ಭದ್ರಾವತಿ: ತಾಪಂ ಸಭಾಂಗಣದಲ್ಲಿ ಆಶಾ ಶ್ರೀಧರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೊಟ್ರಪ್ಪ ರವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಕಾರ್ಯನಿರ್ವಾಹಕ ಅಧಿಕಾರಿ ತಮ್ಮಣ್ಣಗೌಡ ತಾಲೂಕಿನ ಡಿ.ಬಿ.ಹಳ್ಳಿ ಗ್ರಾಮದ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಭೆಗೆ ಮಾಹಿತಿ ನೀಡುವಂತೆ ಸೂಚಿಸಿದಾಗ ತಬ್ಬಿಬ್ಬಾದ ಅಧಿಕಾರಿ ಕೊಟ್ರಪ್ಪ ರವರನ್ನು ಸದಸ್ಯ ಧರ್ಮೇಗೌಡ (ಕುಮ್ರಿ ಚಂದ್ರಣ್ಣ) ಸಭೆಗೆ ಆಗಮಿಸುವ ಮುನ್ನ ತಯಾರಿ ಮಾಡಿಕೊಂಡು ಬರದೆ ಸಭೆಯಲ್ಲಿ ನಡಾವಳಿಗಳನ್ನು ಓದಿ ತಿಳಿಸುವುದಾದರೆ ಸಭೆಗೆ ಏಕೆ ಬರುತ್ತೀರಿ ಎಂದು ಸಭೆಯ ಆರಂಭಕ್ಕೂ ಮುನ್ನ ಕಿಡಿ ಕಾರಿದಾಗ ದನಿ ಗೂಡಿಸಿದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪೇಶ್ ರಾವ್ ಹಾಗು ಮಂಜುನಾಥ್ ಅಧಿಕಾರಿಗಳ ಮೇಲೆ ಹರಿಹಾಯ್ದರು.
ಕುಡಿಯುವ ನೀರು ಸರಬರಾಜು ಮಾಡುವ ಕೆರೆಗಳಲ್ಲಿ ಆಳೆತ್ತರ ಗಿಡಗಂಟಿಗಳು ಬೆಳದು ಕೆರೆಗಳನ್ನು ಅಶುದ್ದ ಗೊಳಿಸಿವೆ. ಈ ಕೆರೆಗಳಿಂದ ಸರಬರಾಜಾಗುವ ನೀರು ಸಾರ್ವಜನಿಕರ ಸೇವಿಸುವುದರಿಂದ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುತ್ತಿದೆ. ಸಭೆಯಲ್ಲಿ ಅಧಿಕಾರಿಗಳು ಶುದ್ದ ಕುಡಿಯುವ ನೀರು ಒದಗಿಸುತ್ತಿರುವುದಾಗಿ ಹೇಳುತ್ತಾರೆ. ಕೆರೆಯ ಸ್ವಚ್ಚತೆ ಇಲ್ಲದಾಗ ನೀರು ಎಲ್ಲಿ ಸ್ವಚ್ಚವಾಗಿರುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಸಭೆಯಲ್ಲಿ ಒತ್ತಾಯಿಸಿ, ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ಕೊಡಬೇಕಾಗಿರುವುದು ಜನಪ್ರತಿನಿಧಿಗಳ ಹಾಗು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆರೋಗ್ಯ ಇಲಾಖೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೊಂದಿಗೆ ಕೈ ಜೋಡಿಸುವ ಮೂಲಕ ಜನರ ಆರೋಗ್ಯ ಕಾಪಾಡಲು ಮುಂದಾಗಬೇಕು ಎಂದು ಸದಸ್ಯ ಧರ್ಮೇಗೌಡ ಸಭೆಯಲ್ಲಿ ತಿಳಿಸಿದರು.
