ಕಲ್ಪ ಮೀಡಿಯ ಹೌಸ್ | ದಕ್ಷಿಣ ಕನ್ನಡ |
ಬಿ.ಸಿ. ರೋಡ್ನ (BC Road) ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಬಳಿ ಗುರುವಾರ ಸಂಜೆ ನಡೆದ ಭೀಕರ ಚಾಕು ಇರಿತ (Murder) ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಲಾವಣ್ಯ ಚಿಕಿತ್ಸೆ ಫಲಿಸದೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾವಣ್ಯಳನ್ನು ಅಟ್ಟಾಡಿಸಿ ಚಾಕುವಿನಿಂದ ಇರಿದ ಆರೋಪಿಯನ್ನು ಆಕೆಯ ಸಂಬಂಧಿ, ಕಕ್ಯಪದವು ಮೂಲದ ಚೇತನ್ ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಲಾವಣ್ಯ ಹಾಗೂ ಚೇತನ್ ಪರಸ್ಪರ ಸಂಬಂಧಿಕರಾಗಿದ್ದು, ಚೇತನ್ ಕಳೆದ ಕೆಲವು ಸಮಯದಿಂದ ಲಾವಣ್ಯಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಲಾವಣ್ಯ ಈತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡಿದ್ದ ಆರೋಪಿ, ಮುಂಚಿತವಾಗಿಯೇ ಕೃತ್ಯ ಎಸಗಲು ಸಂಚು ರೂಪಿಸಿದ್ದಾನೆ ಎಂದು ತಿಳಿದುಬಂದಿದೆ.
Also Read>> Indian Railway | ಬಾದಾಮಿ, ಬಂಟ್ವಾಳ ಸೇರಿ 4 ನವೀಕೃತ ನಿಲ್ದಾಣಗಳು ನಾಳೆ ಉದ್ಘಾಟನೆ
Murder | ಪ್ಲಾನ್ ಮಾಡಿ ಬಂದಿದ್ದ ಆರೋಪಿ
ಕೆಲಸ ಮುಗಿಸಿ ಮನೆಗೆ ತೆರಳಲು ಲಾವಣ್ಯ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ, ಬ್ಯಾಗ್ನಲ್ಲಿ ತಂದಿದ್ದ ಮಾರಕಾಸ್ತ್ರವನ್ನು ಹೊರತೆಗೆದ ಚೇತನ್ ದಾಳಿ ನಡೆಸಿದ್ದಾನೆ.
ಪ್ರಾಣಭಯದಿಂದ ಓಡಲು ಯತ್ನಿಸಿದ ಲಾವಣ್ಯಳನ್ನು ಬೆನ್ನಟ್ಟಿ ಚಾಕುವಿನಿಂದ ಇರಿದು ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಲಾವಣ್ಯಳನ್ನು ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








