ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾಗವತವನ್ನು ಪ್ರೇಮದಿಂದ ನೋಡಿ, ಭಕ್ತಿಯಿಂದ ಗಮನಿಸಿ, ಭಾವಪೂರ್ಣವಾಗಿ ಜೀವನವನ್ನು ಅಳವಡಿಸಿಕೊಂಡಾಗ ಅನಂತ ಪುಣ್ಯ ಲಭ್ಯ ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.
ನಗರದ ಅಗ್ರಹಾರದ ಉತ್ತರಾದಿ ಮಠದಲ್ಲಿ ಅಧಿಕ ಶ್ರಾವಣ ದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ಮದ್ ಭಾಗವತ ಉಪನ್ಯಾಸ ದಲ್ಲಿ ಅವರು ಭಾನುವಾರ ಮಾತನಾಡಿದರು.
ದಾಸರು ನೂರಾರು ಕೃತಿ ಗಳಲ್ಲಿ ಕೃಷ್ಣ ನ ಬಾಲ ಲೀಲೆಗಳನ್ನು ವರ್ಣನೆ ಮಾಡಿದ್ದಾರೆ. ಶ್ರೀ ವಾದಿರಾಜ ತೀರ್ಥರು, ವ್ಯಾಸರಾಜರು ಮೊದಲಾದವರು ಅಸಂಖ್ಯ ಸ್ತುತಿ ಮಾಡಿದ್ದಾರೆ. ಹತ್ತು ಹಲವಾರು ಕವಿಗಳಿಗೆ ಕೃಷ್ಣನ ಲೀಲೆ ಕಾವ್ಯದ ಪ್ರಮುಖ ವಸ್ತು ವಾಗಿದೆ. ಹೀಗಿರುವಾಗ ನಿತ್ಯ ವೂ ಕೃಷ್ಣ ನ ಸ್ಮರಣೆ ಮಾಡಿದರೆ ಅನಂತ ಕೋಟಿ ಪುಣ್ಯ ಲಭಿಸುತ್ತದೆ ಎಂದು ಭಾಗವತ ಸಂದೇಶ ನೀಡಿದೆ ಎಂದರು.
ಕೃಷ್ಣ ಗೋಕುಲದಲ್ಲಿ ಸಾಮಾನ್ಯ ಗೋಪಾಲರೊಂದಿಗೆ ಹಸುಗಳನ್ನು ಪಾಲನೆ ಮಾಡಿದ. ಮನೆ ಮನೆಗಳಲ್ಲಿ ಹಾಲು, ಮೊಸರು ಕದ್ದ. ಅದನ್ನು ತನ್ನ ಜತೆಗಿದ್ದ ಬಾಲರಿಗೇ ಹಂಚಿದ. ಬೆಕ್ಕು, ಕೋತಿಗಳಿಗೂ ವಿತರಿಸಿದ. ಕಾಳಿಂಗನ ಮರ್ಧನ ಮಾಡಿದ. ಪೂತನಾ ಸಂಹಾರ ಮಾಡಿದ. ಗೋವರ್ಧನ ಪರ್ವತವನ್ನು ಎತ್ತಿ ಗೋಕುಲದ ಜನರನ್ನು, ಗೋ ಸಂಪತ್ತನ್ನು ಕಾಪಾಡಿದ. ಪ್ರತಿ ಹಂತಗಳಲ್ಲಿ ಕೃಷ್ಣ ಗೋಕುಲ ವಾಸಿಗಳ ಕ್ಷೇಮಕ್ಕಾಗಿಯೇ ಚಿಂತಿಸಿ ಕಾರ್ಯಪ್ರವೃತ್ತನಾದ. ನಾವೂ ನಮ್ಮ ಜೀವನದಲ್ಲಿ ಪರೋಪಕಾರಿ ಯಾಗಿ ಬದುಕಬೇಕು ಎಂಬುದನ್ನು ತಾನು ಮಾಡಿ, ಮಾದರಿಯಾದ ಎಂದರು.
