ಕಲ್ಪ ಮೀಡಿಯಾ ಹೌಸ್ | ಮೈಸೂರು | ಸಾರ ಸಂಗ್ರಹ: ರಘುರಾಮ |
ಶ್ರೀಮದ್ ಭಾಗವತ ಕೇವಲ ಪಂಡಿತರ ಅಧ್ಯಯನ ಗ್ರಂಥವಲ್ಲ, ಅದು ವಿಶ್ವದ ಪ್ರತಿಯೊಬ್ಬರ ಬದುಕನ್ನು ಸಮಗ್ರವಾಗಿ ಸಾರ್ಥಕ್ಯಗೊಳಿಸುವ ಮಹೋನ್ನತ ಕೃತಿಯಾಗಿದೆ ಎಂದು ಪಂಡಿತ ಬಾದರಾಯಣಾಚಾರ್ಯ ಹೇಳಿದರು.
ಅವರು ಚಾಮರಾಜ ಜೋಡಿರಸ್ತೆ ವೆಂಕಟಾಚಲಧಾಮ ಆವರಣದ `ಪೂರ್ಣಪ್ರಜ್ಞ’ದಲ್ಲಿ ಭಾಗವತ ಪ್ರವಚನ ಸಪ್ತಾಹದಲ್ಲಿ ಬುಧವಾರ ಮಾತನಾಡಿದರು.
ಭಾಗವತ ಗ್ರಂಥ ದೇಹ, ಮಹತ್ತು, ಮನಸ್ಸುಗಳ ಆರೋಗ್ಯದ ಬಗ್ಗೆ ಸಮಗ್ರವಾಗಿ ಹೇಳಿದೆ. ಜೀವಿತವಾಗಿ ಇರುವಷ್ಟು ದಿನ ಸ್ವಧರ್ಮ ಆಚರಿಸಿ. ಪರ ಧರ್ಮದ ಕಡೆಗೆ ಯಾವತ್ತೂ ನೋಡದಿರಿ. ಮಿತವಾದ, ಮೇಧ್ಯವಾದ ಆಹಾರಗಳನ್ನೇ ಸೇವಿಸಿ. ಸದಾ ಸುಖಾಸನದಲ್ಲೇ ಕೂಡಿ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಅನುಷ್ಠಾನ ಮಾಡಿಕೊಳ್ಳಿ ಎಂಬುದನ್ನು ತಿಳಿಸಿದೆ ಎಂದರು.
ನಮ್ಮ ಇಂದ್ರಿಯಗಳೆಲ್ಲವೂ ಹೊರಮುಖಿಯಾಗಿವೆ. ಅವೆಲ್ಲವೂ ಸದಾ ಹೊರಗಿನ ಪ್ರಪಂಚವನ್ನೇ ನೋಡುತ್ತಾ ಬಹಿರ್ಮುಖಿ ಆಗಿರುತ್ತವೆ. ಹೇಗೆ ಒಂದು ಆಮೆ ತನ್ನ ಎಲ್ಲ ಇಂದ್ರಿಯಗಳನ್ನು ಒಳಗೆ ಎಳೆದುಕೊಂಡು ಸುರಕ್ಷಿತವಾಗಿರುವುದೋ ಹಾಗೆ ನಾವು ನಮ್ಮ ಇಂದ್ರಿಯಗಳನ್ನು ನಿಗ್ರಹ ಮಾಡಿಕೊಂಡು ಅಂತರ್ಮುಖಿಗಳಾಗಬೇಕು. ಜ್ಞಾನಿಯಾದವನು ಮಾತ್ರ ಈ ಸಾಧನೆ ಮಾಡಲು ಸಾಧ್ಯ. ಹಾಗಾಗಿ ನಾವು ಸದಾ ಅಪರೋಕ್ಷ ಜ್ಞಾನದ ಕಡೆ ಮುಖ ಮಾಡಬೇಕು ಎಂಬುದನ್ನು ಭಾಗವತ ಹೇಳಿದೆ ಎಂದರು.