ಧ್ವನಿ ಗೂಡಿಸಿದ ಸದಸ್ಯ ಪ್ರೇಮ್ ಕುಮಾರ್ ಬಾರಂದೂರು ಗ್ರಾಮದಲ್ಲಿಯೂ ಶುದ್ದ ಕುಡಿಯುವ ನೀರಿನ ಘಟಕವಿಲ್ಲದೆ ಹೊಳೆಯಿಂದ ಬರುತ್ತಿರುವ ನೀರನ್ನು ಕುಡಿಯಲು ಬಳಸಲಾಗುತ್ತಿದೆ. ಕುಡಿಯುವ ನೀರನ್ನು ಶುದ್ದಿಕರಿಸಿ ಸರಬರಾಜು ಮಾಡುವಂತೆ ಸಭೆಗೆ ಎಚ್ಚರಿಸಿದಾಗ, ಸಮಾಜಾಯಿಸಿ ನೀಡಿದ ತಾಪಂ ಇಒ ತಮ್ಮಣ್ಣಗೌಡ ಕುಡಿಯುವ ನೀರಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ಹಾಗು ಕುಡಿಯುವ ನೀರು ಸರಬರಾಜು ಇಲಾಖೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಿಕ್ಷಣ ಇಲಾಖೆವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿರುವ ಬೈಸಿಕಲ್ಗಳನ್ನು ಕಳೆದ ಭಾರಿ ಪರೀಕ್ಷೆ ಮುಗಿದರು ನೀಡಿರಲಿಲ್ಲ. ಅವುಗಳ ಮಾಹಿತಿಯನ್ನು ಶಿಕ್ಷಣ ಇಲಾಖೆ ಸಭೆಗೆ ತಿಳಿಸುವಂತೆ ಸದಸ್ಯ ಧರ್ಮೆಗೌಡ ಒತ್ತಾಯಿಸಿದಾಗ ಬಿಇಒ ಎಂ.ಸಿ.ಆನಂದ್ ಕಳೆದ ಬಾರಿ ಎಲ್ಲಾ ಶಾಲೆಗಳಿಗೆ ನಿಗದಿತ ಅವಧಿಯಲ್ಲಿ ಸೈಕಲ್ ವಿತರಣೆ ಮಾಡಲಾಗಿತ್ತು. ತಾಂತ್ರಿಕ ತೊಂದರೆಯಿಂದ ಕೆಲ ಶಾಲೆಗಳಿಗೆ ತಡವಾಗಿ ಏಪ್ರಿಲ್ ತಿಂಗಳಲ್ಲಿ ನೀಡಲಾಯಿತು ಎಂದು ಸಮಜಾಯಿಸಿ ನೀಡಿದರು.
ತಾಪಂ ಕಛೇರಿಯಲ್ಲಿ ಖಾಲಿ ಸ್ಥಾನಗಳನ್ನು ತುಂಬದಿರುವುದರಿಂದ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚಿನ ಹೊರೆಯಾಗಿದೆ. ಇರುವ ಸಿಬ್ಬಂದಿಗಳಿಗೆ ಕೆಲಸದ ಅರಿವಿಲ್ಲದಂತಾಗಿ ಸಮಸ್ಯೆಗಳ ಮಾಹಿತಿ ಕೇಳಿದಾಗ ಕೆಲಸ ಹೇಳಿದರೆ ನಾವೇ ಮಾಡಬೇಕಾ ಎನ್ನುತ್ತಾರೆಂದು ಸದಸ್ಯ ಕೆ.ಮಂಜುನಾಥ್ ಇಓ ರವನ್ನು ಕೇಳಿದಾಗ ಸಮಸ್ಯೆಗಳ ಕುರಿತು ಸರಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಸದಸ್ಯ ದಿನೇಶ್ ಮಾತನಾಡಿ, ಸೈದರ ಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ತಿಂಗಳಿಂದ ಬೆಳಿಗ್ಗೆ 10 ಕ್ಕೆ ವಿದ್ಯುತ್ ನೀಡುತ್ತಿದ್ದಾರೆ. ಶಾಲೆಗಳು ಆರಂಭವಾಗಿರುವುದರಿಂದ ಮಕ್ಕಳಿಗೆ ಬೆಳಗಿನ ಆಹಾರ ತಯಾರಿಸಲು ಅನಾನುಕೂಲವಾಗಿದೆ. “ದೋಸೆ ಮಾಡಿ ಚಟ್ನಿ ರುಬ್ಬಲು ಪರ್ಯಾಯವಾಗಿರುವ ಮನೆಗಳನ್ನು ಹುಡುಕುವಂತಾಗಿದೆ”. ಸಮಯ ಬದಲಿಸಿ ಬೆಳಿಗ್ಗೆ 6 ಗಂಟೆಯಿಂದ ವಿದ್ಯುತ್ ನೀಡುವುದರಿಂದ ಅನುಕೂಲವಾಗಲಿದೆ ಎಂದಾಗ, ಹೊಳೆಹೊನ್ನೂರು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ ನಿರಂತರ ವಿದ್ಯುತ್ ಸರಬರಾಜು ಮಾಡುವ ಮೂಲಕ ಸಮಸ್ಯೆ ಸರಿಪಡಿಸುವುದಾಗಿ ಹೇಳಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ನೂತನವಾಗಿ ಟ್ರಾನ್ಸ್ಫರ್ಮರ್ ಅವಶ್ಯಕತೆ ಇದ್ದು ವ್ಯವಸ್ಥೆ ಮಾಡಿಕೊಳ್ಳುವಂತೆ ಮೆಸ್ಕಾಂ ಇಂಜಿನಿಯರ್ ಚಂದ್ರಪ್ಪ ರವರಿಗೆ ಇಓ ತಮ್ಮಣ್ಣಗೌಡ ಆದೇಶಿಸಿದರು.
