ಕಲ್ಪ ಮೀಡಿಯಾ ಹೌಸ್ | ಮೈಸೂರು | ರಘುರಾಮ ಮೈಸೂರು |
ಜಗನ್ಮಾತೆ ಶ್ರೀ ಶಾರದಾಂಬೆಗೆ ಲಕ್ಷ ಮಲ್ಲಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶನಿವಾರ ಮೈಸೂರಿನ ಅಭಿನವ ಶಂಕರಾಲಯದ #AbhinavaShankaralaya ಶತಮಾನೋತ್ಸವ ಸಂಭ್ರಮದ ಸಂಭ್ರಮದ ತೆರೆ ಎಳೆಯಲಾಯಿತು.
ಕಳೆದ ಒಂದು ವಾರದಿಂದ ಐತಿಹಾಸಿಕ ದೇಗುಲದ ಆವರಣದಲ್ಲಿ ಮೂಡಿದ್ದ ಸಂಭ್ರಮಕ್ಕೆ ಸಾಕ್ಷಿಯಾದ ಶಾರದಾಂಬೆ, ಸತ್ಯನಾರಾಯಣ, ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳ ದೇಗುಲದಲ್ಲಿ ಶನಿವಾರ ಮಲ್ಲಿಯೆಯದ್ದೇ ಘಮಲು.
ಶಿಖರ ಕುಂಭಾಭಿಷೇಕ, ಕಳಸ ಪ್ರತಿಷ್ಠಾಪನೆ, ವಿವಿಧ ಹೋಮ, ಹವನ, ಆದುಕಾ ಪೂಜೆ, ಪಾರಾಯಣಗಳಿಗೆ ಪಂಡಿತರ ದಂಡೇ ವಾರದಿಂದ ಇಲ್ಲಿ ಬೀಡು ಬಿಟ್ಟಿತ್ತು. ಅವರೆಲ್ಲರಿಗೂ ಶನಿವಾರ ಧನ್ಯತಾ ಭಾವ. ನೂತನ ಶ್ರೀ ಸಚ್ಚಿದಾನಂದ ವಿಲಾಸ ಗುರುಭವನವಂತೂ ಸಂಸ್ಥಾನ ಪೂಜೆ, ಚಂದ್ರಮೌಳೇಶ್ವರನ ಆರಾಧನಾ ನೆಲೆಯಾಗಿ, ಗುರುಪೀಠಕ್ಕೆ ವೇದಿಕೆಯಾಗಿ ರಾರಾಜಿಸಿತು.
ಶನಿವಾರ ಮುಂಜಾನೆಯಿಂದ ವೇದ ಘೋಷದೊಂದಿಗೆ ಶಾರದಾಂಬೆಗೆ ವಿಶೇಷ ಅಭಿಷೇಕ, ಪೂಜೆ, ನೈವೇದ್ಯ ಸಮರ್ಪಣೆಯಾಯಿತು. ಶೃಂಗೇರಿಯ ನೂರರು ವೇದ ವಿದ್ವಾಂಸರು ಅಷ್ಟೋತ್ತರ, ಶ್ರೀ ಸೂಕ್ತ ಮತ್ತಿತರ ಮಂತ್ರೋಚ್ಛಾರಣೆ ಮೂಲಕ ಶಕ್ತಿ ಶಾರದೆಗೆ ನಮಿಸಿದ್ದು, ವಾರಪೂರ್ಣ ಚಟುವಟಿಕೆಗಳನ್ನು ಆಕೆಯ ಪಾದ ಕಮಲಗಳಿಗೆ ವಿನಮ್ರವಾಗಿ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ಎಲ್ಲವೂ ಪರಮ ಗುರುಗಳ ಕೃಪೆಯಿಂದಲೇ ಆಗಿದೆ. ಜಗದ್ಗುರು ಶ್ರೀ ವಿಧುಶೇಖರ ಭಾರತೀತೀರ್ಥರ #VidhushekharaBharatiSwamiji ಆಜ್ಞೆ ಮತ್ತು ಆದೇಶದಂತೆ ಸಕಲ ಸೇವೆಗಳೂ ಸಂಪನ್ನಗೊಂಡಿವೆ ಎಂಬ ಆತ್ಮಾನಂತ ಎಲ್ಲರಲ್ಲೂ ಕಂಡುಬಂತು. ನಾನು- ನನ್ನಿಂದಲೇ ಎಂಬ ಲವಲೇಶ ಸ್ವಾರ್ಥವೂ ನೆರೆದ ಭಕ್ತಗಣದಲ್ಲಿ ಕಾಣಲೇ ಇಲ್ಲ. ಎಲ್ಲೆಲ್ಲೂ ಭಕ್ತಿ- ಭಾವವೇ ಮೇಳೈಸಿದ್ದು, ಅದಕ್ಕೆ ಶನಿವಾರ ಮಂಗಳಾಚರಣೆ!
