ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಸಂಜೆಯ ಕೆಂಪು ಬಾನಿನಡಿ ಟ್ರಾಫಿಕ್ ಸಿಗ್ನಲ್ ಬಿದ್ದಾಗ, ವಾಹನಗಳ ಹಾರ್ನ್ ಸದ್ದಿನ ನಡುವೆ ವಿಚಿತ್ರವಾದ ಚಪ್ಪಾಳೆ ಸದ್ದೊಂದು ಕೇಳಿಬರುತ್ತದೆ. ಗಾಜಿನ ಕಿಟಕಿ ಮುಚ್ಚಿದ ಕಾರುಗಳ ಮುಂದೆ, ಬೈಕುಗಳ ಮುಂದೆ ಬಂದು ನಿಲ್ಲುವ ಒಂದು ವರ್ಗ… ಕೆಲವೊಮ್ಮೆ ಪ್ರೀತಿಯಿಂದ ದೀಪವಿಡುತ್ತಾರೆ, ಇನ್ನು ಕೆಲವೊಮ್ಮೆ ಹಠ ಹಿಡಿದು ಹಣ ಕೀಳುತ್ತಾರೆ, ಮತ್ತೆ ಕೆಲವೊಮ್ಮೆ ಅಸಭ್ಯ ವರ್ತನೆ, ನಿಂದನೆಗಳ ಮೂಲಕ ಸಾರ್ವಜನಿಕರನ್ನು ಕಂಗೆಡಿಸುತ್ತಾರೆ. ಈ ದೃಶ್ಯ ಇವತ್ತು ನಮ್ಮ ನಗರಗಳ ನಿತ್ಯ ಸತ್ಯ. ಇದನ್ನು ಕಂಡು ಸಮಾಜ ಆಕ್ರೋಶಗೊಳ್ಳುತ್ತದೆ.
“ಪೊಲೀಸರು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು”, “ಸರ್ಕಾರ ಕಟ್ಟುನಿಟ್ಟಿನ ಕಾನೂನು ತರಬೇಕು”, “ಅಸಲಿಗೆ ಇವರು ನಿಜವಾದ ಮಂಗಳಮುಖಿಯರೋ ಅಥವಾ ವೇಷ ಮರೆಸಿಕೊಂಡ ಗಂಡಸರೋ ಗೊತ್ತಾಗುತ್ತಿಲ್ಲ!” ಎಂಬ ಆಕ್ರೋಶದ ನುಡಿಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿರುವುದು ಸುಳ್ಳಲ್ಲ. ಜನರ ನೆಮ್ಮದಿಗೆ ಭಂಗ ತರುವ, ಬೆದರಿಸಿ ಹಣ ಸುಲಿಗೆ ಮಾಡುವ ಕೃತ್ಯಗಳನ್ನು ಯಾವುದೇ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ.
Also Read>> ಮೈಸೂರಿನ ಪಬ್ನಲ್ಲಿ ಭೀಕರ ಅಗ್ನಿ ಅವಘಡ | ಇಬ್ಬರು ಸಜೀವ ದಹನ, ಏಳು ಮಂದಿಗೆ ಗಂಭೀರ ಗಾಯ
ಇಲ್ಲಿ ಒಂದು ವಿಷಯ ನಾವೆಲ್ಲರೂ ಸ್ಪಷ್ಟವಾಗಿ ನೆನಪಿಡಬೇಕು: ತಪ್ಪು ಮಾಡಿದವರು ಮಂಗಳಮುಖಿಯರೇ ಆಗಿದ್ದರೂ ಸರಿ, ಅವರನ್ನು ಕಾನೂನಿನಿಂದ ಬಿಡಬಾರದು. “ಅವರು ಅಸಹಾಯಕರಲ್ಲವೇ” ಎಂದು ಇಂತಹ ವರ್ತನೆಗಳನ್ನು ನಿರ್ಲಕ್ಷಿಸುತ್ತಾ ಹೋದರೆ ಸಾರ್ವಜನಿಕರಿಗೆ ಅವರು ಕೊಡುವ ಉಪಟಳವನ್ನು ತಡೆಯಲು ಸಾಧ್ಯವೇ ಇಲ್ಲದಂತಾಗುತ್ತದೆ. ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ದಬಾಯಿಸುವುದು, ನಿಗದಿತ ಹಣ ನೀಡದಿದ್ದರೆ ಅಸಭ್ಯವಾಗಿ ಬಟ್ಟೆ ಬಿಚ್ಚಿ ಅವಮಾನಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲವಾಗಿ ಮಾತನಾಡುವುದು ಕೇವಲ ತಪ್ಪು ಮಾತ್ರವಲ್ಲ, ಕಾನೂನಿನ ಪ್ರಕಾರ ಅಪರಾಧ. ಲಿಂಗತ್ವದ ಹೆಸರಿನಲ್ಲಿ ಸಾರ್ವಜನಿಕರ ನೆಮ್ಮದಿ ಕೆಡಿಸುವ ಈ ಉಪಟಳಕ್ಕೆ ತಕ್ಷಣವೇ ಬ್ರೇಕ್ ಬೀಳಬೇಕಿದೆ.
