ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಸಂಸದೆ ಸುಮಲತಾ ಅಂಬರೀಶ್ MP Sumalatha Ambarish ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಇಂದು ಬಿಜೆಪಿಗೆ ತಮ್ಮ ಬೆಂಬಲವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೇರುವ ಬದಲು ನನ್ನ ಬೆಂಬಲ ಎಂದು ಘೋಷಿಸಿರುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಬಿಜೆಪಿ ಸೇರದೇ ಕೇವಲ ಬೆಂಬಲ ಘೋಷಣೆ ಯಾಕೆ ಎಂಬುದಕ್ಕೂ ಸಹ ಅವರು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸೇರ್ಪಡೆಗೆ ಕೆಲವು ತಾಂತ್ರಿಕ ತೊಂದರೆಗಳಿದ್ದು, ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆಯಾಗುವುದಿಲ್ಲ. ನಾನು ಪಕ್ಷೇತರ ಸದಸ್ಯೆ ಆಗಿದ್ದೇನೆ. ಪಕ್ಷೇತರ ಸದಸ್ಯರು ಜಯಗಳಿಸಿದ 6 ತಿಂಗಳ ಒಳಗಡೆ ಸೇರಿದರೆ ಮಾತ್ರ ಅದು ಮಾನ್ಯವಾಗುತ್ತದೆ. ಈ ಕಾನೂನು ಸಮಸ್ಯೆ ಇರುವ ಕಾರಣ ನಾನು ಈಗ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Also read: ತಾಯಿ ಚಾಮುಂಡೇಶ್ವರಿ ಮೇಲಾಣೆ, ಅಭಿಷೇಕ್’ಗೆ ಟಿಕೇಟ್ ಕೇಳಲ್ಲ: ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ
ಮೋದಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದು, ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಅಂಬರೀಶ್ ಹೆಸರಿಗೆ ಕಳಂಕ ತರುವ ಕೆಲಸ ನಾನು ಮಾಡುವುದಿಲ್ಲ. ಈ ಜನ್ಮದಲ್ಲಿ ನಾನೆಂದೂ ಕಳಂಕ ತರುವ ಕೆಲಸ ಮಾಡುವುದಿಲ್ಲ. ನಾನು ರಾಜಕಾರಣ ಬಿಡುತ್ತೇನೆ ಹೊರತು ಸ್ವಾಭಿಮಾನ ಬಿಡಲ್ಲ. ಪ್ರಾಣ ಬಿಟ್ಟರು ಕೂಡ ನಾನು ಮಂಡ್ಯ ಬಿಡುವುದಿಲ್ಲ ಎಂದು ಘೋಷಿಸಿದರು.
ಸಂಸದೆಯಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ ನನ್ನನ್ನು ಹೆಣ್ಣೆಂದು ಬಿಡಿ, ಸಂಸದೆ ಎಂದು ಕೂಡ ಗೌರವ ತೋರಲಿಲ್ಲ, ಚುಚ್ಚುತ್ತಾ ಹೋದರು, ಏನೂ ಕೆಲಸ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡಿದರು. ನಾನು ಸಂಸದೆಯಾಗಿ ಏನೂ ಮಾಡಿಲ್ಲ ಎಂದು ರಾಜಕೀಯವಾಗಿ ಹೇಳಬಹುದು, ಆದರೆ ನಿಜಾಂಶ ಬೇರೆ ಇದೆ, ನಾನು ಸಂಸದೆಯಾಗದಿದ್ದಿದ್ದರೆ ಮೈಶುಗರ್ ಫ್ಯಾಕ್ಟರಿ ಪುನರಾರಂಭವಾಗುತ್ತಿರಲಿಲ್ಲ. ಮಂಡ್ಯ ಸಕ್ಕರೆ ಕಾರ್ಖಾನೆ ಇಂದು ಕೆಲಸ ಮಾಡುತ್ತಿರಲಿಲ್ಲ, ಅಕ್ರಮ ಗಣಿಗಾರಿಕೆ ನಿಲ್ಲುತ್ತಿರಲಿಲ್ಲ ಎಂದರು.
ಮಂಡ್ಯ ಜನ ಅಂಬರೀಶ್ ಅವರಿಗೆ ಪ್ರೀತಿ ಕೊಟ್ಟರು. ಅವರು ಹೋಗುವಾಗ ಮಹಾರಾಜನ ರೀತಿ ಕಳಿಸಿದಿರಿ. ಈ ಪ್ರೀತಿಗಾಗಿ ನಾನು ಚುನಾವಣೆಗೆ ನಿಂತೆ. ಮಂಡ್ಯ ಜನ ನನ್ನ ಪರ ನಿಂತರು. ಚಿತ್ರರಂಗ, ಅಂಬರೀಶ್ ಅಭಿಮಾನಿಗಳು, ನನ್ನ ಜನ ಬೆಂಬಲಕ್ಕೆ ನಿಂತರು. ನಾನು ಯಾರು ಅಂಬರೀಶ್ ಯಾರು ಎಂದು ಇಂಡಿಯಾಗೆ ಹಲವು ವರ್ಷದಿಂದ ಗೊತ್ತು. ಜನ ದುಡ್ಡು ಕೊಟ್ಟು ನಮ್ಮ ಸಿನಿಮಾ ನೋಡಿದ್ದಾರೆ. ಈಗ ಬೇರೆ ದಾರಿ ತುಳಿಯುವ ಅವಶ್ಯಕತೆ ಇಲ್ಲ. ಯಾವುದು ಅನಿವಾರ್ಯ ಅಲ್ಲ ಯಾವುದು ಶಾಶ್ವತ ಅಲ್ಲ ಎಂದರು.
ಅಂಬರೀಶ್ ಅಭಿಮಾನಿಗಳು, ಮಂಡ್ಯ ಜನರಿಗಾಗಿ ಹೋರಾಟ ಮಾಡಿದೆ. ನನಗೆ ಇದ್ಯಾವುದು ಬೇಡ ಎಂದಿದ್ದರೆ ನನಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ನಮ್ಮ ಬ್ಯಾನರ್, ಹೋರ್ಡಿಂಗ್ ಚಿಕ್ಕ ವಯಸ್ಸಿನಿಂದ ಹಾಕುತ್ತಿದ್ದಾರೆ. ನಾನ್ಯಾರು ಅಂಬರೀಶ್ ಯಾರು 40 ವರ್ಷದಿಂದ ಗೊತ್ತಿದೆ. ನನಗೆ ಯಾವದನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ರು. ಅಂಬರೀಶ್ ಅಣ್ಣನ ದಶಕಗಳ ಜನಸೇವೆ ಮುಂದುವರೆಸಬೇಕು ಎಂದು ನನಗೆ ಜನ ಬೆಂಬಲಿಸಿದರು. ಚುನಾವಣೆಯಲ್ಲಿ ಮಾತ್ರ ನನಗೆ ಟಾರ್ಗೆಟ್ ಮಾಡಿದರು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post