ಕಲ್ಪ ಮೀಡಿಯಾ ಹೌಸ್ | ಹಾಸನ |
ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಸ್ವರ್ಗ ಸೇರಿದ ಮೈಸೂರು ದಸರಾ #Dasara ಅಂಬಾರಿ ಹೊತ್ತ ಅರ್ಜುನ(ಆನೆ)ಯ #Arjuna ಸಮಾಧಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ #Yaduveer_Krishnadatta_Chamaraja_Wadiyar ಅವರು ಪೂಜೆ ಸಲ್ಲಿಸಿದರು.
ಹಾಸನ #Hassan ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿರುವ ಅರ್ಜುನನ ಸಮಾಧಿ ಸ್ಥಳಕ್ಕೆ ಯದುವೀರ ದಂಪತಿ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದಂಪತಿ ಸಮೇತ ಅರ್ಜುನನ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಜುನನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಕಾಡಾನೆ ಸೆರೆ ವೇಳೆ ಮೃತಪಟ್ಟ ಅರ್ಜುನನ ಅಂತ್ಯಸಂಸ್ಕಾರವನ್ನು ಡಿ.5ರಂದು ಮೈಸೂರು #Mysore ಅರಮನೆಯ ಪುರೋಹಿತರ ನೇತೃತ್ವದಲ್ಲಿ ರಾಜ ಕುಟುಂಬಕ್ಕೆ ಅನುಗುಣವಾಗಿ ನೆರವೇರಿಸಲಾಗಿತ್ತು.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಮೈಸೂರು ದಸರಾ ಮಹೋತ್ಸವದಲ್ಲಿ ಸುಮಾರು 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ #Arjuna ಆನೆಯು #Elephant ದೈವಾಧೀನವಾಗಿದ್ದು ಅತೀವ ದುಃಖವನ್ನುಂಟುಮಾಡಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಪೂರ್ವ ನಿಯೋಜಿತ ಕಾರ್ಯಕ್ರಮಗಳಿಂದಾಗಿ ಪ್ರಯಾಣದಲ್ಲಿದ್ದು ಅರ್ಜುನನ ಅಂತ್ಯಸಂಸ್ಕಾರಕ್ಕೆ ಭೇಟಿ ನೀಡಲಾಗದ ಕಾರಣ ಇಂದು ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅವನ ಸದ್ಗತಿಗಾಗಿ ಪ್ರಾರ್ಥಿಸಲಾಯಿತು ಎಂದು ಕಂಬನಿ ಮಿಡಿದಿದ್ದಾರೆ.

ತಾಯಿ ಚಾಮುಂಡೇಶ್ವರಿಯನ್ನು ಹೊತ್ತ, ಅರಮನೆಯ ಸೇವೆ ಮಾಡಿದ ಅರ್ಜುನನ ಸಮಾಧಿ ಸ್ಥಳಕ್ಕೆ ಆಗಮಿಸಿ ನಮನ ಸಲ್ಲಿಸಿರುವುದು ಅವನ ಆತ್ಮಕ್ಕೆ ಈಗ ದೊರಕಿದೆ. ಮೈಸೂರು ರಾಜವಂಶಸ್ಥರ ಘನತೆಕ್ಕೆ ತಕ್ಕ ಹಾಗೆ ನಡೆದುಕೊಂಡಿದ್ದೀರಿ. ನಿಮ್ಮ ಸರಳ ಹಾಗೂ ಸಜ್ಜನಿಕೆಯನ್ನು ರಾಜಕಾರಣಿಗಳು ನೋಡಿ ಕಲಿಯಬೇಕು ಎಂಬ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post