ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
’ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’, ಎಂಬಂತೆ ಮಾತು ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ’ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’, ಎಂಬಂತೆ ಒಮ್ಮೆ ಮಾತನಾಡಿದ ಶಬ್ದಗಳು ಎಂದಿಗೂ ಬದಲಾಗದು, ಮನಸ್ಸು ಬದಲಾದರೂ ಕೂಡ.
’ನೀಚ ನಾಲಿಗೆ’ ಎಂಬುದು ಸಾವಿರ-ಸಾವಿರ ಶತಮಾನಗಳೇ ಕಳೆದರೂ ಕೂಡ ಸುಳ್ಳಾಗದಂತಹ ಮಾತು, ಯಾಕೆಂದರದು ಮಾತು, ಅಷ್ಟೇ ಅಲ್ಲದೇ ಅದು ವಾಸ್ತವ ಕೂಡ. ಮಾತಿಗೆ ಮಾನವ ಎಂದಾದರೂ ಇತಿಶ್ರೀ ಹಾಡಿದ್ದುಂಟೇ, ಖಂಡಿತಾ ಇಲ್ಲಾ, ಕಂಡದ್ದನ್ನು ಕಂಡಂತೇ. ಒದರುವುದೇ ಅದರ ಕೆಲಸ, ಪ್ರತ್ಯಕ್ಷ ನೋಡಿದರೂ ಪ್ರಾಮಾಣಿಸಿ ನೋಡುವುದು ಅದಕ್ಕೆ ಬಂದೊದಗದಂತಹ ಅದೃಷ್ಟ!
ನಮ್ಮ ಮಾತುಗಳು ಮುಂದಿದ್ದವರ ಮೇಲೆ ಯಾವ ರೀತಿಯಾದ ಪರಿಣಾಮ ಬೀರುತ್ತದೆಯೆಂಬುದು ಕೂಡ ಕೆಲವರ ಅರಿವಿಗೆ ಬರುವುದೇ ಇಲ್ಲ, ಬರುವಷ್ಟರಲ್ಲಿ ಕಾಲಘಟ್ಟಗಳೇ ಉರುಳಿ ಹೋದರೂ ಅನುಮಾನವೇನಿಲ್ಲ. ಆದರೇ ಆ ಮಾತಿನ ಜೊತೆಗೆ ಕ್ಷಮಿಸಪ್ಪಾ, ನನ್ನ ಮಾತಿನಲ್ಲೇನಾದರೂ ತಪ್ಪಿದ್ದರೇ. ನನಗೆ ತೋಚಿದ್ದು ಹೇಳಿದೆ ಎಂಬ ವಾಕ್ಯವನ್ನು ಕೂಡಸಿದರೇ, ಬಹುಶಃ ಅವರು ನಿಮಗೆ ಪ್ರತ್ಯುತ್ತರಿಸುವ ’ಧನ್ಯವಾದಗಳು’ ಎಂಬ ಪದದಿಂದಲಾದರೂ ನಿಮ್ಮ ಮಾತು ಸಾರ್ಥಕತೆ ಹೊಂದಬಹುದು.
ಸನ್ನಿವೇಶಕ್ಕೆ ತಕ್ಕಂತೆ ಮಾತನಾಡುವುದನ್ನು ನಾವು ರೂಢಿಸಿಕೊಳ್ಳಬೇಕು, ನಮ್ಮ ಪ್ರತಿಯೊಂದು ಮಾತುಗಳು ಸಂತೋಷದ ಸೃಷ್ಟಿಯನ್ನು ಮಾಡುವಂತಿರಬೇಕು. ಮಾತನಾಡುವುದು ಕೂಡ ಒಂದು ಕಲೆಯಾಗಿ ಮಾರ್ಪಾಡಾಗಿದೆ, ಇಲ್ಲದಿದ್ದರೆ ಪ್ರಸ್ತುತ ಕಾಲಘಟ್ಟದಲ್ಲಿ ಭಾಷಣ, ಚರ್ಚಾಸ್ಪರ್ಧೆಗಳನ್ನು ಆಯೋಜಿಸಲಿಕ್ಕಿರುವ ಉದ್ದೇಶವಾದರೂ ಏನು? ಅಲ್ವಾ.
ಪ್ರತಿಯೊಂದು ಮಾತಿಗೂ ನಾವು ಒಂದು ತೂಕ ಕೊಟ್ಟಾಗ ಮಾತ್ರ ಅದಕ್ಕೆ ಕಿಮ್ಮತ್ತು ಒದಗಿಬರುತ್ತದೆ. ಹಾಗಂತ ಅದಕ್ಕೆ ಪರಕೀಯರ ಭಾಷೆಯೇ ಬೇಕಂತಿಲ್ಲ, ನಮ್ಮ ಮಾತೃಭಾಷೆಯಲ್ಲಿಯೇ ನಾವಾಡುವ ನಾಲ್ಕು ಸ್ವಚ್ಚಂದವಾದ ಮಾತುಗಳು ಕೂಡ ಕೇಳುಗರ ಹೃದಯದಲ್ಲಿ ಮಾಸದಂತೆ ಅಚ್ಚಾಗಿರುತ್ತವೆ.
ಕೆಲವೊಂದು ಸಂದರ್ಭಗಳಲ್ಲಿ ದುಃಖಕ್ಕೀಡಾಗಿರುವವರು ಅನ್ಯರ ಸಮಾಧಾನದ ಮಾತುಗಳನ್ನು ಬಯಸುತ್ತಾರೆ. ಕಾರಣ ತಮ್ಮನ್ನು ತಾವು ಆ ದುಃಖದಿಂದ ಹೊರಗೆಳೆದುಕೊಳ್ಳಲು, ಆಗ ನಮ್ಮ ಮಾತು ’ನಿಮ್ಮ ಕೈಯಲ್ಲಿ ಎಲ್ಲವೂ ಸಾಧ್ಯವಿದೆ’ ಎಂಬುದರ ನೇರಕ್ಕೆ ಇರಬೇಕು.
’ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಸೊಸೆ ಕಡೆ’ ಎಂಬ ಗಾದೆಯಿಂದ ನಮ್ಮ ಮಾತು ಯಾವಾಗಲೂ ಹೊರತಾಗಿಯೇ ಇರಬೇಕು. ನಮ್ಮನ್ನು ಕುರಿತು ವ್ಯಂಗ್ಯ ಮಾಡುವವರೆದುರು ನಾವು ಅವರಂತೆಯೇ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನನ್ನ ಪ್ರಕಾರ ಅವರ ವ್ಯಂಗ್ಯಕ್ಕೆ ನಾವು ಪ್ರತ್ಯುತ್ತರವನ್ನು ಸಾಧನೆಯ ಮೂಲಕ ನೀಡಿದರೇ ಸೂಕ್ತ.
ಮಾತೆಂಬುದು ಯಾವಾಗಲೂ ಕೂಡ ಹೀಯಾಳಿಕೆಯ ಗುಂಪಿಗೇ ಸೆರದೇ ಇರುವುದು ಅತೀ ಸೂಕ್ತ ಎಂದರೆ ಪ್ರಾಯಶಃ ತಪ್ಪಾಗಲಿಕ್ಕಿಲ್ಲ. ಮಾತೆನ್ನುವುದು ಸ್ಫೂರ್ತಿದಾಯಕವಾಗಿದ್ದರೇ, ಬಹುಶಃ ಅದರಲ್ಲಿ ತಪ್ಪನ್ನು ಹುಡುಕಲು ಯಾರಿಂದಲೂ ಸಾಧ್ಯವಿಲ್ಲ. ಅಕಸ್ಮಾತಾಗಿ ಹುಡುಕಿದರೂ ಅವರಂತಹ ಶತಮೂರ್ಖರು ಇನ್ಯಾರಿರಲೂ ಸಾಧ್ಯವಿಲ್ಲ. ಕೆಲವರಿಗೆ ದುಃಖ ಜಾಸ್ತಿಯಾದಾಗಲೂ ಮಾತು ಬರಲ್ಲ. ಸಂತೋಷ ಹೆಚ್ಚಾದಾಗಲೂ ಮಾತು ಬರಲ್ಲ. ಅಂತಹವರು ಹೆಚ್ಚಿನಾಂಶ ಮುಕ್ಕಾಲು ಭಾಗದಷ್ಟು ಮಾತಿನ ಮಹತ್ವವನ್ನು ತಿಳಿದಿರುತ್ತಾರೆ.
ಅಂದಹಾಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಧರ್ಮ. ನಂತರದಲ್ಲಿ ಮನಸ್ಸಿನಲ್ಲಿರುವುದನ್ನು ಹೇಳಬೇಕಾದವರಿಗೇ ಒಮ್ಮೆಲೆ ಹೇಳಿಬಿಟ್ಟರೇ ಕೆಲವರಿಗೆ ಸಮಾಧಾನವೆನಿಸುತ್ತದೆ. ಆದರೆ ಅದು ಕೇಳುಗರಿಗೆ ಧನಾತ್ಮಕವಾಗಿ ತೆಗೆದುಕೊಳ್ಳಲು ಸಾಧ್ಯವಾ ಎಂಬುದನ್ನು ಕೂಡ ಒಮ್ಮೆ ಯೋಚಿಸಿನೋಡಿ. ಬಹುಶಃ ಅದು ನಿಮಗೆ ಇನ್ನೂ ಹೆಚ್ಚಿನ ಸಮಾಧಾನವನ್ನೇ ತಂದೊಡ್ಡಬಹುದು.
ಹಿರಿಯರೊಡನಿರುವಾಗ ನಯ-ವಿನಯದ ಮಾತುಗಳು ಬಹು ಸೂಕ್ತ. ಹಾಗಂತ ಬೇರೆ ಸಮಯದಲ್ಲಿ ಅಥವಾ ಕಿರಿಯರೊಡನಿರುವಾಗ ಬೇಕಾಬಿಟ್ಟಿಯಾಗಿ ಆಡುವ ಮಾತುಗಳು, ಸಂಪಾದಿಸಿರುವಂತಹ ಅಷ್ಟೋ ಇಷ್ಟೋ ಪುಣ್ಯವನ್ನು ಕೂಡ ದೋಚಿಕೊಳ್ಳುತ್ತದೆ. ಹಾ! ಇದು ನಿಮ್ಮ ಮಾತಿಗಿರುವ ಶಕ್ತಿಯೇ ಸರಿ! ಹೀಗೆ ಮಾತಿನ ಬಗ್ಗೆ ಹೇಳುತ್ತಾ ಬಹಳಷ್ಟು ಹೇಳಬಹುದು. ಓದುಗರೇ ದಯವಿಟ್ಟು ಒಂದೆರಡು ದಿನಗಳು ಮಾತುಗಳನ್ನು ಬಹು ತಾಳ್ಮೆಯಿಂದ ಯೋಚಿಸಿ ಅದಕ್ಕೊಂದು ತೂಕ ಕೊಟ್ಟು ಮಾತನಾಡಿ ನೋಡಿ, ಮಾತಿನ ಮಹತ್ವ ತನ್ನಿಂತಾನೇ ನಿಮಗೆ ಅರ್ಥವಾಗುತ್ತಾ ಹೋಗುತ್ತದೆ.
ಧನ್ಯವಾದಗಳು
Get in Touch With Us info@kalpa.news Whatsapp: 9481252093
Discussion about this post