ಕಲ್ಪ ಮೀಡಿಯಾ ಹೌಸ್ | ಮೈಸೂರು |
ಈ ನ್ಯಾಯಸುಧಾ ಮಂಗಳದಲ್ಲಿ ಪಂಡಿತರು ಏನೇ ಪ್ರಶ್ನೆ ಕೇಳಿದರೂ ಈ ವಿದ್ಯಾರ್ಥಿಗಳು ಉತ್ತರ ನೀಡುತ್ತಿರುವ ಪರಿ ನೋಡಿದರೆ ನನಗೆ ಇನ್ನಷ್ಟು ಅಧ್ಯಯನ ಮಾಡುವ ಆಸೆ ಚಿಗುರಿದೆ ಎಂದು ಶಿವಮೊಗ್ಗ ಜಿಲ್ಲೆ ಬಾಳಗಾರು ಮಠದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಕೃಷ್ಣಮೂರ್ತಿಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಸೋಸಲೆ ಶ್ರೀ ವ್ಯಾಸರಾಜ ಮಠ ಹಮ್ಮಿಕೊಂಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ 2ನೇ ದಿನದ ಕಲಾಪದಲ್ಲಿ ಅವರು ಆಶೀರ್ವಚನ ನೀಡಿದರು.
ಪಂಡಿತರು ಏನು ಪ್ರಶ್ನೆ ಕೇಳಿದರೂ ಈ ವಿದ್ಯಾರ್ಥಿಗಳು ಉತ್ತರ ನೀಡುತ್ತ ಇದ್ದಾರೆ. ಸುಘೋಷ, ಪ್ರಣವ, ಆಯಾಚಿತ ಶ್ರೀಶ ಮತ್ತು ಸೌಮಿತ್ರಿ ಅವರ ಪ್ರತಿಭೆಗೆ ವಿದ್ವಜ್ಜನರು ಸೈ ಎಂದಿದ್ದಾರೆ. ಇವರನ್ನು ನೋಡಿದರೆ ನನಗೆ ಇನ್ನಷ್ಟು ಅಧ್ಯಯನ ಮಾಡುವ ಆಸೆ ಚಿಗುರಿದೆ ಎಂದು ಹೇಳಿದರು.
Also read: ಯಾವ ಸಮೀಕ್ಷೆಗಳು ಬೇಡ, ಮೋದಿಯವರು ಮತ್ತೆ ಪ್ರಧಾನಿಯಾಗುವುದು ಖಚಿತ: ಕೆ.ಎಸ್.ಈಶ್ವರಪ್ಪ
ವಿದ್ಯಾರ್ಥಿಗಳ ಆತ್ಮವಿಶ್ವಾಸ, ಟಿಪ್ಪಣಿ ಸಹಿತ ಅವಲೋಕನ, ವಿನಯ, ಧೀರೋದ್ಧಾತ ಶೈಲಿ, ಪ್ರಾಮಾಣಿಕತೆ, ವಿದ್ಯಾಗಾಂಭೀರ್ಯಕ್ಕೆ ನಾವು ಮೆಚ್ಚಿದ್ದೇವೆ ಎಂದರು.
ಸೋಸಲೆ ಶ್ರೀಗಳು ತಮ್ಮ ದೀಕ್ಷೆ, ಮಠಾಧಿಕಾರ, ಸಂಚಾರ, ಪ್ರವಚನದ ಜತೆಗೆ ಈ ಮಕ್ಕಳಿಗೆ ಪಾಠ ಮಾಡುವ ವ್ರತವನ್ನೂ ಅನುಸರಿಸಿ ದಿಗ್ವಿಜಯ ಸಾಧಿಸಿದ್ದಾರೆ. ಇದು ಫಲ ಹೊತ್ತ ವಿದ್ಯಾಪೀಠವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂದಿನ ವೈಭವ ವ್ಯಾಸರಾಜರ ಮಠಕ್ಕೆ ಬರಲಿ
ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಾಡಿನ ವಿವಿಧ ಮಠ-ಪೀಠಗಳಲ್ಲಿ ಜಯತೀರ್ಥರು ರಚಿಸಿದ ಶ್ರೀಮನ್ ನ್ಯಾಯಸುಧಾ ಗ್ರಂಥದ ಮಂಗಳ ಮಹೋತ್ಸವ ಆಗಾಗ್ಗೆ ನಡೆಯುತ್ತದೆ. ಆದರೆ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಶ್ರೀ ವ್ಯಾಸರಾಜ ಯತಿಗಳ ವ್ಯಾಸತ್ರಯ ಗ್ರಂಥಗಳ ಸಹಿತ ಸುಧಾ ಮಂಗಳ ನಡೆಯುವುದು ಬಹಳ ವಿಶೇಷ ಎಂದರು.
4 ವಿದ್ಯಾರ್ಥಿಗಳೂ ಉತ್ತಮವಾಗಿ ಗ್ರಂಥಗಳ ಅನುವಾದ, ವ್ಯಾಖ್ಯಾನ ಮಾಡಿದ್ದಾರೆ. ವಿದ್ವಾಂಸರು ಎಲ್ಲಲ್ಲಿ ಕ್ರಾಸ್ ಮಾಡಿ ಪ್ರಶ್ನೆ ಕೇಳಿದರೂ ವಿಚಲಿತರಾಗದೇ ಸಮರ್ಥ ಉತ್ತರ ನೀಡಿದ್ದಾರೆ. ಈ ವಿದ್ಯಾಪೀಠದ ಮಕ್ಕಳ ಜ್ಞಾನಧಾರೆ ಹೀಗೆಯೇ ಗಂಗೆಯಂತೆ ಹರಿಯಲಿ ಎಂದರು.
ಶ್ರೀ ವ್ಯಾಸರಾಜರು ವಿಜಯನಗರ ಸಾಮ್ರಾಜ್ಯವನ್ನೂ ಆಳ್ವಿಕೆ ಮಾಡಿ ಶಾಸ್ತ್ರಪಾಠಗಳನ್ನೂ ಮಾಡುತ್ತಿದ್ದ ಸಂದರ್ಭ 24 ಜನ ಕೇಶವಾದಿ ಯತಿಗಳು, ವಿವಿಧ ಗೃಹಸ್ಥ ಪಂಡಿತರು, ಬಂಗಾಲ ಮೊದಲಾದ ಪ್ರಾಂತ್ಯಗಳಲ್ಲಿ ವರಮಾಲಿನೀಶ್ವರ ಮುಂತಾದ ವಿದ್ವಾಂಸರು ಬೆಳೆದರು. ಅಂಥಾ ಕಾಲ ಮತ್ತೆ ಸೋಸಲೆ ವ್ಯಾಸರಾಜರ ಈ ಮಠಕ್ಕೆ ಬರಲಿ ಎಂದು ಅವರು ಆಶಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















