`ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಆತ ರಾಷ್ಟ್ರ ರಾಜಧಾನಿ ನವದೆಹಲಿ ಸನಿಹದ ನೋಯ್ಡಾದ 19 ವರ್ಷದ ಯುವಕ… ಪ್ರತಿ ದಿನ ರಾತ್ರಿ ಕೆಲಸ ಮುಗಿಸಿಕೊಂಡು 10 ಕಿಮೀ ಓಡಿಕೊಂಡೇ ಮನೆ ಸೇರುತ್ತಾನೆ… ಈತನ ವೀಡಿಯೋ ಈಗ ವೈರಲ್ ಆಗಿದ್ದು, ರಾತ್ರೋ ರಾತ್ರಿ ಸೆಲೆಬ್ರಟಿಯಾಗಿ ಯುವಕರ ಸ್ಪೂರ್ತಿಯ ಚಿಲುಮೆಯಾಗಿದ್ದಾನೆ. ಇಷ್ಟಕ್ಕೂ ಈತ ಪ್ರತಿದಿನ ಓಡಿಕೊಂಡೇ ಮನೆ ಸೇರುವುದು ಯಾಕೆ? ಮುಂದೆ ಓದಿ…
ಆತ ನೋಯ್ಡಾದ 19 ವರ್ಷದ ಯುವಕ ಪ್ರದೀಪ್ ಮೆಹ್ರಾ. ಈತನೇ ಈಗ ದೇಶದಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಮೂಲಕ ಸೆಲೆಬ್ರಟಿಯಾದ ಸ್ಪೂರ್ತಿಯ ಚಿಲುಮೆ.
ನೋಯ್ಡಾದಲ್ಲಿನ ಮೆಕ್ ಡೊನಾಲ್ಡ್’ನಲ್ಲಿ ಅಡುಗೆ ಕೆಲಸ ಮಾಡುವ ಪ್ರದೀಪ್ ಮೆಹ್ರಾ Pradeep Mehra ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋಮೀಟರ್ ಓಡುತ್ತಲೇ ಮನೆ ಸೇರುತ್ತಾನೆ. ಇದಕ್ಕೆ ಕಾರಣ, ಭಾರತೀಯ ಸೇನೆ ಸೇರಿಕೊಳ್ಳಲು ಈತ ನಡೆಸುವ ಕಠಿಣ ಅಭ್ಯಾಸ ಇದಾಗಿದೆ ಎಂಬುದೇ ವಿಶೇಷವಾದ ಸಂಗತಿ.
ಬರೋಲಾದಲ್ಲಿ ಸಹೋದರನ ಜೊತೆ ಪ್ರದೀಪ್ ಮೆಹ್ರಾ ವಾಸವಾಗಿದ್ದು, ಈತನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ, ಇಡಿಯ ಕುಟುಂಬದ ಜವಾಬ್ದಾರಿ ಈತನ ಮೇಲೆಯೇ ಇದೆ. ಭಾರತೀಯ ಸೇನೆ ಸೇರಲು ಇಚ್ಛೆ ಹೊಂದಿರುವ ಪ್ರದೀಪ್ ಇದಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಸೇನೆಗೆ ಸೇರಲು ಫಿಟ್ನೆಸ್ ಅತ್ಯಂತ ಮುಖ್ಯ. ಬಹಳಷ್ಟು ಮಂದಿ ಇದಕ್ಕಾಗಿ ವ್ಯಾಯಾಮ, ಜಾಗಿಂಗ್, ಜಿಮ್ ಮಾಡುತ್ತಾರೆ. ಆದರೆ, ಪ್ರದೀಪ್’ಗೆ ಇವುಗಳನ್ನು ಮಾಡಲು ಸಮಯವಿಲ್ಲ. ಅಲ್ಲದೇ, ಮನೆಯನ್ನೂ ಈತನೇ ನಿರ್ವಹಣೆ ಮಾಡಬೇಕಿರುವ ಕಾರಣ ದುಡಿಯುವುದು ಮುಖ್ಯವಾಗಿದೆ. ಹೀಗಾಗಿ, ಕೆಲಸ ಮುಗಿಸಿ ನಗರದ ರಸ್ತೆಗಳಲ್ಲಿ 10 ಕಿಮೀ ಓಡುತ್ತಲೇ ಮನೆ ಸೇರಿಕೊಳ್ಳುವ ಜೊತೆಯಲ್ಲಿ ಈ ಮೂಲಕ ಸೇನೆ ಸೇರಲು ತಯಾರಿ ನಡೆಸುತ್ತಿದ್ದಾನೆ.
ಕಳೆದ ಒಂದೆರಡು ದಿನದ ಹಿಂದೆ ಪ್ರದೀಪ್ ಈ ರೀತಿ ಓಡುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಯಾಕೆ ಈ ರೀತಿ ಓಡುತ್ತಿದ್ದೀಯಾ? ಎಲ್ಲಿಗೆ ಹೋಗಬೇಕು? ನಾನು ಕಾರಿನಲ್ಲಿ ಬಿಡುತ್ತೇನೆ ಬಾ ಎಂದು ವಿನಂತಿಸಿದ್ದಾರೆ. ಆದರೆ, ಇದಕ್ಕೆ ಓಡುತ್ತಲೇ ಪ್ರತಿಕ್ರಿಯಿಸಿರುವ ಆತ, ಇದು ಸೇನೆ ಸೇರಿಕೊಳ್ಳಲು ನಾನು ಮಾಡುತ್ತಿರುವ ತಯಾರಿ. ದೈಹಿಕ ತಯಾರಿ ನಡೆಸಲು ನನಗೆ ಸಮಯವಿಲ್ಲ. ಹೀಗಾಗಿ, ಇದನ್ನೇ ಅಭ್ಯಾಸ ಮಾಡಿಕೊಂಡಿದ್ದೇನೆ ಎನ್ನುತ್ತಾನೆ.
ದಿನವೂ ಓಡಿಕೊಂಡು ಹೋಗು. ಇಂದು ಕಾರಿನಲ್ಲಿ ಮನೆಗೆ ಬಿಡುತ್ತೇನೆ ಎಂದು ಕರೆಯುತ್ತಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್ ಮೆಹ್ರಾ ಇಲ್ಲ, ಒಂದು ದಿನ ನಾನು ಕಾರಿನಲ್ಲಿ ಹೀಗೆ ತೆರಳಿದರೆ ನನ್ನ ಅಭ್ಯಾಸ ಮೊಟಕುಗೊಳ್ಳಲಿದ್ದು, ಸೇನೆಗೆ ಸೇರುವುದು ಕಷ್ಟವಾಗುತ್ತದೆ ಎಂದಿದ್ದಾನೆ.
Also read: ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಹಿನ್ನೆಲೆ ವಾಹನ ಸಂಚಾರ ಮಾರ್ಗ ಬದಲಾವಣೆ
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸೆಲೆಬ್ರಟಿಗಳೂ ಸಹ ಶೇರ್ ಮಾಡಿದ್ದು, ಈತನ ಆತ್ಮಸ್ಥೈರ್ಯ, ಛಲ ಇಡಿಯ ದೇಶಕ್ಕೇ ಮಾದರಿಯಾದುದು ಎಂದು ಪ್ರಶಂಸಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post