ತಪ್ಪು ಯಾರೇ ಮಾಡಿದರೂ ತಪ್ಪೇ, ಕಾನೂನಿನ ಶಿಕ್ಷೆ ಎಲ್ಲರಿಗೂ ಒಂದೇ ಆಗಿರಬೇಕು.
ಕತ್ತಲ ಗರ್ಭದ ಕಥೆ: ಅವರೇಕೆ ರಸ್ತೆಗಿಳಿದರು?
ಒಮ್ಮೆ ಯೋಚಿಸಿ, ಯಾರಾದರೂ ಹುಟ್ಟುತ್ತಲೇ “ನಾನು ರಸ್ತೆಯಲ್ಲಿ ನಿಂತು ಭಿಕ್ಷೆ ಬೇಡಬೇಕು, ಜನರ ನಿಂದನೆಗೆ ಒಳಗಾಗಬೇಕು” ಎಂದು ಬಯಸುತ್ತಾರೆಯೇ? ಖಂಡಿತ ಇಲ್ಲ. ಪ್ರಕೃತಿಯ ವಿಚಿತ್ರ ವಿನ್ಯಾಸಕ್ಕೆ ಸಿಲುಕಿ, ಹೆಣ್ಣೂ ಆಗದೆ, ಗಂಡೂ ಆಗದೆ ಮಧ್ಯಂತರ ಭಾವನೆಗಳೊಂದಿಗೆ ಹುಟ್ಟುವ ಮಗು ಯಾರ ಮನೆತನದ ಶಾಪವೂ ಅಲ್ಲ. ಆದರೆ, ಆ ಮಗು ಬೆಳೆಯುತ್ತಿದ್ದಂತೆ ಹೆತ್ತ ಕರುಳೇ ಅದನ್ನು ದೂರ ತಳ್ಳುತ್ತದೆ. ಸಮಾಜ ಕೀಳಾಗಿ ನೋಡುತ್ತದೆ. ಶಾಲೆಗಳಲ್ಲಿ ಅಪಹಾಸ್ಯ, ಕೆಲಸದ ಜಾಗದಲ್ಲಿ ಬಹಿಷ್ಕಾರ.
ಬದುಕಲು ನೆರಳಿಲ್ಲ, ಹೊಟ್ಟೆಗೆ ಅನ್ನವಿಲ್ಲ, ಕೈತುಂಬ ಕೆಲಸ ಕೊಡಲು ಸಮಾಜಕ್ಕೆ ಮನಸ್ಸಿಲ್ಲ. ಇಂತಹ ಕಡು ಕತ್ತಲೆಯಲ್ಲಿ, ಹೊಟ್ಟೆ ಹಸಿವಿನ ಜ್ವಾಲೆ ತಡೆಯಲಾರದೆ ಅವರು ರಸ್ತೆಗಿಳಿಯುತ್ತಾರೆ. ಸಮಾಜ ಅವರನ್ನು ಪ್ರೀತಿಯಿಂದ ಸ್ವೀಕರಿಸಿದ್ದರೆ, ಇವತ್ತು ಅವರು ಸಿಗ್ನಲ್ಗಳಲ್ಲಿ ಕೈಚಾಚುತ್ತಿರಲಿಲ್ಲ.
