ತಾಯಿ ಆದವಳು ತನ್ನ ಮಕ್ಕಳನ್ನು ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸುತ್ತಾಳೆ. ಆದರೆ ಮಕ್ಕಳು ಅವಳ ವೃದ್ಯಾಪ್ಯದಲ್ಲಿ ಆಸರೆಯಾಗಿರದೆ ಕಡೆಗೆಣಿಸುತ್ತಾರೆ. ತಾಯಿ ಸರ್ವಸ್ವವನೆಲ್ಲಾ ಮಕ್ಕಳಿಗಾಗಿಗೇ ಮೀಸಲಿಡುತ್ತಾಳೆ, ಆದರೆ ಮಕ್ಕಳು ಆ ತಾಯಿಯನ್ನು ವೃದ್ಧಾಶ್ರಮಗಳಿಗೆ ಅಟ್ಟುತ್ತಾರೆ. ಈ ಕರುಣಾ ಜನಕ ಕಥೆಯನ್ನು ಒಮ್ಮೆ ಓದಿ.. ನಿಮಗೆ ನಿಮ್ಮ ತಾಯಿಯ ನೆನಪಾಗಬಹುದು… ಓಡಿ ಹೋಗಿ ಆಕೆಯ ಮಡಿಲಲ್ಲಿ ಮಲಗಿ ಅಳುತ್ತೀರಿ.
ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳು. ಪ್ರತಿ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು. ಹೀಗೆ ಕಾಲಚಕ್ರ ಉರುಳುತಿತ್ತು.
ಮಗು ಬೆಳೆದು ಪ್ರೌಢಾವಸ್ಥೆ ತಲುಪಿತು. ಮಗು ತಾಯಿಯ ಬಳಿ ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು? ಕೇಳಿದಾಗ, ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಆ ತಾಯಿಗೆ ತನ್ನ ಮಗ ತಾನು ಪಟ್ಟ ಕಷ್ಟ ಅವನು ಪಡದೇ, ಜೀವನದಲ್ಲಿ ಒಬ್ಬ ಶ್ರೀಮಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು. ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು.
ಮಗು ಹಠ ಮಾಡಿತೆಂದು ಅವರಿವರ ಬಳಿ ಸಾಲ ಮಾಡಿ ಸೈಕಲ್ ಕೊಡಿಸಿದ್ದೂ ಆಯ್ತು. ಹೀಗಿರುವಾಗ ಒಂದು ದಿನ ತಾಯಿ ತನ್ನ ಮಗನ ಶಾಲೆಗೆ ತೆರಳಿ ಮಗುವಿನ ವಿದ್ಯಾಭ್ಯಾಸದ ಕುರಿತು ಶಿಕ್ಷಕರ ಜೊತೆ ಮಾತಾಡಿ ಬಂದಳು. ಸಂಜೆ ಮನೆಗೆ ಬಂದ ಮಗ ಜೋರಾಗಿ ಕಿರುಚಿ ರಂಪಾಟ ಮಾಡಿದ. ಆ ತಾಯಿ ಮಗನಲ್ಲಿ ಯಾಕೆ ಏನಾಯಿತು ಅಂತ ಕೇಳುವಾಗ, ಅಮ್ಮಾ ನೀನಿನ್ನು ನನ್ನ ಶಾಲೆಗೆ ಬರಕೂಡದು. ನನ್ನ ಸಹಪಾಠಿ ವಿದ್ಯಾರ್ಥಿಗಳೆಲ್ಲಾ ನಿನ್ನ ಒಕ್ಕಣ್ಣು ನೋಡಿ ತಮಾಷೆ ಮಾಡುತ್ತಾರೆ. ಇಂದು ನಿನ್ನಿಂದಾಗಿ ನನಗೆ ತುಂಬಾ ಅವಮಾನವಾಯಿತು ಎಂದುಬಿಟ್ಟ.
ಈ ವಿಚಾರ ತಾಯಿಗೆ ಮನಸ್ಸೊಳಗೆ ಅತೀವ ನೋವಾದರೂ ತನ್ನ ಮಗುವಿಗೆ ಮುಜುಗರ ಆಗಬಾರದೆಂಬ ಕಾರಣಕ್ಕೆ ಇನ್ನು ಶಾಲೆಗೆ ಬರಲಾರೆ ಎಂದು ಸಮಾಧಾನಿಸಿದಳು.
