ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ನೆನಪಿಸುವಂತೆ, ಮತ್ತೊಂದು ಕ್ರಾಂತಿಯ ಕಿಚ್ಚು ಹಚ್ಚಿ ಹುಚ್ಚೆದ್ದು ಕುಣಿದು ಗುರಿ ಸಾಧಿಸಲು ಪ್ರೇರೇಪಿಸಿದ್ದ ಆ ಎರಡು ಘೋಷಣೆಗಳು ಅವು.
ಕಟ್ಟುವೆವು ಕಟ್ಟುವೆವು, ಮಂದಿರವಲ್ಲೇ ಕಟ್ಟುವೆವು
ಜೈ… ಶ್ರೀರಾಮ್…, ಜೈ ಜೈ… ಶ್ರೀರಾಮ್
ಅದು1990 ಅಕ್ಟೋಬರ್ ತಿಂಗಳು. ರಾಜಕೀಯ ಏರುಪೇರುಗಳ ಮದ್ಯೆ ಲಾಲಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆ ಕೈಗೊಂಡು ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ್ದ ಸಮಯ. ಭಾರತೀಯರ ಎದೆಯಾಳದಲ್ಲಿ ನೆಲೆಯೂರಿದ್ದ ಆರಾಧ್ಯ ದೈವ ಶ್ರೀ ರಾಮನಿಗಾಗಿ ಮಂದಿರ ನಿರ್ಮಾಣ ಆಗಲೇಬೇಕೆಂಬ ಒಕ್ಕೊರಲ ಧ್ವನಿ ಮೊಳಗಿದ ಸಮಯ. ಹಲವಾರು ಕ್ರಾಂತಿಗಳ ಕುರಿತು ಪಠ್ಯದಲ್ಲಿ ಮಾತ್ರ ಓದಿದ್ದ ನನಗೆ ಕ್ರಾಂತಿಯೆಂದರೆ ಹೇಗಿರುತ್ತದೆ ಎಂದು ಭಾಸವಾಗಿತ್ತು. ಸೋಮನಾಥದಿಂದ ಪ್ರಾರಂಭಗೊಂಡು ರಾಷ್ಟ್ರದ ಸುಮಾರು ಹತ್ತು ಸಾವಿರ ಕಿಲೋಮೀಟರುಗಳು ಕ್ರಮಿಸಿ ಅಕ್ಟೋಬರ್ 30ರಂದು ಅಯೋಧ್ಯೆಯಲ್ಲಿ ಕೊನೆಗೊಂಡು ರಾಷ್ಟ್ರದ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಗೆ ಕಾರಣವಾದ ರಥಯಾತ್ರೆಯು ರಾಮ ಮಂದಿರ ನಿರ್ಮಾಣಕ್ಕೆ ಚಳವಳಿಯ ರೂಪ ಕೊಟ್ಟಿತ್ತು. ಲಾಲ ಕೃಷ್ಣ ಅಡ್ವಾಣಿಯವರ ಕರೆಗೆ ಇಡೀ ದೇಶಕ್ಕೆ ದೇಶವೇ ರಾಮನ ಮಂದಿರಕ್ಕಾಗಿ ಟೊಂಕ ಕಟ್ಟಿ ಅಣಿಯಾಗಿತ್ತು. ಎಲ್ಲಿ ನೋಡಿದರಲ್ಲಿ ರಾಮ ಮಂದಿರದ್ದೇ ಮಾತುಗಳು, ಟಿವಿ ಮಾಧ್ಯಮಗಳಲ್ಲಿ ಚರ್ಚೆಗಳು, ವೃತ್ತಪತ್ರಿಕೆಗಳಲ್ಲಿ ಅದೇ ಸುದ್ದಿಗಳು ಅಲ್ಲಲ್ಲಿ ಸಭೆಗಳು. ರಾಮಮಂದಿರ ವಿಷಯವು ಭಾರತೀಯರ ಭಾವನಾತ್ಮಕತೆಯ ಪರಾಕಾಷ್ಠೆಯ ವಿಷಯವಾಗಿ ಉತ್ತುಂಗ ತಲುಪಿತ್ತು. ಈ ಮದ್ಯೆ ಶಿವಮೊಗ್ಗೆಯಿಂದ ಕರಸೇವೆಗಾಗಿ ಅಯೋಧ್ಯೆಗೆ ತೆರಳುವ ತಂಡದ ಸಿದ್ದತೆಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕರ್ನಾಟಕ ಸಂಘದಲ್ಲಿ ಕರೆದ ಸಭೆಗೆ ಕುತೂಹಲಕ್ಕಾಗಿ ತಾಯಿಯೊಡನೆ ನಾನೂ ತೆರಳಿದ್ದೆ. ಮಂದಿರ ಕಟ್ಟಿಯೇ ಬಿಟ್ಟೆವೆಂಬ ಉತ್ಸಾಹ ಉದ್ವೇಗಗಳ ಸೃಷ್ಟಿಗೆ ಕಾರಣವಾಗಿದ್ದ ಸಭೆಯಲ್ಲಿ ಸುಮಾರು ನಲವತ್ತು ಜನರ ತಂಡದ ಘೋಷಣೆ ಆಯಿತು. ಎಂತವರೂ ಕರಸೇವೆಗೆ ಹೋಗಲು ಪ್ರೇರೇಪಿಸುವ ವಾತಾವರಣ ಸೃಷ್ಟಿಗೆ ಕಾರಣವಾದ ಆ ಸಭೆಯು ನನ್ನಲ್ಲಿಯೂ ಕರಸೇವೆಗೆ ತೆರಳುವ ಆಕಾಂಕ್ಷೆ ಮೊಳಕೆಯೊಡೆಯುವಂತೆ ಮಾಡಿತ್ತು.
ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಿದ್ದರಿದ್ದರೆ ಮಾತ್ರ ಪಾಲ್ಗೊಳ್ಳಬಹುದು ಎಂಬ ಆಯೋಜಕರ ಖಡಕ್ ಸೂಚನೆ, ಆ ಶ್ರೀರಾಮನ ಧ್ಯಾನದಲ್ಲಿ ಮಗ್ನವಾಗಿದ್ದ ನನ್ನ ಮನಸ್ಸನ್ನು ಭಾವೋದ್ವೇಗಕ್ಕೆ ಒಳಪಡಿಸಿ ಯಾವುದೇ ತ್ಯಾಗಕ್ಕೂ ಸಿದ್ದವಾಗಲು ಪ್ರೇರೇಪಿಸಿತ್ತು. ತಾಯಿಯೆಡೆ ಒಮ್ಮೆ ತಿರುಗಿ ನೋಡಿದ್ದಷ್ಟೇ. ಕರಸೇವೆಯಲ್ಲಿ ಕುಟುಂಬದ ಪಾಲೂ ಇರಲಿ ಎಂಬಂತೆ ಯೋಚಿಸುತ್ತಿದ್ದ ತಾಯಿ ತನ್ನ ಸಮ್ಮತಿಯನ್ನು ಕಣ್ಸನ್ನೆಯಲ್ಲೇ ಸೂಚಿಸಿದರು. ಉದ್ವೇಗಕ್ಕೊಳಗಾಗಿ ಬಾಯಿಯಿಂದ ಮಾತುಗಳು ಹೊರಡದೇ ನಾನೂ ಬರುವೆ ಎಂದು ಕೈ ಎತ್ತಿದೆ. ಪಟ್ಟಿಯಲ್ಲಿ ಅಂತಿಮ ಹೆಸರು ನನ್ನದಾಗಿತ್ತು. ಸಿದ್ದತೆಯ ಭಾಗವಾಗಿ ತಿಂಗಳಿಗಾಗುವಷ್ಟು ತಿಂಡಿ ಪದಾರ್ಥಗಳೊಂದಿಗೆ ನಾಲ್ಕು ನೂರು ರೂಪಾಯಿಗಳನ್ನು ಹೊಂದಿಸಿಕೊಟ್ಟರು ಅಮ್ಮ. ಆದರೆ ಮೊನ್ನೆ ಅಯೋಧ್ಯೆಯ ತೀರ್ಪು ಬಂದ ಸಂತಸ ಹಂಚಿಕೊಳ್ಳಲು ಬಂದಾಗ ಅಮ್ಮ ಹೇಳಿದ ಮುನ್ನೂರು ರೂಪಾಯಿಯ ಸತ್ಯ ಕಥೆಯು ಆ ರಾಮನ ಮೇಲಿನ ಅವರ ಭಕ್ತಿಯನ್ನು ಅನಾವರಣಗೊಳಿಸಿತ್ತು.
