ಕಲ್ಪ ಮೀಡಿಯಾ ಹೌಸ್
ವಿಧಿಶಾ(ಮಧ್ಯಪ್ರದೇಶ): ಬಾವಿಯಲ್ಲಿ ಬಿದ್ದಿದ್ದ ಬಾಲಕಿಯ ರಕ್ಷಣಾ ಕಾರ್ಯಾಚರಣೆ ನೋಡುತ್ತಿದ್ದವರಲ್ಲಿ ಸುಮಾರು 40 ಮಂದಿ ಅದೇ ಬಾವಿಯೊಳಗೆ ಬಿದ್ದಿದ್ದು, ಇದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿನ ವಿಧಿಶಾ ಪ್ರದೇಶದಲ್ಲಿ ಬಾಲಕಿಯೊಬ್ಬಳು ಬಾವಿಯೊಳಕ್ಕೆ ಬಿದ್ದಿದ್ದಳು. ಈಕೆಯನ್ನು ರಕ್ಷಿಸಲು ಅಹೋರಾತ್ರಿ ಕಾರ್ಯಾಚರಣೆ ನಡೆಯುತ್ತಿತ್ತು. ಇದನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ವೇಳೆ ಬಾವಿಯ ಕಟ್ಟೆಯ ಮೇಲೆ ಜನರ ಹೆಚ್ಚಾಗಿ ನೆರೆದಿದ್ದು, ಇದರ ಭಾರ ಅಧಿಕವಾದ ಕಾರಣ ಅದು ಕುಸಿದಿದೆ. ಈ ವೇಳೆ 40ಕ್ಕೂ ಅಧಿಕ ಮಂದಿ ಬಾವಿಯೊಳಕ್ಕೆ ಬಿದ್ದಿದ್ದಾರೆ.
ತತಕ್ಷಣವೇ ಎನ್’ಡಿಆರ್’ಎಫ್ ಯೋಧರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿ ಮಣ್ಣು ಕುಸಿತ ಪದೇ ಪದೇ ಸಂಭವಿಸುತ್ತಿದೆ. ಎಷ್ಟು ಮಂದಿ ಅಸುನೀಗಿದ್ದಾರೆ ಎಂದು ಕಾರ್ಯಾಚರಣೆ ಮುಗಿಯುವವರೆಗೆ ಹೇಳುವುದು ಕಷ್ಟ ಎಂದು ವಿದಿಶಾ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮಧ್ಯ ಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಕೈಲಾಶ್ ಸಾರಂಗ್ ತಿಳಿಸಿದ್ದಾರೆ, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಬಾಲಕಿ ಇನ್ನೂ ಬಾವಿಯೊಳಗಿದ್ದು ಬಾವಿಯ ಗೋಡೆ ಕುಸಿದಾಗ ಆಕೆಗೂ ಗಾಯವಾಗಿತ್ತೇ ಎಂದು ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪರಿಹಾರ:
ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post