ಎಲ್ಲರೂ ಒಂದೇ ಅಲ್ಲ: ಕಮಲದಂತೆ ಅರಳಿದ ಸಾಧಕರು
ನಮ್ಮ ಆಕ್ರೋಶದ ಜ್ವಾಲೆಯಲ್ಲಿ ಇಡೀ ಸಮುದಾಯವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಎಷ್ಟು ನ್ಯಾಯ? ಕೆಲವು ವ್ಯಕ್ತಿಗಳು ಕೊಡುವ ಉಪಟಳ ಇಡೀ ಸಮುದಾಯಕ್ಕೆ ಕಳಂಕ ತರುತ್ತಿದೆ ಎಂಬುದು ಅಷ್ಟೇ ನಿಜ. ಆದರೆ ಎಲ್ಲ ಮಂಗಳಮುಖಿಯರು ಕೆಟ್ಟವರಲ್ಲ. ಕತ್ತಲೆಯ ಗೂಡಿನಿಂದ ಹೊರಬಂದು, ಸಮಾಜದ ಕಣ್ಣು ತೆರೆಸಿದ ಎಷ್ಟೋ ಸಾಧಕರು ನಮ್ಮ ನಡುವೆ ಇದ್ದಾರೆ.
Also Read>> ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಪ್ರತಿಯೊಬ್ಬರಿಗೂ ಆದರ್ಶ: ಸುರೇಶ್ ಋಗ್ವೇದಿ
ಮಾತಾ ಮಂಜಮ್ಮ ಜೋಗತಿ: ತುತ್ತು ಅನ್ನಕ್ಕಾಗಿ ಅಲೆದವರು, ಕಲೆಯನ್ನೇ ಉಸಿರಾಗಿಸಿಕೊಂಡು ಇಂದು ದೇಶದ ಅತ್ಯುನ್ನತ ‘ಪದ್ಮಶ್ರೀ’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಅಕ್ಕೈ ಪದ್ಮಶಾಲಿ: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡಿ, ಸಮಾಜಮುಖಿ ಕೆಲಸಗಳ ಮೂಲಕ ಗೌರವ ಡಾಕ್ಟರೇಟ್ ಪಡೆದ ಧೀಮಂತೆ.
ಸಬೀನಾ: ಮಂಗಳೂರಿನ ಮೊದಲ ಟ್ರಾನ್ಸ್aಜೆಂಡರ್ ಆಟೋ ಚಾಲಕಿ, ಸ್ವಾಭಿಮಾನದ ಬದುಕಿಗೆ ಸಾಕ್ಷಿ.
ಇವರಲ್ಲದೆ ಇವತ್ತು ಎಷ್ಟೋ ಮಂದಿ ಉಪನ್ಯಾಸಕರಾಗಿ, ವಕೀಲರಾಗಿ, ಪೊಲೀಸ್ ಇಲಾಖೆಯಲ್ಲಿ, ಫ್ಯಾಷನ್ ರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇವರೆಲ್ಲರೂ ನಮ್ಮ ಸಮಾಜದ ಹೆಮ್ಮೆಯಲ್ಲವೇ?

ಪರಿಹಾರ ಎಲ್ಲಿದೆ? ಸರ್ಕಾರದ ಮತ್ತು ನಮ್ಮ ಜವಾಬ್ದಾರಿ
ಕೇವಲ ಪೋಲೀಸ್ ಲಾಠಿ ಬೀಸಿದರೆ ಅಥವಾ ಜೈಲಿಗೆ ಅಟ್ಟಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಇದೊಂದು ಸಾಮಾಜಿಕ ಮತ್ತು ಮಾನವೀಯ ಬಿಕ್ಕಟ್ಟು.
ನಕಲಿಗಳ ಪತ್ತೆ ಮತ್ತು ಕಠಿಣ ಶಿಕ್ಷೆ: ಮಂಗಳಮುಖಿಯರ ವೇಷ ಧರಿಸಿ ಹಫ್ತಾ ವಸೂಲಿ, ಹಣ ಸುಲಿಗೆ ಮಾಡುವ ನಕಲಿ ವ್ಯಕ್ತಿಗಳ ಮತ್ತು ಸಾರ್ವಜನಿಕರಿಗೆ ಅತಿಯಾದ ಉಪಟಳ ಕೊಡುವವರ ವಿರುದ್ಧ ಪೋಲಿಸ್ ಇಲಾಖೆ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು. ಇದು ಸಾರ್ವಜನಿಕರಿಗೂ ಮತ್ತು ನಿಜವಾದ ಮಂಗಳಮುಖಿಯರಿಗೂ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುತ್ತದೆ.