ಭಾಗವತ ದಶಮ ಸ್ಕಂದವನ್ನು ಸೋದಾಹರಣವಾಗಿ ವಿವರಿಸಿದ ಅವರು, ವೃಂದಾವನದ ಸಕಲ ಜೀವರಾಶಿಗಳೂ ಕೃಷ್ಣ ನ ದರುಶನ, ಸಖ್ಯ, ಸಾಂಗತ್ಯ ಮತ್ತು ಸಲುಗೆಯನ್ನು ಸಂಪಾದಿಸಿ ಮೋಕ್ಷದ ಮಹಾ ಮಾರ್ಗವನ್ನು ಕಂಡುಕೊಂಡವು. ಅನೇಕ ಗೋಪಿಕೆಯರ ಅಹಂಕಾರಗಳನ್ನು ಆತ ದೂರ ಮಾಡಿದ. ಪ್ರತಿಯೊಬ್ಬರ ಮನೆ, ಮನಗಳಲ್ಲಿ ನೆಲಸಿ, ಭಕ್ತಿ ಗೆ ಸಮನಾದ ಫಲ ನೀಡಿದ. ನಾನು ಹೆಮ್ಮರ ಇದ್ದಂತೆ. ನೀವು ಮಾಡಿದ ಭಕ್ತಿಗೆ ತಕ್ಕನಾದ ಫಲ ನೀಡುವೆ ಎಂದು ತೋರಿಸಿಕೊಟ್ಟ ಎಂದು ಅನಿರುದ್ಧಾಚಾರ್ಯ ಹೇಳಿದರು.
Also read: ಸೈಬರ್, ಆರ್ಥಿಕ ವೈಟ್ ಕಾಲರ್ ಅಪರಾಧ ಹೆಚ್ಚಳ: ಡಿಜಿ-ಐಜಿಪಿ ಅಲೋಕ್ ಮೋಹನ್
ಅನಾಥರಾಗಬೇಡಿ:
ಯಾವ ಮನೆಯಲ್ಲಿ ದೇವರ ಕೋಣೆ ಇಲ್ಲವೋ ಅಂಥ ಮನೆ ಅನಾಥ ಮನೆಯಾಗುತ್ತದೆ. ಯಾರ ಮನದಲ್ಲಿ ದೇವರ ಸ್ಮರಣೆ ಇಲ್ಲವೋ ಅಂಥಾ ಜೀವವೂ ಅನಾಥ. ಹಾಗಾಗಿ ನಾವು ಸನಾಥರಾಗಬೇಕು ಎಂದರು.
ತಾಯಿಗೆ ಗೌರವಿಸಿ: ಗೋಕುಲದಲ್ಲಿ ತನ್ನನ್ನು ಸಾಕಿದ ಯಶೋಧೆಗೆ ಕೃಷ್ಣ ತನ್ನ ಬಾಯಲ್ಲಿ ಜಗವನ್ನು ತೋರಿದ. ಅವತಾರಕ್ಕೆ ಕಾರಣಳಾದ ದೇವಕಿ- ವಸುದೇವರಿಗೆ ಬಂಧನದಿಂದ ಮುಕ್ತಿ ಗೊಳಿಸಿದ. ಕೃಷ್ಣ ಬಂದ ಕಡೆಗೆಲ್ಲ ಬೆಳಕು ಬರುತ್ತಿತ್ತು. ದ್ವಾಪರದಲ್ಲಿ ಮಾತ್ರವೇ ಅಲ್ಲ, ಕಲಿಯುಗದಲ್ಲೂ ಸಕಲ ಜೀವಿಗಳ ಮನೆ- ಮನವನ್ನು ಬೆಳಗುವ ಮಹಾನುಭಾವ ಕೃಷ್ಣ ನು ತಾಯಿಗೆ ಗೌರವ ನೀಡುವ ಕ್ರಮ ಮತ್ತು ಕರ್ತವ್ಯ ತೋರಿಸಿಕೊಟ್ಟ. ಹಾಗಾಗಿ ಭಾಗವತ ಆತನನ್ನು ಕೊಂಡಾಡಿದೆ ಎಂದು ಅನಿರುದ್ಧಾಚಾರ್ಯರು ಉದಾಹರಣೆಗೆ ಮೂಲಕ ವಿವರಿಸಿದರು.
ಗಮನ ಸೆಳೆದ ಸತ್ಯಶ್ರೀ:
ಭಾಗವತ ದಶಮ ಸ್ಕಂದದಲ್ಲಿ ಕೃಷ್ಣನ ಬಾಲ ಲೀಲೆ ವರ್ಣಿಸುವ ಸಂದರ್ಭ ಪುಟಾಣಿ ಸತ್ಯಶ್ರೀ ಬಾಲಕೃಷ್ಣನ ವೇಶ ಭೂಷಣ ಧರಿಸಿ ಗಮನ ಸೆಳೆದಿದ್ದು ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post