ಮನೆಯಲ್ಲಿ ಒಂದು ಬಿಡಿಗಾಸು ಇಲ್ಲದಿದ್ದ ಆ ಸಮಯದಲ್ಲಿ ಇದ್ದ ಒಂದು ಬೆಳ್ಳಿಯ ತಂಬಿಗೆಯನ್ನು ಅಡವಿಟ್ಟು ಮುನ್ನೂರು ರೂಪಾಯಿ ಹಾಗೂ ಅಕ್ಕಪಕ್ಕದವರಲ್ಲಿ ಹೊಂದಿಸಿ ಒಟ್ಟು ನಾಲ್ಕು ನೂರು ರೂಪಾಯಿಗಳ ವ್ಯವಸ್ಥೆ ಮಾಡಿದ್ದ ನೆನಪಿನ ಬುತ್ತಿಯನ್ನು ಬಿಚ್ಚಿದಾಗ ರಾಮನಿಗಾಗಿ ಇಂತಹ ಕೋಟ್ಯಂತರ ತಾಯಂದಿರ ಪೂಜಾಫಲವೇ ನವೆಂಬರ್ ಒಂಭತ್ತರ ಐತಿಹಾಸಿಕ ತೀರ್ಪು ಹಾಗೂ ಆಗಸ್ಟ್ 5ರ ಶಿಲಾನ್ಯಾಸದ ಫಲ ಇರಬೇಕೆನಿಸಿತು.
ಕರಸೇವೆಗೆ ತೆರಳುವವರನ್ನು ಬಿಳ್ಕೊಡಲು ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದ ಜನಸಾಗರದ ಚಿತ್ರಣ ಇಂದಿಗೂ ಅಚ್ಚಳಿಯದೇ ಮನಸ್ಸಿನಲ್ಲುಳಿದಿದೆ. ಮನೆಯ ಸದಸ್ಯರನ್ನು ಯುದ್ದ ಭೂಮಿಗೆ ಕಳಿಸಿಕೊಡುತ್ತಿರುವಂತೆ ಭಾವುಕರಾಗಿ ಬಿಳ್ಕೊಟ್ಟಿದ್ದರು ಶಿವಮೊಗ್ಗ ಜನತೆ. ರೈಲು ಪ್ರಯಾಣ ಆರಂಭವಾದಮೇಲಷ್ಟೇ ತಿಳಿದದ್ದು ಮಾನ್ಯ ಬಿ.ಎಸ್. ಯಡಿಯೂರಪ್ಪರವರು (ಹಾಲಿ ಮುಖ್ಯಮಂತ್ರಿಗಳು), ಕೆ.ಎಸ್. ಈಶ್ವರಪ್ಪರವರು(ಹಾಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು), ಡಿ.ಹೆಚ್. ಶಂಕರಮೂರ್ತಿಯವರು(ಮಾಜಿ ಸಭಾಪತಿಗಳು), ಅಂದಿನ ನಗರಸಭಾಧ್ಯಕ್ಷರಾಗಿದ್ದ ಆರ್.ಕೆ. ಸಿದ್ದರಾಮಣ್ಣರಾದಿಯಾಗಿ ಅನೇಕ ಹಿರಿಯ ನಾಯಕರು ನಮ್ಮ ತಂಡದಲ್ಲಿ ಭಾಗಿಯಾಗಿದ್ದಾರೆಂದು. ಬೆಂಗಳೂರು ತಲುಪುವವರೆಗೆ ದಾರಿಯುದ್ದಕ್ಕೂ ಎಲ್ಲೆಡೆ ಕೇಸರಿ ಧ್ವಜಗಳ ಸ್ವಾಗತ, ಜೈ ಶ್ರೀರಾಮ್ ಘೋಷಣೆಗಳು ಅಯೋಧ್ಯೆ ತಲುಪಲು ವೇಗವರ್ಧಕದಂತೆ ಉತ್ತೇಜಿಸುತ್ತಿತ್ತು. ಬೆಂಗಳೂರು ರೈಲ್ವೇ ನಿಲ್ದಾಣ ಸೇರಿದ ಮೇಲೆ ಎಲ್ಲೆ ಮೀರಿದ ಉತ್ಸಾಹ ಎಲ್ಲರನ್ನೂ ಆವರಿಸುವಂತೆ ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಕರಸೇವಕರನ್ನು ಒಟ್ಟು ಮಾಡಿತ್ತು. ಕೇಸರಿಯಲ್ಲಿ ಮಿಂದ ಬೆಂಗಳೂರು ರೈಲು ನಿಲ್ದಾಣದ ಒಂದು ಮೂಲೆಯಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗಿದರೆ ಮತ್ತೊಂದು ಮೂಲೆಯಲ್ಲಿ ಜೈ ಜೈ ಶ್ರೀರಾಮ್ ಘೋಷಣೆದಿನಗಳುವ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿದ್ದೆವು.
