ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಮಲೆನಾಡಿನ ಹೋಟೆಲ್’ಗಳ #Hotel ಮೇಲೂ ಸಹ ಬೀರಿದ್ದು, ಶಿವಮೊಗ್ಗ ಶೇ.90ರಷ್ಟು ಹೊಟೇಲ್’ಗಳು ನಾಳೆಯಿಂದ ಬಂದ್ ಆಗುವ ಸಾಧ್ಯತೆಯಿದೆ.
ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಶಂಕರನಾರಯಣ ಹೊಳ್ಳ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಗ್ಯಾಸ್ ಪೂರೈಕೆಯ ವ್ಯತ್ಯಯದ ಬಗ್ಗೆ ಇಂದು ಚರ್ಚೆ ನಡೆಸಲಾಯಿತು.
ಸಭೆಯ ನಂತರ ಮಾತನಾಡಿದ ಹೊಳ್ಳ ಅವರು, ಕಳೆದ ಎರಡು ದಿನಗಳಿಂದ ಗ್ಯಾಸ್ ಕೊರತೆ ವಿಪರೀತವಾಗಿದೆ. #GasAgency ಗ್ಯಾಸ್ ಏಜೆನ್ಸಿಗಳನ್ನು ವಿಚಾರಿಸಿದರೆ, ಈ ಮೊದಲು ಒಂದು ಲೋಡ್’ಗೆ ಬರುತ್ತಿದ್ದ 30 ಹೆಚ್ಚುವರಿ ಸಿಲಿಂಡರ್’ಗಳ ಬದಲಿಗೆ ಈಗ ಕೇವಲ 10 ಸಿಲಿಂಡರ್’ಗಳು ಮಾತ್ರ ಲಭ್ಯವಾಗುತ್ತಿವೆ ಎಂದಿದ್ದಾರೆ.
ಶಿವಮೊಗ್ಗದ ಶೇ. 90 ರಷ್ಟು ಹೋಟೆಲ್’ಗಳು ಅಡುಗೆಗಾಗಿ ಸಂಪೂರ್ಣವಾಗಿ ಗ್ಯಾಸ್ ಒಲೆಗಳನ್ನೇ ಅವಲಂಬಿಸಿವೆ. ಅನಿಲ ಲಭ್ಯವಾಗದ ಕಾರಣ ಈಗಾಗಲೇ ಹೋಟೆಲ್’ಗಳಲ್ಲಿ ಲಭ್ಯವಿರುವ ಮೆನುಗಳನ್ನು ಕಡಿತಗೊಳಿಸಲಾಗಿದೆ. ನಮಗೆ ವ್ಯವಹಾರವಿಲ್ಲದೆ ಕೆಲಸಗಾರರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಗ್ರಾಹಕರಿಗೆ ತೊಂದರೆಯಾಗಬಾರದೆಂಬ ಒಂದೇ ಕಾರಣಕ್ಕೆ ಇಷ್ಟು ದಿನ ಹೋಟೆಲ್ ನಡೆಸುತ್ತಿದ್ದೇವೆ. ಆದರೆ ಪರಿಸ್ಥಿತಿ ಮಿತಿ ಮೀರಿದೆ ಎಂದು ಅವರು ಅಳಲು ತೋಡಿಕೊಂಡರು.
ಈ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಂಘ ನಿರ್ಧರಿಸಿದೆ. ಹಾಸ್ಟೆಲ್ ಮತ್ತು ಪಿಜಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆಯೇ, ಆಸ್ಪತ್ರೆಯಿಂದ ಬರುವ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡುವ ಹೋಟೆಲ್’ಗಳಿಗೂ ತುರ್ತು ಅನಿಲ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಇಂದು ಸಂಜೆಯೊಳಗೆ ಗ್ಯಾಸ್ ಲಭ್ಯವಾಗದಿದ್ದರೆ, ನಾಳೆಯಿಂದ ಜಿಲ್ಲೆಯ ಬಹುತೇಕ ಹೋಟೆಲ್’ಗಳನ್ನು ಅನಿವಾರ್ಯವಾಗಿ ಬಂದ್ ಮಾಡುವುದಾಗಿ ಮಾಲೀಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