ಸರ್ಕಾರದ ನೆರವು: ರಾಜ್ಯ ಸರ್ಕಾರ ಇವರಿಗೆ ಕೇವಲ ಮಾಸಾಶನ ನೀಡುವುದಷ್ಟೇ ಅಲ್ಲದೆ, ಗೌರವಾನ್ವಿತ ಉದ್ಯೋಗ, ಉಚಿತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು.
ನಮ್ಮ ದೃಷ್ಟಿಕೋನ ಬದಲಾಗಬೇಕು: ಅವರು ನಮ್ಮಂತೆ ರಕ್ತ ಮಾಂಸವಿರುವ ಮನುಷ್ಯರು. ಅವರಿಗೆ ಬೇಕಿರುವುದು ಸಾರ್ವಜನಿಕರ ಅನುಕಂಪದ ಭಿಕ್ಷೆಯಲ್ಲ, ಸಮಾನತೆಯ ಗೌರವ.
Also Read>> ಏಷ್ಯಾದಲ್ಲೇ ಮೊದಲು | IISನಲ್ಲಿ ‘ಸ್ಮಾರ್ಟ್ ಸರ್ಫೇಸ್’ ತಂತ್ರಜ್ಞಾನ | ಭಾರತೀಯ ಕ್ರೀಡಾ ತರಬೇತಿಯಲ್ಲಿ ಡಿಜಿಟಲ್ ಕ್ರಾಂತಿ
ಕೊನೆಯ ಮಾತು
ಅವರ ಚಪ್ಪಾಳೆಯ ಸದ್ದಿನಲ್ಲಿ ಕೇವಲ ಹಠವಿಲ್ಲ, ಅದರ ಹಿಂದೆ ಹೆತ್ತವರು ಕೈಬಿಟ್ಟ ಒಂಟಿತನದ ನೋವಿದೆ, ಸಮಾಜ ಚುಚ್ಚಿದ ಅವಮಾನದ ಕಣ್ಣೀರಿದೆ. ಆದರೆ ಈ ನೋವಿನ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಅಪರಾಧ ಮಾಡುವವರನ್ನು, ಜನರಿಗೆ ಕಿರಿಕಿರಿ ಉಂಟುಮಾಡುವವರನ್ನು ಕಟ್ಟುನಿಟ್ಟಾಗಿ ಶಿಕ್ಷಿಸೋಣ, ಅದರಲ್ಲಿ ಎರಡು ಮಾತಿಲ್ಲ. ಆದರೆ ಸ್ವಾಭಿಮಾನದಿಂದ ಬದುಕಲು ಯತ್ನಿಸುವ, ಸಾಧನೆ ಮಾಡುವ ಕೈಗಳಿಗೆ ಬೆಂಬಲ ನೀಡೋಣ.
ಅವರನ್ನು ಕೀಳಾಗಿ ನೋಡದೆ, ತಪ್ಪು ಮಾಡಿದಾಗ ತಿದ್ದಿ, ನಮ್ಮವರೇ ಎಂದು ಅಪ್ಪಿಕೊಂಡಾಗ ಮಾತ್ರ ಈ ಸಮಾಜ ಸ್ವಾಸ್ಥ್ಯಪೂರ್ಣವಾಗಲು ಸಾಧ್ಯ. ಕೊನೆಗೂ ನೆನಪಿರಲಿ, ಅವರ ದೇಹ ಮತ್ತು ಭಾವನೆಗಳನ್ನು ಸೃಷ್ಟಿಸಿದ್ದು ಅದೇ ಭಗವಂತ. ಸೃಷ್ಟಿಕರ್ತನ ಕೃತಿಯನ್ನು ಗೌರವಿಸೋಣ, ಆದರೆ ತಪ್ಪನ್ನು ದಂಡಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