ಈ ಸಂದರ್ಭಕ್ಕೆ ನೂರಾರು ಭಕ್ತರು ಸಾಕ್ಷಿಯಾದರು. ಶಾರದೆಗೆ ಮಂಗಳಾರತಿ ಸಮರ್ಪಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ, ಒಂದು ವಾರಗಳ ಕಾಲ ವಿಶೇಷ ಉತ್ಸವಕ್ಕೆ ಶ್ರಮಿಸಿದ ನೂರಾರು ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಗುಮೊಗದಿಂದ ಹರಸಿದರು.
ಮುಂದಿನ ನೂರಾರು ವರ್ಷಗಳವರೆಗೆ ಈ ತಾಣದಲ್ಲಿ ಸನಾತನ ಪರಂಪರೆಯ ಚಟುವಟಿಕೆಗಳು ಇಲ್ಲಿ ವಿಜೃಂಭಿಸಲಿ ಎಂದು ಆಶೀರ್ವದಿಸಿದರು.
ನಂತರ ಶ್ರೀ ಸಚ್ಚಿದಾನಂದ ವಿಲಾಸ ಗುರುಭವನದಲ್ಲಿ ಸ್ವಾಮೀಜಿ ಪಾದಪೂಜೆ ಸ್ವೀಕಾರ ಮಾಡಿದರು. ಭಕ್ತರಿಗೆ ಫಲ, ಮಂತ್ರಾಕ್ಷತೆ ನೀಡಿದರು. ನೂರಾರು ಮಾತೆಯರು ಗುರುನಮನ ಸಮರ್ಪಿಸಲು ಗುರುಚರಿತ್ರೆ ಪಾರಾಯಣ ಮಾಡಿದರು.
ಶಿವಾನಂದ ಲಹರೀ, ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ಅನುರಣಿಸಿದವು. ಎಲ್ಲರಿಗೂ ತೀರ್ಥ ಪ್ರಸಾದ ವಿತರಣೆ ನೆರವೇರಿತು. ಅಭಿನವ ಶಂಕರಾಲಯದ ಧರ್ಮಾಧಿಕಾರಿ ಎಚ್. ರಾಮಚಂದ್ರನ್, ಮಠದ ವ್ಯವಸ್ಥಾಪಕ ಶೇಷಾದ್ರಿ ಭಟ್ ಇತರರು ಇದ್ದರು.
ರಂಜಿಸಿದ ಸಂಗೀತ
ಖ್ಯಾತ ಕಲಾವಿದೆ ಅಪರ್ಣಾ ಪಂಡಿತ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ರಂಜಿಸಿತು. ರೂಪನಗುಡಿ ರತ್ನತೇಜ ಪಿಟೀಲು ಮತ್ತು ಪ್ರಣವ ಸುಬ್ರಹ್ಮಣ್ಯ ಅವರು ಮೃದಂಗ ಪಕ್ಕವಾದ್ಯ ಸಹಕಾರ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post