ಮಗು ಬೆಳೆದು ಕಾಲೇಜು ಸೇರಿದ. ಈಗ ತನಗೆ ಬೈಕ್ ಬೇಕೆಂದು ಹಠ ಮಾಡತೊಡಗಿದ. ಕೈಯಲ್ಲಿ ನೈಯಾಪೈಸೆ ಇಲ್ಲದ ಆ ತಾಯಿ ತನ್ನ ಕತ್ತಿನಲ್ಲಿದ್ದ ಸರವನ್ನೂ ಮಾರಿ ಮಗನಿಗೊಂದು ಬೈಕ್ ತೆಗೆದು ಕೊಟ್ಟಳು. ಮಗ ಕಾಲೇಜು ಮುಗಿಸಿ ಒಂದು ಒಳ್ಳೆಯ ಕೆಲಸಕ್ಕೆ ಸೇರಿದ. ಒಳ್ಳೆಯ ಸಂಬಳ ಕೂಡ ಬರುತಿತ್ತು. ಇನ್ನು ತನ್ನ ಮಗನಿಗೆ ಮದುವೆ ಮಾಡಿಸಿ ತನ್ನ ಕರ್ತವ್ಯದಿಂದ ಮುಕ್ತಿ ಪಡೆಯಬೇಕೆಂದು ಕೊಂಡಳು.
ಅದೇ ರಾತ್ರಿ ಮನೆಗೆ ಬಂದ ಮಗನೊಡನೆ ಈ ವಿಚಾರ ಮಾತಾಡಿದಳು. ಆಗ ಮಗ ತಾನು ತನ್ನ ಕಂಪನಿಯಲ್ಲೇ ಕೆಲಸ ಮಾಡುವ ಯುವತಿಯೊಬ್ಬಳನ್ನು ಪ್ರೀತಿಸುವುದಾಗಿಯೂ ಅವಳನ್ನೇ ಮದುವೆಯಾಗುವುದಾಗಿಯೂ ಹೇಳಿಬಿಟ್ಟ.
ಸರಿ ವಯಸ್ಸಿಗೆ ಬಂದ ಮಗನಿಗೆ ಎದುರು ಮಾತಾಡಿ ಮನಸ್ಸು ನೋಯಿಸುವುದು ಬೇಡವೆಂದು ಅದಕ್ಕೂ ಒಪ್ಪಿಗೆ ನೀಡಿದಳು. ಮಗನ ಇಚ್ಛೆಯಂತೆ ಅದೇ ಹುಡುಗಿ ಜತೆ ಮದುವೆ ನಡೆಯಿತು.
ಮೊದ ಮೊದಲು ಸರಿಯಾಗೇ ಇದ್ದ ಸೊಸೆ ಸ್ವಲ್ಪದಿನ ಕಳೆದಂತೆ ಬೇರೆ ಮನೆ ಮಾಡುವಂತೆ ತನ್ನ ಗಂಡನನ್ನು ದಿನವೂ ಪೀಡಿಸುತ್ತಿದ್ದಳು. ಈಗಂತು ಕೈಯಲ್ಲೊಂದಷ್ಟು ಹಣವೂ ಇತ್ತು. ಪತ್ನಿಯ ಇಷ್ಟದಂತೆ ಹೊಸ ಮನೆ ಮಾಡಿದ್ದೂ ಆಯಿತು.
ಈಗೀಗ ಸೊಸೆಗೆ ತನ್ನ ಒಕ್ಕಣ್ಣ ಅತ್ತೆ ಗಂಡ ಹೆಂಡಿರ ನಡುವೆ ಇರುವುದು ಸರಿ ತೋರಲಿಲ್ಲ. ಮತ್ತೆ ತನ್ನ ಗಂಡನ ತಲೆಗೆ ಹುಳಬಿಟ್ಟಳು. ಒಂದು ದಿನ ಮಗ ನೆಪವೊಂದನ್ನು ಹೇಳಿ ತಾಯಿಯ ವಾಸ್ತವ್ಯವನ್ನ ಹಳೇ ಮನೆಗೆ ವರ್ಗಾಯಿಸಿಬಿಟ್ಟ. ಈಗಂತು ಆ ತಾಯಿ ಸಂಪೂರ್ಣ ಕುಸಿದೇ ಹೋದಳು. ಮಗನ ಬೇಕುಬೇಡವನ್ನೆಲ್ಲಾ ಪೂರೈಸುವ ಬರದಲ್ಲಿ ನಯಾ ಪೈಸೆಯೂ ಕೂಡಿಟ್ಟಿರಲಿಲ್ಲ.
