ಕಲ್ಪ ಮೀಡಿಯಾ ಹೌಸ್ | ಮೈಸೂರು |
ನವರಾತ್ರಿಯ #Navarathri ಒಂಬತ್ತು ದಿನಗಳೂ ಶುಭ ಹಾಗೂ ಶ್ರೇಷ್ಠ ದಿನಗಳು. ಈ ದಿನಗಳಲ್ಲಿ ಹೊಸಕಾರ್ಯಗಳನ್ನು ಪ್ರಾರಂಭಿಸುವುದರಿಂದ ಒಳ್ಳೆಯ ಫಲ ದೊರಕುವುದು.
ಈ ದೃಷ್ಟಿಯಿಂದ ಮೈಸೂರಿನಲ್ಲಿ ನಟನತರಂಗಿಣಿಯ ವತಿಯಿಂದ ಸಂಗೀತ ಕಾರ್ಯಕ್ರಮಗಳು ಈ ವರ್ಷದ ನವರಾತ್ರಿಯಿಂದ ಪ್ರಾರಂಭವಾಗಿರುವುದು ಸಂತೋಷದ ವಿಷಯ.
ಮೈಸೂರಿನ ವಿಠಲಧಾಮ ಪೇಜಾವರ ಮಠದ ಒಂದು ಅಂಗ. ಈ ಸಂಸ್ಥೆ ಧರ್ಮ ಪ್ರಚಾರ, ವೇದ ವೇದಾಂತಗಳ ಪಾಠ-ಪ್ರವಚನ, ವೃದ್ಧಾಶ್ರಮಗಳ ನಿರ್ವಹಣೆ, ಹೀಗೆ ಹಲವಾರು ರೀತಿಯಲ್ಲಿ ಸಮಾಜ ಸೇವೆಯನ್ನು ನಿಸ್ವಾರ್ಥ ಮನೋಭಾವದಿಂದ ಮಾಡುತ್ತಿದೆ. ಈ ವರ್ಷದ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿರುವುದು ಗಮನಾರ್ಹ. ವಿಠಲದಾಮದ ಈ ಭವ್ಯ ವೇದಿಕೆಯಲ್ಲಿ ನವರಾತ್ರಿಯ ನಾಲ್ಕನೆಯ ದಿನದಂದು, ಬೆಂಗಳೂರಿನ ನಟನತರಂಗಿಣೆ ಸಂಸ್ಥೆಯ ಸಹಭಾಗಿತ್ವದಲ್ಲಿ ಕು.ಅಬಿಜ್ಞಾ. ರಾವ್. ಅವರ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೈಸೂರು ಕರ್ನಾಟಕದ ಸಾಂಸ್ಕೃತಿಕ ನೆಲೆಬೀಡು. ಅತ್ಯುತ್ತಮ ಕಲಾವಿದರನ್ನು ಸಂಗೀತ ಪ್ರಪಂಚಕ್ಕೆ ನೀಡಿರುವ ಹಗ್ಗಳಿಕೆ ಈ ನಾಡಿಗೆ ಸಲ್ಲುತ್ತದೆ. ಹಾಗಾಗಿ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುವುದು ಅವಶ್ಯಕ.
ಅಬಿಜ್ಞ ತಮ್ಮ ಕಛೇರಿಯಲ್ಲಿ ಹರಿದಾಸಸಾಹಿತ್ಯ ಪ್ರಸ್ತುತಿ ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಇವರಿಗೆ ವೈಲಿನ್ನಲ್ಲಿ ಕು. ಶ್ರೀಲಲಿತಾ ಶ್ರೀರಾಮನ್ ಹಾಗೂ ಮೃದಂಗದಲ್ಲಿ ಮಾಸ್ಟರ್ ಶ್ರೀವರ್ಚಸ್ ಸಹಕಾರ ನೀಡಿದರು.
ಕಛೇರಿಯು ಶ್ರೀ ವಿಠಲ, ಶ್ರೀ ಮುಖ್ಯ ಪ್ರಾಣ ದೇವರು ಹಾಗೂ ಶ್ರೀ ರಾಘವೇಂದ್ರ ತೀರ್ಥರ ದಿವ್ಯ ಸನ್ನಿದಾನದಲ್ಲಿ ನಡೆದುದು, ಕಲಾವಿದರ ಭಾಗ್ಯ. ಕು. ಆಬಿಜ್ಞ ದೇವರ ನಾಮಗಳನ್ನು ಉತ್ತಮ ರೀತಿಯಲ್ಲಿ ಕರ್ಣಾಟಕ ಸಂಗೀತ ಕಛೇರಿಯ ಚೌಕಟ್ಟಿನಲ್ಲಿ ಪ್ರಸ್ತುತ ಪಡಿಸಿದರು. ಕಲ್ಯಾಣಿ ರಾಗದ, ಶ್ರೀ ಪುರಂದರದಾಸರ ದಯಮಾಡೋರಂಗ ಕಛೇರಿಯ ಮುಖ್ಯ ಪ್ರಸ್ತುತಿ.ರಾಗದ ಆಲಾಪನೆ, ಸ್ವರ ಪ್ರಸ್ತಾರ ಸುಶ್ರಾವ್ಯವಾಗಿತ್ತು. ಶ್ರೀ ಪುರಂದರದಾಸರ ಸಕಲ ಗ್ರಹಬಲ ನೀನೆ, ನಾರಾಯಣ ನಿನ್ನ ನಾಮದ ಸ್ಮರಣೆಯ, ದೇವಿಯ ಕುರಿತಾದ ಶ್ರೀ ಮುತ್ತಯ್ಯ ಭಾಗವತರ ಕೃತಿ ಸಾರಸಮುಖಿ ಸಕಲ ಭಾಗ್ಯದೆ ಶ್ರೀ ಚಾಮುಂಡೇಶ್ವರಿ ಆಕರ್ಷಕವಾಗಿದ್ದವು. ವೈಯಲಿನ್ನಲ್ಲಿ ಶ್ರೀಲಲಿತ ಒಳ್ಳೆಯ ಸಹಕಾರ ನೀಡಿದರು. ಶ್ರೀವರ್ಚಸ್ ಮೃದಂಗದಲ್ಲಿ ತನ್ನ ಕೌಶಲವನ್ನು ತೋರಿ ಎಲ್ಲರ ಮೆಚ್ಚುಗೆಯನ್ನು ಪಡೆದನು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 























