ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ಕಲೆಗಳನ್ನು #IndianArt ನಿತ್ಯದ ತಪಸ್ಸಿನಂತೆ ಅಭ್ಯಾಸ ಮಾಡಬೇಕು. ಹಾಗಿದ್ದರೆ ಮಾತ್ರ ಅವು ಜೀವನಪೂರ್ಣ ಆನಂದ ನೀಡುತ್ತವೆ ಎಂದು ಖ್ಯಾತ ಮೃದಂಗ ವಿದ್ವಾನ್ ಎಚ್.ಎಸ್. ಸುಧೀಂದ್ರ ಹೇಳಿದರು.
ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್ ಹಾಗೂ ಭೋಪಾಲ್ನ ಸ್ವರಾಲಯ ಸಂಗೀತ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 6ನೇ ವರ್ಷದ ಸಂಗೀತ ಮಹೋತ್ಸವದಲ್ಲಿ ‘ನಾದಲಯ ಸಿದ್ದಾಂತ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
Also Read>> ತರಬೇತಿಯಲ್ಲಿದ್ದ ಲಘು ಹೆಲಿಕಾಪ್ಟರ್ ಪತನ | ಮೂವರು ಸಾವು | ಘಟನೆ ನಡೆದಿದ್ದು ಹೇಗೆ?
ಶಾಲಾ ಶಿಕ್ಷಣದೊಂದಿಗೆ ಕಲಾ ಚಟುವಟಿಕೆಗಳಲ್ಲೂ ಮಕ್ಕಳು ಭಾಗಿಯಾಗುವಂತೆ ಪಾಲಕರು ಗಮನಹರಿಸಬೇಕು. ಸೂಕ್ತ ಗುರುವಿನಲ್ಲಿ ನಿರಂತರ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಕನಿಷ್ಠ 10 ವರ್ಷವಾದರೂ ಗಾಯನ, ವಾದನ ಅಭ್ಯಾಸ ಮಾಡಿದ್ದೇ ಆದಲ್ಲಿ ಅದು ಕೊಡುವ ಆನಂದಕ್ಕೆ ಮಿತಿಗಳೇ ಇಲ್ಲ ಎಂದರು.
ಒಬ್ಬ ಕಲಾವಿದ ಯಾವುದೇ ಕ್ಷೇತ್ರದಲ್ಲಿ ವೃತ್ತಿ ಮಾಡುತ್ತಿದ್ದರೂ ಆತನಿಗೆ ಕಲೆ ನೀಡುವ ಆನಂದೇ ವಿಭಿನ್ನ. ಅದನ್ನು ಅನುಭವಿಸಿ ಸಂಭ್ರಮ ಪಟ್ಟವರಿಗೇ ಗೊತ್ತು ಎಂದು ಸುಧೀಂದ್ರ ಅನುಭವ ಹಂಚಿಕೊಂಡರು. ಸುಭದ್ರಮ್ಮ ಅವರು ತಮ್ಮ ಮೊಮ್ಮಗಳು ರಂಜಿನಿಯನ್ನು ನನ್ನ ಬಳಿ ಪಾಠಕ್ಕೆ ಕರೆದುಕೊಂಡು ಬರುತ್ತಿದ್ದ ಕಾಲದಿಂದಲೂ ನಾನು ಅವರನ್ನು ಬಲ್ಲೆ. ಮೊಮ್ಮಗಳು ಗಾಯನ, ಮೃದಂಗ ಕಲಿಯಬೇಕು ಎಂಬ ಉತ್ಕಟ ಬಯಕೆ ಅವರಲ್ಲಿತ್ತು. ಅವರು ಮಾಡಿದ ತ್ಯಾಗದ ಫಲವಾಗಿ ಇಂದು ನಮ್ಮೆದುರು ಒಬ್ಬ ವಿದುಷಿ ಕ್ರಿಯಾಶೀಲರಾಗಿದ್ದಾರೆ. ಅವರ ಸಂಸ್ಥೆಯಿಂದಲೇ ಪ್ರಶಸ್ತಿ ಸ್ವೀಕಾರ ಮಾಡಿರುವುದು ನನಗೆ ಹೆಮ್ಮೆ ಮೂಡಿಸಿದೆ ಎಂದು ಸುಧೀಂದ್ರ ಸಂತೋಷ ವ್ಯಕ್ತಪಡಿಸಿದರು.
ವಿದ್ವಾನ್ ಸುಧೀಂದ್ರ ಅವರಿಗೆ ( ಸರೋಜಾ- ಭೀಮ ಭಟ್ ಸಿದ್ಧಾಂತಿ ಸ್ಮರಣಾರ್ಥ) ‘ನಾದಲಯ ಸಿದ್ದಾಂತ’ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ವಿದ್ವಾನ್ ಎಸ್. ಶಂಕರ್ ಮಾತನಾಡಿ, ಕಲಾ ಲೋಕದಲ್ಲಿ ಇವರ ಬದ್ಧತೆ ಮಾದರಿಯಾಗಿದೆ ಎಂದರು.
ವಿಖ್ಯಾತ ಕಲಾವಿದ ಶ್ರೀಮುಷ್ಣಂ ರಾಜಾರಾಯರ ಬಳಿ ಗುರುಕುಲವಾಸ ಮಾಡಿ ಮೃದಂಗ ವಾದನದಲ್ಲಿ ಪರಿಪಕ್ವಗೊಂಡ ಸುಧೀಂದ್ರ, ಗೌರವಾದರಕ್ಕೆ ಅರ್ಹರಾಗಿದ್ದಾರೆ. ರಂಜಿನಿ ಸಿದ್ಧಾಂತಿ ಅವರು ಅಜ್ಜ- ಅಜ್ಜಿ ಹೆಸರಿನಲ್ಲಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಖ್ಯಾತ ಕೊಳಲು ವಿದ್ವಾಂಸ ಎಸ್.ಎ. ಶಶಿಧರ ಹಾಗೂ ವಿದ್ವಾನ್ ಡಾ. ಎನ್.ಜಿ. ರವಿ, ವಿದುಷಿ ರಂಜಿನಿ ಸಿದ್ಧಾಂತಿ ಇದ್ದರು. ನಂತರ ವಿದುಷಿ ಕಲಾವತಿ ಅವಧೂತರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.
ಇದಕ್ಕೂ ಮುನ್ನ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ- ಮೃದಂಗ ವಾದನ ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post