ಮೊದಮೊದಲು ಪ್ರತಿವಾರವೂ ಬಂದು ಒಂದಷ್ಟು ಹಣ ನೀಡಿ ಹೋಗುತಿದ್ದವ ಈಗೀಗ ಬರವುದೂ ಅಪರೂಪವಾಗಿಬಿಟ್ಟಿತು. ಆ ತಾಯಿಗೆ ಒಂದು ಹೊತ್ತಿನ ಊಟಕ್ಕೂ ಮಗನ ಹಾದಿ ಕಾಯುವ ಸ್ಥಿತಿ ಬಂತು. ಒಂದು ದಿನ ನೇರವಾಗಿ ಮಗನ ಮನೆಗೆ ಬಂದ ತಾಯಿಗೆ ಸೊಸೆಯ ಚುಚ್ಚು ಮಾತು ಅಪಮಾನವೇ ಬಹುಮಾನವಾಗಿತ್ತು.
ಮನನೊಂದ ತಾಯಿ ಉಪವಾಸ ಸತ್ತರೂ ಚಿಂತೆಯಿಲ್ಲ ಮಗನ ಮನೆಗೆ ಮತ್ತೆಂದೂ ಕಾಲಿಡಲಾರೆ ಎಂದು ಮನಸ್ಸಿನಲ್ಲೇ ದೃಢ ಸಂಕಲ್ಪ ಮಾಡಿದಳು.
ನೇರವಾಗಿ ಮನಗೆ ಬಂದವಳೇ ವಿಪರೀತ ಜ್ವರದಿಂದ ಹಾಸಿಗೆ ಹಿಡಿದು ಬಿಟ್ಟಳು. ಮಗನಿಗೆ ಸೂಜಿಮೊನೆಯಷ್ಟು ನೋವಾಗಬಾರದೆಂದು ತನ್ನ ಹೃದಯದೊಳಗೆ ಕಾಪಾಡಿದ ತಾಯಿ ದಿನ ಕಳೆದಂತೆ ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿಗೆ ತಲುಪಿದಳು.
ಒಂದು ದಿನ ಆಫೀಸಿನಲ್ಲಿದ್ದ ಮಗನಿಗೆ ಪೋನ್ ಕರೆಯೊಂದು ಬಂತು ನಿನ್ನ ತಾಯಿ ಇಂದು ಮುಂಜಾನೆ ತೀರಿ ಹೋದರು. ಚಿತೆಗೆ ಬೆಂಕಿ ಇಡುವುದಕ್ಕಾದರೂ ಬಾ ಎಂದಷ್ಟೇ ಹೇಳಿ ಕರೆ ಕಟ್ ಆಯಿತು. ಸರಿ ಇದೂ ಆಗಲಿ ಮುಂದೆಂದೂ ಆ ಮುದುಕಿಯ ಕಿರಿಕಿರಿ ಇಲ್ಲವಲ್ಲಾ ಎಂದು ಎದ್ದು ನೇರವಾಗಿ ತಾಯಿಯ ಮನೆಗೆ ಹೋದ.
ಹೋಗಿ ತಾಯಿಯ ಶವ ನೋಡುತ್ತಾನೆ. ಇವಳೇನಾ ನನ್ನ ಹೆತ್ತ ತಾಯಿ ಎಂಬ ಸ್ಥಿತಿಗೆ ತಲುಪಿತ್ತು ಆ ತಾಯಿಯ ದೇಹ. ಶವದ ಕಣ್ಣಂಚಲ್ಲಿ ಇನ್ನೂ ನೀರಿತ್ತು. ಸರಿ ಶವ-ಸಂಸ್ಕಾರ ಮುಗಿಸಿ ಮನೆಗೆ ಹೊರಟು ನಿಂತ ಮಗನಿಗೆ ನೆರೆಮನೆಯಾತ ಒಂದು ಕಾಗದವನ್ನು ಕೈಗಿಟ್ಟು ಹೋದ. ಕಾಗದ ತೆಗೆದು ನೋಡಿದ ಮಗನಿಗೆ ನೂರು ಸಿಡಿಲು ಒಂದೇ ಕ್ಷಣ ಬಡಿದಂತ ಅನುಭವವಾಯಿತು.
