ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಲ್ಲಿನ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋಗೆ #Bharath Mobility Global Expo ಭೇಟಿ ನೀಡಿದ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ಅವರು; ವಿವಿಧ ಅಟೋಮೊಬೈಲ್ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಒಂದೇ ಕಡೆಯಲ್ಲಿ ವಿನೂತನ ವಾಹನಗಳ ವಿಶ್ವರೂಪವನ್ನೇ ನೋಡುತ್ತಿದ್ದೇನೆ ಎಂದು ಉದ್ಘಾರ ತೆಗೆದ ಸಚಿವರು; ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಾಗಿರುವ ಹೊಸ ತಲೆಮಾರಿನ ವಾಹನಗಳನ್ನು ಕಂಡು ಚಕಿತರಾದರು.

ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಕೇಂದ್ರ ಸರಕಾರ ಉಪಕ್ರಮವಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಹೈಡ್ರೋಜನ್ ತಂತ್ರಜ್ಞಾನ ಆಧಾರಿತ ವಾಹನಗಳ ತಯಾರಿಕೆಗೆ ಹೆಚ್ಚು ಪ್ರೋತ್ಸಾಹ ಕೊಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಖಾಸಗಿ ಗಗನಯಾನ ಕಂಪನಿಯ ಮಳಿಗೆಯೊಂದಕ್ಕೆ ಭೇಟಿ ನೀಡಿದ ಸಚಿವರು; ಎಲೆಕ್ಟ್ರಿಕ್ ಗಗನನೌಕೆ ಅಥವಾ ಹಾರುವ ಟ್ಯಾಕ್ಸಿ (eVTOL) ಯನ್ನು ಕುತೂಹಲದಿಂದ ವೀಕ್ಷಿಸಿದರು. ದೂರದಿಂದಲೇ ಅದನ್ನು ಗಮನಿಸಿದ ಸಚಿವರು, ಅದರತ್ತ ನಡೆದರಲ್ಲದೆ ಗಗನ ನೌಕೆಯನ್ನು ಒಳಾಂಗಣವನ್ನು ನೋಡಿದರು. ಅಲ್ಲದೆ; ಗಗನನೌಕೆ ತಾಂತ್ರಿಕ ಅಂಶಗಳು, ಅದರ ಬಳಕೆ, ಉಪಯೋಗಗಳ ಬಗ್ಗೆ ನಿಪುಣರಿಂದ ಮಾಹಿತಿ ಪಡೆದುಕೊಂಡರು.
Also Read: ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಬಂಗಾರದ ಆಭರಣ ಹಾಕುವ ಮುನ್ನ ಈ ಸುದ್ದಿ ಓದಿ
ನಗರ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವಾಗಿರುವ ಹಾರುವ ಟ್ಯಾಕ್ಸಿಯ ಅಭಿವೃದ್ಧಿಗೆ ಆ ಕಂಪನಿಯು 10 ದಶಲಕ್ಷ ಡಾಲರ್ ಮೊತ್ತವನ್ನು ಹೂಡಿಕೆ ಮಾಡಿದೆ. 2028ಕ್ಕೆ ಈ ಹಾರುವ ಟ್ಯಾಕ್ಸಿ ಸೇವೆ ಆರಂಭಿಸಲು ಕಂಪ್ ಕಂಪನಿ ನಿರ್ಧರಿಸಿದೆ ಎನ್ನುವ ಮಾಹಿತಿಯನ್ನು ಸಚಿವರು ಪಡೆದುಕೊಂಡರು.
ಆಕರ್ಷಕ ಹಾರುವ ಟ್ಯಾಕ್ಸಿ ಜತೆಗೆ ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ಇವಿ ವಲಯದಲ್ಲಿ ಆಗಿರುವ ಪ್ರಗತಿಯನ್ನು ಅನಾವರಣಗೊಳಿಸಿತು. ಎಲೆಕ್ಟ್ರಿಕ್ ವಲಯದ ಪ್ರಮುಖ ತಯಾರಕರು ತಮ್ಮ ಇತ್ತೀಚಿನ ಇವಿ ವಾಹನಗಳ ಮಾದರಿಗಳನ್ನು ಸಚಿವರು ವೀಕ್ಷಿಸಿದರು. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕ್ರಮಗಳ ಫಲ ಪ್ರದರ್ಶನದಲ್ಲಿ ಕಂಡು ಬಂದಿತು ಎಂದು ಇದೇ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಅಟೋಮೊಬೈಲ್ ಕ್ಷೇತ್ರದ ಜತೆಗೆ ಬೆಸೆದುಕೊಂಡಿರುವ ಉಕ್ಕು ಕ್ಷೇತ್ರದ ಹಲವಾರು ಕಂಪನಿಗಳು ಪ್ರದರ್ಶನದಲ್ಲಿ ತಮ್ಮ ಮಳಿಗೆಗಳನ್ನು ತೆರೆದಿದ್ದವು. ಮುಖ್ಯವಾಗಿ ಭಾರತೀಯ ಉಕ್ಕು ಪ್ರಾಧಿಕಾರ (SAIL) ಮಳಿಗೆಗೆ ಭೇಟಿ ಕೊಟ್ಟ ಸಚಿವರು; ರಾಷ್ಟ ನಿರ್ಮಾಣಕ್ಕಾಗಿ ಪ್ರಾಧಿಕಾರ ತೊಡಗಿಸಿಕೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಅಮರೆಂದು ಪ್ರಕಾಶ್ ಅವರಿಂದ ಕೂಲಂಕಷ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025ನಲ್ಲಿ ಪ್ರದರ್ಶಿಸಲಾದ ಆವಿಷ್ಕಾರಗಳು ಸುಸ್ಥಿರ ಮತ್ತು ಸುಧಾರಿತ ಚಲನಶೀಲತೆ ಪರಿಹಾರಗಳಲ್ಲಿ ಪ್ರಮುಖವಾದವು. ದೇಶದ ಮುನ್ನಡೆಗೆ ಅವು ಪೂರಕವಾಗಿವೆ. ಭವಿಷ್ಯದ ಭಾರತಕ್ಕೆ ಇವೆಲ್ಲವೂ ದೊಡ್ಡ ಶಕ್ತಿಯನ್ನು ತುಂಬುತ್ತವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post