ಅರಬಿಳಚಿ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇವುಗಳನ್ನು ಸರಿಪಡಿಸುವಂತೆ ಹಲವಾರು ಬಾರಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು ಸಹ ಕ್ರಮಕ್ಕೆ ಮುಂದಾಗಿರುವುದಿಲ್ಲ ಎಂದು ಸದಸ್ಯ ಅಣ್ಣಾಮಲೈ ಅಧಿಕಾರಿಗಳ ಮೇಲೆ ಹರಿಹಾಯ್ದಾಗ ಮೆಸ್ಕಾಂ ಇಂಜಿನಿಯರ್ ಲಿಖಿತ ದೂರು ನೀಡುವಂತೆ ಸದಸ್ಯರಿಗೆ ತಿಳಿಸಿದರು.
ಸದಸ್ಯ ದಿನೇಶ್ ಮಾತನಾಡಿ, ಅರಶಿನಘಟ್ಟ ಗ್ರಾಮದ ರಸ್ತೆ ಯೂಟರ್ನ್ ಮಾದರಿಯಲ್ಲಿದ್ದು ಈ ರಸ್ತೆಯಲ್ಲಿ ಏನಾದರು ಅನಾಹುತವಾದರೆ ಅಧಿಕಾರಿಗಳೆ ಹೊಣೆ. ಸಭೆಯ ಠರಾವು ಪುಸ್ತಕದಲ್ಲಿ ದಾಖಲಿಸುವಂತೆ ಒತ್ತಾಯಿಸಿದಾಗ, ಹಲವಾರು ಗ್ರಾಮ ವ್ಯಾಪ್ತಿಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಅಪಾಯಕ್ಕು ಮುನ್ನ ಅವುಗಳನ್ನು ಬದಲಿಸುವಂತೆ ತಾಪಂ ಅಧ್ಯಕ್ಷೆ ಆಶಾ ಶ್ರೀಧರ್ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಕಾಮಗಾರಿಗಳನ್ನು ಮಳೆಗಾಲಕ್ಕು ಮುನ್ನ ಮುಗಿಸಬೇಕು. ಹಲವಾರು ಭಾಗಗಳಲ್ಲಿ ರಸ್ತೆ, ಚರಂಡಿ ಕಾಮಗಾರಿಗಳು ಅಪೂರ್ಣಗೊಂಡು ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ಬದಿಯ ಮಣ್ಣು ಸರಿಯಾದ ರೀತಿಯಲ್ಲಿ ಹಾಕದೆ ಇರುವುದರಿಂದ ಸಮಸ್ಯೆಗಳು ಎದುರಾಗಿವೆ ಕೂಡಲೆ ಸಮಸ್ಯೆಗಳಿಗೆ ಸ್ಪಂಧಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ, ಆರೋಗ್ಯ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. ತಾಪಂ ಉಪಾಧ್ಯಕ್ಷೆ ಸರೋಜಮ್ಮ ಹಾಜ್ಯಾನಾಯ್ಕ ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post