ಮೈಸೂರು: ಆಧ್ಯಾತ್ಮ ಸಾಧಕ ವಾಸುದೇವ ಮಹಾರಾಜ್ ಆರಾಧನಾ ಮಹೋತ್ಸವದ ಅಂಗವಾಗಿ ಮೈಸೂರಿನ ಜೆಎಲ್’ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀವಾಸುದೇವ ಮಹಾರಾಜ್ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹಿರಿಯ ಸಮಾಜ ಸೇವಕ ಡಾ.ಕೆ ರಘುರಾಮ ವಾಜಪೇಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿಯುಗದಿ ಕಣ್ಣಿಗೆ ಕಾಣುವ ಗುರುವರ್ಯರು, ಅವಧೂತರು ಭಕ್ತ ಜನರ ಸಾಮಾಜಿಕ, ಧಾರ್ಮಿಕ ಬದುಕಿನ ಮಾರ್ಗದರ್ಶಕರಾಗುತ್ತಾರೆ. ಉತ್ತಮ ಜೀವನಕ್ಕೆ ಕೆಲವೊಮ್ಮೆ ಇಂತಹವರ ಮಾತು, ನೆರಳು ಅರಿಗೆ ಬಾರದೇ ಕಾರಣವಾಗುತ್ತದೆ. ಇಂತಹ ಅವಧೂತರ ಸಾಲಿನಲ್ಲಿ ಮಹಾರಾಜ ವಾಸುದೇವರಾವ್ ಅವರು ಪ್ರಮುಖರು. ಇವರ ಅನುಗ್ರಹ ಸಕಲರಿಗೂ ದೊರೆಯಲೆಂಬ ಆಶಯದೊಂದಿಗೆ ಮೈಸೂರಿನ ವಿದ್ಯಾರಣ್ಯಪುರದಲ್ಲಿ ಶ್ರೀವಾಸುದೇವ ಮಹಾರಾಜ್ ಫೌಂಡೇಷನ್ ಸ್ಥಾಪಿತವಾಗಿದ್ದು, ಜನಪರ ಕೈಂಕರ್ಯ ನಡೆಸಲು ಮುಂದಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೇರಿ ಗೋಪಾಲ್ ವಾಸುದೇವ್ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಉದ್ಯಮಿ ದೊರೆಸ್ವಾಮಿಯವರು ವಿವಿಧ ಕ್ಷೇತ್ರದ ಗಣ್ಯಸಾಧಕರಾದ ಖ್ಯಾತ ನೇತ್ರ ತಜ್ಞೆ ಡಾ.ಎಚ್.ಆರ್. ಮಣಿಕರ್ಣೀಕ(ವೈದ್ಯಕೀಯ), ಡಾ.ಕೆ.ಎನ್. ನರಸಿಂಹಮೂರ್ತಿ ಶರ್ಮಾ (ಜೋತಿಷ್ಯ ಹಾಗೂ ರತ್ನಶಾಸ್ತ್ರ), ಡಾ.ಎಲ್. ಸತ್ಯನಾರಾಯಣರಾವ್ (ವಾಸ್ತುಜ್ಞಾನ), ಡಾ.ಬಾಲಸುಂದರ್ ಶ್ರೀನಾಥ್ (ಯೋಗ), ಡಾ.ಗುರುರಾಜ ಪೋಶೆಟ್ಟಿಹಳ್ಳಿ (ಸಂಸ್ಕೃತಿ) ಮತ್ತು ಎಸ್. ಪ್ರಭುಶಂಕರ್ (ಜೈವಿಕ ವೈದ್ಯಕೀಯ) ರವರುಗಳಿಗೆ ಪ್ರತಿಷ್ಠಿತ ಶ್ರೀ ವಾಸುದೇವ ಮಹಾರಾಜ್ ಪ್ರಶಸ್ತಿಯನ್ನು ನೀಡಿ ಗೌರಸಿದರು.
ಹಿಮಾಲಯ ಫೌಂಡೇಷನ್ ಸಂಸ್ಥಾಪಕ ಎನ್. ಅನಂತ್ ಹಾಗೂ ಸಂಗೀತ ಶಿಕ್ಷಕಿ ಎಂ. ಅನಿತಾ ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು.