ಆ ಕಾಗದದಲ್ಲಿ ಹೀಗೆ ಬರೆದಿತ್ತು.
“ಮಗನೇ ನಾನಿನ್ನು ಹೋಗುತ್ತೇನೆ. ಆದರೆ!! ನನ್ನ ಒಂದು ಕಣ್ಣು ಏನಾಯಿತು? ಎಂದು ಚಿಕ್ಕವನಿದ್ದಾಗ ನೀನು ಕೇಳುತ್ತಿದ್ದೆ. ಆದರೆ ಇನ್ನೂ ಚಿಕ್ಕ ಮಗುವಾಗಿದ್ದ ನಿನ್ನ ಮನಸ್ಸು ನೋಯಿಸಬಾರದೆಂದು ಏನೇನೋ ಸುಳ್ಳು ಹೇಳುತ್ತಿದ್ದೆ. ಇಂದು ನೀನೂ ಬೆಳೆದು ದೊಡ್ಡವನಾಗಿದ್ದೀಯ. ಸತ್ಯ ನಿನಗೂ ತಿಳಿಯಲಿ. ನೀನು ಚಿಕ್ಕವನಿರುವಾಗ, ಆಟವಾಡುವಾಗ ಕೋಲೊಂದು ತಾಗಿ ನಿನ್ನ ಕಣ್ಣು ಹೋಗಿತ್ತು. ನನಗೆ ಇನ್ನು ಆಗಬೇಕಿರುವುದಾದರೂ ಏನು ತನ್ನ ಮಗನ ಜೀವನ ಹಾಳಾಗಬಾರದೆಂದು ನನ್ನ ಒಂದು ಕಣ್ಣನ್ನು ನಿನಗೆ ನೀಡಿದ್ದೆ. ಇಂದು ನಿನಗೆ ಈ ಒಕ್ಕಣ್ಣ ತಾಯಿ ಬೇಡವಾದ್ಲು, ಪರವಾಗಿಲ್ಲ ಮಗು. ಆದರೆ ನನ್ನದೊಂದು ಪುಟ್ಟ ಕೋರಿಕೆಯಿದೆ. ನನ್ನ ಆ ಕಣ್ಣಿನಲ್ಲಿ ಎಂದಿಗೂ ನೀರು ಬರಬಾರದು.”
ಆಗ ಮಗನಿಗೆ ಅರಿಯದಂತೆ ಕಣ್ಣಲ್ಲಿ ಧಾರಾಕಾರವಾಗಿ ನೀರಿಳಿಯಿತು. ಧಗಧಗನೆ ಉರಿಯುವ ತಾಯಿಯ ಚಿತೆಯನ್ನೇ ನೋಡುತ್ತಾ ನಿಂತ ಮಗನಿಗೆ ತಾಯಿಯ ಕಾಲಕೆಳಗೆ ಬಿದ್ದು ಅಳಬೇಕೆನಿಸಿತು. ಆದರೆ ಕಾಲ ಮೀರಿತ್ತು. ಆ ಮಹಾದಾನಿ ತಾಯಿ ಈ ಭೂಮಿಯಿಂದ ಬಹುದೂರ ಸಾಗಿ ಗಗನದಲ್ಲಿ ಮಿನುಗುವ ತಾರೆಯಂತೆ ಹೊಳೆಯುತಿದ್ದಾಳೆ.
ಆತ್ಮೀಯ ಮಿತ್ರರೇ ತಾಯಿ ಎಂಬ ಎರಡು ಪದದಲ್ಲಿ ಅಸಾಧ್ಯವಾದ ತ್ಯಾಗವಿದೆ, ನೋವಿದೆ. ಮಕ್ಕಳ ಏಳಿಗಾಗಿ ಒಬ್ಬ ತಾಯಿ ಏನೆಲ್ಲಾ ತ್ಯಾಗ ಮಾಡಬಹುದೆಂದು ಒಂದು ಚಿಕ್ಕ ಕಥೆಯ ಮೂಲಕ ವಿವರಿಸುವುದು ಅಸಾಧ್ಯ. ಆಕೆಯ ತ್ಯಾಗದ ವರ್ಣನೆಗೆ ಪದಪುಂಜಗಳು ಸಾಲಲಾರವು. ತಾಯಿಯೆಂದರೆ ಅದು ದೇವರ ಪ್ರತಿರೂಪ ಅಲ್ಲವೇ..?
