ನವದೆಹಲಿ: 370 ಹಾಗೂ 35ಎ ವಿಧಿಯನ್ನು ರದ್ದು ಮಾಡುವ ಮೂಲಕ ಸರ್ದಾರ್ ವಲ್ಲಭಾಬಾಯ್ ಪಟೇಲ್, ಡಾ.ಬಿ.ಆರ್. ಅಂಬೇಡ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಜೀ ಕನಸನ್ನು ನಾವು ನನಸು ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಮೂಲಕ ಇದೇ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರ, ಲಡಾಕ್ ಸೇರಿದಂತೆ ಇಡಿಯ ದೇಶವನ್ನು ನಾನು ಸಂಭ್ರಮದಿಂದ ಅಭಿನಂದಿಸುತ್ತೇನೆ ಎಂದಿದ್ದಾರೆ.
ನಾವು ಒಂದು ದೇಶವಾಗಿ, ಒಂದು ಕುಟುಂಬವಾಗಿ ಇಂತಹ ಒಂದು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದೇವೆ. ಜಮ್ಮು ಕಾಶ್ಮೀರದ ನಮ್ಮ ಅಕ್ಕ ತಂಗಿಯರು, ಅಣ್ಣ ತಮ್ಮಂದಿರು ಕಳೆದುಕೊಂಡಿದ್ದ ಹಕ್ಕುಗಳನ್ನು ನಾವು ಪುರ್ನಸ್ಥಾಪಿಸಿದ್ದೇವೆ. ಈ ನಿರ್ಧಾರದ ಮೂಲಕ ಕಣಿವೆ ರಾಜ್ಯ ಅಭಿವೃದ್ಧಿಗೆ ನಾವು ನಾಂದಿ ಹಾಡಿದ್ದೇವೆ ಎಂದರು.
ಈವರೆಗೂ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಯಾರೊಬ್ಬರೂ ಚರ್ಚೆ ಮಾಡಲಿಲ್ಲ, ಅದನ್ನು ಪರಿಹಾರ ಮಾಡುವ ಕುರಿತಾಗಿ ಗಂಭೀರ ಪ್ರಯತ್ನಗಳನ್ನು ಮಾಡಲೇ ಇಲ್ಲ. ರದ್ದಾದ ವಿಧಿ ಹೇಗೆ ಕಣಿವೆ ರಾಜ್ಯಕ್ಕೆ ಮಾರಕವಾಗಿತ್ತು ಎಂಬ ಕುರಿತಾಗಿ ಹಿಂದಿನ ಸರ್ಕಾರಗಳು ಚಿಂತಿಸಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಹಿಂದಿನ ವ್ಯವಸ್ಥೆಯಂತೆ ಬದಲಾವಣೆ ಮಾಡುವ ಮುನ್ನ ರಾಷ್ಟ್ರಪತಿ ಆಡಳಿತದ ಅಡಿಯಲ್ಲಿ ಅಲ್ಲಿನ ಸಂಪೂರ್ಣ ವ್ಯವಸ್ಥೆ ಕೇಂದ್ರದ ಪರಿಧಿಗೆ ಬಂದಿತ್ತು. ಈಗ 370ನೆಯ ವಿಧಿಯನ್ನು ರದ್ದುಗೊಳಿಸುವ ಮೂಲಕ ಅಭಿವೃದ್ಧಿಯ ದೃಷ್ಠಿಯಿಂದ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿ, ನೇರವಾಗಿ ಕೇಂದ್ರದ ಆಡಳಿತಕ್ಕೆ ತಂದಿದ್ದೇವೆ. ಈ ಮೂಲಕ ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಪರ್ವಕ್ಕೆ ನಾಂದಿ ಹಾಡಿದ್ದೇವೆ ಎಂದಿದ್ದಾರೆ.
ಪಾಕಿಸ್ಥಾನ ಮೂಲಕ ಈ ವಿಧಿಯನ್ನೊಂದು ಅಸ್ತ್ರವನ್ನಾಗಿ ಬಳಸಲಾಗುತ್ತಿತ್ತು. ಮಾತ್ರವಲ್ಲದೆ ಇದರಿಂದಾಗಿ ಈ ಏಳು ದಶಕಗಳಲ್ಲಿ ಸರಿಸುಮಾರು 42 ಸಾವಿರ ನಿರ್ದೋಷಿಗಳು ತಮ್ಮ ಪ್ರಾಣತ್ಯಾಗ ಮಾಡಬೇಕಾದ ದುರ್ದೈವ ಉಂಟಾಗಿತ್ತು ಎಂದು ಖೇದ ವ್ಯಕ್ತಪಡಿಸಿದ್ದಾರೆ.