ಭಾರತೀಯರು ಸಾವಿರಾರು ವರ್ಷಗಳಿಂದ ಯೋಗ ಸಾಧಕರಾಗಿಯೇ ಇದ್ದಾರೆ. ಯಾವುದೇ ಸ್ಕಾನಿಂಗ್ ಇಲ್ಲದೇ, ಎಂಆರ್ಐ ನಂತರ ಆಧುನಿಕ ತಂತ್ರಜ್ಞಾನದ ಪರೀಕ್ಷಾ ಯಂತ್ರಗಳಿಲ್ಲದೇ ನಮ್ಮವರು ಇಡೀ ದೇಹದ ಅನಾಟಮಿಯನ್ನು ಅರಿತಿದ್ದರು. ಹಾಗಾಗಿಯೇ ಸನಾತನ ಭಾರತೀಯ ಮೂಲದ ಯೋಗ ವಿದ್ಯೆ ಮತ್ತು ಧ್ಯಾನ ಕ್ರಿಯೆಗಳಿಗೆ ವಿಶ್ವ ಮಾನ್ಯತೆ ಇದೆ ಇದೆ ಎಂದು ಪಂಡಿತ ಬಾದರಾಯಣಾಚಾರ್ಯರು ಹೇಳಿದರು.
ಯೋಗ ಮತ್ತು ಧ್ಯಾನ ಎಂದು ನೆನಪಿಸಿಕೊಂಡರೆ ನಮ್ಮ ಯತಿವರೇಣ್ಯರು ಕಣ್ಣೆದುರು ಬರುತ್ತಾರೆ. ಪ್ರತಿ ನಿತ್ಯದ ಧ್ಯಾನದಿಂದ ಜೀವನವು ಹೇಗೆ ವಿಶೇಷ ಸಾಧನೆಗಳಿಗೆ ಸ್ಪಂದಿಸುತ್ತದೆ ಎಂಬುದನ್ನು ಶ್ರೀ ಸತ್ಯನಾಥ ತೀರ್ಥರು, ಶ್ರೀ ವಿಷ್ಣುತೀರ್ಥರು ಸಾಧಿಸಿ ತೋರಿಸಿದ್ದಾರೆ. ಗೀತೆ ಹೇಳಿದ ಯೋಗ ಮಾರ್ಗದಲ್ಲಿ ಇವರು ಮಹತ್ವದ ಹೆಜ್ಜೆಗಳನ್ನು ಇರಿಸಿ ನಮಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ಬಾದರಾಯಣಾಚಾರ್ಯರು ಸಾಂದರ್ಭಿಕವಾಗಿ ಉಲ್ಲೇಖಿಸಿದರು.
ದೇವಹೂತಿಯ ಕತೆಯನ್ನು ವಿವರಿಸಿದ ಆಚಾರ್ಯರು, `ಮೌನ’ ದ ಅಭ್ಯಾಸ ಮಾಡಿಕೊಳ್ಳುವುದು ಆತ್ಮಸೈರ್ಯ ಹೆಚ್ಚಿಸುತ್ತದೆ ಎಂದರು. ಉಪವಾಸ, ವನವಾಸ, ಕಷ್ಟ ಸಹಿಷ್ಣುತೆಗಳನ್ನು ನಾವು ಭಾಗವತದಿಂದ ಕಲಿಯಬೇಕು ಎಂದರು.
ಖಿನ್ನತೆಗೆ ಒಳಗಾಗದಿರಿ
ಇಂದಿನ ವಿದ್ಯಾರ್ಥಿಗಳು, ಯುವಕರು ಸಣ್ಣಪುಟ್ಟ ಸಂಗತಿಗಳನ್ನು ಎದುರಿಸಲಾಗದೇ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅದನ್ನೂ ಮೀರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ಖೇದನೀಯ ಸಂಗತಿ. ಬದುಕನ್ನು ಎದುರಿಸುವ ಸಾಮರ್ಥ್ಯ ಮಾತೆಯಿಂದ, ಮನೆಯಿಂದ ಮತ್ತು ಪುರಾಣ ಗ್ರಂಥಗಳಿಂದ ಕಲಿಯಬೇಕು. ಯಾರಿಗೆ ಈ ಸಂಸ್ಕಾರ, ಸಂಸ್ಕೃತಿ ಇಲ್ಲವೋ ಅವರು ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹಾ ಸಂದರ್ಭದಲ್ಲಿ ಭಾಗವತ ನಮ್ಮ ಬದುಕನ್ನು ಸಮರ್ಥವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಮಹದುಪಕಾರ ಮಾಡುವ ಮಹೋನ್ನತ ಗ್ರಂಥವಾಗಿದೆ ಎಂದರು.
