ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಹಜೀವನ ನಡೆಸುತ್ತಿದ್ದ ಯುವತಿಯನ್ನು ಆಕೆಯ ಪ್ರಿಯತಮನೇ ಹತ್ಯೆಗೈದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಅಮಾನವೀಯ ಘಟನೆ ರಾಷ್ಟ್ರರಾಜಧಾನಿಯಲ್ಲಿ ನಡೆದಿದೆ.
ಶ್ರದ್ಧಾ (26) ಮೃತ ಯುವತಿಯಾಗಿದ್ದು, ಅಫ್ತಾಬ್ ಅಮೀನ್ ಪೂನಾವಾಲಾ ಎಂಬಾತನೊಂದಿಗೆ ಲಿವಿಂಗ್ ಟುಗೆದರ್ ನಲ್ಲಿ ಜೊತೆಯಾಗಿ ಬದುಕುತ್ತಿದ್ದು, ಪ್ರಿಯತಮನೇ ಯುವತಿಯನ್ನು ಹತ್ಯೆ ಮಾಡಿ , ಶವವನ್ನು 35 ಭಾಗಗಳಾಗಿ ತುಂಡರಿಸಿ ದೆಹಲಿಯಾದ್ಯಂತ ಎಸೆದ ಭೀಕರ ಪ್ರಕರಣವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದು ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.
ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಶ್ರದ್ಧಾ ,ಅಫ್ತಾಬ್ ಅಮೀನ್ ಪೂನಾವಾಲಾ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಯುವತಿಯ ಕುಟುಂಬವು ಈ ಸಂಬಂಧವನ್ನು ಒಪ್ಪದ ಹಿನ್ನಲೆ, ಈ ಜೋಡಿ ಮುಂಬೈ ತೊರೆದು ದೆಹಲಿಗೆ ಬಂದು ಮೆಹ್ರೌಲಿಯ ಫ್ಲಾಟ್ನಲ್ಲಿ ಜೊತೆಯಾಗಿ ವಾಸಿಸಲು ಪ್ರಾರಂಭಿಸಿದ್ದರು.
Also read: ಸಮತೋಲಿತ ಆಹಾರವೇ ಉತ್ತಮ ಆರೋಗ್ಯದ ಗುಟ್ಟು: ಡಾ.ಕೆ.ಸಿ. ಶೇಖರಪ್ಪ ಸಲಹೆ
ಈ ನಡುವೆ ಶ್ರದ್ಧಾ ಆಕೆಯ ಪೋಷಕರ ಪೋನ್ ಕರೆ ಸ್ವೀಕರಿಸದಿದ್ದಾಗ, ಮಗಳನ್ನು ಹುಡುಕಿಕೊಂಡು, ನ.8ರಂದು ಆಕೆಯ ತಂದೆ ವಿಕಾಸ್ ಮದನ್ ಬಂದಾಗ , ಫ್ಲಾಟ್ ಗೆ ಬೀಗ ಜಡಿದಿದ್ದು, ಗಾಬರಿಗೊಂಡು ಮೆಹ್ರೌಲಿ ಪೊಲೀಸರನ್ನು ಸಂಪರ್ಕಿಸಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಬೆನ್ನು ಹತ್ತಿದ ತನಿಖಾ ತಂಡಕ್ಕೆ ಭೀಕರ ಹತ್ಯೆಯ ವಿಚಾರ ತಿಳಿದುಬಂದಿದೆ. ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನೊಂದಿಗೆ ಶ್ರದ್ಧಾ ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದು , ಈ ವಿಚಾರವಾಗಿ ಇಬ್ಬರಿಗೂ ಆಗಾಗ್ಗೆ ಜಗಳವಾಗುತ್ತಿತ್ತು. ಪೋಲೀಸರ ಪ್ರಕಾರ, ಮೇ 18 ರಂದು ಈ ಜೋಡಿ ಇದೇ ವಿಚಾರವಾಗಿ ಜಗಳವಾಡಿದ್ದು , ಸಿಟ್ಟಿನಲ್ಲಿ ಅಫ್ತಾಬ್ ಅಮೀನ್ ಪೂನಾವಾಲಾ ಪ್ರಿಯತಮೆ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದು, ಅವುಗಳನ್ನು ಇರಿಸಲು ಫ್ರಿಡ್ಜ್ ಖರೀದಿಸಿದ್ದಾನೆ. ಮುಂದಿನ 18 ದಿನದಲ್ಲಿ, ಪ್ರತಿ ರಾತ್ರಿ 2 ಗಂಟೆಗೆ ತನ್ನ ಮನೆಯಿಂದ ಹೊರಟು ದೆಹಲಿಯಾದ್ಯಂತ ವಿವಿಧ ಸ್ಥಳಗಳಲ್ಲಿ ಶವದ ದೇಹದ ಭಾಗಗಳನ್ನು ಎಸೆದಿದ್ದಾನೆ ಎಂದು ತನಿಖೆಯ ವೇಳೆ ಪೊಲೀಸರು ಬಹಿರಂಗಪಡಿಸಿದ್ದಾರೆ.
ಮೆಹ್ರೌಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಶ್ರದ್ಧಾ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