ಎಸ್.ಆರ್.ವರ್ಲ್ಡ್ ಹೇಳುವಂತೆ
ಹತ್ತು-ದೇವರಿಗಿಂತ
ಹೆತ್ತ-ತಾಯಿ ಶ್ರೇಷ್ಠ.
ಹೆತ್ತ-ತಾಯಿಯನ್ನು
ಸತ್ತ -ನಾಯಿಯಂತೆ ನಡೆಸಿಕೊಂಡು
ಎಲ್ಲಾ ಮುಗಿದ ಮೇಲೆ
ಅತ್ತು-ಬಾಯಿಬಡೆದುಕೊಂಡರೆ,
ಹತ್ತು-ದೇವತೆಗಳೂ ಕ್ಷಮಿಸಲಾರವು.
ಹೆತ್ತ ತಾಯಿ
ಸತ್ತು ಹೋದ ಮೇಲೆ
ಅತ್ತರೇನು?
ಅವಳು ಬದುಕಿದ್ದಾಗಲೇ ಬತ್ತದಿರಲಿ ಅವಳ ಮೇಲಿನ ನಿಮ್ಮ ಪ್ರೀತಿಯ ಭಾವನೆ. ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತಿ ಈ ಜಗದಗೆ ಕಾಣೋ……
ಹಡೆದ ತಾಯಿಯ ಕಳಕೊಂಡ ಮ್ಯಾಲೆ ಮತ್ತೆ ಸಿಗುವಳೇನೋ ತಮ್ಮಾ ಮರಳಿ ಬರುವಳೇನೋ….ತಮ್ಮಾ ಮರಳಿ ಬರುವಳೇನೋ. (ದುಡ್ಡು ಕೊಟ್ಟರೆ)
ಒಂಬತ್ತು ತಿಂಗಳ ಸಂಕಠ ನೀಡಿ ಹೊಟ್ಟ್ಯಾಗ ಬೆಳೆದಲ್ಲೋ..
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೊ ಕಷ್ಟ ಕೊಟ್ಟಿಯಲ್ಲೊ.. (ಒಂಬತ್ತು)
ಬರುವ ಕಷ್ಟಗಳ ನಂಬಿದ ತಾಯಿ ನಿನ್ನ ನಂಬಿತಲ್ಲೊ.. (ಬರುವ)
ತಾನೂ ಕೊರಗಿ ನಿನ್ನ ಕೋಣ ಬೆಳೆಸಿದಾಂಗ ಬೆಳೆಸಿಬಿಟ್ಟಳಲ್ಲೋ..
ಒಬ್ಬ ಮಗ ನೀ ಆಸರಾದಿಯಂತ ತಾಯಿ ತಿಳಿದಿತ್ಯಲ್ಲೊ ಜೀವ ಇಟ್ಟಿತ್ತು ನಿನ್ನ ಮ್ಯಲೋ.. (ದುಡ್ಡು ಕೊಟ್ಟರೆ)
ಕೂಲಿ ನಾಲಿ ಮಾಡಿ ಶಾಲಿಗ್ ಕಳಿಸಿದಳು ಜಾಣನಾಗಲೆಂತಾ
ಚಿನ್ನದಂಥ ಒಂದು ಹೆಣ್ಣು ನೋಡ್ಯಾಳೊ ನಿನ್ನ ಮದುವೆಗಂತಾ (ಕೂಲಿ ನಾಲಿ)
ಸಾಲ ಶೂಲ ಮಾಡಿ ಮದುವಿ ಮಾಡಿದಳು ಬಳ್ಳಿ ಹಬ್ಬಲಂತಾ (ಸಾಲ ಶೂಲ)
ಮೊಮ್ಮಕ್ಕಳನ್ನೂ ಎತ್ತಿ ಆಡಿಸುವ ಚಿಂತಿಯೊಳಗ ಇತ್ತಾ………
ಮುಪ್ಪಿನ ತಾಯಿ ಏನೇನೊ ಕನಸ ಕಟ್ಟಿಕೊಂಡು ಕುಂತಿತ್ತಾ, ಕನಸು ಕನಸಾಗೆ ಉಳಿತಾ..(ದುಡ್ಡು ಕೊಟ್ಟರೆ)
