾರಗಳನ್ನು ಬರಡು ಭೂಮಿಯಲ್ಲಿ ಬಿತ್ತಿದರೂ ನೂರು ಜನ ಸಿದ್ಧಾರ್ಥರು ಹುಟ್ಟಿಬರಬಲ್ಲ ಗುಣ ಕನ್ನಡದ ಮಣ್ಣಿಗಿದೆ. ಕಾಲಗರ್ಭದಲ್ಲಿ ಇಂತಹಾ ಅದೆಷ್ಟು ಸಿದ್ಧಾರ್ಥರು ಆಗಿ ಹೋದರೋ? ಓದುಗರಲ್ಲಿ ನನ್ನದೊಂದೇ ವಿನಂತಿ. ಬದುಕಿ ಸಾಯುವುದಕ್ಕಿಂತ ಸತ್ತು ಬದುಕುವುದೇ ಲೇಸಾದರೂ, ಈ ರೀತಿಯ ಅಂತ್ಯ ಇನ್ನಾರ ಬಾಳಲ್ಲೂ ಬಾರದಿರಲಿ. ಇದೇ ನಾವು ಅವರಿಗೆ ನೀಡಬಹುದಾದ ಶ್ರದ್ಧಾಂಜಲಿಯೆನ್ನುವುದು ನಮ್ಮ ಅನಿಸಿಕೆ. ಮತ್ತೊಮ್ಮೆ ಹುಟ್ಟಿ ಬನ್ನಿ ಸಿದ್ಧಾರ್ಥ್. ಒಮ್ಮೆ ಮಾಡಿದ ತಪ್ಪನ್ನೆಂದೂ ಮತ್ತೊಮ್ಮೆ ಮಾಡದಿರಿ.
ಬರಹ: ಡಾ. ಸಿ.ಜಿ.ರಾಘವೇಂದ್ರ ವೈಲಾಯ
ನವಜಾತ ಶಿಶು ಮತ್ತು ಮಕ್ಕಳ ತಜ್ಞರು
Discussion about this post