ಹಿರಿಯರ ತಪ್ಪುಗಳನ್ನೂ ತಿದ್ದಿ
ದಕ್ಷ ಪ್ರಜಾಪತಿ, ಉಮಾದೇವಿ ಮತ್ತು ರುದ್ರದೇವರ ಕಥಾ ಪ್ರಸಂಗ ವಿವರಿಸಿದ ಆಚಾರ್ಯರು (ದಕ್ಷಯಜ್ಞದ ಸಂದರ್ಭ) ಹಿರಿಯರು ತಪ್ಪು ಮಾಡಿದರೂ ಅದನ್ನು ಸಹನೆ ಮಾಡುವ ಗುಣ ರೂಢಿಸಿಕೊಳ್ಳಬೇಕು. ತಿತಿಕ್ಷಾ ಗುಣ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಒಂದು ಪಕ್ಷ ಹಿರಿಯರು ತಪ್ಪು ಮಾಡಿದರೂ ಅದನ್ನು ಸೂಕ್ತವಾಗಿ ತಿದ್ದಿ ಹೇಳಬೇಕು ಎಂದು ಭಾಗವತ ಸಂದೇಶ ನೀಡಿದೆ ಎಂದರು.
ಧ್ರುವನಂತಹ ಮಕ್ಕಳು ಜನಿಸಲಿ
ಉತ್ಥಾನಪಾದ ರಾಜ, ಆತನ ಪತ್ನಿಯರಾದ ಸುರುಚಿ ಮತ್ತು ಸುನೀತಿಯರ ಕಥಾನಕವನ್ನು ಸೋದಾಹರಣವಾಗಿ ವಿವರಿಸಿದ ಬಾದರಾಯಣಾಚಾರ್ಯರು, ನಾವು ಬದುಕಿನಲ್ಲಿ ನೀತಿ (ಸುನೀತಿ)ಗೆ ಬೆಲೆ ಕೊಟ್ಟರೆ `ಧ್ರುವ’ ನಂತಹಾ ಸಾಧಕ ಮಕ್ಕಳನ್ನು ಪಡೆಯಬಹುದು ಎಂದರು. ಅವರು ದೇವರನ್ನು ಕಂಡು, ದೇಶವನ್ನು ಆಳಿ, ವಿಶ್ವಖ್ಯಾತರಾಗಿ ಮುಂದೆ ಮೋಕ್ಷಕ್ಕೂ ಅರ್ಹರಾಗುತ್ತಾರೆ. ನಾವು ರುಚಿ (ಸುರುಚಿ)ಗೆ ಮಾರುಹೋದರೆ ಕೇವಲ `ಉತ್ತಮ’ ಮಕ್ಕಳು ಜನಿಸುತ್ತಾರೆ. ಆಯ್ಕೆಯನ್ನು ಭಾಗವತ ನಮಗೆ ಬಿಟ್ಟಿದೆ ಎಂದರು.
ನಂತರ ಪೃಥು ಮಹಾರಾಜನ ಕಥೆಯನ್ನು ಸೋದಾಹರಣವಾಗಿ ವಿವರಿಸಿದರು. ಕುಟುಂಬದ ಪ್ರತಿಯೊಬ್ಬ ಹಿರಿಯರು, ಯಜಮಾನರು ಪೃಥುವಿನಂತೆ ಇರಬೇಕು. ಪ್ರತಿ ಗೃಹವೂ ಧರ್ಮಾಚರಣೆಗಳ ಆಲಯವಾಗಬೇಕು. ಆಗ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ಭಾಗವತ ಹೇಳಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post