ನಾವು ರೂಪಿಸುವ ಕಾನೂನುಗಳ ಫಲ ಜಮ್ಮು ಕಾಶ್ಮೀರದ ನಾಗರಿಕರಿಗೆ ಲಭ್ಯವಾಗುತ್ತಿರಲಿಲ್ಲ. ದೇಶದೆಲ್ಲೆಡೆ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ ಸೌಲಭ್ಯ ಜಮ್ಮು ಕಾಶ್ಮೀರದ ಮಕ್ಕಳಿಗೆ ಸಿಗುತ್ತಿರಲಿಲ್ಲ. ಮಹಿಳೆಯರಿಗೆ ದೇಶದೆಲ್ಲೆಡೆ ಅನ್ವಯವಾಗುವ ಕಾನೂನು ಇಲ್ಲಿನ ಮಹಿಳೆಯರ ಪಾಲಿಗೆ ಗಗನಕುಸುಮವಾಗಿತ್ತು ಎಂದ ಪ್ರಧಾನಿ, ಅದು ಕಾರ್ಮಿಕ ಕಾನೂನಾಗಿರಬಹುದು, ಸಫಾಯಿ ಕರ್ಮಚಾರಿಗಳಿಗೆ ಸಿಗುವ ಸೌಲಭ್ಯವಾಗಿರಬಹುದು ಇವೆಲ್ಲದರಿಂದಲೂ ಇದುವರೆಗೆ ಜಮ್ಮು ಕಾಶ್ಮೀರದ ನಾಗರಿಕರು ವಂಚಿತರಾಗಿದ್ದರು ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ತನ್ನ ಉದ್ಯೋಗಿಗಳಿಗೆ ನೀಡುವ ಯಾವುದೇ ಸರಕಾರಿ ವೇತನ ಸೌಲಭ್ಯಗಳಿಂದಲೂ ಈ ಭಾಗದ ಸರಕಾರಿ ಉದ್ಯೋಗಿಗಳು ವಂಚಿತರಾಗಿದ್ದರು. ಇನ್ನು ಮುಂದೆ ಜಮ್ಮು ಕಾಶ್ಮೀರದಲ್ಲಿ ಸೇನಾ ನೇಮಕಾತಿ ರ್ಯಾಲಿಗಳನ್ನು ಆಯೋಜಿಸಲಾಗುವುದು. ಕೇಂದ್ರದಿಂದ ಒದಗಿಸಲಾಗುವ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳನ್ನು ಕಣಿವೆ ರಾಜ್ಯದ ವಿದ್ಯಾರ್ಥಿಗಳಿಗೂ ಉಪಯೋಗವಾಗುವಂತೆ ವಿಸ್ತರಿಸಲಾಗುವುದು ಎಂದರು.
ತಮಿಳು, ತೆಲುಗು, ಹಿಂದಿ, ಕನ್ನಡ ಸೇರಿದಂತೆ ಅಲ್ಲಿನ ಚಿತ್ರರಂಗಗಳು ವಿಶ್ವದ ಗಮನ ಸೆಳೆದಿವೆ. ಅದೇ ರೀತಿಯಲ್ಲೇ ಜಮ್ಮು ಕಾಶ್ಮೀರ ಚಿತ್ರರಂಗವೂ ಸಹ ಉದಯಿಸಬೇಕಿದೆ ಎಂದಿದ್ದಾರೆ.
ಜಮ್ಮು ಕಾಶ್ಮೀರ ಹಾಗೂ ಲಡಾಕ್’ನ ಸಮಸ್ಯೆಗಳು ಕೇವಲ ಅವರದ್ದು ಮಾತ್ರವಲ್ಲ, ನಮ್ಮದೂ ಸಹ. ಅವರ ಜವಾಬ್ದಾರಿಯನ್ನು ನಾವು ತೆಗೆದುಕೊಂಡಿದ್ದು, ಮುಂದಿನ ಅಭಿವೃದ್ಧಿ ಹಾಗೂ ಅಲ್ಲಿನ ಜನಗಳಿಗೆ ಸಂತೋಷದ ದಿನಗಳನ್ನು ತರುವುದು ನಮ್ಮ ಬಾಧ್ಯತೆ ಎಂದಿದ್ದಾರೆ.
ಅತ್ಯಾಶ್ಚರ್ಯ ವಿಚಾರವೆಂದರೆ, ದಶಕಗಳ ಕಾಲ ಲೋಕಸಭೆಗೆ ಮತದಾನ ಮಾಡುವ ಅವಕಾಶವನ್ನೇ ಕಣಿವೆ ರಾಜ್ಯದ ಮಂದಿ ಕಳೆದುಕೊಂಡಿದ್ದರು. 1947ರ ಸ್ವತಂತ್ರಾ ನಂತರದ ಭಾರತಕ್ಕೆ ಸೇರ್ಪಡೆಯಾದ ಜನರಿಗೂ ಸಹ ಈ ವಿಧಿ ನಿರಂತರ ಅನ್ಯಾಯವನ್ನು ಮಾಡುತ್ತಲೇ ಇತ್ತು. ಇದನ್ನು ನಾವು ಈಗ ಸರಿಪಡಿಸಿದ್ದೇವೆ ಎಂದರು.
Discussion about this post