ಪ್ರಯಾಣ ಉತ್ತರದೆಡೆ ಪ್ರಾರಂಭವಾಗುತ್ತಿದ್ದಂತೆ ಕರಸೇವಕರಿಂದ ತುಂಬಿ ತುಳುಕುತ್ತಿದ್ದ ರೈಲಿಗೆ ‘ಜೈಶ್ರೀರಾಮ್’ ಘೋಷಣೆಯೇ ಇಂಧನವಾಗಿತ್ತು, ಕರಸೇವಕರಿಗೂ ಆ ಘೋಷಣೆಯೇ ಇಂಧನವೆಂಬಂತೆ ಭಾಸವಾಗಿ ಪ್ರಯಾಣ ಅಯೋಧ್ಯಾವಾಸಿ ಶ್ರೀರಾಮನೆಡೆಗೆ ಸಾಗಿತ್ತು. ಯಾವ ನಿಲ್ದಾಣ ಬಂದರೂ ಜೈಶ್ರೀರಾಮ್ ಘೋಷಣೆ ಮೊಳಗುತ್ತಿತ್ತು. ಪ್ರತಿ ನಿಲ್ದಾಣಗಳಲ್ಲೂ ಕರಸೇವಕರಿಗೆ ನೀರು, ಪಾನಕ, ಮಜ್ಜಿಗೆಯ ಸೇವೆ ದೊರೆಯುತ್ತಿದ್ದುದು ಆ ಶ್ರೀರಾಮನಿಗೆ ಅವನ ಭಕ್ತರಿಂದ ಸಲ್ಲುವ ಪೂಜೆಯಾಗಿತ್ತು. ಮದ್ಯಪ್ರದೇಶದ ಕಾಟನಿ ನಿಲ್ದಾಣ ಮಾತ್ರ ಜೀವಮಾನದಲ್ಲಿ ಮರೆಯಲಾರದ ಅನುಭವ ನೀಡಿತ್ತು. ನಿಲ್ದಾಣಕ್ಕೆ ರೈಲು ತಲುಪುತ್ತಿದ್ದಂತೆ ಆರು ವರ್ಷದ ಬಾಲಕನಿಂದ ಅರವತ್ತು ವರ್ಷದ ವಯಸ್ಕರವರೆಗೆ ಮಾತೆಯರು ಮಹನೀಯರು, ಯುವಕ ಯುವತಿಯರು, ಮಕ್ಕಳಾದಿಯಾಗಿ ಎಲ್ಲರೂ ಕರಸೇವಕರ ಸೇವೆಗೆ ಅಣಿಯಾಗಿ ನೀರು, ಪಾನಕ, ಉಪಹಾರ ಇತ್ಯಾದಿ ಬಗೆ ಬಗೆಯ ಆಹಾರ ತಿನಿಸುಗಳನ್ನು ಪ್ರಸಾದ ರೂಪದಲ್ಲಿ ಪ್ರತಿ ಬೋಗಿಯ ಪ್ರತಿ ಪ್ರಯಾಣಿಕನಿಗೆ ತಲುಪಿಸುತ್ತ ಶ್ರೀರಾಮನತ್ತ ಹೊರಟ ರಾಮಭಕ್ತರನ್ನೇ ಶ್ರೀರಾಮರು ಎಂದು ಭಾವಿಸಿದಂತೆ ಸೇವೆಗೈದ ಅವಿಸ್ಮರಣೀಯ ಕ್ಷಣಗಳು ಮತ್ತೆ ಕಣ್ಣಮುಂದೆ ಬಂದು ರೋಮ ರೋಮಗಳು ನಿಲ್ಲುವಂತೆ ರೋಮಾಂಚನಗೊಂಡ ಅನುಭವವನ್ನು ಹಂಚಿಕೊಳ್ಳಲು ಪದಗಳು ದೊರೆಯದೇ ಮನದಲ್ಲೇ ಸಾಕಾರ ಮೂರ್ತಿಯ ನೆನೆದು ಸಾವಿರ ಸಾವಿರ ನಮನಗಳನ್ನು ಸಲ್ಲಿಸಿದೆ.
