ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆದು ಗಾಯಾಳುವಾಗಿದ್ದಾರೆ ಎನ್ನುವ ಘಟನೆ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಚುನಾವಣಾ ಆಯೋಗ ದಾಳಿ ಸಾಧ್ಯತೆಯನ್ನು ಅಲ್ಲಗಳೆದಿದೆ ಎನ್ನಲಾಗಿದೆ.
ಚುನಾವಣೆ ಪ್ರಚಾರದ ವೇಳೆ ಅವರಿಗೆ ನೀಡಲಾಗಿದ್ದ ಉಸ್ತುವಾರಿ ಭದ್ರತಾ ಸಿಬ್ಬಂದಿಯ ಕಡೆಯಿಂದ ಆದ ಭದ್ರತಾ ಲೋಪದಿಂದ ಗಾಯವಾಗಿದ್ದೇ ಹೊರತು ಅವರ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಪಶ್ಚಿಮ ಬಂಗಾಳ ಚುನಾವಣಾ ವೀಕ್ಷಕರು ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ ನೀಡಿದ ವರದಿ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಚುನಾವಣಾ ಪ್ರಚಾರದ ವೇಳೆ ನಾಲ್ಕೈದು ಜನರ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿತು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಟಿಎಂಸಿ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.
ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಗಾಯಗೊಂಡ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಹಾಗೂ ಅವರು ಇಂದು ಕೋಲ್ಕತ್ತಾದಿಂದ ಹಜ್ರಾದವರೆಗೆ ರೋಡ್ ಶೋ ಕೈಗೊಂಡಿದ್ದು ವೀಲ್ ಚೇರ್ನಲ್ಲಿಯೇ ಕುಳಿತು ಕೋಲ್ಕತ್ತಾದ ಗಾಂಧಿ ಮೂರ್ತಿಯಿಂದ ಪ್ರಚಾರ ಆರಂಭಿಸಿದರು ಎಂದು ತಿಳಿದಿಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post