ಮಗಳಿಗಿಂತಾ ಹೆಚ್ಚಿನ ಪ್ರೀತಿಲಿ ಸೊಸಿನ ಕಂಡಳಲ್ಲಾ ಸೊಕ್ಕಿನ ಸೊಸಿಯು ತಾಯಿಯ ಹಾಂಗ ನೊಡಿಕೊಳ್ಳಲಿಲ್ಲಾ (ಮಗಳಿಗಿಂತಾ) ಸೋತ ಶರೀರಕ್ಕ ಸುಖವೆಂಬುದ ಈ ಸೊಸಿಯು ನೀಡಲಿಲ್ಲಾ….(ಸೋತ ಶರೀರಕ್ಕ) ಉಂಡು ಬಿಟ್ಟಿರುವ ಎಂಜಲ ಕೂಳ ತಾಯಿಗಾಕ್ಯಳಲ್ಲಾ ಮಗನ ಮೋಹಕ್ಕ ಅಳಸಿದ ಕೂಳ ತಾಯಿ ತಿಂದಳಲ್ಲಾ…ಅದನೂ ಯಾರಿಗೇಳಲಿಲ್ಲಾ..(ದುಡ್ಡು ಕೊಟ್ಟರೆ)
ಉಪವಾಸ ವನವಾಸ ಹಣ್ಣಾದ ಮುದುಕಿ ಎಷ್ಟಂತ ಇರುತಾಳೋ ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿಂತಾಳೋ.. (ಉಪವಾಸ)
ಇಷ್ಟೆ ಇದ್ದದ್ದು ಸೊಕ್ಕಿನ ಸೊಸಿಯು ದೊಡ್ಡದು ಮಾಡ್ಯಾಳು (ಇಷ್ಟೆ ಇದ್ದದ್ದು)
ಅವಮಾನ ನಮಗಂತ ತನ್ನ ಮನೆಯಿಂದ ಹೊರಗೆ ಹಾಕ್ಯಳು (ಅವಮಾನ)
ಮಗನಿಗೇಳಿದರ ನೋವು ಆ ಜೀವಕ್ಕ ಎಂದು ತಿಳಿದಾಳು ತಾಯಿ ನಿನ್ನಿಂದ ದೂರಾದ್ಲು..(ದುಡ್ಡು ಕೊಟ್ಟರೆ)
ಮಗ ಇದ್ದರೂ ಹಡೆದ ತಾಯಿ ಪರದೇಶಿಯಾಗಿಹಳು. ಅಲ್ಲಿ ಇಲ್ಲಿ ತಾ ಭಿಕ್ಷೆಯ ಬೇಡಿ ದಿನಗಳ ಕಳೆದಾಳು (ಮಗ ಇದ್ದರೂ) ಬಂದ ನೋವುಗಳ ಸಹಿಸುತ ಮಗನ ಚಿಂಥಿ ಮಾಡುತಾಳು (ಬಂದ) ಕಣ್ಣು ಕಾಣಲಿಲ್ಲಾ ಕಿವಿಯು ಕೇಳಲಿಲ್ಲಾ ಎಷ್ಟು ದಿನ ಇರುತಾಳು. ತನ್ನ ಮಗನಿಗ ಚೆನ್ನಾಗಿ ಇಡು ಅಂಥಾ ದೇವರ ಬೇಡ್ಯಾಳು… ತಾಯಿ ಬೀದ್ಯಾಗ ಸತ್ತಾಳು.. (ದುಡ್ಡು ಕೊಟ್ಟರೆ)
ಲೇಖನ/ಅಭಿಷೇಕ್ ನಾಯಕ್ ಮಲೆನಾಡು
ಭಾವಚಿತ್ರದಲ್ಲಿ ಇರುವವರು:
ಆನ್ಯಶೆಟ್ಟಿ-ಸುಚಿತ್ರಾ ಶೆಟ್ಟಿ
ಪಂಚಮಿ ಮಾರೂರು-ಪ್ರಥಮ್ ಮಾರೂರು-ದೀಪಾಶ್ರೀ
ಅಪೇಕ್ಷ-ಪ್ರತೀಕ್ಷಾ-ಉಷಾ
ಭಾರತಿ ಶೆಟ್ಟಿ-ಅತೀಷ್ ಶೆಟ್ಟಿ-ಆವಿಷ್ ಶೆಟ್ಟಿ
ರೇಷ್ಮಾ ಶೆಟ್ಟಿ-ಆಯುಷ್ ಶೆಟ್ಟಿ
ಸಾಗರಿಕ-ರಾಣಿ
Discussion about this post