ಇಂತಹ ನೂರಾರು ಮರೆಯಲಾಗದ ಅನುಭವಗಳೊಂದಿಗೆ ಅಂತಿಮವಾಗಿ ಉತ್ತರಪ್ರದೇಶ ಪ್ರವೇಶಿಸಿದಾಗ ಊರಜನರ ಜೈ ಶ್ರೀರಾಮ್ ಘೋಷಣೆಯೊಂದಿಗೆ ದೊರೆತ ಅದ್ದೂರಿ ಸ್ವಾಗತ ನಮ್ಮನ್ನು ರೋಮಾಂಚನಗೊಳಿಸಿತ್ತು. ಕೇಸರಿಮಯ ಊರುಗಳು, ಕರಸೇವಕರ ಬಸ್ ಕಂಡೊಡನೆ ನಾಗರಿಕರ ಜೈ ಶ್ರೀರಾಮ್ ಘೋಷಣೆಗಳು ನಮ್ಮನ್ನು ಮಂತ್ರಮುಗ್ದರನ್ನಾಗಿಸಿತ್ತು. ಅಯೋಧ್ಯೆ ಸಮೀಪದ ಮಾರಕಾಪುರ ಎಂಬಲ್ಲಿ ಎಲ್ಲರನ್ನೂ ಬಂಧಿಸಿ ಜೈಲಾಗಿ ಪರಿವರ್ತಿತವಾಗಿದ್ದ ಬೃಹತ್ ಗೋದಾಮಿನಲ್ಲಿ ಇಂದಿನ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪರವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಮಾನ್ಯ ಶ್ರೀ ಕೆ.ಎಸ್ ಈಶ್ವರಪ್ಪರವರು ಹಾಗೂ ಮಾಜಿ ಸಭಾಪತಿಗಳಾದ ಮಾನ್ಯ ಶ್ರೀ ಡಿ.ಹೆಚ್. ಶಂಕರಮೂರ್ತಿಯವರಂಥ ರಾಜ್ಯ ನಾಯಕರುಕಳೊಂದಿಗೆ ಕಳೆದ ವಾರಕ್ಕೂ ಹೆಚ್ಚು ದಿನಗಳು ಎಂದಿಗೂ ಮರೆಯಲಾರದ ದಿನಗಳು ಎನ್ನಬಹುದು. ಈ ದಿನ ನಮ್ಮ ಆರಾಧ್ಯ ದೈವ ಪ್ರಭು ಶ್ರೀರಾಮನನ್ನು ಹೃದಯದಲ್ಲಿ ತುಂಬಿಕೊಳ್ಳುವ ಸುದಿನ. ಕನಸುಗಳೊಂದಿಗೆ ಗೈದ ಕರಸೇವೆಯು ಇಂದು ನನಸಾಗುತ್ತಿರುವುದರೊಂದಿಗೆ ಭಾರತೀಯರ ಸಂತಸಕ್ಕೆ ಪಾರವೇ ಇಲ್ಲ.
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
ಚಿತ್ರದಲ್ಲಿ ಕಾಣುವವರು
ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪರವರು, ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ
ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪರವರು, ಗ್ರಾಮೀಣಾಭಿವೃದ್ಧಿ ಸಚಿವರು, ಕರ್ನಾಟಕ ಸರ್ಕಾರ
ಮಾನ್ಯ ಶ್ರೀ ಡಿ.ಹೆಚ್.ಶಂಕರಮೂರ್ತಿರವರು, ಮಾಜಿ ಸಭಾಪತಿಗಳು, ಕರ್ನಾಟಕ ಸರ್ಕಾರ
ಮಾನ್ಯ ಶ್ರೀ ಆರ್.ಕೆ.ಸಿದ್ದರಾಮಣ್ಣರವರು, ಮಾಜಿ ನಗರಸಭಾ ಅಧ್ಯಕ್ಷರು, ಶಿವಮೊಗ್ಗ
ಮಾನ್ಯ ಶ್ರೀ ಬಿ. ಸತ್ಯನಾರಾಯಣರವರು, ಮಾಜಿ ನಗರಸಭಾ ಉಪಾಧ್ಯಕ್ಷರು.
ದಿ.ಶ್ರೀ ಮೈಲಾರಿಯವರು, ಆರ್.ಎಸ್.ಎಸ್ ಪ್ರಮುಖರು
ನಾಗರಾಜ ಶೆಟ್ಟರ್, ಉದ್ಯಮಿ ಮತ್ತಿತರರು
Get In Touch With Us info@kalpa.news Whatsapp: 9481252093
Discussion about this post